ಕನ್ನಡ ಭಾಷೆಯ ಅಂದ ಚೆಂದವನ್ನು ಪದಗಳಲ್ಲಿ ಪರಿಣಾಮಾತ್ಮಕವಾಗಿ ವರ್ಣಿಸುವುದು ಕಷ್ಟವೆ ಸರಿ. ಅತಿ ಪ್ರಾಚೀನ ಕಾಲದಿಂದ ಬಳಕೆಯಲ್ಲಿರುವ ಕನ್ನಡ ಭಾಷೇಯು ಭಾರತದ ಅತಿ ಪ್ರಮುಖ ಭಾಷೆಗಳ ಪೈಕಿ ಒಂದಾಗಿದೆ. ಕನ್ನಡ ಭಾಷೇಯ ಸಿರಿವಂತಿಕೆಯನ್ನು ಇಂದಿಗೂ ಸಹ ನಾವು ಹಲವಾರು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಕಂಡುಬರುವುದನ್ನು ಗಮನಿಸಬಹುದು. ಇಂದಿಗೂ ಕರ್ನಾಟಕದ ಎಷ್ಟೋ ಚಿಕ್ಕ ಪುಟ್ಟ ಸ್ಥಳಗಳಲ್ಲಿ ಕನ್ನಡದಲ್ಲಿ ಬರೆಯಲಾದ ಅದೆಷ್ಟೊ ಶಾಸನಗಳು ಕಂಡು ಬರುತ್ತವೆ.
ಹೋಟೆಲ್ ಮತ್ತು ವಿಮಾನ ಹಾರಾಟ ದರಗಳ ಮೇಲೆ 50% ರಷ್ಟು ಕಡಿತ ಪಡೆಯಿರಿ!
ವಿಶೇಷ ಲೇಖನ : ಐತಿಹಾಸಿಕ ಕನ್ನಡದ ಸಾಮ್ರಾಜ್ಯ ವಿಜಯನಗರದ ಹಂಪಿ
ಲಕ್ಷ್ಮೇಶ್ವರ ಎಂಬುದು ಗದಗ್ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿರುವ ಒಂದು ಪುಟ್ಟ ಪಟ್ಟಣ. ಆದರೆ ಕನ್ನಡದ ಕಂಪನ್ನು ಎಳೆ ಎಳೆಯಾಗಿ ಪಸರಿಸಿರುವುದರಲ್ಲಿ ಈ ಸ್ಥಳದ ಕೊಡುಗೆ ಅಪಾರ. ಕನ್ನಡದ ಆದಿಕವಿಯಾದ ಪಂಪನು ತನ್ನ ಪ್ರಸಿದ್ಧ ಕವನವನ್ನು ಲಕ್ಷ್ಮೇಶ್ವರದಲ್ಲೆ ಬರೆದ ಎಂಬ ಪ್ರತೀತಿಯಿದೆ. ಅಲ್ಲದೆ ಸಾಕಷ್ಟು ಕನ್ನಡದ ಶಿಲಾ ಶಾಸನಗಳು ಈ ಸ್ಥಳದಲ್ಲಿ ಕಂಡುಬರುತ್ತವೆ. ಕನ್ನಡ ಸಂಸ್ಕೃತಿ, ಸಾಹಿತ್ಯದ ಸಿರಿವಂತಿಕೆಗೆ ಸಾಕ್ಷಿಯಾಗಿರುವ ಲಕ್ಷ್ಮೇಶ್ವರವನ್ನು ತಿರುಳುಗನ್ನಡನಾಡು ಎಂದೂ ಸಹ ಪ್ರೀತಿಯಿಂದ ಕರೆಯಲಾಗುತ್ತದೆ.
ಚಾಲುಕ್ಯ ವಾಸ್ತುಶಿಲ್ಪ ಕಲೆಯ ಸೋಮೇಶ್ವರ ದೇವಸ್ಥಾನ
ಚಿತ್ರಕೃಪೆ: Manjunath Doddamani
ಜೈನ ಪ್ರಭಾವವಿರುವ ಲಕ್ಷ್ಮೇಶ್ವರದಲ್ಲಿ ದೇವಚಕ್ರ ಭಟ್ಟಾರಕ, ಶಂಕನಾಚಾರ್ಯ, ಹೇಮದೇವಾಚಾರ್ಯ, ಪದ್ಮಸೇನ, ತ್ರಿಭುವನಚಂದ್ರ ಪದ್ಮಿತಾ ಹಾಗೂ ರಾಮದೇವಾಚಾರ್ಯರಂತಹ ಸಾಕಷ್ಟು ಜೈನ ಸಂತರು ನೆಲೆಸಿದ್ದರು. ಇಲ್ಲಿರುವ ಸೋಮೇಶ್ವರ ದೇವಸ್ಥಾನ ಸಂಕೀರ್ಣದಲ್ಲಿ 50 ಕ್ಕೂ ಅಧಿಕ ಸಂಖ್ಯೆಯಲ್ಲಿ ಕನ್ನಡದಲ್ಲಿ ಬರೆಯಲಾದ ಶಿಲಾ ಶಾಸನಗಳನ್ನು ಕಾಣಬಹುದಾಗಿದೆ. ಇಂದು ಲಕ್ಷ್ಮೇಶ್ವರದಲ್ಲಿ ಹಿಂದೂ ದೇವಾಲಯಗಳ ಜೊತೆಗೆ ಜೈನ ಬಸದಿ ಹಾಗೂ ಮುಸ್ಲಿಮ್ಮರ ದರ್ಗಾಗಳನ್ನೂ ಸಹ ಕಾಣಬಹುದಾಗಿದೆ. ಒಂದು ಕಾಲದಲ್ಲಿ ಬಿಜಾಪುರ (ವಿಜಯಪುರ) ದ ಆದಿಲ್ ಶಾಹಿ ಸುಲ್ತಾನನ ಆಳ್ವಿಕೆಗೆ ಇದು ಒಳಪಟ್ಟಿತ್ತು.
ವಿಶೇಷ ಲೇಖನ : ಬಿಸಿಯಲ್ಲೂ ಕಣ್ಮನ ತಂಪಾಗಿಸುವ ವಿಜಯಪುರ
ಕನ್ನಡದಲ್ಲಿ ಬರೆಯಲಾದ ಶಿಲಾ ಶಾಸನಗಳು
ಚಿತ್ರಕೃಪೆ: Manjunath Doddamani
ಇನ್ನು ಐತಿಹಾಸಿಕವಾಗಿ ಗಮನಿಸಿದಾಗ ಲಕ್ಷ್ಮೇಶ್ವರದಲ್ಲಿರುವ ಶಿವನಿಗೆ ಮುಡಿಪಾದ ಸೋಮೇಶ್ವರ ದೇವಸ್ಥಾನವು ಬಹು ಪ್ರಮುಖವಾದ ಆಕರ್ಷಕ ಹಾಗೂ ಪ್ರೇಕ್ಷಣೀಯ ಸ್ಥಳವಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. 11 ನೆಯ ಶತಮಾನದ ಈ ಸುಂದರ ಶಿಲ್ಪಕಲೆಯ ಸೋಮೇಶ್ವರ ದೇವಸ್ಥಾನವು ಮೂರು ಪ್ರಮುಖ ಒಳ ಪ್ರವೇಶ ದ್ವಾರಗಳನ್ನು ಹೊಂದಿದ್ದು ಸುತ್ತಲು ಕೋಟೆಯ ಶೈಲಿಯ ಹಾಗೆ ಎತ್ತರವಾದ ಗೋಡೆಗಳಿಂದ ಆವೃತವಾಗಿದೆ. ಚಾಲುಕ್ಯ ವಾಸ್ತುಶಿಲ್ಪ ಕಲೆಗೆ ಅತ್ಯದ್ಭುತವಾದ ಉದಾಹರಣೆಯಾಗಿ ಸೋಮೇಶ್ವರ ದೇವಸ್ಥಾನವು ಹೆಸರುವಾಸಿಯಾಗಿದೆ.
ಸೋಮೇಶ್ವರ ದೇವಸ್ಥಾನದ ಒಳಾಂಗಣ
ಚಿತ್ರಕೃಪೆ: Manjunath Doddamani
ಇತರೆ ದೇವಾಲಯಗಳಂತೆ ಇದೂ ಕೂಡ ಒಂದು ಸಾಂಪ್ರದಾಯಿಕ ಶೈಲಿಯ ದೇವಸ್ಥಾನವಾಗಿದ್ದು, ಮಧ್ಯದಲ್ಲಿ ಗರ್ಭಗೃಹ ಹಾಗೂ ಸುತ್ತಮುತ್ತಲು ಇತರೆ ದೇವರುಗಳ ಸನ್ನಿಧಿಗಳನ್ನು ಹೊಂದಿದೆ. ಅರ್ಧ ಮಂಟಪ, ಮುಖ ಮಂಟಪ ಹಾಗೂ ನವರಂಗ ಮಂಟಪಗಳನ್ನು ಈ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಈ ದೇವಸ್ಥಾನದ ಸಂಕೀರ್ಣದಲ್ಲೆ ಸುಮಾರು 50 ಕ್ಕೂ ಅಧಿಕ ಕನ್ನಡದಲ್ಲಿ ಬರೆಯಲಾದ ಶಿಲಾ ಶಾಸನಗಳನ್ನು ಕಾಣಬಹುದಾಗಿದೆ. ಮುಖ್ಯ ದೇವಸ್ಥಾನದ ಹಿಂಬದಿಯಲ್ಲಿ ತೆರೆದ ಬಾವಿಯಿದ್ದು ದೇವಸ್ಥಾನದ ಬಳಕೆಗೆ ಮಾತ್ರ ಮೀಸಲಾಗಿದೆ.
ವಿಶೇಷ ಲೇಖನ : ಇದು ಬೇಲೂರಲ್ಲ...ಸೋಮನಾಥಪುರದ ಚೆನ್ನಕೇಶವ
ಲಕ್ಷ್ಮೇಶ್ವರದ ಪ್ರಮುಖ ಜೈನ ಬಸದಿ
ಚಿತ್ರಕೃಪೆ: Manjunath Doddamani
ಈ ಸ್ಥಳವು ಪ್ರವರ್ಧಮಾನದಲ್ಲಿದ್ದ ಸಮಯದಲ್ಲಿ ಇದು ಪ್ರಭಾವಶಾಲಿ ಜೈನ ಕೇಂದ್ರವೂ ಸಹ ಆಗಿತ್ತು. ಇಲ್ಲಿ ದೊರೆತ ಶಿಲಾ ಶಾಸನದ ಬರಹಗಳಿಂದ ಈ ಅಂಶವು ಮನದಟ್ಟಾಗುತ್ತದೆ. ಅಲ್ಲದೆ ಜೈನ ಬಸದಿಗಳನ್ನೂ ಸಹ ಲಕ್ಷ್ಮೇಶ್ವರದಲ್ಲಿ ಕಾಣಬಹುದಾಗಿದೆ. ಎರಡು ಪ್ರಖ್ಯಾತ ಜೀನಾಲಯಗಳನ್ನು ಲಕ್ಷ್ಮೇಶ್ವರದಲ್ಲಿ ಕಾಣಬಹುದಾಗಿದ್ದು ಅದರಲ್ಲಿ ಹೆಚ್ಚು ಪ್ರಸಿದ್ದಿ ಪಡೆದ ಜೀನಾಲಯ ಅಥವಾ ಜೈನ ಬಸದಿ ಶಂಖ ಬಸದಿಯಾಗಿದೆ. ಸಹಸ್ರಕೂಟ ಜೀನಾಲಯ ಎಂತಲೂ ಕರೆಯಲ್ಪಡುವ ಈ ಬಸದಿಯು ಲಕ್ಷ್ಮೇಶ್ವರದ ಬಸ್ತಿಬಣ ಎಂಬ ಪ್ರದೇಶದಲ್ಲಿದೆ.
ದ್ರಾವಿಡ ಶೈಲಿಯ ಸರಪಣಿಯಿರುವ ಜುಮ್ಮಾ ಮಸೀದಿ
ಚಿತ್ರಕೃಪೆ: Manjunath Doddamani
ಅಲ್ಲದೆ ಇಲ್ಲಿ ಅಂಕುಶಖಾನ ದರ್ಗಾ ಹಾಗೂ ಜುಮ್ಮಾ ಮಸೀದಿಗಳನ್ನು ಕಾಣಬಹುದಾಗಿದೆ. ಬಿಜಾಪುರ (ಪ್ರಸ್ತುತ ವಿಜಯಪುರ) ದ ಸುಲ್ತಾನ ಆದಿಲ್ ಶಾಹಿಯ ಆಳ್ವಿಕೆಯ ಸಮಯದಲ್ಲಿ ಈ ಸ್ಮಾರಕಗಳು ರಚಿತಗೊಂಡಿವೆ. ಅಂಕುಶಖಾನ್ ಅಂದಿನ ಸಮಯದ ಸಂತನಾಗಿದ್ದು ದರ್ಗಾ ಅವರಿಗೆ ಮುಡಿಪಾಗಿದೆ. ಇನ್ನು ಜುಮ್ಮಾ ಮಸೀದಿಯು ಇಸ್ಲಾಮಿಕ್ ಶೈಲಿಯಂತಿರದೆ ಇಂಡೊ - ಸರ್ಸಾನಿಕ್ ಪ್ರಭಾವ ಹೊಂದಿರುವುದನ್ನು ಕಾಣಬಹುದು. ಅದರಲ್ಲೂ ಮತೊಂದು ವಿಶೇಷವೆಂದರೆ ಮಸೀದಿಯ ಹೊರಾಂಗಣ ಗೋಡೆಗಳಲ್ಲಿ ದ್ರಾವಿಡ ಶೈಲಿಯ ಸರಪಣಿಗಳಿರುವುದು ಇದನ್ನು ಒಂದು ಅಪರೂಪವಾದ ಮಸೀದಿಯನ್ನಾಗಿಸಿದೆ.
ವಿಶೇಷ ಲೇಖನ : ರೈಲಿನಲ್ಲಿ ಗದಗದಿಂದ ಪಂಢರಾಪುರ
ಲಕ್ಷ್ಮೇಶ್ವರದ ಅಂಕುಶಖಾನ್ ದರ್ಗಾ
ಚಿತ್ರಕೃಪೆ: Manjunath Doddamani
ಲಕ್ಷ್ಮೇಶ್ವರವನ್ನು ಹುಬ್ಬಳ್ಳಿ ಅಥವಾ ಗದಗಿನಿಂದ ಸುಲಭವಾಗಿ ತಲುಪಬಹುದಾಗಿದೆ. ಕರ್ನಾಟಕದ ಬಹುತೇಕ ನಗರಗಳಿಂದ ಹುಬ್ಬಳ್ಳಿಗೆ ಬಾಸು ಹಾಗೂ ರೈಲುಗಳಿದ್ದು ಒಂದೊಮ್ಮೆ ಹುಬ್ಬಳ್ಳಿ ತಲುಪಿದರೆ ಅಲ್ಲಿಂದ ಸರ್ಕಾರಿ ಬಸ್ಸುಗಳ ಮೂಲಕ ಸುಮಾರು 52 ಕಿ.ಮೀ ದೂರವಿರುವ ಲಕ್ಷ್ಮೇಶ್ವರವನ್ನು ತಲುಪಬಹುದು. ಅಲ್ಲದೆ ಗದಗ್ ಪಟ್ಟಣದಿಂದ ಸುಮಾರು 40 ಕಿ.ಮೀ ಗಳಷ್ಟು ದೂರವಿರುವ ಲಕ್ಷ್ಮೇಶ್ವರಕ್ಕೆ ಬಸ್ಸುಗಳು ದೊರೆಯುತ್ತವೆ. ಗದಗ್ ಹಾಗೂ ಹುಬ್ಬಳ್ಳಿ ಗಳೆರಡರಲ್ಲೂ ಜಂಕ್ಷನ್ ರೈಲು ನಿಲ್ದಾಣಗಳಿದ್ದು ಕರ್ನಾಟಕದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.