ಮಹಾಭಾರತದ, ಸ್ಕಂದ ಪುರಾಣಾದಿಗಳಲ್ಲಿ ಪವಿತ್ರಮಯವಾದ ಕ್ರೌಂಚಗಿರಿಯ ಕುರಿತು ಉಲ್ಲೇಖವಿರುವುದನ್ನು ಗಮನಿಸಬಹುದು. ಅಲ್ಲದೆ ಸಾಕಷ್ಟು ಜನರು ಈ ಪವಿತ್ರ ಬೆಟ್ಟದ ಕುರಿತು ಕೇಳಿದ್ದಾರಾದರೂ ಮೇರು ಪರ್ವತದ ಹಾಗೆ ಇದೊಂದು ರಹಸ್ಯಮಯ ಅಥವಾ ಕಾಲ್ಪನಿಕ ಬೆಟ್ಟವಾಗ್ರಬಹುದೆಂದೆ ತಿಳಿದಿದ್ದಾರೆ.
ಆದರೆ, ಕೆಲವು ತಜ್ಞ ಪಂಡಿತರು, ವಿದ್ವಾಂಸರು ಹೇಳುವ ಹಾಗೆ ಕ್ರೌಂಚಗಿರಿ ಎಂಬುದು ಉಪಸ್ಥಿತವಿದ್ದು ಕರ್ನಾಟಕದಲ್ಲೆ ಈ ಗಿರಿ ಪ್ರದೇಶವನ್ನು ಕಾಣಬಹುದಾಗಿದೆ. ಎಲ್ಲಿದೆ ಎನ್ನುವುದಕ್ಕೂ ಮೊದಲು ಈ ಕ್ರೌಂಚಗಿರಿಯ ಕುರಿತು ಮಾಹಿತಿ ತಿಳಿಯುವುದು ಉತ್ತಮ. ಕ್ರೌಂಚ ಎಂದರೆ ಶಂಖ ಎಂದಾಗುತ್ತದೆ. ಶಂಖವು ಹೇಗೆ ಅಂಡಾಕಾರದಲ್ಲಿದ್ದು ಒಂದು ಸೀಳನ್ನು ಹೊಂದಿರುತ್ತದೆ ನಿಮಗೆಲ್ಲ ಗೊತ್ತೆ ಇದೆ.
ಚಿತ್ರಕೃಪೆ: Shreyasu
ಅದೇ ರೀತಿಯಾಗಿ ಈ ಪರ್ವತವು ಅಂಡಾಕಾರದಲ್ಲಿದ್ದು ಕಿರಿದಾದ ಉದ್ದನೆಯ ಸೀಳೊಂದನ್ನು ಹೊಂದಿರುವುದನ್ನು ಕಾಣಬಹುದು. ಹಾಗಾಗಿಯೆ ಇದಕ್ಕೆ ಕ್ರೌಂಚಗಿರಿ ಎಂಬ ಹೆಸರು ಬಂದಿದೆ. ಅಲ್ಲದೆ ಪುರಾಣ ಗ್ರಂಥಗಳಲ್ಲಿ ಇದಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಏಕೆಂದರೆ ಸುಬ್ರಹ್ಮಣ್ಯ ದೇವರೊಂದಿಗೆ ಈ ಪರ್ವತ ನಂಟನ್ನು ಹೊಂದಿದೆ.
ಅಷ್ಟೆ ಅಲ್ಲ, ಸುಬ್ರಹ್ಮಣ್ಯ ದೇವರು ಮೊದಲು ದಕ್ಷಿಣ ಭಾರತಕ್ಕೆ ಬಂದಾಗ ಪ್ರಪ್ರಥಮವಾಗಿ ಭೇಟಿ ನೀಡಿದ್ದ ಸ್ಥಳವೆ ಇದೆಂದು ಹೇಳಲಾಗುತ್ತದೆ. ಹಾಗಾಗಿ ಕ್ರೌಂಚಗಿರಿಗೆ ಸಾಕಷ್ಟು ಮಹತ್ವವಿದೆ ಎಂದು ಹೇಳಬಹುದು. ಅದಕ್ಕೆ ಕುರುಹು ಎಂಬಂತೆ ಇಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯವಿರುವುದನ್ನು ಕಾಣಬಹುದು.
ಚಿತ್ರಕೃಪೆ: Shreyasu
ಕಥೆಯ ಪ್ರಕಾರವಾಗಿ ಸುಬ್ರಹ್ಮಣ್ಯ ದೇವರು ದೇವತೆಗಳ ಸೇನೆಯ ಸೇನಾಧಿಪತಿ. ಅದ್ಭುತ ಹಾಗೂ ಅತ್ಯಂತ ಬಲಶಾಲಿ ಯೋಧ. ದೇವತೆಗಳಿಗೆ ಸದಾ ಉಪದ್ರವ ನೀಡುವ ರಕ್ಕಸರನ್ನು ಹತ್ತಿಕ್ಕುವುದೆ ಸುಬ್ರಹ್ಮಣ್ಯ ದೇವರ ಕರ್ತವ್ಯ. ಹೀಗೆ ಒಂದೊಮ್ಮೆ ದೇವತೆಗಳು ಹಾಗೂ ದಾನವರ ಮಧ್ಯೆ ಘನಘೋರ ಯುದ್ಧ ನಡೆಯುತ್ತಿದ್ದಾಗ ಸುಬ್ರಹ್ಮಣ್ಯ ಅತ್ಯಂತ ಪರಾಕ್ರಮದಿಂದ ಹೋರಾಡುತ್ತ ದಾನವರ ರುಂಡ ಚೆಂಡಾಡುತ್ತಿದ್ದನು.
ಇದನ್ನು ಗಮನಿಸಿದ ಹಲವಾರು ರಾಕ್ಷಸರು ತಾವು ಇನ್ನೂ ಉಳಿಯುವುದು ಕಷ್ಟವೆಂದು ತಿಳಿದು ತಮ್ಮ ಪ್ರಾಣ ಉಳಿಸಿಕೊಳ್ಳಲು ಯುದ್ಧ ಭೂಮಿಯಿಂದ ಪರಾರಿಯಾಗಿ ಒಂದು ಪರ್ವತದ ಒಳಗೆ ನುಸುಳಿ ಯಾರಿಗೆ ಕಾಣದಂತೆ ಕುಳಿತರು. ಆದರೆ ಸರ್ವಶಕ್ತನಾದ ಸುಬ್ರಹ್ಮಣ್ಯನಿಂದ ಕಣ್ಮರೆಯಾಗಲು ಸಾಧ್ಯವೆ?
ಚಿತ್ರಕೃಪೆ: Dr Murali Mohan Gurram
ಅವರ ತಾಣದ ಮಾಹಿತಿ ತಿಳಿದ ಸುಬ್ರಹ್ಮಣ್ಯ ದೇವರು ತನ್ನ ಆಯುಧದಿಂದ ರಾಕ್ಷಸರು ಅಡಗಿ ಕುಳಿತಿದ್ದ ಆ ಬೆಟ್ಟವನ್ನೆ ಛೇದಿಸಿ ರಕ್ಕಸರನ್ನು ಸಂಹರಿಸಿದನು. ಹೀಗೆ ರಕ್ಕಸರು ಅಡಗಿ ಕುಳಿತಿದ್ದ ಆ ಅಂಡಾಕಾರದ ಬೆಟ್ಟ ನಂತರ ಸುಬ್ರಹ್ಮಣ್ಯನು ಅದರಲ್ಲಿ ಉದ್ದನೇಯ ಸೀಳು ಮಾಡಿದ ಜಾಗವೆ ಇಂದಿನ ಕ್ರೌಂಚಗಿರಿ.
ಕವಿರತ್ನ ಕಾಳಿದಾಸನ ಮೇಘ ಸಂದೇಶದಲ್ಲಿ ಉಲ್ಲೇಖಿಸಲ್ಪಟ್ಟ ಹಾಗೂ ಶ್ರೀಶೈಲಂ ಜ್ಯೋತಿರ್ಲಿಂಗದೊಂದಿಗೂ ನಂಟನ್ನು ಹೊಂದಿರುವ ಕ್ರೌಂಚಗಿರಿಯು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಡೂರಿನಿಂದ ಹತ್ತು ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ರಾಜ್ಯ ಹೆದ್ದಾರಿ ಸಂಖ್ಯೆ 40 ಸಂಡೂರಿನಿಂದ ಈ ಗಿರಿಯ ಮೂಲಕ ಆ ಸೀಳಿನ ಮಧ್ಯೆ ಹಾದು ಹೋಗುತ್ತದೆ. ಹೀಗಾಗಿ ಈ ಗಿರಿಯನ್ನು ತಲುಪಬಹುದಾಗಿದೆ.
ಚಿತ್ರಕೃಪೆ: Arun jayasankar
ಇನ್ನೂ ಕ್ರೌಂಚಗಿರಿಯಲ್ಲಿ ಬಾದಾಮಿ ಚಾಲುಕ್ಯರು ನಿರ್ಮಿಸಿರುವ ಎಂಟನೆಯ ಶತಮಾನದ ಪಾರ್ವತಿಯ ದೇವಾಲಯವಿದೆ. ನಂತರ ಬಂದ ರಾಷ್ಟ್ರಕೂಟರು ಪಾರ್ವತಿ ದೇವಾಲಯದ ಜೊತೆಗೆ ಕುಮಾರಸ್ವಾಮಿಯ ದೇವಾಲಯನ್ನೂ ನಿರ್ಮಿಸಿದರು. ಅಲ್ಲದೆ ಗಣೇಶನ ವಿಗ್ರಹವಿರುವ ದೇಗುಲವೂ ಸಹ ಇಲ್ಲಿದೆ.
ಸನಾತನಧರ್ಮಕ್ಕೆ ಸಾಕ್ಷಿಯಾಗಿರುವ ಬೆಟ್ಟ!