ನಿಮಗೆ ಗೌಡೀಯ ವೈಷ್ಣವ ಪಂಥದ ಕುರಿತು ತಿಳಿದಿದೆಯಾ? ರಾಧಾ, ಕೃಷ್ಣ ಹಾಗೂ ಆತನ ಹಲವು ಅವಾತರಗಳನ್ನು ಭಕ್ತಿ ಮಾರ್ಗದ ಮೂಲಕ ಆರಾಧಿಸುವ ಪಂಥ ಇದಾಗಿದ್ದು ಚೈತನ್ಯ ಮಹಾಪ್ರಭುಗಳಿಂದ ಸ್ಥಾಪಿಸಲ್ಪಟ್ಟಿದೆ. ಚೈತನ್ಯ ಮಹಾಪ್ರಭುಗಳು ಹುಟ್ಟಿದ ಭಾಗ ಗೌಡ ಪ್ರದೇಶವಾಗಿದ್ದರಿಂದ ಇದಕ್ಕೆ ಪ್ರತ್ಯೇಕವಾಗಿ ಗೌಡೀಯ ವೈಷ್ಣವ ಪಂಥ ಎಂಬ ಹೆಸರು ಬಂದಿದೆ.
ಈ ಪಂಥದ ಅಡಿಪಾಯದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರ್ಮಿಕ ಕೇಂದ್ರವಿದ್ದು ಅದೆ ಇಂದು ಪ್ರಸಿದ್ಧ ಇಸ್ಕಾನ್ ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿದೆ. ಇಸ್ಕಾನ್ ಅಥವಾ ಹರೇ ಕೃಷ್ಣ ಚಳುವಳಿಯ ಸ್ಥಾಪಕರಾದ ಎ ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರವರು ಚೈತನ್ಯ ಮಹಾಪ್ರಭುಗಳ ಅನುಯಾಯಿಗಳು.
ಕುತೂಹಲ ಕೆರಳಿಸುವ ಕೊಲ್ಕತ್ತಾ ಜನಜೀವನ
ಚೈತನ್ಯ ಮಹಾಪ್ರಭುಗಳು ಪ್ರಸ್ತುತ ಪಶ್ಚಿಮ ಬಂಗಾಳ ರಾಜ್ಯದ ನದಿಯಾ ಜಿಲ್ಲೆಯ ಮಾಯಾಪುರ ಎಂಬಲ್ಲಿ ಜನಿಸಿದವರಾಗಿದ್ದಾರೆ. ಇದು ರಾಜ್ಯದ ಗೌಡ ಭಾಗದಲ್ಲಿ ಬರುವುದರಿಂದ ಇವರು ಸ್ಥಾಪಿಸಿದ ವೈಷ್ಣವ ಪಂಥವು ಗೌಡೀಯ ವೈಷ್ಣವ ಪಂಥವಾಗಿ ಗಮನಸೆಳೆಯುತ್ತದೆ.
ಕೇಂದ್ರಸ್ಥಳ
ಇಸ್ಕಾನಿನ ಕೇಂದ್ರಸ್ಥಳವಾಗಿದೆ ಮಾಯಾಪುರ. ಚೈತನ್ಯ ಮಹಾಪ್ರಭುಗಳು ಜನಿಸಿರುವ ಸ್ಥಳದಲ್ಲಿ ಇಂದು ಅತ್ಯದ್ಭುತವಾಗಿ ತಲೆ ಎತ್ತಿ ನಿಂತಿರುವ ದೇವಾಲಯವನ್ನು ನೋಡಿದಾಗ ಅಚ್ಚರಿಯಾಗದೆ ಇರಲಾರದು. ಅಷ್ಟಕ್ಕೂ ಈ ಚಿಕ್ಕ, ಯಾರಿಗೂ ತಿಳಿಯದ ಮಾಯಾಪುರ ಇಂದು ಅದ್ಭುತ ಇಸ್ಕಾನ್ ಕೇಂದ್ರವಾಗಿರುವ ಕಥೆಯೂ ರೋಚಕವಾಗಿದೆ.
ಚಿತ್ರಕೃಪೆ: Vrindavan Lila
ಭಕ್ತಿವಿನೋದ ಠಾಕೂರ್
ಗೌಡೀಯ ವೈಷ್ಣವ ಪಂಥದಲ್ಲಿ ಬರುವ ಪ್ರಮುಖ ವ್ಯಕ್ತಿಗಳ ಪೈಕಿ ಭಕ್ತಿವಿನೋದ ಠಾಕೂರ್ ಅವರೂ ಸಹ ಒಬ್ಬರು. ಪ್ರಸ್ತುತ ಮಾಯಾಪುರದ ಇಂದಿನ ಸುಸ್ಥಿತಿಗೆ ಅವರೆ ಮೂಲ ಕಾರಣಕರ್ತರು. ಅವರು ಮೂಲತಃ ಸಾತ್ವಿಕ ಸ್ವಭಾವದವರು ಹಾಗೂ ಬಂಗಾಳದ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕರಲ್ಲಿ ಒಬ್ಬರು. ಗಂಗಾನದಿ ತಟದ ಮಾಯಾಪುರ.
ಚಿತ್ರಕೃಪೆ: Joydeep
ಕಾರ್ಯನಿರತ
ಇವರು ಚೈತನ್ಯ ಮಹಾಪ್ರಭುಗಳ ಅನುಯಾಯಿಯಾಗಿದ್ದರು ಹಾಗೂ ಅವರು ಜನಿಸಿದ ಸ್ಥಳವನ್ನು ಕರಾರುವಕ್ಕಾಗಿ ಕಂಡುಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದರು. ಒಂದೊಮ್ಮೆ ಅವರಿಗೆ ಜೀವನದ ಸತ್ಯ ಶೋಧನೆಯ ಕಾರ್ಯ ಮಾಡುವ ಪ್ರೇರಣೆ ಉಂಟಾಗಿ ವೃಂದಾವನಕ್ಕೆ ತೆರಲಲು ಬಯಸಿದ್ದರು.
ಚಿತ್ರಕೃಪೆ: Cinosaur
ನಬಾದ್ವೀಪ
ಆದರೆ ಒಮ್ಮೆ ಅವರ ಕನಸಿನಲ್ಲಿ ಚೈತನ್ಯ ಮಹಾಪ್ರಭುಗಳು ಬಂದು ನಬಾದ್ವೀಪಕ್ಕೆ ತೆರಳುವಂತೆ ಸೂಚಿಸಿದ ಹಾಗಾಯಿತು. ಇದು ಭಗವತ್ ಆಜ್ಞೆ ಎಂದು ಭಾವಿಸಿ ಅಲ್ಲಿಗೆ ಹೋಗಲು ನಿರ್ಧರಿಸಿದರು. ಅದಕ್ಕಾಗಿ ಪ್ರಯತ್ನ ಪಟ್ಟರು. ಕೆಲವೆ ಸಮಯದಲ್ಲಿ ಅವರಿಗೆ ಕೃಷ್ಣಾನಗರ ಕೆಂದ್ರಕ್ಕೆ ವರ್ಗಾವಣೆಯಾಯಿತು.
ಚಿತ್ರಕೃಪೆ: Joydeep
ಕೇವಲ 25 ಕಿ.ಮೀ
ಕೃಷ್ಣಾನಗರವು ನಬಾದ್ವೀಪದಿಂದ ಕೇವಲ 25 ಕಿ.ಮೀ ಗಳಷ್ಟು ದೂರದಲ್ಲಿದ್ದುದರಿಂದ ಅವರಿಗೆ ಸಂತಸವಾಯಿತು ಹಾಗೂ ಅಲ್ಲಿಗೆ ತೆರಳಿ ತಮಗೆ ಸಮಯ ಸಿಕ್ಕಾಗಲೆಲ್ಲ ನಬಾದ್ವೀಪಕ್ಕೆ ತೆರಳಿ ಅಲ್ಲಿ ಚೈತನ್ಯಪ್ರಭುಗಳ ಜನ್ಮಸ್ಥಳದ ಕುರಿತು ಸಂಶೋಧನೆ ಮಾಡಲು ಆರಂಭಿಸಿದರು.
ಚಿತ್ರಕೃಪೆ: Ilya Mauter
ಬೇಸರ
ಕೆಲ ಕಾಲದವರೆಗೆ ಅಲ್ಲಿ ಸುದೀರ್ಘವಾದ ಸಂಶೋಧನೆ ಕೈಗೊಂಡು ಆ ಸ್ಥಳವನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವಂತೆ ಚೈತನ್ಯ ಮಹಾಪ್ರಭುಗಳು ಹುಟ್ಟಿದ ಸ್ಥಳವಲ್ಲ ಎಂಬ ನಿರ್ಧಾರಕ್ಕೆ ಬಂದರು. ಇದರಿಂದ ಅವರಿಗೆ ಬೇಸರವಾಗಿತ್ತು. ಹೀಗಿರುವಾಗ ಸ್ನೇಹಿತರೊಂದಿಗೆ ರಾತ್ರಿ ಒಮ್ಮೆ ಹರಟುತ್ತಿರುವಾಗ ಅವರೊಂದು ವಿಚಿತ್ರ ನೋಟವೊಂದನ್ನು ಕಂಡರು.
ಚಿತ್ರಕೃಪೆ: Rajmenoka
ಸುವರ್ಣಮಯ ಪ್ರಕಾಶ
ಅದರ ಪ್ರಕಾರವಾಗಿ, ಅವರಿದ್ದ ಸ್ಥಳದಿಂದ ಕೆಲ ದೂರದಲ್ಲಿ ದೊಡ್ಡದಾದ ರಚನೆಯೊಂದರ ಮೇಲೆ ಸುವರ್ಣ ಪ್ರಕಾಶವೊಂದು ಆವರಿಸುತ್ತಿರುವ ದೃಶ್ಯ ಅದಾಗಿತ್ತು. ಅವರು ತಮ್ಮ ಸ್ನೇಹಿತರನ್ನು ಕುರಿತು ಆ ದೃಶ್ಯ ಕಾಣುತ್ತಿದೆಯಾ ಎಂದು ವಿಚಾರಿಸಿದಾಗ ಒಬ್ಬರಿಗೆ ಹೌದೆಂತಲೂ, ಇನ್ನೊಬ್ಬರಿಗೆ ಇಲ್ಲವೆಂತಲೂ ಉತ್ತರ ದೊರೆಯಿತು.
ಚಿತ್ರಕೃಪೆ: Vrindavan Lila
ಪಾಮ್ ಮರಗಳು
ಆ ರಾತ್ರಿ ಕಳೆದು ಮರುದಿನ ಬೆಳಿಗ್ಗೆ ತಮ್ಮ ಛಾವಣಿ ಮೇಲೆ ಹೋಗಿ ನಿನ್ನೆ ನೋಡಿದ್ದ ದೃಶ್ಯದ ಸ್ಥಳವನ್ನು ಮತ್ತೆ ನೋಡಿದರು. ಅಲ್ಲಿ ಕೇವಲ ಪಾಮ್ ಮರಗಳು ಬೆಳೆದು ನಿಂತಿದ್ದು ಕಂಡವು. ಇದೊಂದು ಅದ್ಭುತ ಸಂಕೇತ ಎಂದು ಬಗೆದು ಅಲ್ಲಿ ಹೋಗಿ ವಿಚಾರಿಸಿದಾಗ ಅದೊಂದು ಲಕ್ಷ್ಮಣಸೇನ ಎಂಬ ರಾಜನ ಪಾಳು ಬಿದ್ದ ಕೋಟೆ ಪ್ರದೇಶವೆಂದು ತಿಳಿಯಿತು.
ಚಿತ್ರಕೃಪೆ: Vrindavan Lila
ಇದೆ ಆ ಸ್ಥಳ!
ಆ ಸ್ಥಳದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿ ಆ ಸ್ಥಳವೆ ಮಾಯಾಪುರ ಎಂತಲೂ ಹಾಗೂ ಇಲ್ಲಿಯೆ ಚೈತನ್ಯ ಮಹಾಪ್ರಭುಗಳು ಜನಿಸಿದ್ದೆಂತಲೂ ಶೋಧಿಸುವಲ್ಲಿ ಸಫಲರಾದರು. ನಂತರ ಆ ಸ್ಥಳ ಹಾಗೂ ಪ್ರಭುಗಳ ಕುರಿತು ಎಲ್ಲೆಡೆ ವಿಚಾರ ಹರಡಿ ಮಾಯಾಪುರವು ಒಂದು ಧಾರ್ಮಿಕ ಕೇಂದ್ರವಾಗಿ ಗಮನಸೆಳೆಯತೊಡಗಿತು.
ಚಿತ್ರಕೃಪೆ: Vrindavan Lila
ಮೇಲ್ವಿಚಾರಣೆ
ನಂತರ ಅವರು ಮಾಯಾಪುರದ ಬಳಿ ಇದ್ದ ಸುರಭಿ-ಕುಂಜ ಎಂಬಲ್ಲಿ ಮನೆಯೊಂದನ್ನು ಖರೀದಿಸಿ ಅಲ್ಲಿದ್ದು ಮಾಯಾಪುರದಲ್ಲಿ ಚೈತನ್ಯಮಹಾಪ್ರಭುಗಳಿಗೆ ಮುಡಿಪಾದ ದೇವಾಲಯ ನಿರ್ಮಾಣದ ಮೇಲ್ವಿಚಾರಣೆಯನ್ನು ವಹಿಸಿಕೊಂಡರು. ಅಲ್ಲದೆ ಸ್ಥಳೀಯವಾಗಿ ಉತ್ಸವಾದಿಗಳನ್ನು ಮಾಡಿ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತ, ದೇವಾಲಯದ ಅಭಿವೃದ್ಧಿಗೆ ಹೆಚ್ಚಿನ ಹಣ ಸೇರಿಸತೊಡಗಿದರು.
ಚಿತ್ರಕೃಪೆ: Os Rúpias
ಹೆಚ್ಚು ಹೆಚ್ಚು ಭಕ್ತರು
ಹೀಗೆ ಮಾಯಾಪುರವು ಒಂದು ಪ್ರಬುದ್ಧ ಧಾರ್ಮಿಕ ಕೇಂದ್ರವಾಗಿ ಬೆಳೆಯಿತು. ಇಂದು ಕೃಷ್ಣ ಹಾಗೂ ವಿಷ್ಣುವಿನ ಭಕ್ತರು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ವೈಕುಂಠ ಏಕಾದಶಿ, ಕೃಷ್ಣ ಜನ್ಮಾಷ್ಟಮಿಗಳಂದು ಇಲ್ಲಿ ಅದ್ಭುತವಾಗಿ ಉತ್ಸವಗಳು ನಡೆಯುತ್ತವೆ.
ಚಿತ್ರಕೃಪೆ: Vrindavan Lila
ವಿದೇಶಿಯರೂ!
ಹೊಸ ವರ್ಷಾಚರಣೆಗಳೂ ಸಹ ಸುಂದರವಾಗಿ ಇಲ್ಲಿ ನಡೆಯುತ್ತವೆ. ರಾತ್ರಿಯೆಲ್ಲ ಭಜನೆ-ಕೀರ್ತನೆಗಳ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. ಈ ಕ್ಷೇತ್ರಕ್ಕೆ ದೇಶ-ವಿದೇಶಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ.
ಚಿತ್ರಕೃಪೆ: Vrindavan Lila
ತಲುಪುವ ಬಗೆ
ಮಾಯಾಪುರವನ್ನು ತಲುಪುವುದು ಸುಲಭವಾಗಿದೆ. ಗಂಗಾ-ಜಲಾಂಗಿ ನದಿಯಲ್ಲಿ ದೋಣಿಯ ಮೂಲಕ ತಲುಪಬಹುದು. ಅಲ್ಲದೆ, ಕೊಲ್ಕತ್ತಾ ನಗರದಿಂದ ಸಾಕಷ್ಟು ಬಸ್ಸುಗಳು ಮಾಯಾಪುರಕ್ಕೆ ದೊರೆಯುತ್ತವೆ. ಇಸ್ಕಾನ್ ಕೊಲ್ಕತ್ತಾ ಸಹ ಮಾಯಾಪುರಕ್ಕೆ ಬಸ್ಸುಗಳೆ ಸೇವೆಯನ್ನು ನಿರಂತರವಾಗಿ ಒದಗಿಸುತ್ತದೆ. ಅಲ್ಲದೆ ಸಿಲ್ಡಾ ರೈಲು ನಿಲ್ದಾಣದಿಂದ ಕೃಷ್ಣಾನಗರಕ್ಕೆ ರೈಲುಗಳು ಲಭ್ಯವಿದ್ದು ಕೃಷ್ಣಾನಗರದಿಂದ 18 ಕಿ.ಮೀ ಗಳಷ್ಟು ದೂರದಲ್ಲಿ ಮಾಯಾಪುರವಿದೆ. ರಿಕ್ಷಾಗಳು ದೊರೆಯುತ್ತವೆ. ಕೊಲ್ಕತ್ತಾದಿಂದ ಮಾಯಾಪುರವು 130 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Ayan Mukherjee
ಭೇಟಿ ನೀಡೆಲೇಬೇಕು
ಇಸ್ಕಾನ್ ನ ಕೇಂದ್ರವಾಗಿರುವ ಮಾಯಾಪುರ ನಿಜಕ್ಕೂ ಒಮ್ಮೆ ಭೇಟಿ ನೀಡಲೇಬೇಕಾದ ಮಾಯದಂತಹ ಲೋಕವಾಗಿದೆ. ಕೊಲ್ಕತ್ತಗೇನಾದರೂ ಭೇಟಿ ನೀಡಿದರೆ ಮಾಯಾಪುರಕ್ಕೂ ಭೇಟಿ ನೀಡಲು ಮರೆಯದಿರಿ.
ಚಿತ್ರಕೃಪೆ: Vrindavan Lila