ಬ್ರಹ್ಮನ ಮಕ್ಕಳಲ್ಲಿ ಒಬ್ಬನಾದ ದಕ್ಷ ರಾಜನನ್ನು ಪ್ರಜಾಪತಿಗೆ ಹುದ್ದೆಗ್ ನೇಮಿಸಲು ಶಿವನು ಒಮ್ಮೆ ವಿರೋಧ ವ್ಯಕ್ತಪಡಿಸಿದ್ದನು. ಇದರಿಂದ ದಕ್ಷನಿಗೆ ಶಿವನ ಮೇಲೆ ಕೋಪ ಬಂದಿತ್ತು. ಇದಾದ ಬಳಿಕ ಸಮಯ ಕಳೆದಂತೆ ದಕ್ಷನು ಪ್ರಜಾಪತಿಯ ಸ್ಥಾನ ಅಲಂಕರಿಸಿದನು. ಹೀಗಿರುವಾಗ ಶಿವನನ್ನು ಅವಮಾನಿಸುವ ದುರುದ್ದೇಶದಿಂದ ದಕ್ಷನು ಒಮ್ಮೆ ದಕ್ಷ ಯಾಗವನ್ನು ಆಯೋಜಿಸಿದನು.
ಕಲಿಯುಗದಲ್ಲಿ ಭಕ್ತರನ್ನು ಕಾಪಾಡುವ ವೈಷ್ಣೊದೇವಿ
ಇದೊಂದು ಅತ್ಯಂತ ದೊಡ್ಡ ಯಾಗವಾಗಿತ್ತು ಹಾಗೂ ಸಕಲ ದೇವ, ದೇವತೆಯರು, ಯಕ್ಷರು, ಋಷಿಗಳೆಲ್ಲರಿಗೂ ಆಮಂತ್ರಣ ನಿಡಲಾಗಿತ್ತು. ಶಿವ ಮತ್ತು ಪತ್ನಿಯಾದ ಸತಿ (ದಕ್ಷ ಪ್ರಜಾಪತಿಯ ಮಗಳು) ದೇವಿಗೆ ಮಾತ್ರ ಈ ಆಮಂತ್ರಣ ನೀಡಲಾಗಿರಲಿಲ್ಲ. ಹೀಗೆ ಮಾಡುವುದರಿಂದ ಶಿವನನ್ನು ಕೆಟ್ಟದಾಗಿ ನಡೆಸಿಕೊಂಡೆನೆಂಬ ತೃಪ್ತಿ ದಕ್ಷನಲ್ಲಿ ಮನೆ ಮಾಡಿತ್ತು.
ಸುರ್ಕಂಡಾ ದೇವಿ ದೇವಾಲಯ, ಚಿತ್ರಕೃಪೆ: Lucky Shalini
ಆದರೆ ಇದರಿಂದ ಬೇಸರ ಪಟ್ಟ ಸತಿ ದೇವಿಯು ಶಿವನಿಗೆ ಆಮಂತ್ರಣ ನೀಡದಿರುವ ಕುರಿತು ತನ್ನ ತಂದೆಯಲ್ಲಿ ಚರ್ಚಿಸುವ ಉದ್ದೇಶದಿಂದ ಅಲ್ಲಿಗೆ ಹೋಗಲು ಅಣಿಯಾದಳು. ಆದರೆ ಶಿವನು ಅದಕ್ಕೆ ಒಪ್ಪಲಿಲ್ಲ. ಆದರೂ ಬಲವಂತವಾಗಿ ಸತಿ ದೇವಿಯು ಅಲ್ಲಿಗೆ ಹೋಗಿ ಮತ್ತೆ ತನ್ನ ತಂದೆಯಿಂದ ಶಿವ ನಿಂದೆ ಕೇಳುವಂತಾಗಿ ಅದರಿಂದ ದುಖಿಸಿ, ಯಾಗದ ಅಗ್ನಿಯಲ್ಲೆ ಹಾರಿ ತನ್ನ ಪ್ರಾಣ ತ್ಯಜಿಸಿದಳು.
ಇದನ್ನರಿತ ಶಿವ ಅತ್ಯುಗ್ರನಾಗಿ ವೀರಭದ್ರನನ್ನು ಹುಟ್ಟು ಹಾಕಿ ದಕ್ಷನ ರುಂಡ ಚೆಂಡಾಡಿ ಕೊನೆಗೆ ಸತಿ ದೇವಿಯ ಮೃತ ಶರೀರವನ್ನು ತನ್ನ ಕೈಗಳಲ್ಲಿ ಆರ್ತನಾದ ಆರಂಭಿಸಿದಾಗ ಲೋಕವು ಅಲ್ಲೋಲ ಕಲ್ಲೋಲವಾಯಿತು. ಇನ್ನೂ ಪರಿಸ್ಥಿತಿ ಬಿಗಡಾಯಿಸುವುದೆಂದು ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿ ದೇವಿಯ ಮೃತ ಶರೀರವನ್ನು ತುಂಡುಗಳಾಗಿ ಮಾಡಿದನು. ಆ ತುಂಡುಗಳು ಬಿದ್ದ ಸ್ಥಳಗಳೆ ಇಂದು ಶಕ್ತಿಪೀಠಗಳಾಗಿವೆ.
ಸುರ್ಕಂಡಾ ದೇವಿ, ಚಿತ್ರಕೃಪೆ: Justin Pickard
ಈ ರಿತಿಯಾಗಿ ಸತಿಯ ಶರೀರದ ಒಂದು ಭಾಗವಾದ ತಲೆಯು ಬಿದ್ದ ಸ್ಥಳವೆ ಇಂದು ಸುರಕಂಡಾ ದೇವಿ ಶಕ್ತಿಪೀಠವಾಗಿದೆ. ಮೊದ ಮೊದಲು ಸಿರಖಂಡಾ ಎಂದು ಕರೆಯಲ್ಪಡುತ್ತಿದ್ದ ಈ ಸ್ಥಳವು ಇಂದು ಸುರಕಂಡಾ ಎಂದು ಕರೆಯಲ್ಪಡುತ್ತದೆ. ಈ ಶಕ್ತಿಪೀಠವಿರುವುದು ಉತ್ತರಾಖಂಡ ರಾಜ್ಯದ ತೆಹ್ರಿ ಜಿಲ್ಲೆಯ ಧನೌಲ್ತಿ ಬಳಿಯಿರುವ ಪುಟ್ಟ ಗ್ರಾಮವೊಂದರಲ್ಲಿ.
ಈ ಸ್ಥಳವು ಸಮುದ್ರ ಮಟ್ಟದಿಂದ ಸಾವಿರಾರು ಅಡಿಗಳಷ್ಟು ಎತ್ತರದಲ್ಲಿದ್ದು ಅದ್ಭುತವಾದ ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಮಸ್ಸೂರಿ, ಧನೌಲ್ತಿ, ಚಂಬಾ ಗಲಂತಹ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರು ಈ ಶಕ್ತಿಪೀಠಕ್ಕೆ ಸಾಮಾನ್ಯವಾಗಿ ಭೇಟಿ ನೀಡದೆ ಹೋಗಲಾರರು. ಧನೌಲ್ತಿಯಿಂದ ಎಂಟು ಕಿ.ಮೀ ಹಾಗೂ ಚಂಬಾದಿಂದ 22 ಕಿ.ಮೀ ಗಳಷ್ಟು ದೂರದಲ್ಲಿ ಈ ಶಕ್ತಿಪೀಠವಿದೆ.
ಅದ್ಭುತವಾಗಿ ಕಂಡುಬರುವ ಹಿಮ ಪರ್ವತಗಳು, ಚಿತ್ರಕೃಪೆ: Guptaele
ಕದ್ದುಖಾಲ್ ಎಂಬ ಸ್ಥಳವು ಈ ಶಕ್ತಿಪೀಠಕ್ಕೆ ಹತ್ತಿರವಾಗಿದ್ದು ಮೊದಲಿಗೆ ವಾಹನಗಳ ಮೂಲಕ ಕದ್ದುಖಾಲ್ ತಲುಪಬೇಕು. ನಂತರ ಕದ್ದುಖಾಲ್ ನಿಂದ ಮೂರು ಕಿ.ಮೀ ಗಳಷ್ಟು ಸ್ವಲ್ಪ ಕಠಿಣವಾದ ಚಾರಣ ಮಾಡುತ್ತ ಈ ಸಕ್ತಿಪೀಠವನ್ನು ತಲುಪಬಹುದಾಗಿದೆ. ಈ ಮಧ್ಯೆ ಏರುವಾಗ ಸುತ್ತಮುತ್ತಲಿನ ಪ್ರದೇಶಗಳ ಅದ್ಭುತವಾದ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ.
ಶಕ್ತಿಸ್ವರೂಪಿಣಿಯರ ಶಕ್ತಿಶಾಲಿ ದೇವಾಲಯಗಳು
ಇನ್ನೊಂದು ವಿಶೇಷವೆಂದರೆ ಈ ಸ್ಥಳವು ಸಾಕಷ್ಟು ರಮಣೀಯವಾಗಿದ್ದು ಘಾಟು ಪ್ರದೇಶ ಹಾಗೂ ಕಂದಕಗಳಲ್ಲಿ ಹರಿಯುವ ನೀರಿನ ಸುಂದರ ದೃಶ್ಯಾವಳಿಗಳಿಂದ ಕುಡಿದೆ. ಇನ್ನೊಂದು ವಿಷಯವೆಂದರೆ ಈ ಶಕ್ತಿಪೀಠದ ಸ್ಥಳದಿಂದ ರಮ್ಯ ಹಿಮಾಲಯ ಪರ್ವತಗಳ ಗಮ್ಯ ನೊಟವನ್ನು ಕಣ್ತುಂಬ ನೋಡಿ ಆನಂದಿಸಬಹುದು.