ರೋಚಕವಾದ ದಂತ ಕಥೆ, ಮಹಾಭಾರತದಲ್ಲಿ ಉಲ್ಲೇಖ, ನೂರಾರು ಮಂದಿರಗಳ ಉಪಸ್ಥಿತಿಯಿರುವ, ಸೀರೆಗಳಿಗೆ ವಿಶಿಷ್ಟವಾಗಿ ಹೆಸರಾಗಿರುವ ಮಹೇಶ್ವರ, ಮಧ್ಯ ಪ್ರದೇಶ ರಾಜ್ಯದ ಒಂದು ಅದ್ಭುತ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದೆ. ಐತಿಹಾಸಿಕವಾಗಿಯೂ ಹೆಸರುವಾಸಿಯಾದ ಮಹೇಶ್ವರ ಪಟ್ಟಣವು ಖರಗೋನ್ ಜಿಲ್ಲೆಯಲ್ಲಿದೆ.
ವಿಶೇಷ ಲೇಖನ : ಮಹಾಭಾರತ, ರಾಮಾಯಣದ ಇಂದಿನ ಸ್ಥಳಗಳು
ಈ ಪಟ್ಟಣದ ಕುರಿತು ರಾಮಾಯಣ ಹಾಗೂ ಮಹಾಭಾರತಗಳಲ್ಲೂ ಉಲ್ಲೇಖವಿದ್ದು, ನರ್ಮದಾ ನದಿಯ ತಟದಲ್ಲಿ ನೆಲೆಸಿರುವ ಇದನ್ನು ಹಿಂದೆ ಮಹಿಶಮತಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ವೈಭವತೆಯಿಂದ ಕೂಡಿದ್ದ ಈ ಪಟ್ಟಣವು ಕರ್ತವಿರ್ಯ ಅರ್ಜುನ (ಸಹಸ್ರಾರ್ಜುನ) ರಾಜನ ಆಡಳಿತವಿದ್ದ ಸಂದರ್ಭದಲ್ಲಿ ದಕ್ಷಿಣ ಆವಂತಿಯ ರಾಜಧಾನಿ ಪಟ್ಟಣವಾಗಿ ಮೆರೆದಿತ್ತು.
ಮಧ್ಯ ಪ್ರದೇಶದ ಸಮಗ್ರ ಪ್ರವಾಸಿ ಸ್ಥಳಗಳು
ಮಹೇಶ್ವರವು ಪ್ರಮುಖವಾಗಿ ತನ್ನಲ್ಲಿರುವ ಹಲವಾರು ಜನಪ್ರೀಯ ದೇವಾಲಯಗಳು, ಬೃಹತ್ ಕೋಟೆ ಸಂಕೀರ್ಣ, ನರ್ಮದಾ ನದಿಯ ಪುಣ್ಯ ಸ್ನಾನದ ದಂಡೆಗಳು ಹಾಗೂ ವಿಶಿಷ್ಟವಾಗಿ ಹೆಣೆಯಲಾಗುವ ಹೂವುಗಳ ಸುಂದರ ಕೆಲಸಗಳಿಗೆ ಪ್ರಖ್ಯಾತವಾದ ಮಹೇಶ್ವರಿ ಸೀರೆಗಳಿಗೆ ಹೆಸರುವಾಸಿಯಾಗಿದೆ.
ಪ್ರಸ್ತುತ ಲೇಖನದ ಮೂಲಕ ಮಹೇಶ್ವರದ ಕುರಿತು ಪ್ರಚಲಿತದಲ್ಲಿರುವ ಆಸಕ್ತಿಕರ ದಂತ ಕಥೆಯನ್ನು ತಿಳಿಯಿರಿ ಹಾಗೂ ಅದರ ವೈಭವವನ್ನು ಕಣ್ಣಾರೆ ಸವಿಯಿರಿ.
ಆಕರ್ಷಕ ಮಹೇಶ್ವರ:
ಸೋಮ ರಾಜವಂಶದ ಮಹಿಶಮನ ರಾಜನಿಂದ ಈ ಪಟ್ಟಣವು ಸ್ಥಾಪಿಸಲ್ಪಟ್ಟಿದ್ದು, ಜನಪದ ಲಾವಣಿಗಳಲ್ಲಿ ಹಾಗೂ ಧರ್ಮಗ್ರಂಥಗಳಲ್ಲಿರುವ ಈ ಸ್ಥಳದ ಉಲ್ಲೇಖವು, ಇದು ಮಹಾಭಾರತ ಕಾಲದಿಂದಲೂ ಇತ್ತು ಎಂದು ತಿಳಿಯಪಡಿಸುತ್ತದೆ.
ಚಿತ್ರಕೃಪೆ: Lukas Vacovsky
ಆಕರ್ಷಕ ಮಹೇಶ್ವರ:
ಮಹೇಶ್ವರಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳು, ಹಿನ್ನಿಲೆಗಳು ಪ್ರಚಲಿತದಲ್ಲಿವೆ. ಒಂದು ಕಥೆಯಂತೆ ಇದು ಹಿಂದೆ ಸಹಸ್ರಾರ್ಜುನ ಪಾಲಿಸುತ್ತಿದ್ದ ನಗರದ ಮೇಲೆ ಸ್ಥಾಪಿಸಲಾಗಿದೆ ಎನ್ನಲಾಗುತ್ತದೆ.
ಚಿತ್ರಕೃಪೆ: Bernard Gagnon
ಆಕರ್ಷಕ ಮಹೇಶ್ವರ:
ಮಹೇಶ್ವರದ ಕುರಿತು ಹಲವು ಕಥೆಗಳು ಪ್ರಚಲಿತದಲ್ಲಿವೆ. ಅವುಗಳ ಪೈಕಿ ಆಸಕ್ತಿಕರವಾದ ಎರಡು ಕಥೆಗಳನ್ನು ತಿಳಿಯಿರಿ. ಹಿಂದೆ ಸಹಸ್ರಾರ್ಜುನನ್ನು ತನ್ನ 500 ಪತ್ನಿಯರೊಂದಿಗೆ ಇಲ್ಲಿನೆ ನರ್ಮದಾ ನದಿ ತೀರದಲ್ಲಿ ಹಾಯಾಗಿ ಸಮಯ ಕಳೆಯಲು ತೆರಳಿದ್ದ. (ಸಹಸ್ರಾರ್ಜುನ ಕ್ರಿತವಿರ್ಯನ ಪುತ್ರ ಹಾಗೂ ಸಾವಿರ ಭುಜಗಳುಳ್ಳ ಬಲಶಾಲಿ). ಪತ್ನಿಯರು ಸ್ನಾನ ಮಾಡುವಾಗ ಜಲಕ್ರೀಡೆಗೆ ಸ್ಥಳಾವಕಾಶ ಕಡಿಮೆ ಇದೆ ಎಂದು ಬೇಸರಗೊಳ್ಳುತ್ತಾರೆ.
ಚಿತ್ರಕೃಪೆ: Dchandresh
ಆಕರ್ಷಕ ಮಹೇಶ್ವರ:
ಇದನ್ನರಿತ ಸಹಸ್ರಾರ್ಜುನ ತನ್ನ ಸಾವಿರ ಕೈಗಳಿಂದ ನರ್ಮದಾ ನದಿಯನ್ನು ತಡೆ ಹಿಡಿದು ಹೆಚ್ಚಿನ ಸ್ಥಳಾವಕಾಶ ಒದಗಿಸಿ ಕೊಡುತ್ತಾನೆ. ಇದರಿಂದ ನರ್ಮದೆ ಹರಿಯುತ್ತಿದ್ದ ಭೂಮಿಯ ಮುಂದಿನ ಭಾಗವು ನೀರಿಲ್ಲದೆ ಒಣಗುತ್ತದೆ. ಈ ಸಂದರ್ಭದಲ್ಲಿ ಆಕಾಶ ಮಾರ್ಗವಾಗಿ ಸಾಗುತ್ತಿದ್ದ ರಾವಣನು ಈ ಜಾಗವನ್ನು ನೋಡಿ, ಇದು ಶಿವನ ಪೂಜೆಗೆ ತಕ್ಕ ಸ್ಥಳ ಎಂದು ಬಗೆದು ಮರಳಿನಿಂದ ಶಿವಲಿಂಗ ನಿರ್ಮಿಸಿ ಪೂಜಿಸ ತೊಡಗುತ್ತಾನೆ.
ಚಿತ್ರಕೃಪೆ: Bernard Gagnon
ಆಕರ್ಷಕ ಮಹೇಶ್ವರ:
ಇತ್ತ ಸಹಸ್ರಾರ್ಜುನನ ಪತ್ನಿಯರು ನೀರಿನಲ್ಲಿ ಮನ ತೃಪ್ತಿ ಬರುವಂತೆ ಮಿಂದಾದ ಮೇಲೆ, ಸಹಸ್ರಾರ್ಜುನನು ತಾನು ತಡೆದಿದ್ದ ನೀರನ್ನು ತನ್ನ ಕೈಗಳಿಂದ ಮುಕ್ತ ಗೊಳಿಸಲು ಅದು ಅತಿ ರಭಸದಿಂದ ಹರಿದು, ರಾವಣ ಕುಳಿತಿದ್ದ ಸ್ಥಳವನ್ನು ಮುಳುಗಿಸಿ ಅವನ ಪೂಜೆಗೆ ಭಂಗವನ್ನುಂಟು ಮಾಡುತ್ತದೆ.
ಚಿತ್ರಕೃಪೆ: Bernard Gagnon
ಆಕರ್ಷಕ ಮಹೇಶ್ವರ:
ಇದರಿಂದ ಕುಪಿತನಾದ ರಾವಣ, ವಿಷಯವನ್ನರಿತು ಸಹಸ್ರಾರ್ಜುನನ್ನು ಕುರಿತು ತನ್ನೊಡನೆ ಯುದ್ಧ ಮಾಡುವಂತೆ ಸವಾಲೆಸೆಯುತ್ತಾನೆ. ಅತಿ ಬಲಶಾಲಿಯಾದ ಸಹಸ್ರಾರ್ಜುನನು ಅವನ ಸವಾಲನ್ನು ಸ್ವೀಕರಿಸಿ ರಾವಣನೊಡನೆ ಯುದ್ಧ ಮಾಡಿ ಸುಲಭವಾಗಿ ಜಯ ಸಾಧಿಸುತ್ತಾನೆ. ಅಷ್ಟೆ ಅಲ್ಲದೆ ರಾವಣನನ್ನು ಬಂಧಿಯನ್ನಾಗಿ ಮಾಡಿ ನಗರದ ಮೂಲೆಯೊಂದರಲ್ಲಿ ಕೂಡಿ ಹಾಕಿ ಅವಮಾನಿಸುತ್ತಾನೆ. ಇಂದಿಗೂ ಇಲ್ಲಿ ಸಹಸ್ರಾರ್ಜುನನಿಗೆ ಮುಡಿಪಾದ ದೇವಾಲಯವನ್ನು ಕಾಣಬಹುದು.
ಚಿತ್ರಕೃಪೆ: Abu'l-Fazl ibn Mubarak
ಆಕರ್ಷಕ ಮಹೇಶ್ವರ:
ಹಿಂದೆ ಮಹಿಶಮತಿಯಾಗಿದ್ದ ಸಂದರ್ಭದಲ್ಲಿ ಇಲ್ಲಿ ಮದುವೆಗಳು ಆಗದಿದ್ದುದರ ಕುರಿತು ಕೂಡ ವಿಚಿತ್ರವಾದ ಕಥೆಯೊಂದು ತಳುಕು ಹಾಕಿ ಕೊಂಡಿದೆ. ಅದರ ಪ್ರಕಾರ, ಹಿಂದೆ ಈ ಪ್ರದೇಶವನ್ನು ನೀಲಾ ಎಂಬ ರಾಜನು ಪಾಲಿಸುತ್ತಿದ್ದನು. ಅವನಿಗೆ ಒಬ್ಬಳೆ ಪುತ್ರಿಯಿದ್ದು ಅವಳು ಅತ್ಯಂತ ರೂಪವತಿಯಾಗಿದ್ದಳು. ಅವಳ ಅಂದಕ್ಕೆ ಮನಸೊತಿದ್ದ ಅಗ್ನಿ ದೇವ ಒಬ್ಬ ಬ್ರಾಹ್ಮಣನ ವೇಷದಲ್ಲಿ ಬಂದು ಅವಳೊಡನೆ ಸಂತಸಿಸುತ್ತಿದ್ದ.
ಚಿತ್ರಕೃಪೆ: nevil zaveri
ಆಕರ್ಷಕ ಮಹೇಶ್ವರ:
ಹೀಗಿರುವಾಗ ರಾಜ ನೀಲಾಗೆ ಈ ವಿಷಯ ಗೊತ್ತಾಗಿ, ಆತ ಬ್ರಾಹ್ಮಣನನ್ನು ನಿಯಮದಂತೆ ಶಿಕ್ಷಿಸಲು ನಿರ್ಧರಿಸಿದಾಗ, ಅಗ್ನಿ ದೇವ ತನ್ನ ನಿಜ ಸ್ವರೂಪದಲ್ಲಿ ಬಂದು ಕಿಡಿ ಕಾರುತ್ತ, ತನಗೆ ಅಥವಾ ರಾಜಕುಮಾರಿಗೆ ಏನಾದರೂ ತೊಂದರೆಯಾದರೆ ನಗರವನ್ನು ಸಂಪೂರ್ಣವಾಗಿ ನಾಶಗೊಳಿಸುತ್ತೇನೆಂದು ಎಚ್ಚರಿಸುತ್ತಾನೆ.
ಚಿತ್ರಕೃಪೆ: Arian Zwegers
ಆಕರ್ಷಕ ಮಹೇಶ್ವರ:
ನಂತರ, ಮಹಿಶಮತಿಯ ಸರ್ವ ಮಹಿಳೆಯರಿಗೆ ರತಿ ಸಮಾಗಮದ ವರವನ್ನು ಕರುಣಿಸುತ್ತಾನೆ. ಅದರಂತೆ ಮಹಿಶಮತಿಯ ಸ್ತ್ರೀಯರನ್ನು ಬೇರೆ ಪುರುಷರು ಮದುವೆಯಾಗುವಂತಿಲ್ಲ ಹಾಗೂ ಮಹಿಶಮತಿಯ ಸ್ತ್ರೀಯರು ಮಾತ್ರ ತಮ್ಮ ಇಚ್ಛಾನುಸಾರ ಪುರುಷರೊಂದಿಗೆ ಸಂತಸ ಹಂಚಿಕೊಳ್ಳಬಹುದು.
ಚಿತ್ರಕೃಪೆ: Jean-Pierre Dalbéra
ಆಕರ್ಷಕ ಮಹೇಶ್ವರ:
ಹೀಗೆ ಮಹೇಶ್ವರವು ಸಾಂಸ್ಕೃತಿಕವಾಗಿ ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ತನ್ನಲ್ಲಿರುವ ಹಲವಾರು ಅದ್ಭುತ ದೇವಸ್ಥಾನಗಳಿಗಾಗಿ ಪ್ರಸಿದ್ಧಿಯನ್ನು ಪಡೆದಿರುವುದಲ್ಲದೆ ಇಲ್ಲಿ ತಯಾರಿಸಲಾಗುವ ಅದ್ಭುತ ಝರಿ ಕೆಲಸದ ವಿಶಿಷ್ಟ ಸೀರೆಗಳಿಗೂ ಹೆಸರುವಾಸಿಯಾಗಿದೆ. ಈ ಸೀರೆಗಳು ಮಹೇಶ್ವರಿ ಅಥವಾ ಮಹೇಶ್ವರ ಸೀರೆಗಳೆಂದೆ ಖ್ಯಾತಿಗಳಿಸಿವೆ.
ಚಿತ್ರಕೃಪೆ: Dchandresh
ಆಕರ್ಷಕ ಮಹೇಶ್ವರ:
18 ನೆಯ ಶತಮಾನದಲ್ಲಿ ಮರಾಠಾ ರಾಣಿಯಾದ ಅಹಿಲ್ಯಾ ಬಾಯಿ ಹೋಲ್ಕರ್ ಇದನ್ನು ತನ್ನ ರಾಜಧಾನಿಯನ್ನಾಗಿ ಮಾಡಿದ್ದಳು ಹಾಗೂ ಈ ಸಮಯದಲ್ಲಿ ಮಹೇಶ್ವರವು ಸಾಕಷ್ಟು ಪ್ರಗತಿಯನ್ನು ಕಂಡಿತು. ಇಂದು ಮಹೇಶ್ವರದಲ್ಲಿ ದೇವಾಲಯಗಳೊಂದಿಗೆ, ಅಹಿಲ್ಯಾ ಬಾಯಿ ರಾಣಿಯ ಅರಮನೆ, ಕೋಟೆ, ಘಾಟ್ ಗಳನ್ನು ನೋಡಬಹುದಾಗಿದ್ದು, ದೋಣಿ ವಿಹಾರದಂತಹ ಚಟುವಟಿಕೆಯನ್ನೂ ಸಹ ಆಸ್ವಾದಿಸಬಹುದಾಗಿದೆ.
ಚಿತ್ರಕೃಪೆ: Dchandresh
ಆಕರ್ಷಕ ಮಹೇಶ್ವರ:
ಇಲ್ಲಿರುವ ಘಾಟುಗಳಲ್ಲಿ ಪ್ರಮುಖವಾದವುಗಳೆಂದರೆ ಅಹಿಲ್ಯಾ ಘಾಟ್, ಪೇಶ್ವಾ ಘಾಟ್, ಮಹಿಳಾ ಘಾಟ್ ಹಾಗೂ ಫನ್ಸೆ ಘಾಟ್. ಸಹಸ್ರಾರ್ಜುನ, ರಾಜೇಶ್ವರಿ, ಬಾಣೇಶ್ವರ ಮಹಾದೇವ, ಅನಂತ ನಾರಾಯಣ, ಭವಾನಿ ಮಾತಾ ಮಂದಿರ, ರಾಮಕೃಷ್ಣ ಮಂದಿರ, ಜ್ವಾಲೇಶ್ವರ ಮಂದಿರ ಹೀಗೆ ಹಲವು ದೇವಾಲಯಗಳನ್ನು ಕಾಣಬಹುದು. ಇವುಗಳಲ್ಲಿ ಪ್ರಮುಖವಾಗಿರುವುದು ಏಕ ಮುಖಿ ದತ್ತಾತ್ರೇಯ ಮಂದಿರ. ಏಕೆಂದರೆ ಸಹಸ್ರಾರ್ಜುನನು ದತ್ತಾತ್ರೇಯನ ಪರಮ ಭಕ್ತನಾಗಿದ್ದ.
ಚಿತ್ರಕೃಪೆ: Nilrocks
ಆಕರ್ಷಕ ಮಹೇಶ್ವರ:
ಇನ್ನೊಂದು ವಿಶೇಷವೆಂದರೆ ಹಿಂದಿ ಹಾಗೂ ತಮಿಳಿನ ಹಲವಾರು ಚಿತ್ರಗಳು ಈ ಅದ್ಭುತ ತಾಣದಲ್ಲಿ ಚಿತ್ರೀಕರಣಗೊಂಡಿವೆ. ಆದರಲ್ಲೂ ವಿಶೇಷವಾಗಿ ತಮಿಳಿನ ಆರಂಭಂನ ಅಡಡ ಆರಂಭಮೆ.....ಗೀತೆ, ಎ ಆರ್ ರೆಹಮಾನ್ ಅವರ ಸಂಗೀತದ ವಿಡಿಯೊ ಹಾಗೂ ಶಾರುಕ್ ಖಾನ್ ಅಬಿನಯದ ಅಶೋಕ ಚಿತ್ರದ ಸನ್ನಿವೇಶಗಳು ಮಹೇಶ್ವರ ಅದ್ಭುತ ಘಾಟ್ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿವೆ.
ಚಿತ್ರಕೃಪೆ: Bernard Gagnon
ಆಕರ್ಷಕ ಮಹೇಶ್ವರ:
ಮಹೇಶ್ವರದಲ್ಲಿರುವ ಅಹಿಲ್ಯೇಶ್ವರ ಶಿವಾಲಯ.
ಚಿತ್ರಕೃಪೆ: Jean-Pierre Dalbéra
ಆಕರ್ಷಕ ಮಹೇಶ್ವರ:
ಮಹೇಶ್ವರದಲ್ಲಿರುವ ಅಹಿಲ್ಯಾ ಬಾಯಿಯ ರಾಜಾರಮನೆ.
ಚಿತ್ರಕೃಪೆ: Bernard Gagnon
ಆಕರ್ಷಕ ಮಹೇಶ್ವರ:
ರಾಜಾರಮನೆಯ ಅಥವಾ ರಾಜವಾಡದಲ್ಲಿರುವ ರಾಣಿ ಅಹಿಲ್ಯಾ ಬಾಯಿಯ ಪ್ರತಿಮೆ.
ಚಿತ್ರಕೃಪೆ: Bernard Gagnon
ಆಕರ್ಷಕ ಮಹೇಶ್ವರ:
ಮಹೇಶ್ವರದಲ್ಲಿರುವ ಅಹಿಲ್ಯಾಬಾಯಿಯ ಕೋಟೆ.
ಚಿತ್ರಕೃಪೆ: Bernard Gagnon
ಆಕರ್ಷಕ ಮಹೇಶ್ವರ:
ಇನ್ನೂ ಮಹೇಶ್ವರವನ್ನು ರೈಲು ಹಾಗೂ ಬಸ್ಸುಗಳ ಮುಖಾಂತರ ಸುಲಭವಾಗಿ ತಲುಪಬಹುದಾಗಿದೆ. ಮಧ್ಯ ಪ್ರದೇಶದ ವಾಣಿಜ್ಯ ರಾಜಧಾನಿ ಎಂದೆ ಕರೆಯಲಾಗುವ ಇಂದೋರ್ ನಿಂದ ಮಹೇಶ್ವರ ಕೇವಲ 90 ಕಿ.ಮೀ ಗಳಷ್ಟು ದೂರದಲ್ಲಿದ್ದು ಇಂದೋರ್ ದೇಶದ ಪ್ರಮುಖ ನಗರಗಳೊಂದಿಗೆ ರೈಲು ಸಂಪರ್ಕ ಸಾಧಿಸುತ್ತದೆ. ಅಲ್ಲದೆ ಇಂದೋರ್ ನಿಂದ ಮಹೇಶ್ವರಕ್ಕೆ ಬಸ್ಸುಗಳು ಲಭ್ಯವಿದೆ.
ಚಿತ್ರಕೃಪೆ: Bernard Gagnon