ಹಿಂದಿನಿಂದಲೂ ಶೋಷಣೆಗಳಗಾದ ಮಂಗಳಮುಖಿಯರ ಆಚಾರ-ವಿಚಾರ ನಿಜವಾಗಿಯೂ ವಿಭಿನ್ನ. ಇಂದಿಗೂ ಅವರು ತಾವು ಎಲ್ಲರಂತೆ ಸಾಮಾನ್ಯ ಬದುಕು ನಡೆಸಲು, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪರಿಯನ್ನು ನೋಡಿದರೆ ಮೆಚ್ಚಲೇಬೇಕಾದದ್ದು. ಪ್ರಸ್ತುತ ಸಮಾಜದಲ್ಲಿ ಅವರನ್ನು ಇಂದಿಗೂ ವಿಭಿನ್ನವಾಗಿಯೆ ನೋಡಲಾಗುತ್ತಿದ್ದರೂ ತಮ್ಮ ಒಗ್ಗಟ್ಟಿನ ಹೋರಾಟ ಹಾಗೂ ಕೆಲವು ಸಾಮಾಜಿಕ ಸಂಸ್ಥೆ ಸಂಘಗಳಿಂದ ಅವರ ಬದುಕಿನಲ್ಲಿ ಸಾಕಷ್ಟು ಗಮನಾರ್ಹ ಬದಲಾವಣೆಗಳಾಗಿವೆ.
ನಿಮಗಿಷ್ಟವಾಗಬಹುದಾದ : ಗಟ್ಟಿ ಗುಂಡಿಯಿದ್ದವರಿಗೆ ಮಾತ್ರ ಈ ಜಲ್ಲಿಕಟ್ಟು ಆಟ
ನಿಜ, ಹೇಳಬೇಕೆಂದರೆ ಕೆಲವು ಪೌರಾಣಿಕ ಕಥೆಗಳಲ್ಲಿ ಮಂಗಳಮುಖಿಯರನ್ನು ದೈವಾಂಶ ಸಂಭೂತರೆಂದು, ವಿಶೇಷೋತ್ಸಾಹದವರೆಂದು ಪರಿಗಣಿಸಲಾಗಿದೆ. ಇವರು ಸಮಾಜಕ್ಕೆ ಎಷ್ಟು ಭಿನ್ನವಾಗಿ ಕಾಣುತ್ತಾರೊ ಇವರ ಜೀವನಶೈಲಿಯೂ ಸಹ ಅಷ್ಟೆ ವಿಚಿತ್ರ ಹಾಗೂ ಭಿನ್ನವಾಗಿದೆ. ಈ ಜನಾಂಗದವರಿಗೂ ದೇವರ ಮೇಲೆ ಅಪಾರವಾದ ಭಕ್ತಿ ಶೃದ್ಧೆಗಳಿವೆ. ಅದಕ್ಕೆಂದೆ ಮುಡಿಪಾದ ವಿಶೇಷ ಉತ್ಸವವೊಂದು ಭಾರತದಲ್ಲಿಯೆ ಪ್ರತಿ ವರ್ಷ ಜರುಗುತ್ತದೆ. ಈ ಉತ್ಸವವು ಮುಖ್ಯವಾಗಿ ಮಂಗಳಮುಖಿಯರಿಗೆಂದೇ ಮೀಸಲಾಗಿದೆ. ಉತ್ಸವದ ಆಚರಣೆಯೂ ವಿಚಿತ್ರವಾಗಿದೆ.
ಸಾಂದರ್ಭಿಕ ಚಿತ್ರ, ಅರ್ಜುನನ ಮಗ ಅರವಣ, ಚಿತ್ರಕೃಪೆ: Redtigerxyz
ಹೌದು, ಇಂತಹ ಒಂದು ಉತ್ಸವವು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಉಲುಂದೂಪೆಟ್ಟೈ ತಾಲೂಕಿನ ಕೂವಾಗಂ ಎಂಬ ಗ್ರಾಮದಲ್ಲಿ ಪ್ರತಿ ವರ್ಷ ತಮಿಳು ಕ್ಯಾಲೆಂಡರಿನ ಚಿತ್ರೈ ಮಾಸದಲ್ಲಿ ಅಂದರೆ ಏಪ್ರಿಲ್-ಮೇ ಸಂದರ್ಭದಲ್ಲಿ ಜರುಗುತ್ತದೆ. ಈ ಉತ್ಸವದಲ್ಲಿ ಮುಖ್ಯವಾಗಿ ಅರ್ಜುನನ ಮಗನಾದ ಅರವಣನನ್ನು ಕೂತಾಂಡವರನನ್ನಾಗಿ ಆರಾಧಿಸಲಾಗುತ್ತದೆ. ಕೆಲವರು ಹೇಳುವ ಪ್ರಕಾರ, ಅರವಣ ನಮಗೆಲ್ಲ ತಿಳಿದಿರುವ ಉಲುಚಿಯ ಮಗನಾದ ಬಬ್ರುವಾಹನನೆ ಆಗಿದ್ದಾನೆ.
ಚಿತ್ರಕೃಪೆ: WBEZ
ದಂತಕಥೆಯಂತೆ, ಮಹಾಭಾರತ ಯುದ್ಧ ಸಮಯದಲ್ಲಿ ಪಾಂಡವರಿಗೆ ಸೋಲುಂಟಾಗುತ್ತದೆ ಎಂಬ ಭವಿಷ್ಯವೊಂದು ಕೇಳಿ ಬಂದಾಗ ಅದನ್ನು ತಡೆಯಲು ಕಾಳಿ ದೇವಿಗೆ ನರಬಲಿಯೊಂದನ್ನು ಕೊಡಬೇಕಾದ ಅನಿವಾರ್ಯತೆ ಪಾಂಡವರಿಗೆ ಎದುರಾಗುತ್ತದೆ. ಆದರೆ ವೇದಗಳ ಪ್ರಕಾರವಾಗಿ ನಮೂದಿಸಲಾದ ಗುಣ ಲಕ್ಷಣಗಳುಳ್ಳ ಪರಿಪೂರ್ಣ ಪುರುಷನನ್ನೆ ಬಲಿ ಕೊಡಬೆಕಾಗಿರುವುದು ಧರ್ಮರಾಯನಿಗೆ ಚಿಂತೆಯನ್ನುಂಟು ಮಾಡುತ್ತದೆ. ಏಕೆಂದರೆ ಆ ರೀತಿಯ ಪರಿಪೂರ್ಣ ಪುರುಷರು ಕೇವಲ ಅರ್ಜುನ, ಕೃಷ್ಣ ಹಾಗೂ ಅರ್ಜುನನ ಮಗನಾದ ಅರವಣ ಮಾತ್ರರಾಗಿದ್ದರು.
ಚಿತ್ರಕೃಪೆ: WBEZ
ಕೃಷ್ಣ ಹಾಗೂ ಅರ್ಜುನರನ್ನು ಬಲಿ ಕೊಡುವಂತಿಲ್ಲ, ಹೀಗಾಗಿ ಅರವಣನನ್ನು ಕೇಳಿಕೊಂಡಾಗ ಅವನು ಸಂತಸದಿಂದಲೆ ತನ್ನ ಪ್ರಾಣ ತ್ಯಾಗ ಮಾಡಲು ಒಪ್ಪುತ್ತಾನದರೂ ಒಂದು ಶರತ್ತನ್ನು ಮುಂದಿಡುತ್ತಾನೆ. ಅದರ ಪ್ರಕಾರವಾಗಿ ಅವನು ತಾನು ಮದುವೆಯಾಗಿ ಮೊದಲ ರಾತ್ರಿಯ ಸಂತಸವನ್ನು ಅನುಭವಿಸಿದ ನಂತರವೆ ತನ್ನ ಪ್ರಾಣ ತ್ಯಾಗ ಮಾಡಲು ಸಿದ್ಧನೆನ್ನುತ್ತಾನೆ. ಆದರೆ ನಿಶ್ಚಿತವಾಗಿ ಸಾಯುವ ವರನಿಗೆ ಯಾವ ರಾಜನೂ ತನ್ನ ಮಗಳನ್ನು ಕೊಡಲು ಮುಂದಾಗುವುದಿಲ್ಲ. ಕೊನೆಗೆ ಕೃಷ್ಣನೆ ಸ್ತ್ರೀ ರೂಪದ ಮೋಹಿನಿಯ ಅವತಾರ ತಾಳಿ ಅವನನ್ನು ವರಿಸಿ ಸಂತಸ ನೀಡುತ್ತಾಳೆ ಹಾಗೂ ಕೃಷ್ಣನು ಅರವಣನ ತ್ಯಾಗಕ್ಕೆ ಮೆಚ್ಚಿ ವರವನ್ನೂ ನೀಡುತ್ತಾನೆ.
ಚಿತ್ರಕೃಪೆ: Kannan Muthuraman
ಈ ಅರವಣನನ್ನೆ ಮಂಗಳಮುಖಿಯರು ಆರಾಧಿಸುತ್ತಾರೆ ಹಾಗೂ ಉತ್ಸವದಲ್ಲಿ ಅವನನ್ನು ಮದುವೆಯಾಗುತ್ತಾರೆ. ಈ ಸಂದರ್ಭದಲ್ಲಿ ಅವರು ತಾವು ಕೃಷ್ಣನ ಅವತಾರದ ಮೋಹಿನಿಯಂದೆ ಭಾವಿಸಿ ಭಾವಪರವಶರಾಗುತ್ತಾರೆ. ದೇವಸ್ಥಾನದ ಅರ್ಚಕರೆ ಮಂಗಳಮುಖಿಯರಿಗೆ ತಾಳಿ ಕಟ್ಟುತ್ತಾರೆ. ನಂತರ ಮಂಗಳಮುಖಿಯರು ಅರವಣನ ಪ್ರಾಣ ತ್ಯಾಗದ ಕುರುಹಾಗಿ ವಿಧವೆಯ ಸಂಪ್ರದಾಯವನ್ನು ಹತ್ತು ದಿನಗಳ ಕಾಲ ಆಚರಿಸುತ್ತಾರೆ. ಈ ಸಮಯದಲ್ಲಿ ಹತ್ತು ದಿನಗಳ ಕಾಲ ಅವರಿ ಶ್ವೇತ ಸೀರೆಯುಟ್ಟು ಪ್ರತಿ ದಿನ ಹತ್ತು ಜನರ ಊಟೋಪಚಾರ ನೋಡಿಕೊಳ್ಳಬೇಕಾಗುತ್ತದೆ.
ನಿಮಗಿಷ್ಟವಾಗಬಹುದಾದ : ಏನಿದು ಕರಾವಳಿಯ ಕಂಬಳ?
ದೇಶದೆಲ್ಲೆಡೆಯಿಂದ ಮಂಗಳಮುಖಿಯರು ತಮಿಳುನಾಡಿನ ಈ ದೇವಸ್ಥಾನದ ಏಪ್ರಿಲ್-ಮೇ ಸಂದರ್ಭದಲ್ಲಿ ಸಾಗರದಂತೆ ಹರಿದುಬರುತ್ತಾರೆ. ವಿಲ್ಲುಪುರಂ ಹಾಗೂ ನೂರು ಕಿ.ಮೀ ದೂರದಲ್ಲಿರುವ ಚೆನ್ನೈಗಳಿಂದ ಈ ಗ್ರಾಮಕ್ಕೆ ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಇದೊಂದು ವಿಶಿಷ್ಟವಾದ ಸಂಪ್ರದಾಯವಾಗಿರುವುದರಿಂದ ಇತ್ತೀಚಿನ ಕೆಲ ಸಮಯದಿಂದ ಅಂತಾರಾಷ್ಟ್ರೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದು ವಿದೇಶಗಳಿಂದಲೂ ಸಹ ಕೆಲವು ಮಂಗಳ ಮುಖಿಯರು ಹಾಗೂ ಇತರೆ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.