ಏನಪ್ಪಾ ಇನ್ನೊಂದು ತಿರುಪತಿಯೆ? ಎಂದು ಅಚ್ಚರಿ ಪಡಬೇಡಿ. ಇದೊಂದು ವೆಂಕಟೇಶ್ವರನಿಗೆ ಮುಡಿಪಾದ ತೆಲಂಗಾಣ ರಾಜ್ಯದ ಅತಿ ಪುರಾತನ ದೇವಾಲಯವಾಗಿದ್ದು ಎರಡನೆಯ ತಿರುಪತಿ ಎಂದೆ ಜನಜನಿತವಾಗಿದೆ. ಇದರ ಪೂರ್ಣ ಹೆಸರು ಕುರುಪತಿ ಶ್ರೀ ಕುರುಮೂರ್ತಿ ಶ್ರೀನಿವಾಸ ಸ್ವಾಮಿ ದೇವಾಲಯ ಎಂದಿದೆ.
ತೆಲಂಗಾಣ ರಾಜ್ಯದಲ್ಲಿ ಕಂಡುಬರುವ ಬಲು ಪ್ರಸಿದ್ಧ ಹಾಗೂ ಪ್ರಾಚೀನ ದೇವಾಲಯಗಳ ಪೈಕಿ ಒಂದಾಗಿರುವ ಈ ವಿಷ್ಣುವಿನ ದೇವಾಲಯವು ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಇಲ್ಲಿ ನಡೆಯುವ ಶಾಸ್ತ್ರೋಕ್ತವಾದ ವಿಧಿ ವಿಧಾನಗಳು ಹಾಗೂ ಕ್ಷೇತ್ರದ ಆಧ್ಯಾತ್ಮಿಕ ಶ್ರೀಮಂತಿಕೆಯಿಂದ ಇದು ಬಲು ಪ್ರಸಿದ್ಧಿ ಪಡೆದಿದೆ.
ಚಿತ್ರಕೃಪೆ: Naidugari Jayanna
ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಅಮ್ಮಾಪುರ ಗ್ರಾಮದ ಬಳಿ ಇರುವ ಕುರುಪತಿ ಬೆಟ್ಟಗಳಲ್ಲಿ ಸ್ಥಿತವಿದೆ ಈ ದೇವಾಲಯ. ಗದ್ವಾಲ್ ಪಟ್ಟಣದಿಂದ ಸುಮಾರು 32 ಕಿ.ಮೀ ಗಳಷ್ಟು ದೂರದಲ್ಲಿರುವ ಈ ದೇವಾಲಯವು 1350 ರಲ್ಲಿ ನಿರ್ಮಾಣಗೊಂಡಿದ್ದು ಸುಮಾರು 630 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ.
ಈ ಬೆಟ್ಟದ ಮೇಲೆ ದೇವಾಲಯ ಹೇಗೆ ಬಂತು ಎಂಬುದರ ಕುರಿತು ಒಂದು ದಂತಕಥೆಯಿದ್ದು ಅದರ ಪ್ರಕಾರವಾಗಿ, ಒಮ್ಮೆ ಲಕ್ಷ್ಮಿ ದೇವಿಯು ಈ ಪ್ರದೇಶದಲ್ಲಿರುವ ಜನರು ವೆಂಕಟೇಶ್ವರನ ದರ್ಶನ ಪಡೆಯಲು ಹಾತೊರೆಯುತ್ತಿದ್ದು ಅದು ಸಫಲವಾಗದೆ ದುಖಿತರಾಗಿರುವುದನ್ನು ಕಂಡು ವಿಷ್ಣುವಿಗೆ ತಮ್ಮ ಉಪಸ್ಥಿತಿಯನ್ನು ಇಲ್ಲಿ ಕರುಣಿಸುವಂತೆ ಪ್ರಾರ್ಥಿಸಿದಳು. ಅದಕ್ಕೊಪ್ಪಿದ ವಿಷ್ಣು ಇಲ್ಲಿ ಸ್ವಯಂಭು ಆಗಿ ಪ್ರತ್ಯಕ್ಷನಾದನು.
ಚಿತ್ರಕೃಪೆ: Naidugari Jayanna
ಮನಸ್ಸಿನಲ್ಲಿರುವ ದೇವರ ನೆಲೆ ಎಂಬ ಅರ್ಥ ಕೊಡುತ್ತದೆ ಕುರುಪತಿ. ಹಾಗಾಗಿ ವಿಷ್ಣು ನೆಲೆಸಿರುವ ಈ ಬೆಟ್ಟಗಳು ಕುರುಪತಿ ಬೆಟ್ಟಗಳಾಗಿ ಹೆಸರುವಾಸಿಯಾಗಿವೆ. ಸಾಕಷ್ಟು ಧನಾತ್ಮಕತೆಯ ಪ್ರಭಾವ ಈ ಕ್ಷೇತ್ರದಲ್ಲಿದ್ದು ಒಮ್ಮೆ ಭೇಟಿ ನೀಡಿದ ತಕ್ಷಣವೆ ಮನಸ್ಸು ಆನಂದಗೊಂಡು ಪ್ರಸನ್ನತೆ ಹೊಂದುತ್ತದೆ ಎನ್ನುತ್ತಾರೆ ಇಲ್ಲಿಗೆ ಬರುವ ವೆಂಕಟೇಶ್ವರನ ಭಕ್ತರು.
ಹಿಂದೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಶ್ರೀ ಮುಕ್ಕಾರ ಚಂದ್ರ ರೆಡ್ಡಿ ಎಂಬುವವರು ಇಲ್ಲಿ ದೇವಾಲಯವನ್ನು ನಿರ್ಮಿಸುವವರೆಗೂ ವೆಂಕಟೇಶ್ವರನ ವಿಗ್ರಹವು ಕಳೆದ 600 ಕ್ಕೂ ಅಧಿಕ ವರ್ಷಗಳಿಂದ ಇಲ್ಲಿನ ಗುಹೆಯೊಂದರಲ್ಲೆ ಪ್ರತಿಷ್ಠಾಪಿತವಾಗಿತ್ತು. ನಂತರ ಇನ್ನಿಬ್ಬರಾದ ರಾಮ ಭೂಪಾಲ ಹಾಗೂ ಕೋತಕಾಪುಲು ಅವರಿಂದ ಈ ದೇವಾಲಯ ಮತ್ತಷ್ಟು ನವೀಕರಣಗೊಂಡಿತು.
ಚಿತ್ರಕೃಪೆ: Naidugari Jayanna
ಕುರುಪತಿ ಬೆಟ್ಟಗಳಲ್ಲಿ ಒಟ್ಟು ಶ್ವೇತಾದ್ರಿ, ಏಕಾದ್ರಿ, ದುರ್ಗಾದ್ರಿ, ಗಣಾದ್ರಿ, ಬಲ್ಲುಕಾದ್ರಿ, ಪಟಗಾದ್ರಿ ಹಾಗೂ ದೈವತಾದ್ರಿ ಎಂಬ ಏಳು ಬೆಟ್ಟಗಳಿದ್ದು ತಿರುಮಲದ ಏಳು ಬೆಟ್ಟಗಳಲ್ಲಿ ಹೇಗೆ ಶ್ರೀನಿವಾಸನು ನೆಲೆಸಿರುವನೊ ಅದೆ ರೀತಿಯಾಗಿ ಇಲ್ಲಿ ವೆಂಕಟೇಶ್ವರ ಸ್ವಾಮಿಯು ಕುರುಮೂರ್ತಿ ಸ್ವಾಮಿಯಾಗಿ ನೆಲೆಸಿದ್ದಾನೆ. ಆ ಕಾರಣದಿಂದಾಗಿ ಇದನ್ನು ಎರಡನೇಯ ತಿರುಪತಿ ಎಂದು ಹೇಳಲಾಗುತ್ತದೆ.
ವರ್ಷಕ್ಕೊಂದು ಬಾರಿ ಇಲ್ಲಿ ಕುರುಮೂರ್ತಿ ಸ್ವಾಮಿ ಜಾತ್ರೆ ಅಥವಾ ಕುರುಮೂರ್ತಿ ಬ್ರಹ್ಮೋತ್ಸವವನ್ನು ಬಲು ಅದ್ದೂರಿಯಿಂದ ಆಚರಿಸಲಾಗುತ್ತದೆ. ಮೆಹಬೂಬ್ ನಗರ ಜಿಲ್ಲೆಯ ಪ್ರಖ್ಯಾತ ಉತ್ಸವಗಳಲ್ಲಿ ಇದೂ ಸಹ ಒಂದು. ಈ ಸಂದರ್ಭದಲ್ಲಿ ತೆಲಂಗಾಣ ರಸ್ತೆ ಸಾರಿಗೆ ನಿಗಮವು ನಗರ ಕೇಂದ್ರದಿಂದ ಇಲ್ಲಿಗೆ ವಿಶೇಷವಾದ ಬಸ್ಸುಗಳ ವ್ಯವಸ್ಥೆ ಮಾಡಿರುತ್ತದೆ.
ಕರ್ನಾಟಕದಲ್ಲಿರುವ ಪಶ್ಚಿಮದ ತಿರುಪತಿ!
ಗದ್ವಾಲ್ ಇದಕ್ಕೆ ಹತ್ತಿರದಲ್ಲಿರುವ ಪಟ್ಟಣವಾಗಿದ್ದು ಸಾಕಷ್ಟು ಬಸ್ಸುಗಳು ಗದ್ವಾಲ್ ನಿಂದ ಕುರುಪತಿಗೆ ಲಭ್ಯವಿದೆ. ಅಲ್ಲದೆ ಮೆಹಬೂಬ್ ನಗರದಿಂದಲೂ ಸಹ ಸಾಕಷ್ಟು ಬಸ್ಸುಗಳು ಇಲ್ಲಿಗೆ ತೆರಳಲು ದೊರೆಯುತ್ತವೆ. ಗದ್ವಾಲ್ ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣವನ್ನೂ ಸಹ ಹೊಂದಿದೆ.
ಕನಕಗಿರಿಯಲ್ಲಿ ನೆಲೆಸಿರುವ ಕನಕಾಚಲಪತಿ