ಕರ್ನಾಟಕದ ಗದಗ್ ಜಿಲ್ಲೆಯಲ್ಲಿರುವ ಲಕ್ಕುಂಡಿ ಗ್ರಾಮದ ಕುರಿತು ಬಹುಶಃ ಅನೇಕರಿಗೆ ತಿಳಿದಿರಿಲಿಕ್ಕಿಲ್ಲ. ಈ ಗ್ರಾಮವು ಒಂದು ಐತಿಹಾಸಿಕ ವೈಶಿಷ್ಟ್ಯವುಳ್ಳ ಗ್ರಾಮವಾಗಿದ್ದು ಅದ್ಭುತ ಶಿಲ್ಪ ಕಲೆಗಳಿಂದ ಕೂಡಿದ ಅನೇಕ ಹಿಂದು ಹಾಗೂ ಜೈನ ದೇವಾಲಯಗಳ ತವರೂರಾಗಿದೆ. ಆದರೆ ಇಲ್ಲಿನ ಕೆಲವು ದೇವಾಲಯಗಳು ನಿರ್ವಹಣೆ ಇರಲಾರದೆ ಶಿಥಿಲಗೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ.
ನಿಮಗಿಷ್ಟವಾಗಬಹುದಾದ : ಮನಸೆಳೆವ ಆಕರ್ಷಕ ಮೆಟ್ಟಿಲು ಬಾವಿಗಳು
ಆದಾಗ್ಯೂ ಇತಿಹಾಸ ಪ್ರಿಯ ಪ್ರವಾಸಿಗರಿಗೆ, ಭವ್ಯ ಕನ್ನಡ ನಾಡಿನ ಪರಂಪರೆಯ ಕುರಿತು ಹೆಮ್ಮೆ ಇರುವ ಜನರಿಗೆ ಆಕರ್ಷಕ ತಾಣವಾಗಿ ಲಕ್ಕುಂಡಿ ಕಂಡುಬರುತ್ತದೆ. ಲಕ್ಕುಂಡಿಯು ಗದಗಿನಿಂದ ಪೂರ್ವಕ್ಕೆ ಹಂಪಿಗೆ ಹೋಗುವ ಮಾರ್ಗದಲ್ಲಿ ಸುಮಾರು 12 ಕಿ.ಮೀ ಗಳಷ್ಟು ದೂರದಲ್ಲಿದೆ. ಗದಗಿನಿಂದ ಸಾಕಷ್ಟು ಬಸ್ಸುಗಳು ಲಕ್ಕುಂಡಿಗೆ ತೆರಳಲು ದೊರೆಯುತ್ತವೆ.
ಚಿತ್ರಕೃಪೆ:Dineshkannambadi
ಏನೀಲ್ಲವೆಂದರೂ ಲಕ್ಕುಂಡಿ ಗ್ರಾಮದಲ್ಲಿ ಸುಮಾರು 50 ದೇವಾಲಯಗಳನ್ನೂ, 101 ಮೆಟ್ಟಿಲು ಬಾವಿಗಳನ್ನೂ ಹಾಗೂ 29 ಶಾಸನಗಳನ್ನೂ ಕಾಣಬಹುದಾಗಿದೆ. ಇದರಿಂದ ಲಕ್ಕುಂಡಿಯ ಪುರಾತನ ಕಾಲದ ವೈಭವದ ಕುರಿತು ಕಲ್ಪಿಸಿಕೊಳ್ಳಬಹುದು. ಜೈನ ಸಾಹಿತ್ಯದಲ್ಲಿ ಬರುವ ದಾನಚಿಂತಾಮಣಿ ಅತ್ತಿಮಬ್ಬೆ ಹಾಗೂ ಶಿಲ್ಪಕಲೆಗೆ ಹೆಸರುವಾಸಿಯಾದ ಲಕ್ಕುಂಡಿಯ ಮೊದಲಿನ ಹೆಸರು ಲೊಕ್ಕಿಗುಂಡಿ.
ನಿಮಗಿಷ್ಟವಾಗಬಹುದಾದ : ಕನ್ನಡ ಪರಂಪರೆಯ ಮೂಲವಿರುವ ಲಕ್ಷ್ಮೇಶ್ವರ
ಚಾಲುಕ್ಯರು, ಕಲಚುರಿಗಳು ಹಾಗೂ ಸೇವುಣ ಸಾಮ್ರಾಜ್ಯಗಳಿಂದ ಲಕ್ಕುಂಡಿಯು ಆಳಲ್ಪಟ್ಟಿದೆ. ಈ ಮೊದಲು ರಾಷ್ಟ್ರಕೂಟರ ಪ್ರಭಾವ ಅಳಿಸಿ ಲಕ್ಕುಂಡಿ ಆಳಿದ ಚಾಲುಕ್ಯರು ಕಲ್ಯಾಣಿ (ಒಂದು ಗ್ರಾಮ, ಇಂದು ಇಲ್ಲಿ ಏನೂ ಇಲ್ಲ)ಯನ್ನು ರಾಜಧಾನಿಯಾಗಿ ಮಾಡಿಕೊಂಡರು. ಆದರೂ ಅವರು ಲಕ್ಕುಂಡಿಯಲ್ಲಿ ಶಿಲ್ಪಕಲೆಗೆ ಒತ್ತು ನೀಡಿ ಅನೇಕ ದೇವಾಲಯ ರಚನೆಗಳನ್ನು ನಿರ್ಮಿಸಿ ಉಳಿಸಿಕೊಂಡರು.
ಕಾಶಿ ವಿಶ್ವೇಶ್ವರ ದೇವಾಲಯ, ಚಿತ್ರಕೃಪೆ: Dineshkannambadi
ಲಕ್ಕುಂಡಿಯಲ್ಲಿ ಪ್ರಮುಖವಾಗಿ ನೋಡಬಹುದಾದ ರಚನೆಗಳೆಂದರೆ ಕಾಶಿ ವಿಶ್ವೇಶ್ವರ ದೇವಾಲಯ, ಬ್ರಹ್ಮ ಜೀನಾಲಯ, ಮೆಟ್ಟಿಲು ಬಾವಿ ಹಾಗೂ ನನ್ನೇಶ್ವರ ದೇವಾಲಯ. ಅದರಲ್ಲೂ ವಿಶೇಷವಾಗಿ ಕಾಶಿ ವಿಶ್ವೇಶ್ವರ ದೇವಾಲಯವು ಚಾಲುಕ್ಯ ವಾಸ್ತುಶೈಲಿಯ ಅದ್ಭುತ ಉದಾಹರಣೆಗಳ ಪೈಕಿ ಒಂದಾಗಿದೆ.
ಜೀನಾಲಯ, ಚಿತ್ರಕೃಪೆ: Dineshkannambadi
ಅದ್ಭುತ ಕೆತ್ತನೆಗಳಿಂದ ಕೂಡಿರುವ ಲಕ್ಕುಂಡಿಯ ಅನೇಕ ಮೆಟ್ಟಿಲು ಬಾವಿಗಳ ಪೈಕಿ ಪ್ರವಾಸಿಗರನ್ನು ಆಕರ್ಷಿಸುವ ಕೆಲವು ಬಾವಿಗಳೆಂದರೆ ಚಟೀರ ಬಾವಿ, ಕಣ್ಣೆ ಬಾವಿ ಹಾಗೂ ಮುಸುಕಿನ ಬಾವಿಗಳು. ಇನ್ನೂ ಕಾಶಿ ವಿಶ್ವೇಶ್ವರ ದೇವಾಲಯವು ಭವ್ಯವಾದ ಕೆತ್ತನೆಗಳಿಂದ ಕೂಡಿದ್ದು ಅಂದಿನ ಕುಶಲ ಕರ್ಮಿಗಳ ನೈಪುಣ್ಯತೆಯನ್ನು ತೋರಿಸುತ್ತದೆ.
ನನ್ನೇಶ್ವರ ದೇವಾಲಯ, ಚಿತ್ರಕೃಪೆ: Manjunath Doddamani Gajendragad
ಇನ್ನೊಂದು ವಿಷಯವೆಂದರೆ ಲಕ್ಕುಂಡಿಯು ಅಂಬಸಿ ಪಂಜೆ/ಲುಂಗಿಯ ತಯಾರಿಕೆಗೆ ಪ್ರಸಿದ್ಧವಾಗಿದೆ. ಈ ಪಂಜೆ ಅಥವಾ ಲುಂಗಿಯು ವಿಶಿಷ್ಟವಾಗಿದ್ದು ಅಂಚುಗಳಲ್ಲಿ ಸುಂದರ ವಿನ್ಯಾಸಗಳನ್ನು ಹೊಂದಿರುತ್ತದೆ. ಬಯಲು ಸೀಮೆಯ ಲಕ್ಕುಂಡಿ ಗ್ರಾಮವು ತನ್ನ ಗತ ವೈಭವವನ್ನು ಇಂದು ಕಥೆಯ ಮೂಲಕ ಹೇಳುವಂತಿದ್ದರೂ ಜನರು ಅತ್ತ ಮುಖ ಮಾಡದಿರುವುದು ನಿಜಕ್ಕೂ ಖೇದಕರ.
ಚಿತ್ರಕೃಪೆ: Tupeaishwarya
ನಮ್ಮ ನಾಡಿನ ಸಂಸ್ಕೃತಿ-ವೈಭವ ಸಾರುವ ಲಕ್ಕುಂಡಿಯಂತಹ ಅನೇಕ ಸ್ಥಳಗಳು ಉತ್ತರ ಕರ್ನಾಟಕವೆ ಆಗಲಿ ಅಥವಾ ಸಮಗ್ರ ಕರ್ನಾಟಕದಲ್ಲೆ ಆಗಲಿ ಸಾಕಷ್ಟಿವೆ. ಇವುಗಳನ್ನು ನೋಡಿ ಅವುಗಳ ಕುರಿತು ಎಲ್ಲರಿಗೂ ತಿಳಿಯುವಂತೆ ಮಾಡಿದರೆ ಕ್ರಮೇಣ ಜನರ ಒಡನಾಟ ಬೆಳೆದು ಇವೂ ಸಹ ಅಭಿವೃದ್ಧಿ ಕಾಣಬಹುದೆಂದು ಆಶಿಸುತ್ತ ನೇಟಿವ್ ಪ್ಲ್ಯಾನೆಟ್ ತಂಡ ತನ್ನ ಸಮಸ್ತ ಓದುಗರಲ್ಲಿ ಈ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಸಹಕರಿಸಲು ವಿನಂತಿಸಿಕೊಳ್ಳುತ್ತದೆ.