ಈ ಲೇಖನವು ಕರ್ನಾಟಕ ರಾಜ್ಯದಲ್ಲಿ ಟ್ರೆಕ್ ಮಾಡಬಹುದಾದ ಕೆಲ ಪ್ರಮುಖ ಬೆಟ್ಟಗಳ ಕುರಿತು ತಿಳಿಸುತ್ತದೆ. ಸಾಮಾನ್ಯವಾಗಿ ಬೆಟ್ಟಗಳನ್ನು ಹತ್ತುತ್ತ ಸುತ್ತಲಿನ ನೋಟಗಳನ್ನು ಸವಿಯುತ್ತ, ತುದಿಯನ್ನು ಮುಟ್ಟಿದ ಮೇಲೆ ದೊಡ್ಡ ಸಾಧನೆ ಅಥವಾ ಸವಾಲನ್ನು ಸಾಧಿಸಿದೆವೆಂದು ಅರಚುತ್ತ, ಕುಣಿಯುತ್ತ ಸಂತಸ ಪಡುವುದೆಂದರೆ ಬಹುತೇಕ ಯುವ ಪಿಳಿಗೆಗೆ ಅತಿ ಸಂತಸದ ವಿಷಯ.
ವಿಶೇಷ ಲೇಖನ : ಸಾವನದುರ್ಗದಿಂದ ಆಲದಮರ
"ತಾಳ್ಮೆಯ ಫಲ ಯಾವಾಗಲೂ ಸಿಹಿ" ಎಂಬಂತೆ ಬೆಟ್ಟಗಳು ಹತ್ತುವಾಗ ಸಾಕಷ್ಟು ಕಷ್ಟಗಳನ್ನು ಕೊಟ್ಟರೂ ಅದನ್ನು ತಾಳ್ಮೆಯಿಂದ ಸಹಿಸುತ್ತ, ದಣಿವುಗಳನ್ನು ಏಕಾಗ್ರತೆಯಿಂದ ಎದುರಿಸುತ್ತ ಒಂದೊಮ್ಮೆ ಬೆಟ್ಟದ ತುದಿ ತಲುಪಿದೆವೆಂದರೆ ಸಾಕು...ಅಲ್ಲಿಂದ ಕಂಡುಬರುವ ಸುತ್ತಲಿನ ಮನಮೋಹಕ ನೋಟ, ತಾಜಾ ಪರಿಸರ, ಕೇವಲ ಗಳಿಯ ಶಬ್ದದಿಂದ ಕೂಡಿದ ಶಾಂತತೆ, ನಿರ್ಜನತೆ ಎಲ್ಲವೂ ಥಟ್ಟನೆ ನಮಗಾದ ದಣಿವನ್ನು ಒಂದೇ ಕ್ಷಣದಲ್ಲಿ ಹೊಡೆದೋಡಿಸಿ ಬಿಡುತ್ತದೆ. ಅಲ್ಲದೆ ನಾನು ಕೂಡ ಬೆಟ್ಟ ಹತ್ತಿದೆ ಎಂಬ ಆಂತರಿಕ ಧೈರ್ಯವೂ ವೃದ್ಧಿಗೊಳ್ಳುತ್ತದೆ.
ವಿಶೇಷ ಲೇಖನ : ಬೆಂಗಳೂರಿನಾಚೆ ಒಂದು ವಿಶಿಷ್ಟ ಪ್ರವಾಸ
ಆದ್ದರಿಂದ ಸಾಹಸ ಮನೋಭಾವವುಳ್ಳ ಯುವಕ/ಯುವತಿಯರಿಗೆ ಬೆಟ್ಟ ಹತ್ತುವುದೆಂದರೆ ಬಲು ಇಷ್ಟ ಪಡುವ ಚಟುವಟಿಕೆಯಾಗಿರುತ್ತದೆ. ಕರ್ನಾಟಕದಲ್ಲೂ ಸಹ ಸಾಕಷ್ಟು ಬೆಟ್ಟ ಗುಡ್ಡಗಳು ರಾಜ್ಯದ ತುಂಬೆಲ್ಲ ಕಾಣಬಹುದಾಗಿದೆ. ಅವುಗಳಲ್ಲಿ ಕೆಲವು ಚಾರಣ ಯೋಗ್ಯ ಬೆಟ್ಟಗಳಾಗಿದ್ದು ಅವುಗಳನ್ನು ಹತ್ತಬಹುದಾಗಿದೆ. ಅಂತಹ ಕೆಲ ಬೆಟ್ಟಗಳ ಪೈಕಿ ಕೆಲ ಚಾರಣ ಯೋಗ್ಯ ಅಥವಾ ಪ್ರವಾಸಿ ತಾಣಗಳಾಗಿ ಆಕರ್ಷಿಸುವ ಕರ್ನಾಟಕದ ಕೆಲ ಪ್ರಮುಖ ಬೆಟ್ಟಗಳ ಕುರಿತು ಮಾತ್ರ ಈ ಲೇಖನದಲ್ಲಿ ತಿಳಿಸಲಾಗಿದೆ. ಸಮಯಾವಕಾಶ ದೊರೆತಾಗ ಇಲ್ಲಿಗೆ ನಿಮ್ಮ ಸ್ನೇಹಿತರೊಡಗೂಡಿ ಹೋಗಲು ಮರೆಯಬೇಡಿ.
ಕರ್ನಾಟಕದ ಪ್ರಮುಖ ಬೆಟ್ಟಗಳು:
ಈ ಲೇಖನದಲ್ಲಿ ಕೆಲವು ಜನಪ್ರೀಯವಾಗಿರುವ ಹತ್ತಬಹುದಾದಂತಹ ಕೆಲವೆ ಕೆಲವು ಪ್ರಮುಖ ಬೆಟ್ಟಗಳ ಕುರಿತು ತಿಳಿಸಲಾಗಿದೆ.
ಕರ್ನಾಟಕದ ಪ್ರಮುಖ ಬೆಟ್ಟಗಳು:
ತಡಿಯಾಂಡಮೋಲ್ : ಈ ಬೆಟ್ಟವು ಕರ್ನಾಟಕದ ಎರಡನೆಯ ಅತಿ ದೊಡ್ಡ ಬೆಟ್ಟವಾಗಿದ್ದು ಕೊಡಗು ಜಿಲ್ಲೆಯಲ್ಲಿದೆ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತದೆ ಹಾಗೂ ಇದರ ಎತ್ತರ ಸುಮಾರು 1748 ಮೀಟರ್. ಇದು ಚಾರಣಿಗರ ಪಾಲಿಗೆ ನೆಚ್ಚಿನ ತಾಣವಾಗಿದ್ದು ಸಾಕಷ್ಟು ಚಾರಣಿಗ ಗುಂಪುಗಳು ಈ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಇದು ವಿರಾಜಪೇಟೆಯಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಹಸಿರಿನ ಹಾಸಿಗೆಯಲ್ಲಿ ಕಂಗೊಳಿಸುವ ಈ ಬೆಟ್ಟದ ಸುತ್ತಮುತ್ತಲಿನಲ್ಲಿ ಶೋಲಾ ಅರಣ್ಯಗಳಿವೆ. ಬೆಟ್ಟದ ಕೆಳಭಾಗದಲ್ಲಿ ನಾಲ್ಕು ನಾಡು ಅರಮನೆಗಳಿದ್ದು ಅವುಗಳಿಗೆ ಕೆಲವು ಶತಮಾನಗಳ ಇತಿಹಾಸವಿದೆ. ಸ್ಥಳೀಯ ಭಾಷೆಯಲ್ಲಿ ತಡಿಯಂಡಮೋಳ್ ಎಂದರೆ ಎತ್ತರವಾದ ಬೆಟ್ಟ ಎಂದು ಅರ್ಥ.
ಚಿತ್ರಕೃಪೆ: Lakshmipathi23
ಕರ್ನಾಟಕದ ಪ್ರಮುಖ ಬೆಟ್ಟಗಳು:
ಹಿಮವದ್ ಗೋಪಾಲಸ್ವಾಮಿ ಬೆಟ್ಟ : ಗೋಪಾಲಸ್ವಾಮಿ ಬೆಟ್ಟವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ. ಇದು ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ನೆಲೆಸಿದ್ದು ಬೆಟ್ಟದ ಮೇಲಿರುವ ಗೋಪಾಲಸ್ವಾಮಿ ದೇವಸ್ಥಾನ ಮತ್ತು ನಯನ ಮನೋಹರವಾದ ಪೃಕೃತಿ ಚೆಲುವಿನಿಂದಾಗಿ ಇದು ಪ್ರಸಿದ್ದವಾಗಿದೆ. ಇಲ್ಲಿ ವರ್ಷದ ಬಹುತೇಕ ಸಮಯದಲ್ಲಿ ಇಬ್ಬನಿ ಕವಿದಿರುವುದರಿಂದ "ಹಿಮವದ್ ಗೋಪಾಲಸ್ವಾಮಿ ಬೆಟ್ಟ" ಎಂಬ ಹೆಸರು ಬಂದಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಚಿತ್ರಕೃಪೆ: Ananth BS
ಕರ್ನಾಟಕದ ಪ್ರಮುಖ ಬೆಟ್ಟಗಳು:
ಚಾಮುಂಡಿ ಬೆಟ್ಟ : ಸಮುದ್ರಮಟ್ಟದಿಂದ 1063 ಮೀ. ಎತ್ತರವಾಗಿರುವ ಚಾಮುಂಡಿ ಬೆಟ್ಟವು ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಅದರ ಅಗ್ನೇಯಕ್ಕೆ ಪೂರ್ವಮಶ್ಚಿಮವಾಗಿ ನೆಲೆ ನಿಂತಿದೆ. ಬೆಟ್ಟದ ಮೇಲೆ ಚಾಮುಂಡೇಶ್ವರಿಯ ದೇವಾಲಯವಿರುವುದರಿಂದ ಈ ಬೆಟ್ಟಕ್ಕೆ ಆ ದೇವತೆಯ ಹೆಸರೇ ಬಂದಿದೆ. ಸುತ್ತಲೂ ಬಯಲಿದ್ದು, ಒಂಟಿಯಾಗಿ ನಿಂತಿರುವ ಕಡಿದಾದ ಈ ಬೆಟ್ಟ ಬಹು ದೂರದವರೆಗೂ ಗೋಚರಿಸುವುದಲ್ಲದೆ, ಬೆಟ್ಟದ ಮೇಲೆ ನಿಂತು ನೋಡಿದಾಗ ಮೈಸೂರಿನ ಹಲವು ಮತ್ತು ಸುತ್ತಲಿನ ಪ್ರಕೃತಿ ಸೌಂದರ್ಯವು ರಮಣೀಯವಾಗಿ ಗೋಚರಿಸುತ್ತದೆ. ಮೈಸೂರಿನ ಮುಖ್ಯ ಪ್ರವಾಸಿ ಆಕರ್ಷಣೆಗಳ ಪೈಕಿ ಇದೂ ಒಂದಾಗಿದೆ.
ಚಿತ್ರಕೃಪೆ: Amarrg
ಕರ್ನಾಟಕದ ಪ್ರಮುಖ ಬೆಟ್ಟಗಳು:
ನಂದಿ ಬೆಟ್ಟ : ಈ ಬೆಟ್ಟವು ನ೦ದಿ ಹಳ್ಳಿ, ಮುದ್ದೇನಹಳ್ಳಿ ಹಾಗು ಕಣಿವೆನಾರಾಯಣಪುರ ಎಂಬ ಮೂರು ಪಟ್ಟಣಗಳ ಮಧ್ಯೆ ನೆಲೆಸಿದೆ. ನ೦ದಿ ಬೆಟ್ಟ ಅಥವಾ ನ೦ದಿ ದುರ್ಗ ಒ೦ದು ಪುರಾತನ ಕಾಲದ ಕೋಟೆ ತಾಣವಾಗಿದ್ದು, ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದೆ. ಚಿಕ್ಕಬಳ್ಳಾಪುರ ಪಟ್ಟಣದಿ೦ದ 10 ಕಿ.ಮಿ ದೂರದಲ್ಲಿ ಹಾಗು ಬೆ೦ಗಳೂರು ನಗರದಿ೦ದ ಸುಮಾರು 60 ಕಿ.ಮಿ ದೂರದಲ್ಲಿದೆ. ನಂದಿ ಬೆಟ್ಟದ ಕುರಿತು ತಿಳಿಯಿರಿ.
ಚಿತ್ರಕೃಪೆ: Shyamal
ಕರ್ನಾಟಕದ ಪ್ರಮುಖ ಬೆಟ್ಟಗಳು:
ನರಿ ಮಲೆ ಬೆಟ್ಟ : ಕರ್ನಾಟಕ ರಾಜ್ಯದ ಕೊಡಗು ಜುಲ್ಲೆಯ ಬ್ರಹ್ಮಗಿರಿ ಬೆಟ್ಟಗಳ ಸಾಲಿನಲ್ಲಿ ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಗಡಿ ಭಾಗಕ್ಕೆ ಹೊಂದಿಕೊಂಡಂತೆ ಈ ಬೆಟ್ಟ ನೆಲೆಸಿದೆ. ಇರ್ಪು ಜಲಪಾತದಿಂದ ಬ್ರಹ್ಮಗಿರಿ ಪರ್ವತದೆಡೆ ಸಾಗುವಾಗ ಸುಮಾರು 4.5 ಕಿ.ಮೀ ದೂರದಲ್ಲಿ ಈ ಬೆಟ್ಟವು ಸ್ಥಿತವಿದೆ. ಕೊಡಗಿನ ಸ್ಥಳೀಯ ಭಾಷೆಯಲ್ಲಿ ನರಿ ಎಂದರೆ ಹುಲಿ. ಬಹಳ ಹಿಂದೆ ಈ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ಇದ್ದ ಕಾರಣದಿಂದ ನರಿ ಮಲೆ ಎಂಬ ಹೆಸರು ಬಂದಿದೆ. ಲಕ್ಷ್ಮಣ ತೀರ್ಥ ನದಿಯು ನರಿ ಮಲೆ ಬೆಟ್ಟದಲ್ಲಿ ಮೊದಲು ಒಂದು ಜಲಪಾತವನ್ನು ನಿರ್ಮಿಸಿ ನಂತರ ಇದು ಬೆಟ್ಟದ ಕೆಳಬಾಗದಲ್ಲಿ ಧುಮುಕಿ ಇರ್ಪು ಜಲಪಾತವಾಗಿ ಧರೆಗುರುಳುತ್ತದೆ.
ಚಿತ್ರಕೃಪೆ: Lakshmipathi23
ಕರ್ನಾಟಕದ ಪ್ರಮುಖ ಬೆಟ್ಟಗಳು:
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿರುವ ಪುಷ್ಪಗಿರಿ ಬೆಟ್ಟವು 1712 ಮೀಟರುಗಳಷ್ಟು ಎತ್ತರವಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೆಲೆಸಿರುವ ಪುಷ್ಪಗಿರಿ ವನ್ಯಧಾಮದಲ್ಲಿ ಅತ್ಯಂತ ಎತ್ತರವಾದ ಬೆಟ್ಟವಾಗಿದೆ. ಪ್ರತಿ ವರ್ಷ ಸಾವಿರಾರು ಚಾರಣಿಗರು ಹಾಗೂ ಪ್ರವಾಸಿಗರು ಪುಷ್ಪಗಿರಿ ಬೆಟ್ಟವನ್ನು ಹತ್ತಲು ಭೇಟಿ ನೀಡುತ್ತಾರೆ.
ಚಿತ್ರಕೃಪೆ: Thejaswi
ಕರ್ನಾಟಕದ ಪ್ರಮುಖ ಬೆಟ್ಟಗಳು:
ಬಾಬಾ ಬುಡನ್ಗಿರಿಯು ಭಾರತದ ಪಶ್ಚಿಮ ಘಟ್ಟಗಳ ದತ್ತಗಿರಿ ಬೆಟ್ಟದ ಸಾಲಿನಲ್ಲಿರುವ ಒಂದು ಬೆಟ್ಟ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಥಿತವಾದ ದತ್ತಗಿರಿ/ಬಾಬಾ ಬುಡನ್ಗಿರಿಯು ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಯಾತ್ರಾಸ್ಥಳವಾಗಿದ್ದು ಅಲ್ಲಿರುವ ದತ್ತ ಪೀಠಕ್ಕಾಗಿ ಪರಿಚಿತವಾಗಿದೆ.
ಚಿತ್ರಕೃಪೆ: Mithun P S
ಕರ್ನಾಟಕದ ಪ್ರಮುಖ ಬೆಟ್ಟಗಳು:
ಬಿಳಿಗಿರಿ ರಂಗಯ್ಯ......ನೀನೇ ಹೇಳಯ್ಯ....ಎಂಬ ಶರಪಂಜರದ ಗೀತೆಯನ್ನು ಕೇಳಿದಾಗ ಈಗಲೂ ಮೈಮನವೆಲ್ಲ ಪುಳಕಿತಗೊಳ್ಳುತ್ತದೆ. ಅದರಂತೆ ಬಿಳಿಗಿರಿ ರಂಗನ ಬೆಟ್ಟದ ಪರಿಸರವೂ ಅಷ್ಟೆ, ಭೇಟಿ ನೀಡಿದ ತಕ್ಷಣವೆ ಅದರ ಅಂದ ಚೆಂದವು ಮನದಲ್ಲಿ ತುಂಬಿ ಬಿಡುತ್ತದೆ. ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಬೆಟ್ಟ ತಾಣಕ್ಕೆ ವರ್ಷಪೂರ್ತಿ ಭೇಟಿ ನೀಡಬಹುದಾಗಿದ್ದರೂ ಜೂನ್ ನಿಂದ ನವಂಬರ್ ಸಮಯ ಆದರ್ಶಮಯವಾದುದು ಎಂದು ಹೇಳಬಹುದಾಗಿದೆ. ಮೈಸೂರಿನಿಂದ ಸುಮಾರು 80 ಕಿ.ಮೀ ದೂರವಿರುವ ಈ ಸ್ಥಳ ತಮಿಳುನಾಡಿನ ಈರೋಡ್ ಜಿಲ್ಲೆಯೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಅಲ್ಲದೆ ಈ ಸ್ಥಳವು ರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಬಿಳಿಗಿರಿ ರಂಗಸ್ವಾಮಿ ಅಭಯಾರಣ್ಯವನ್ನು ಇಲ್ಲಿ ಕಾಣಬಹುದು. ಹೆಚ್ಚಿನ ವಿವರಗಳು
ಚಿತ್ರಕೃಪೆ: ☻☺
ಕರ್ನಾಟಕದ ಪ್ರಮುಖ ಬೆಟ್ಟಗಳು:
ಕರ್ನಾಟಕದ ಸುಂದರವಾದ ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ವಿಶೇಷವಾದ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ಇಂತಹ ಹಲವು ಆಕರ್ಷಣೆಗಳಲ್ಲಿ ಒಂದಾಗಿದೆ ಬ್ರಹ್ಮಗಿರಿ ಬೆಟ್ಟ. ಟ್ರೆಕ್ ಮಾಡಲು ಪ್ರಶಸ್ತವಾದ ಈ ಪರ್ವತ ಪ್ರದೇಶವು ಕರ್ನಾಟಕದ ಕೊಡಗು ಹಾಗೂ ಕೇರಳದ ವಯನಾಡ್ ಜಿಲ್ಲೆಗಳ ಗಡಿಗಳಲ್ಲಿ ಹರಡಿದೆ. ಸಮುದ್ರ ಮಟ್ಟದಿಂದ 1600 ಮೀ ಗಳಷ್ಟು ಎತ್ತರದಲ್ಲಿರುವ ಬ್ರಹ್ಮಗಿರಿ ಪರ್ವತದ ಮೇಲ್ಭಾಗವು ವೈವಿಧ್ಯಮಯ ವನ್ಯಜೀವಿ ಸಂಪತ್ತಿನಿಂದ ಕೂಡಿದ್ದು ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆಯಾಗಿದೆ. ಕರ್ನಾಟಕ ಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟ ಹಾಗೂ ಕೇರಳ ಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಸಾಕಷ್ಟು ಆಕರ್ಷಣೆಗಳನ್ನು ಕಾಣಬಹುದಾಗಿದೆ.
ಚಿತ್ರಕೃಪೆ: muscicapa
ಕರ್ನಾಟಕದ ಪ್ರಮುಖ ಬೆಟ್ಟಗಳು:
ಮಧುಗಿರಿ ಏಕಶಿಲಾ ಬೆಟ್ಟ: ಮೇಲಿನ ಚಿತ್ರದಲ್ಲಿ ಕಾಣುತ್ತಿರುವ ಬೆಟ್ಟವು ಏಕ ಶಿಲಾ ಬೆಟ್ಟವಾಗಿದೆ. ಮಧುಗಿರಿಯಲ್ಲಿ ಕಂಡುಬರುವ ಈ ಏಕಶಿಲಾ ಬೆಟ್ಟವು ಏಷಿಯಾ ಖಂಡದಲ್ಲೆ ಎರಡನೇಯ ಅತಿ ದೊಡ್ಡ ಏಕಶಿಲಾ ಬೆಟ್ಟವಾಗಿದೆ.
ಚಿತ್ರಕೃಪೆ: Vinay Siddapura
ಕರ್ನಾಟಕದ ಪ್ರಮುಖ ಬೆಟ್ಟಗಳು:
ಸಿದ್ಧರ ಬೆಟ್ಟ: ಸಿದ್ಧರ ಬೆಟ್ಟದ ಮೇಲಿನಿಂದ ಕಂಡುಬರುವ ಚಿತ್ರ. ಮಧುಗಿರಿಯ ಬಳಿ ಕಂಡು ಬರುವ ಮತ್ತೊಂದು ಸಾಹಸಮಯ ಪ್ರವಾಸಿ ಆಕರ್ಷಣೆ ಸಿದ್ಧರ ಬೆಟ್ಟ. ಸಿದ್ಧರ ಬೆಟ್ಟವು ತನ್ನಲ್ಲಿ ದೊರಕುವ ಔಷಧೀಯ ಗುಣವುಳ್ಳ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ ಈ ಬೆಟ್ಟದ ಮೇಲಿನಿಂದ ನೈಸರ್ಗಿಕ ನೀರಿನ ಸೆಲೆಯೊಂದು ಕೆಳ ಹರಿಯುತ್ತದೆ. ಈ ನೀರಿನಲ್ಲೂ ಔಷಧೀಯ ಗುಣಗಳಿವೆ ಎಂದು ನಂಬಲಾಗಿದೆ.
ಚಿತ್ರಕೃಪೆ: solarisgirl
ಕರ್ನಾಟಕದ ಪ್ರಮುಖ ಬೆಟ್ಟಗಳು:
ಮಲೆ ಮಹದೇಶ್ವರ ಬೆಟ್ಟ : ಮಲೆಮಹದೇಶ್ವರ ಬೆಟ್ಟಗಳು ಚಾಮರಾಜನಗರ ಜಿಲ್ಲೆಯಲ್ಲಿದ್ದು, ಮೈಸೂರು ನಗರದಿಂದ 140 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಬೆಟ್ಟಗಳು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿವೆ. ಮಹದೇಶ್ವರ ದೇವಾಲಯವು ಸ್ವತಃ ಬೆಟ್ಟಗಳಿಂದ ಮತ್ತು ಕಾಡುಗಳಿಂದ ಸುತ್ತುವರಿದ ನಯನ ಮನೋಹರ ಪರಿಸರದಲ್ಲಿ ನೆಲೆಗೊಂಡಿದೆ. ಸ್ಥಳೀಯರ ಪ್ರಕಾರ ಮಹದೇಶ್ವರನು ಶಿವನ ಅವತಾರವೆಂದು, ಶಿವನು ಇಲ್ಲಿ ತಪಸ್ಸು ಆಚರಿಸಿದನೆಂದು ಹಾಗು ಇಂದಿಗು ಇಲ್ಲಿ ಶಿವಲಿಂಗದ ರೂಪದಲ್ಲಿ ನೆಲೆಸಿರುವನೆಂದು ದಂತಕಥೆಗಳು ಚಾಲ್ತಿಯಲ್ಲಿವೆ.
ಚಿತ್ರಕೃಪೆ: Tumkurameen
ಕರ್ನಾಟಕದ ಪ್ರಮುಖ ಬೆಟ್ಟಗಳು:
ಮುಳ್ಳಯ್ಯನಗಿರಿ : ಮುಳ್ಳಯ್ಯನಗಿರಿ ಬೆಟ್ಟವು ಕರ್ನಾಟಕ ರಾಜ್ಯದ ಅತಿ ಎತ್ತರದ ಬೆಟ್ಟ ಎಂಬ ಖ್ಯಾತಿಗೆ ಪಾತ್ರವಾಗಿದೆ. ಸಮುದ್ರ ಮಟ್ಟದಿಂದ ಬರೋಬ್ಬರಿ ಎತ್ತರ 1926 ಮೀಟರ್. ಒಂದೆಡೆ ಕಾಫಿ ತೋಟಗಳು, ಇನ್ನೊಂದೆಡೆ ಒಂದಷ್ಟು ಗಿಡ-ಮರಗಳು, ಅಪರೂಪದ ಶೋಲಾ ಅರಣ್ಯ, ಸುತ್ತಲೂ ಹುಲ್ಲಿನ ಹಾಸು, ಇವು ಈ ಬೆಟ್ಟದಾವರಣದಲ್ಲಿ ಕಂಡುಬರುವ ನೋಟ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ಬೆಟ್ಟವು ಜಿಲ್ಲಾ ಕೇಂದ್ರದಿಂದ 18 ಕಿ.ಮೀ. ಗಳಷ್ಟು ದೂರದಲ್ಲಿದೆ. ಪುರಾತನ ಇತಿಹಾಸ ಇರುವ ಮುಳ್ಳಯನಗಿರಿಯು ಶಿವ ದೇವರು ನೆಲೆಸಿರುವ ಸ್ಥಳ.
ಚಿತ್ರಕೃಪೆ: Lakshmipathi23
ಕರ್ನಾಟಕದ ಪ್ರಮುಖ ಬೆಟ್ಟಗಳು:
ಶಿವಗಂಗೆ ಬೆಟ್ಟವು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದೆ. ಇದು ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಡಾಬಸ್ ಪೇಟೆ ಇಂದ ಸುಮಾರು ಆರು ಕಿ.ಮೀ ದೂರದಲ್ಲಿದೆ. ಬೆಟ್ಟದ ಮೇಲೆ ಗಂಗಾಧರೇಶ್ವರ ದೇವಾಲಯವಿದೆ. ಬೆಟ್ಟದ ಪ್ರಾರಂಭದಲ್ಲಿ ಶಿವನ ದೇವಾಲಯವಿದೆ. ಇಲ್ಲಿ ಶಿವ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ ಎನ್ನುತ್ತದೆ ಇಲ್ಲಿನ ಸ್ಥಳ ಪುರಾಣ. ಹಾಗೆಯೆ ಇಲ್ಲಿ ಒಂದು ಸಣ್ಣ ಸುರಂಗ ಮಾರ್ಗವೂ ಸಹ ಇದ್ದು ಅದು ಶ್ರೀರಂಗಪಟ್ಟಣ ತಲುಪಬಹುದು ಎಂಬ ನಂಬಿಕೆಯು ಚಾಲ್ತಿಯಲ್ಲಿದೆ. ಬೆಟ್ಟದಲ್ಲಿ ಸ್ವಲ್ಪ ಮೇಲೆ ಏರಿದರೆ ಒಳಕಲ್ಲು ತೀರ್ಥ ಎನ್ನುವ ಮತ್ತೊಂದು ಸ್ಥಳವಿದೆ. ಇಲ್ಲಿರುವ ಒಳಕಲ್ಲಿನಲ್ಲಿ ವರ್ಷದ 365 ದಿನಗಳೂ ನೀರು ದೊರೆಯುತ್ತದೆ. ಹಾಗೆ ಕಡಿದಾದ ಬೆಟ್ಟವನ್ನು ಏರುತ್ತಾ ಹೋದರೆ ಒಂದು ಎತ್ತರವಾದ ಬಂಡೆಯ ಮೇಲೆ ನಂದಿ ವಿಗ್ರಹವಿದೆ. ಇದನ್ನು ಪ್ರದಕ್ಷಿಣೆ ಹಾಕುವುದೆ ಒಂದು ಸಾಹಸದ ಕೆಲಸ. ಕಾಲು ಇಡಲು ಕೂಡ ಜಾಗ ಚಿಕ್ಕದು ಹಾಗು ಮತ್ತೊಂದು ಕಡೆ ಆಳವಾದ ಪ್ರಪಾತ. ನಂತರ ಮುಂದುವರೆದರೆ ಬೆಟ್ಟದ ಮೇಲೆ ಗಂಗಾಧರೇಶ್ವರ ದೇವಾಲಯ ನೋಡಬಹುದು. ಇಲ್ಲಿರುವ ಮತ್ತೊಂದು ಆಕರ್ಷಣೆ ಎಂದರೆ ಬೆಟ್ಟದ ತುದಿಯಲ್ಲಿ ಕಟ್ಟಿರುವ ಬೆಳ್ಳೀ ಗಂಟೆಗಳು.
ಚಿತ್ರಕೃಪೆ: Manjeshpv
ಕರ್ನಾಟಕದ ಪ್ರಮುಖ ಬೆಟ್ಟಗಳು:
ಶ್ರೀರಾಮದೇವರ ಬೆಟ್ಟವು ಜಿಲ್ಲಾ ಕೇಂದ್ರವಾದ ರಾಮನಗರದಿಂದ ಕೇವಲ ಮೂರು ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ರಾಮನಗರಕ್ಕೆ ಬರುವಾಗ, ರಾಮನಗರಕ್ಕೆ ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿ ಶ್ರೀರಾಮದೇವರ ಬೆಟ್ಟಕ್ಕೆ ದಾರಿ ಎಂದು ನಾಮ ಫಲಕ ಕಾಣುತ್ತದೆ ಹಾಗು ಇಲ್ಲಿ ದೇವಾಲಯಕ್ಕೆ ತೆರಳಲು ಕಮಾನಿನಾಕಾರದಲ್ಲಿ ನಿರ್ಮಿಸಲಾದ ದ್ವಾರವು ಸ್ವಾಗತಿಸುತ್ತದೆ. ಇಲ್ಲಿಂದ ಮೂರು ಕಿ.ಮೀ ಡಾಂಬರ್ ರಸ್ತೆಯಲ್ಲಿ ಕ್ರಮಿಸಿದರೆ ರಾಮದೇವರ ಬೆಟ್ಟ ತಾಣವನ್ನು ತಲುಪಬಹುದು. ಬೆಟ್ಟದ ಮೇಲೆ ಹತ್ತಲು ಮೆಟ್ಟಿಲುಗಳ ವ್ಯವಸ್ಥೆ ಇದೆ.
ಚಿತ್ರಕೃಪೆ: David Nunn
ಕರ್ನಾಟಕದ ಪ್ರಮುಖ ಬೆಟ್ಟಗಳು:
ಸಾವನದುರ್ಗವು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ 45 ಕಿಮೀ ದೂರದಲ್ಲಿ ನೆಲೆಸಿರುವ ಒಂದು ಬೆಟ್ಟವಾಗಿದೆ. ಈ ಬೆಟ್ಟವು ಅದರ ಮೇಲಿರುವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ ಮತ್ತು ಪ್ರಪಂಚದಲ್ಲೇ ಅತ್ಯಂದ ದೊಡ್ಡ ಏಕಶಿಲಾ ಬೆಟ್ಟಗಳ ಪೈಕಿ ಇದೂ ಸಹ ಒಂದಾಗಿದೆ. ಇದು ಸಮುದ್ರ ಮಟ್ಟಕ್ಕಿಂತ 1226 ಮೀಟರ್ಗಳಷ್ಟು ಎತ್ತರದಲ್ಲಿದೆ. ಸಾಕಷ್ಟು ಯುವ ಜನಾಂಗದವರು ಈ ಬೆಟ್ಟ ಹತ್ತಲು ವಾರಾಂತ್ಯ ರಜೆ ದಿನಗಳಲ್ಲಿ ಇಲ್ಲಿಗೆ ಬರುತ್ತಿರುತ್ತಾರೆ. ಬೆಟ್ಟದ ಮೇಲೆ ಅಲ್ಲಲ್ಲಿ ಹತ್ತ ಬೇಕಾದ ಮಾರ್ಗಗಳನ್ನು ಕೊರೆಯಲಾಗಿದ್ದು ಸಾಕಷ್ಟು ಜಾಗರೂಕತೆಯಿಂದ ಹತ್ತಬೇಕು.
ಚಿತ್ರಕೃಪೆ: Shyamal