ಭಾರತದ ಇತಿಹಾಸವು ಪ್ರಾಚೀನ ಕೋಟೆಗಳಿಂದ ಕೂಡಿದೆ. ರಾಜ, ಮಹಾರಾಜಗಳ ಕಾಲದಲ್ಲಿ ವಿಶಾಲವಾದ ಅರಮನೆ ಕೋಟೆಗಳಿಗೆ ಸಾಕ್ಷಿಯಾಗಿದೆ. ಇಂದಿಗೂ ಕೆಲವು ಕೋಟೆಗಳು ಕಾಣಸಿಗುತ್ತವೆ. ಆದರೆ ಇನ್ನು ಕೆಲವು ಕೋಟೆಗಳು ಪಾಳುಬಿದ್ದಿವೆ. ಅವುಗಳಲ್ಲಿ ಬಹಳಷ್ಟು ತನ್ನ ಐತಿಹಾಸಿಕತೆಗೆ ಪ್ರಸಿದ್ಧಿ ಹೊಂದಿದ್ದರೆ ಇನ್ನೂ ಕೆಲವು ತನ್ನ ರಹಸ್ಯಗಳು ಹಾಗೂ ಪ್ರೇತಬಾಧಿತ ಕಥೆಗಳಿಂದಾಗಿ ಪ್ರಸಿದ್ಧಿ ಹೊಂದಿದೆ. ನಾವಿಂದು ಹೇಳ ಹೊರಟಿರುವುದು ಮಧ್ಯಪ್ರದೇಶದ ಒಂದು ಕೋಟೆ ಬಗ್ಗೆ ಅಲ್ಲಿರುವ ಸಂಪತ್ತನ್ನು ಅಲ್ಲಿನ ಭೂತ, ಪ್ರೇತಗಳು ರಕ್ಷಿಸುತ್ತವಂತೆ.
ಖಂಡೇ ರಾವ್ ಕೋಟೆ
2100 ವರ್ಷ ಪುರಾತನ ಕೋಟೆಯ ಸಂಪತ್ತು ಹಾಗೂ ಅದಕ್ಕೆ ಸಂಬಂಧಿಸಿದ ರಹಸ್ಯದ ಬಗ್ಗೆ ನೀವು ಸಾಕಷ್ಟು ಕಥೆಗಳನ್ನು ಕೇಳಿರುವಿರಿ. ಅಲ್ಲಿನ ಸಂಪತ್ತನ್ನು ಹಾವುಗಳು ಕಾಯುತ್ತಿರುವ ಕಥೆಯನ್ನು ಕೇಳಿರುವಿರಿ. ಆದರೆ ಕೋಟೆಯಲ್ಲಿನ ಸಂಪತ್ತನ್ನು ಭೂತ, ಪ್ರೇತಗಳು ಕಾಯುತ್ತವೆ ಎನ್ನುವ ಬಗ್ಗೆ ಕೇಳಿರಲಿಕ್ಕಿಲ್ಲ. ಇದು ಕೇಳಲು ತಮಾಶೆ ಅನಿಸಬಹುದು. ಆದರೆ ಮಧ್ಯಪ್ರದೇಶದಲ್ಲಿರುವ ಒಂದು ಕೋಟೆಯು ಇದಕ್ಕೆ ಸಾಕ್ಷಿಯಾಗಿದೆ. ಮಧ್ಯಪ್ರದೇಶದಲ್ಲಿ ಒಂದು ಪ್ರಾಚೀನ ಕೋಟೆ ಇದೆ ಅಲ್ಲಿನ ಸಂಪತ್ತನ್ನು ಭೂತ, ಪ್ರೇತಗಳು ಕಾಯುತ್ತವೆ ಎನ್ನಲಾಗುತ್ತದೆ.
ಗೆಜ್ಜೆ ಸದ್ದು ಕೇಳಿಸುತ್ತದೆ
ಈ ಕೋಟೆಯ ಹೆಸರು ಖಂಡೇ ರಾವ್ ಕೋಟೆ. ಈ ಕೋಟೆಯನ್ನು ಖಂಡೇ ರಾವ್ ನಿರ್ಮಾಣ ಮಾಡಿದನು. ಇಲ್ಲಿ ರಾತ್ರಿ ಹೊತ್ತಿನಲ್ಲಿ ಪ್ರೇತಾತ್ಮಗಳು ಈ ಕೋಟೆಯನ್ನು ಕಾವಲು ಕಾಯುತ್ತವೆ. ನಂತರ ಅಲ್ಲಿ ಪ್ರೇತಾತ್ಮಗಳ ಸಭೆ ನಡೆಯುತ್ತದೆ. ನರ್ತಕಿಯರು ನೃತ್ಯದ ಮೂಲಕ ಎಲ್ಲರನ್ನೂ ಮನರಂಜಿಸುತ್ತಾರೆ. ಈ ಕೋಟೆಯಲ್ಲಿ ರಾತ್ರಿ ಹೊತ್ತಿನಲ್ಲಿ ನರ್ತಕಿಯರ ಗೆಜ್ಜೆಯ ಸದ್ದು ಸರಿಯಾಗಿ ಕೇಳಿಸುತ್ತದೆ. ಹಾಗಾಗಿ ಇಲ್ಲಿ ರಾತ್ರಿ ಹೊತ್ತು ಯಾರೂ ಕೂಡಾ ಹೋಗುವ ಪ್ರಯತ್ನ ಮಾಡೋದಿಲ್ಲ.
ಪಾಳು ಬಿದ್ದಿರುವ ಕೋಟೆ
ಈ ಕೋಟೆಯು ಮಧ್ಯಪ್ರದೇಶದ ಶಿವಪುರಿಯ ಸಣ್ಣ ಊರಿನಲ್ಲಿದೆ. ಈ ಕೋಟೆಯು ಸಾವಿರಾರು ವರ್ಷದಿಂದ ಅಜ್ಞಾತ ರೂಪದಲ್ಲಿದೆ. ಈ ಬಗ್ಗೆ ಸ್ಥಳೀಯ ಜನರಿಗಷ್ಟೇ ಸರಿಯಾಗಿ ತಿಳಿದಿದೆ. ಮಾಧ್ಯಮದವರಿಗೆ ಈ ಬಗ್ಗೆ ತಿಳಿಯುತ್ತಲೇ ಇಡೀ ದೇಶಕ್ಕೇ ಈ ಬಗ್ಗೆ ತಿಳಿಯಿತು. ಸ್ಥಳೀಯರ ಪ್ರಕಾರ ಇಲ್ಲಿ ಸಮೀಪದಲ್ಲಿ ಯಾವುದೋ ಶಾಲೆ ಇತ್ತು. ಆದರೆ ಪ್ರೇತಬಾಧಿತ ಘಟನೆಗಳ ಕಾರಣದಿಂದಾಗಿ ಈ ಶಾಲೆಯನ್ನು ಮುಚ್ಚಲಾಗಿದೆ.
ಖಂಡರಾವ್ ತನ್ನ ಪರಿವಾರದ ಜೊತೆ ವಾಸಿಸುತ್ತಿದ್ದ
ಇಲ್ಲಿ ಸಾವಿರಾರು ವರ್ಷಗಳ ಹಿಂದೆ ಖಂಡರಾವ್ ತನ್ನ ಪರಿವಾರದ ಜೊತೆ ಅಲ್ಲಿ ನೆಲೆಸಿದ್ದನು. ಆತನ ಸಾವಿನ ನಂತರ ಈ ಕೋಟೆಯು ಪಾಳು ಬಿದ್ದ ಅವಸ್ಥೆಯಲ್ಲಿದೆ. ಪರಿವಾರದ ಯಾವುದೇ ಸದಸ್ಯ ಅಲ್ಲಿ ಇಲ್ಲ. ಯಾವುದೋ ಪರಿವಾರದವರು ಇಲ್ಲಿ ನೆಲೆಸಲು ಯೋಚಿಸಿದ್ದರು ಆದರೆ ಭೂತ , ಪ್ರೇತಗಳು ಅವರನ್ನು ಅಲ್ಲಿಂದ ಓಡಿಸಿದವು. ಆ ಪ್ರೇತಗಳು ಇಲ್ಲಿನ ಸಂಪತ್ತನ್ನು ರಕ್ಷಿಸುತ್ತವೆ ಎನ್ನಲಾಗುತ್ತದೆ. ಹಾಗಾಗಿ ಈ ಕೋಟೆಯು ಒಂದು ರಹಸ್ಯಮಯ ಕೋಟೆಯಾಗಿಯೇ ಉಳಿದಿದೆ.
ಇಲ್ಲಿಗೆ ಹೋಗುವುದು ಹೇಗೆ?
ಖಂಡೇರಾವ್ ಕೋಟೆಯು ಮಧ್ಯಪ್ರದೇಶದ ಶಿವಪುರಿಯಲ್ಲಿದೆ. ಇಲ್ಲಿಗೆ ಹೋಗಲು ಸಮೀಪದ ವಿಮಾನ ನಿಲ್ದಾಣವೆಂದರೆ ಗ್ವಾಲಿಯರ್ ವಿಮಾನ ನಿಲ್ದಾಣ. ರೈಲಿನ ಮೂಲಕ ಹೋಗುವುದಾದರೆ ಶಿವಪುರಿ ರೈಲ್ವೆ ಸ್ಟೇಶನ್ ಸಮೀಪವಾಗುತ್ತದೆ. ಇನ್ನು ದೇಶದ ದೊಡ್ಡ ದೊಡ್ಡ ನಗರಗಳಿಂದ ಇಲ್ಲಿಗೆ ಬಸ್ಗಳೂ ಇವೆ.