ಮಹಾರಾಷ್ಟ್ರದಲ್ಲಿ ಸಾಕಷ್ಟು ಗಿರಿಧಾಮಗಳು, ಟ್ರಕ್ಕಿಂಗ್ ತಾಣಗಳೂ ಇವೆ. ಮಹಾರಾಷ್ಟ್ರವು ಅನೇಕ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿದೆ. ವಾರದ ದೈನಂದಿನ ಜಂಜಾಟಗಳಿಂದ ಸ್ವಲ್ಪ ಬಿಡುವು ಪಡೆದು ಒತ್ತಡವನ್ನು ನಿವಾರಿಸಿಕೊಳ್ಳಲು ಬಯಸುವವರಿಗೆ ಖಂಡಲಾವು ಒಂದು ಅತ್ಯಂತ ಸೂಕ್ತ ವಿಹಾರ ತಾಣವಾಗಿದೆ. ಸಮುದ್ರ ಮಟ್ಟದಿಂದ 625 ಮೀಟರ್ ಎತ್ತರದಲ್ಲಿರುವ ಈ ಸ್ಥಳವು ಸಹ್ಯಾದ್ರಿ ಶ್ರೇಣಿಯ ಪಶ್ಚಿಮ ಭಾಗದಲ್ಲಿ ನೆಲೆಸಿದೆ.
ಎಲ್ಲಿದೆ ಖಂಡಾಲಾ?
ಇದು ಭಾರತದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಭೋರ್ ಘಾಟ್ನ ತುದಿಯಲ್ಲಿ ನೆಲೆಸಿರುವ ಖಂಡಾಲಾವು ಲೋನಾವಲಾದಿಂದ ಮೂರು ಕಿಲೋ ಮೀಟರ್ ಮತ್ತು ಕರ್ಜಾತ್ ನಿಂದ ಏಳು ಕಿ.ಮೀ ದೂರದಲ್ಲಿದೆ. ಈ ಸ್ಥಳವು ಯಾವುದೇ ಚಾರಣಿಗರು ಬಯಸುವ ಕನಸಿನ ಸ್ಥಳವಾಗಿದೆ. ಈ ಸ್ಥಳದ ಮೂಲದ ಕುರಿತಾಗಿ ಯಾವುದೇ ಐತಿಹಾಸಿಕ ಆಧಾರಗಳು ಲಭ್ಯವಿಲ್ಲ. ಆದರೂ, ಎಲ್ಲರಿಗೂ ತಿಳಿದುರುವಂತೆ ಬ್ರಿಟೀಷರು ಈ ಪ್ರದೇಶವನ್ನು ಆಳುವ ಮೊದಲು ಛತ್ರಪತಿ ಶಿವಾಜಿ ಮತ್ತು ಪೇಶ್ವೆಗಳು ಈ ಪ್ರದೇಶವನ್ನು ಆಳುತ್ತಿದ್ದರು ಎಂದು ತಿಳಿದುಬಂದಿದೆ. ಎಲ್ಲ ಗಿರಿಧಾಮಗಳಂತೆ ಖಂಡಾಲಾದಲ್ಲಿಯೂ ಸಹ ವಸಾಹತು ಶಾಹಿ ಅವಧಿಯ ಸಂಸ್ಕೃತಿಯು ಪ್ರಮುಖವಾಗಿ ಕಂಡುಬರುತ್ತದೆ.
ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ
ಈ ಸ್ಥಳದಲ್ಲಿರುವ ಐತಿಹಾಸಿಕ ಸ್ಥಳಗಳು ಮತ್ತು ಸ್ಮಾರಕಗಳು ಭಾರತದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಅದ್ಭುತ ಆಕರ್ಷಣೆಗಳು ಮತ್ತು ಮೂಕ ವಿಸ್ಮಯಗೊಳಿಸುವ ಪ್ರಾಕೃತಿಕ ವೈಭವ ಸಹ್ಯಾದ್ರಿಯ ಶ್ರೇಣಿಗಳಲ್ಲಿರುವ ಬೆಟ್ಟಗಳು ಮತ್ತು ಕಣಿವೆಗಳ ಮಡಿಲಲ್ಲಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿ ನೆಲೆಗೊಂಡಿರುವ ಈ ಸ್ಥಳವು ಸುಂದರವಾದ ವಿಹಂಗಮ ನೋಟವನ್ನು ಒದಗಿಸುವ ಸ್ಥಳಗಳಿಂದ ಕೂಡಿದೆ. ಈ ಪ್ರವಾಸಿ ಸ್ಥಳವು ವರ್ಷಪೂರ್ತಿ ಮುದ ನೀಡುವಂತಹ ಹವಾಗುಣವನ್ನು ಹೊಂದಿದ್ದು ಪ್ರವಾಸಿಗರನ್ನು ಈ ಕಾರಣಕ್ಕಾಗಿ ತನ್ನತ್ತ ಆಕರ್ಷಿಸುತ್ತಿರುತ್ತದೆ.
ಯಾವಾಗ ಭೇಟಿ ಸೂಕ್ತ
ಖಂಡಾಲಾವು ಅತ್ಯಂತ ಸುಂದರವಾದ ಪರಿಸರವನ್ನು ಹೊಂದಿದೆ. ಇಲ್ಲಿನ ಸೌಂದರ್ಯವನ್ನು ಸವಿಯಲು ಮಳೆಗಾಲವು ಅತ್ಯಂತ ಸೂಕ್ತವಾದ ಸಮಯವಾಗಿದೆ. ಈ ಸಮಯದಲ್ಲಿ ಇಲ್ಲಿನ ಸುತ್ತಮುತ್ತಲ ಕಾಡು ಮತ್ತು ಮರಗಳು ತಾಜಾ ಹಸಿರಿನಿಂದ ಕೂಡಿರುತ್ತವೆ. ಇವೆಲ್ಲವು ನಿಮಗೆ ಖುಷಿಯ ಅನುಭವವನ್ನುಂಟು ಮಾಡುತ್ತವೆ. ಅಕ್ಟೋಬರ್ ನಿಂದ ಮೇ ವರೆಗಿನ ಅವಧಿಯು ಖಂಡಾಲಾದಲ್ಲಿ ಅತ್ಯಂತ ಮುದ ನೀಡುವ ಕಾಲವಾಗಿದೆ.
ಖಂಡಾಲಾ ಚಾರಣ
ಈ ನಯನ ಮನೋಹರ ಗಿರಿ ಶಿಖರಗಳನ್ನು ಅಣು ಅಣುವಾಗಿ ಆಹ್ಲಾದಿಸಬೇಕಾದರೆ ನೀವು ಇಲ್ಲಿ ಚಾರಣವನ್ನು ಕೈಗೊಳ್ಳಬಹುದು. ನೀವು ಹವ್ಯಾಸಿ ಅಥವಾ ಅನುಭವಿ ಚಾರಣಿಗರಾಗಿದ್ದರೆ ಯಾವುದಾದರು ಒಂದು ಹಾದಿ ಹಿಡಿದು ಇಲ್ಲಿನ ಗಿರಿ ಶಿಖರಗಳನ್ನು ಏರಲು ಪ್ರಾರಂಭಿಸಿದರೆ ಸಾಕು, ಈ ಕಣಿವೆಯ ಸೌಂದರ್ಯಕ್ಕೆ ನೀವು ಸಾಕ್ಷಿಯಾಗಬಹುದು. ಡ್ಯೂಕ್ಸ್ ನೋಸ್ ಶಿಖರ ಮತ್ತು ಕಾರ್ಲ ಬೆಟ್ಟಗಳು ಶಿಲಾರೋಹಣಕ್ಕೆ ಹೇಳಿ ಮಾಡಿಸಿದ ಸ್ಥಳಗಳಾಗಿವೆ.
ಲೋಹಘಡ್ ಕೋಟೆ
ಖಂಡಾಲಾದಿಂದ ಹೊರಡುವ ಪ್ರವಾಸವು ಹಲವಾರು ಮನೋರಂಜನೆ ಮತ್ತು ಉಲ್ಲಾಸವನ್ನು ಒದಗಿಸುತ್ತದೆ. ಇಲ್ಲಿ ಪ್ರವಾಸಿಗರಿಗೆ ಹಸಿರಿನ ಅಮೋಘ ದೃಶ್ಯ ವೈಭವವನ್ನು ನೋಡುವ ಅವಕಾಶ ಸಿಗುತ್ತದೆ. ಇದು ದೇಶದ ಅತ್ಯಂತ ಕುತೂಹಲಕಾರಿ ಸ್ಥಳವಾಗಿದೆ. ಲೋಹಘಡ್ ಕೋಟೆ ಅಥವಾ ಕಬ್ಬಿಣದ ಕೋಟೆಯನ್ನು ನಾವು ಇಲ್ಲಿ ಕಾಣಬಹುದು. ಇದನ್ನು ಖೈದಿಗಳನ್ನು ಸೆರೆಯಲ್ಲಿಡಲು ಬಳಸಲಾಗುತ್ತಿತ್ತು.
ಕುನೆ ಜಲಪಾತ
PC: youtube
ಕುನೆ ಜಲಪಾತವು ಇಲ್ಲಿರುವ ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಖಂಡಾಲಾದ ಸಮೀಪದಲ್ಲಿ ನೆಲೆಗೊಂಡಿದ್ದು, ಇಲ್ಲಿ ನೀರು ಸುಮಾರು 100 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದು ದಟ್ಟ ಹಸಿರಿನ ಕಾಡಿನಿಂದ ಆವೃತವಾಗಿದೆ.
ರಾಜಮಚಿ ಕೋಟೆ
ಇಲ್ಲಿಗೆ ಆಗಮಿಸುವವರು ರಾಜಮಚಿ ಕೋಟೆಯನ್ನು ನೋಡಲು ಮರೆಯಬಾರದು. ಇದು ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ನಿತ್ಯ ಹರಿದ್ವರ್ಣದ ಕಣಿವೆ ಮತ್ತು ಉದ್ಯಾನವನದಿಂದ ಆವೃತವಾಗಿದೆ. ತನ್ನ ಹಚ್ಚ ಹಸಿರಿನ ಸೌಂದರ್ಯದಿಂದ ಕೂಡಿರುವ ಖಂಡಾಲಾವು ತನ್ನ ನೈಜತೆಯಿಂದಾಗಿ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರನ್ನು ಆಶ್ಚರ್ಯದ ಕಡಲಲ್ಲಿ ತೇಲಾಡಿಸುತ್ತದೆ.
ಇತರ ಆಕರ್ಷಣೆಗಳು
ಅಮೃತಾಂಜನ್ ಪಾಯಿಂಟ್, ಡ್ಯೂಕ್ಸ್ ನೋಸ್, ರೈವುಡ್ ಪರ್ ಮತ್ತು ಬುಶಿ ಜಲಾಶಯಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಇದರ ಜೊತೆಗೆ ಇನ್ನು ಹಲವಾರು ಅದ್ಭುತವಾದ ಗುಹಾಂತರ ದೇವಾಲಯಗಳು ಇಲ್ಲಿವೆ. ಈ ಗುಹಾಂತರ ದೇವಾಲಯಗಳ ಇತಿಹಾಸವು ನಮ್ಮನ್ನು ಕ್ರಿಸ್ತ ಪೂರ್ವ 2 ನೇ ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ಯುತ್ತವೆ. ಈ ಗುಹೆಗಳ ವಾಸ್ತು ಶಿಲ್ಪವು ಬೌದ್ಧರ ವಾಸ್ತುಶಿಲ್ಪ ಕಲೆಯನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಇದು ಬೌದ್ಧರ ಹೀನಾಯಾನ ಪಂಥವು ಇಲ್ಲಿ ನೆಲೆಸಿತ್ತು ಎಂಬುದಕ್ಕೆ ಪುರಾವೆಯನ್ನು ಒದಗಿಸುತ್ತದೆ. ಪರಿಸರ ಪ್ರಿಯರಿಗೆ ಖಂಡಾಲಾವು ನಯನ ಮನೋಹರ ಕಣಿವೆಗಳ ದೃಶ್ಯದ ಜೊತೆಗೆ ಮಂಜಿನಿಂದ ಕೂಡಿದ ದೃಶ್ಯಗಳನ್ನು ಸಹ ಒದಗಿಸುತ್ತದೆ.
ಯಾವಾಗ ಭೇಟಿ ನೀಡುವುದು ಸೂಕ್ತ
ಇನ್ನಿತರ ಮಾಹಿತಿಗಳು ಖಂಡಾಲಾದ ಹವಾಮಾನವು ವರ್ಷಪೂರ್ತಿ ಅತ್ಯಂತ ಮುದ ನೀಡುವಂತಿರುತ್ತದೆ. ಬೆಚ್ಚನೆಯ ಮತ್ತು ಆಹ್ಲಾದಕರವಾದ ವಾತಾವರಣ ಇಡಿ ವರ್ಷವಿರುತ್ತದೆ. ಆದರೂ ಚಳಿಗಾಲವು ಇಲ್ಲಿ ವರ್ಷದ ಅತ್ಯಂತ ಆಹ್ಲಾದಕರವಾದ ಸಮಯವಾಗಿರುತ್ತದೆ. ತಂಪಾದ ಹವಾಮಾನವು ಈ ಗಿರಿಧಾಮದ ಮೆರುಗನ್ನು ಹೆಚ್ಚಿಸುತ್ತದೆ. ಇಲ್ಲಿ ವಿಶ್ರಾಂತಿ ಸಿಗುವುದು ಶತಸಿದ್ಧ. ಇಲ್ಲಿ ಕೈಗೊಳ್ಳುವ ಚಾರಣವನ್ನು ನೀವು ನಿಮ್ಮ ಜೀವನದಲ್ಲಿ ಎಂದಿಗೂ ಮರೆಯಲಾರಿರಿ. ಹವಾಮಾನದ ದೃಷ್ಟಿಯಿಂದಲು ಮತ್ತು ಆರ್ಥಿಕ ದೃಷ್ಟಿಯಿಂದಲು ಖಂಡಾಲಾವು ಇಲ್ಲಿಗೆ ಭೇಟಿಕೊಡುವವರ ಮನಗೆಲ್ಲುತ್ತದೆ. ಅಲ್ಲದೆ ಇಲ್ಲಿನ ಸುತ್ತ ಮುತ್ತಲ ಪರಿಸರವು ಪ್ರವಾಸಿಗರನ್ನು ಮಂತ್ರ ಮುಗ್ಧಗೊಳಿಸುತ್ತದೆ.
ಆಹಾರ ಶೈಲಿ
ಇಲ್ಲಿನ ಆಹಾರ ಶೈಲಿಯಲ್ಲಿ ಫಾಸ್ಟ್ ಫುಡ್ಗಳು ಮತ್ತು ಬಿಸಿ ಕೇಕ್ಗಳು ಸೇರಿದ್ದು, ಆಹಾರ ಪ್ರಿಯರ ನಾಲಿಗೆಯಲ್ಲಿ ನೀರೂರಿಸುತ್ತವೆ. ಪುಟ್ಟದಾದ ಮತ್ತು ಸುಂದರವಾದ ಈ ಗಿರಿಧಾಮವು ಶಾಂತಿಯನ್ನು ಬಯಸಿ ಬರುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ನಿಮ್ಮ ಕಾರು ಅಥವಾ ಬಸ್ಸು ಹತ್ತಿ ಬಂದರೆ ಸಾಕು, ನೀವು ಭುವಿಯ ಮೇಲಿನ ಸ್ವರ್ಗವೆಂದು ಕರೆಯಲಾಗುವ ಪ್ರಶಾಂತವಾದ ಗಿರಿಧಾಮದಲ್ಲಿ ಕಾಲಕಳೆಯಬಹುದು.
ತಲುಪುವುದು ಹೇಗೆ?
ಖಂಡಾಲಾಕ್ಕೆ ವಿಮಾನ, ರಸ್ತೆ ಮತ್ತು ರೈಲು ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಮುಂಬೈ ಮತ್ತು ಪುಣೆಯನ್ನು ಕೂಡಿಸುವ ಮುಂಬೈ - ಪುಣೆ ಎಕ್ಸ್ ಪ್ರೆಸ್ ಹೆದ್ದಾರಿಯು ಖಂಡಾಲಾದ ಮೂಲಕ ಹಾದು ಹೋಗುತ್ತದೆ. ಅಲ್ಲದೆ ಸಮೀಪದ ನಗರಗಳಿಂದ ಖಂಡಾಲಕ್ಕೆ ಸುಲಭವಾಗಿ ತಲುಪಬಹುದು. ಮಹಾರಾಷ್ಟ್ರದ ಪ್ರಮುಖ ನಗರಗಳಿಂದ ಖಂಡಾಲಾಕ್ಕೆ ವಿಮಾನ, ರಸ್ತೆ ಮತ್ತು ರೈಲು ಮಾರ್ಗಗಳಿದ್ದು, ಸುಲಭವಾಗಿ ತಲುಪಬಹುದು. ಪುಣೆ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಅಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಿಂದ ಖಂಡಾಲಾಗೆ ಇಂಟರ್- ಸಿಟಿ ರೈಲುಗಳೂ ಸಹ ಲಭ್ಯವಿದೆ.