ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲಸಂಗಮವು ಲಿಂಗಾಯತ ಮತದವರ ಪಾಲಿಗೆ ಅದ್ವಿತೀಯ ತೀರ್ಥ ಕ್ಷೇತ್ರವಾಗಿದ್ದು, ಭಕ್ತಿ ಭಂಡಾರಿ ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣನವರು) ಐಕ್ಯಗೊಂಡ ಪುಣ್ಯ ಸ್ಥಳವಾಗಿದೆ.
ಮತ್ತೊಂದು ಪ್ರವಾಸಿ ಪ್ರಖ್ಯಾತಿಯ ತಾಣವಾದ ಆಲಮಟ್ಟಿ ಆಣೆಕಟ್ಟಿನಿಂದ ಸುಮಾರು 15 ಕಿ.ಮೀ ಗಳಷ್ಟು ದೂರವಿರುವ ಕೂಡಲಸಂಗಮವು ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದ ಸ್ಥಳವಾಗಿದೆ. ನಂತರದಲ್ಲಿ ಈ ಸಂಗಮದ ನದಿಯು ಮುಂದೆ ಆಂಧ್ರದ ಪುಣ್ಯ ಕ್ಷೇತ್ರವಾದ ಶ್ರೀಶೈಲಂ ಕಡೆಗೆ ಹರಿಯುತ್ತದೆ.
ಕೂಡಲ ಸಂಗಮಕ್ಕೆ ತಲುಪಲು ಹತ್ತಿರದ ರೈಲು ನಿಲ್ದಾಣ ಬಿಜಾಪುರದಲ್ಲಿದೆ. ಬಿಜಾಪುರದಿಂದ ಕೂಡಲಸಂಗಮ ಸುಮಾರು 90 ಕಿ.ಮೀ ಗಳಷ್ಟು ದೂರದಲ್ಲಿದೆ. ಅಲ್ಲದೆ ಬಿಜಾಪುರದಿಂದ ಕೂಡಲಸಂಗಮಕ್ಕೆ ತೆರಳಲು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ದೊರೆಯುತ್ತವೆ. ಇಷ್ಟವಿದ್ದಲ್ಲಿ ಬಾಡಿಗೆಗೆ ಟ್ಯಾಕ್ಸಿಗಳನ್ನೂ ಸಹ ಪಡೆಯಬಹುದು.
ಮೂಲವಾಗಿ ಇಲ್ಲಿನ ದೇಗುಲದಲ್ಲಿ ಮುಖ್ಯ ಆಲಯ, ನವರಂಗ ಹಾಗೂ ಮುಖಮಂಟಪವನ್ನು ಕಾಣಬಹುದು. ನೀಲಮ್ಮ, ಬಸವಣ್ಣ ಹಾಗೂ ಗಣಪತಿಯ ವಿಗ್ರಹಗಳನ್ನು ನವರಂಗದಲ್ಲಿ ಪ್ರತಿಷ್ಠಾಪಿಸಲಾಗಿದೆ. ಗರ್ಭಗೃಹದಲ್ಲಿ ಶಿವಲಿಂಗವಿದ್ದು ಅದನ್ನು ಸಂಗಮೇಶ್ವರ ಅಥವಾ ಸಂಗಮನಾಥ ಎಂದು ಕರೆಯಲಾಗುತ್ತದೆ. ಅಲ್ಲದೆ ನದಿಯ ಒಂದು ಭಾಗದಲ್ಲಿ ಲಿಂಗವಿರುವ ಕಲ್ಲು ಮಂಟಪವೊಂದಿದ್ದು, ನೀರಿನಲ್ಲಿ ಮುಳುಗದಂತೆ ಅದರ ಸುತ್ತಲು ಕಾಂಕ್ರೀಟ್ ನಿಂದ ಬಾವಿಯನ್ನು ನಿರ್ಮಿಸಲಾಗಿದೆ.
ಪ್ರಸ್ತುತ ಲೇಖನದ ಮೂಲಕ ಬಸವಣ್ಣನವರ ಕುರಿತು ಕಿರು ಇತಿಹಾಸ ತಿಳಿಯಿರಿ ಹಾಗೂ ಸ್ಲೈಡುಗಳಲ್ಲಿ ಕೂಡಲಸಂಗಮ ಕ್ಷೇತ್ರವನ್ನು ಕಣ್ತುಂಬಿಕೊಳ್ಳಿ ಹಾಗೂ ಅವಕಾಶ ಸಿಕ್ಕಾಗ ಈ ಕ್ಷೇತ್ರಕ್ಕೆ ಭೇಟಿ ನೀಡಲು ಮರೆಯದಿರಿ.
ಕೂಡಲಸಂಗಮ:
ಬಸವಣ್ಣನವರು 1134 ರಲ್ಲಿ ಪ್ರಸ್ತುತ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಎಂಬ ಗ್ರಾಮದಲ್ಲಿ ಜನಿಸಿದ್ದರು (ಬಸವಣ್ಣನವರ ತಾಯಿಯ ತವರೂರಾದ ಇಂಗಳೇಶ್ವರ ಎಂಬ ಹಳ್ಳಿಯಲ್ಲಿ ಜನಿಸಿದ್ದರು ಎಂಬ ಪ್ರತೀತಿಯೂ ಇದೆ).
ಚಿತ್ರಕೃಪೆ: Mankalmadhu
ಕೂಡಲಸಂಗಮ:
ಇವರ ತಂದೆಯ ಹೆಸರು ಶ್ರೀ ಮಾದರಸ ಹಾಗೂ ತಾಯಿ ಮಾದಲಾಂಬಿಕೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಸವಣ್ಣನವರು ಚಿಕ್ಕವರಿದ್ದಾಗಲೆ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು.
ಚಿತ್ರಕೃಪೆ: flickr
ಕೂಡಲಸಂಗಮ:
ಅವರು 8ನೇಯ ವಯಸ್ಸಿನವರಾಗಿದ್ದಾಗ, ಬ್ರಾಹ್ಮಣ ಸಂಪ್ರದಾಯದಂತೆ ಉಪನಯನ (ಮುಂಜಿ/ಮುಂಜ್ವಿ) ಮಾಡಿ ಜನಿವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಹಾಕಲು ಹೇಳಿದರಂತೆ. ಅದಕ್ಕೆ ಅಲ್ಲಿದ್ದವರು ಇದು ಪುರುಷರಿಗೆ ಮಾತ್ರ ತೊಡೆಸುವಂತಹುದು ಆದ್ದರಿಂದ ಅಕ್ಕನಿಗೆ ಧರಿಸಲು ಬರುವುದಿಲ್ಲ ಎಂದು ಹೇಳಿದರಂತೆ.
ಚಿತ್ರಕೃಪೆ: Manjunath nikt
ಕೂಡಲಸಂಗಮ:
ತಕ್ಷಣವೆ, ಬಸವಣ್ಣನವರು ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಸಹ ಈ ರೀತಿಯ ಹೆಣ್ಣು ಗಂಡೆಂಬ ತಾರತಮ್ಯ ಮಾಡುವುದನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ. ನಂತರ ಅವರು ಅಲ್ಲಿ ಹನ್ನೆರಡು ವರ್ಷಗಳ ಕಾಲವನ್ನು ಸತತವಾಗಿ ಅಧ್ಯಯನ ಮಾಡುತ್ತಾ ಕಳೆದರು ಎನ್ನಲಾಗಿದೆ.
ಚಿತ್ರಕೃಪೆ: Manjunath Doddamani Gajendragad
ಕೂಡಲಸಂಗಮ:
ಬಸವಣ್ಣನವರು ಹೇಳುವ ಪ್ರಕಾರ, ದೇವ ಒಬ್ಬನೆ ಹಾಗೂ ಆತ್ ಮಾನವನಲ್ಲಿಯೆ ಇದ್ದಾನೆ. ಅದರಂತೆ ಅವರು ಹೇಳಿರುವ ಕೆಲವು ಹಿತ ನುಡಿಗಳೆಂದರೆ ಕಾಯಕವೆ ಕೈಲಾಸ ಅಂದರೆ ಶ್ರಮ, ಶೃದ್ಧೆಗಳಿಂದ ಕೆಲಸ ಮಾಡಿ ಜೀವನ ನಡೆಸಬೇಕು, ಸೋಮಾರಿಗಳಾಗಿ ಬದುಕುವುದು ಖಂಡಿತ ಸಲ್ಲ.
ಚಿತ್ರಕೃಪೆ: Manjunath Doddamani Gajendragad
ಕೂಡಲಸಂಗಮ:
ಅಲ್ಲದೆ ಸುಳ್ಳು ಹೇಳುವುದಾಗಲಿ, ಮೋಸ ಮಾಡುವುದಾಗಲಿ, ಹಿಂಸಿಸುವುದಾಗಲಿ, ಪ್ರಾಣಿ ಬಲಿ ಕೊಡುವುದಾಗಲಿ, ಪರ ಸ್ತ್ರೀ ವ್ಯಾಮೋಹ ಹೊಂದುವುದಾಗಲಿ ಘೋರ ಅಪರಾಧ ಎಂದು ತಮ್ಮ ಅಮೂಲ್ಯ ವಚನಗಳ ಮೂಲಕ ಜಗತ್ತಿಗೆ ಸಾರಿದ್ದಾರೆ.
ಚಿತ್ರಕೃಪೆ: Manjunath Doddamani Gajendragad
ಕೂಡಲಸಂಗಮ:
ಪುರುಷರಂತೆ ಮಹಿಳೆಯರೂ ಸಹ ಸಮಾನತೆಯಿಂದ ಬದುಕಬೇಕು, ವಿದ್ಯಾಭ್ಯಾಸ ಪಡೆಯಬೇಕು, ತಮ್ಮ ಜೀವನವನ್ನು ತಾವು ರೂಪಿಸಿಕೊಳ್ಳಬೇಕು ಎಂದು ಸಾರಿದ ಬಸವಣ್ಣನವರು ಪುರೋಹಿತಶಾಹಿಯನ್ನು ತೀವ್ರವಾಗಿ ಖಂಡಿಸಿದ್ದರು.
ಚಿತ್ರಕೃಪೆ: Manjunath Doddamani Gajendragad
ಕೂಡಲಸಂಗಮ:
ಅಂದಿನ ಸಮಯದಲ್ಲಿ ಬಹುವಾಗಿದ್ದ ಮೇಲು-ಕೀಳೆಂಬ ಸಂಪ್ರದಾಯವನ್ನು ಖಂಡಿಸಿ ಎಲ್ಲರೂ ಸಮಾನತೆಯಲ್ಲಿ ಬಾಳಬೇಕೆಂಬ ಸಂದೇಶವನ್ನು ಸಾರಿದ ಭಕ್ತಿ ಭಂಡಾರಿ ಬಸವಣ್ಣನವರನ್ನು ಮಹಾಮಾನವತಾ ವಾದಿ ಎಂದೂ ಸಹ ಬಣ್ಣಿಸಲಾಗಿದೆ.
ಚಿತ್ರಕೃಪೆ: Damaru
ಕೂಡಲಸಂಗಮ:
ನಿಜ ಹೇಳಬೇಕೆಂದರೆ ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ್ದ ಬಸವಣ್ಣನವರು ಆ ಸಮಯದಲ್ಲಿ ಸಾಮಾಜಿಕ ಕ್ರಾಂತಿಗೆ ಕಾರಣರಾದರು. ಇವರನ್ನು ಕ್ರಾಂತಿಕಾರಿ, ಜಗಜ್ಯೋತಿ, ಕ್ರಾಂತಿಯೋಗಿ, ಭಕ್ತಿ ಭಂಡಾರಿ ಎಂಬೆಲ್ಲ ಬಿರುದಾವಳಿಗಳಿಂದ ಸಂಭೋದಿಸಲಾಯಿತು.
ಕೂಡಲಸಂಗಮ:
ಬಸವಣ್ಣನವರು ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ, ಜನರನ್ನು ಜಾಗೃತಗೊಳಿಸುವ ಉದ್ದೇಶದಿಂದ ತಮ್ಮ ಮನದಾಳದಿಂದ ನೀತಿ ಬೋಧೆಗಳನ್ನು ವಚನಗಳ ರೂಪದಲ್ಲಿ ಬಿತ್ತರಿಸಿದರು. ಈ ರೀತಿಯಾಗಿ ಕನ್ನಡ ಸಾಹಿತ್ಯಕ್ಕೆ ಅವರ ವಚನಗಳು ಅಪಾರವಾದ ಕೊಡುಗೆಯನ್ನೇ ನೀಡಿವೆ. ಚಿತ್ರದಲ್ಲಿರುವುದು ಐಕ್ಯಲಿಂಗ. ಬಸವಣ್ಣನವರು ಸಮಾಧಿ ಪಡೆದ ಸ್ಥಳ.
ಚಿತ್ರಕೃಪೆ: Raja_Hussain
ಕೂಡಲಸಂಗಮ:
ಇದುವರೆಗೂ ಅವರು ರಚಿಸಿದಂತಹ ಸುಮಾರು 1500 ವಚನಗಳನ್ನು ಸಂರಕ್ಷಿಸಿ ಸಂಗ್ರಹಿಸಿಡಲಾಗಿದೆ. ಅಲ್ಲದೆ ಬಸವಣ್ಣನವರ ಪ್ರೇರಣೆಯಿಂದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ಅನುಲೋಮ ವಿವಾಹವು ಮುಂದೆ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು ಎಂದು ಹೇಳಲಾಗಿದೆ.
ಕೂಡಲಸಂಗಮ:
ಕೇವಲ ವಚನಗಳಲ್ಲದೆ ಬಸವಣ್ಣನವರು ಷಟ್ ಸ್ಥಲ ವಚನ, ಕಾಲಜ್ಞಾನ ವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಕೆಲವು ಗ್ರಂಥಗಳನ್ನೂ ಸಹ ರಚಿಸಿದ್ದಾರೆ. ಬಸಣ್ಣನವರನ್ನು ಕುರಿತಂತೆ ಕನ್ನಡವಾಗಲಿ, ತಮಿಳಾಗಲಿ, ತೆಲುಗು ಅಥವ ಮರಾಠಿ ಭಾಷೆಗಳಾಗಲಿ ಹಲವಾರು ಪುರಾಣಗಳು ರಚನೆಯಾಗಿವೆ.
ಕೂಡಲಸಂಗಮ:
ಬಾಗೇವಾಡಿಯ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳನ್ನು ಕಾಣಬಹುದಾಗಿದೆ. ಅಲ್ಲದೆ ಬೆಳಗಾವಿ ಜಿಲ್ಲೆಯ ಅರ್ಜುನವಾಡ ಎಂಬ ಗ್ರಾಮದಲ್ಲಿ ಕಂಡುಬರುವ ಶಿಲಾಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ಬಸವಣ್ಣನವರದ್ದೇ ಆಗಿರಬಹುದು ಎಂದು ವಿದ್ವಾಂಸರು ಊಹಿಸಿದ್ದಾರೆ.
ಕೂಡಲಸಂಗಮ:
ಶ್ರೀಕ್ಷೇತ್ರ ಕೂಡಲ ಸಂಗಮ.
ಕೂಡಲಸಂಗಮ:
ಶ್ರೀಕ್ಷೇತ್ರ ಕೂಡಲ ಸಂಗಮ.
ಚಿತ್ರಕೃಪೆ: flickr