ರಾಜರಕಾಲದಲ್ಲಿ ಶಿಲ್ಪಕಲೆಗೆ ಹೆಚ್ಚು ಮಹತ್ವ ಹಾಗೂ ಪ್ರೋತ್ಸಾಹ ನೀಡುತ್ತಿದ್ದರು ಎನ್ನುವುದಕ್ಕೆ ಅನೇಕ ನಿದರ್ಶನಗಳಿವೆ. ಅಂತಹ ನಿದರ್ಶನಕ್ಕೆ ಕನ್ನಡಿ ಹಿಡಿಯುವ ದೇಗುಲವೆಂದರೆ ಅರಳುಗುಪ್ಪೆ ದೇಗುಲ. ಇದು ಎಲೆಮರೆಯ ಕಾಯಂತೆ ಇದ್ದುದರಿಂದ ಹೆಚ್ಚಿನ ಜನರಿಗೆ ಇದರ ಪರಿಚಯವೇ ಇಲ್ಲ. ಶಿಲ್ಪ ಕಲೆಯ ಶ್ರೀಮಂತಿಕೆಯಿಂದ ಕೂಡಿರುವ ಅರಳುಗುಪ್ಪೆಗೆ ಒಂದು ದಿನದ ಬಿಡುವಿನ ಟ್ರಿಪ್ಗೆ ಹೋಗಬಹುದು.
ಅರಳುಗುಪ್ಪೆ ದೇಗುಲ
9ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇಗುಲ ತುಮಕೂರಿನ ಅರಳುಗುಪ್ಪೆ ಎಂಬ ಪುಟ್ಟ ಗ್ರಾಮದಲ್ಲಿದೆ. ದೇಗುಲ ಚಿಕ್ಕದಾದರೂ ತನ್ನದೇ ಆದ ಸೌಂದರ್ಯವನ್ನು ಹೊಂದಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ದೇಗುಲ ಎಂಬ ದಾಖಲೆಯಿದೆ. ಸೂಕ್ಷ್ಮ ಕಲಾ ಕೆತ್ತನೆಯ ಶ್ರೀಮಂತಿಕೆಯನ್ನು ಹೊಂದಿರುವ ಈ ದೇಗುಲ ಗಂಗ-ನಲಂಬರ ಶೈಲಿಯಲ್ಲೂ ಇದೆ ಎನ್ನಲಾಗುತ್ತದೆ. ಇದಕ್ಕೆ ಹೊನ್ನೊಜನವೆಂಬ ಶಿಲ್ಪಿಗಳ ಶ್ರಮವಿದೆ ಎನ್ನಲಾಗುತ್ತದೆ.
ಚಿತ್ರಕೃಪೆ: Manjuap
ದೇವಾಲಯದಲ್ಲಿ ಏನಿದೆ?
ಕೇಶವ ದೇವಾಲಯವಾದ ಇದರ ಸುತ್ತಲೂ ಸುಂದರವಾದ ಕುಸುರಿ ಕೆತ್ತನೆಗಳಿವೆ. ಏಕಕೂಟದ ಈ ದೇವಾಲಯಕ್ಕೆ ಪೂರ್ವದಿಂದ ಪ್ರವೇಶದ್ವಾರವಿದೆ. ನಕ್ಷತ್ರಾಕೃತಿಯ ಜಗತಿಯನ್ನು ಹೊಂದಿರುವುದು ಒಂದು ವಿಶೇಷ. ಗರ್ಭಗುಡಿಯಲ್ಲಿ ಸುಂದರವಾದ ಕೇಶವನ ವಿಗ್ರಹ, ಸುಕನಾಸಿ, ವಿಶೇಷ ಕೆತ್ತನೆಯಿಂದ ಕೂಡಿದ 9 ಕಂಬಗಳಿವೆ.
ದೇಗುಲದ ಸುತ್ತ
ಸೋಮನಾಥಪುರ ದೇವಸ್ಥಾನದಂತೆ ಭಾಸವಾಗುವ ಈ ದೇಗುಲ ಅಷ್ಟು ದೊಡ್ಡದಲ್ಲದಿದ್ದರೂ ಕೆತ್ತನೆಯ ಹಿರಿಮೆಗೇನೂ ಕಮ್ಮಿಯಿಲ್ಲ. ವಿಷ್ಣುವಿನ ದಶಾವತಾರದ ಕೆತ್ತನೆಗಳು, ರಾಮಾಯಣದ ಕಥಾನಕಗಳು, ಕಾಲ್ಪನಿಕ ಮೃಗ, ಮಕರ, ಹಂಸ, ಆನೆ, ಕುದುರೆ, ಕುದುರೆಗಳು ಸರಕನ್ನು ಸಾಗಿಸುತ್ತಿರುವ ಕೆತ್ತನೆ, ಬಾಲ ಕೃಷ್ಣನ ಲೀಲೆಗಳು, ನಾಟ್ಯ ಗಣಪ, ಲಕ್ಷ್ಮಿ, ಸರಸ್ವತಿ, ಯಕ್ಷ, ಕಿನ್ನರ, ಗಾಂಧರ್ವರ ಕೆತ್ತನೆಗಳಿಂದ ಕೂಡಿದೆ.
ಚಿತ್ರಕೃಪೆ: Dineshkannambadi
ಸ್ಥಿತಿ ಹೇಗಿದೆ
ರಾಜರ ಆಳ್ವಿಕೆಯ ಸಮಯದಲ್ಲೇ ಒಂದಿಷ್ಟು ಮೂರ್ತಿಗಳ ಮೂಗನ್ನು ಕತ್ತರಿಸಿರುವುದರಿಂದ ವಿಗ್ರಹಗಳು ಭಿನ್ನವಾಗಿವೆ. ಶತಮಾನಗಳ ಹಿಂದಿನ ದೇಗುಲವಾಗಿದ್ದುದರಿಂದ ಒಂದಿಷ್ಟು ಕಲಾಕೃತಿಗಳು ಬಿಸಿಲು, ಮಳೆಗೆ ಸವೆದಿದೆ. ಇಷ್ಟು ಸಾಲದೆಂದು ಕಿಡಿಗೇಡಿಗಳು ಮೂರ್ತಿಗಳ ನಾಶ ಮಾಡಿರುವುದು ಕೆತ್ತನೆಗಳನ್ನು ಕತ್ತರಿಸಿರುವುದು ದುಃಖಕರ. ಇದನ್ನು ಪ್ರಮುಖ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದ್ದರೂ ಅದರ ಏಳಿಗೆಗೆ ಅಥವಾ ರಕ್ಷಣೆಗೆ ಯಾರೂ ಮುಂದಾಗದಿರುವುದು ವಿಪರ್ಯಾಸ.
ಚಿತ್ರಕೃಪೆ: Dineshkannambadi
ಪಯಣದ ದೂರ
ಬೆಂಗಳೂರಿನಿಂದ ತುಮಕೂರು 71 ಕಿ.ಮೀ ದೂರವಾದರೆ ತುಮಕೂರಿನಿಂದ ಅರಳುಗುಪ್ಪೆಗೆ 62 ಕಿ.ಮೀ. ದೂರವನ್ನು ಹೊಂದಿದೆ. ಬೆಂಗಳೂರಿನಿಂದ ರೈಲು ಪ್ರಯಾಣ ಬೆಳೆಸಿದರೆ ತಿಪಟೂರಿನ ಮಧ್ಯೆ ಬರುವ ಕಿಬ್ಬನ ಹಳ್ಳಿ ಕ್ರಾಸ್ನಲ್ಲಿ ಇಳಿದು ಆಟೋ ಅಥವಾ ಖಾಸಗಿ ಕಾರಗಳ ಮೂಲಕ ಹೋಗಬಹುದು.
ಇದರ ಸಮೀಪ
ದೇವರಾಯನ ದುರ್ಗ, ಚನ್ನರಾಯನ ದುರ್ಗ, ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲ, ಶ್ರೀ ಸಿದ್ಧಗಂಗಾ ಮಠಕ್ಕೆ ಹೋಗಿ ಬರಬಹುದು.