ಉಡುಪಿ ಜಿಲ್ಲೆಯಲ್ಲಿರುವ ಕಾರ್ಕಳವು ಒಂದು ತೀರ್ಥ ಕ್ಷೇತ್ರ. ಈ ತಾಲೂಕು ಕೇಂದ್ರವು ಜೈನ ಸಮುದಾಯದವರ ಪುಣ್ಯ ಕೇಂದ್ರವಾಗಿದ್ದು, "ಜೈನ ಕಾಶಿ" ಎಂದೆ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನಿಂದ ಕಾರ್ಕಳವು ಸುಮಾರು 360 ಕಿ. ಮೀ ಗಳಷ್ಟು ದೂರದಲ್ಲಿದ್ದು, ತೆರಳಲು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳೆರಡೂ ಲಭ್ಯವಿದೆ. ಪಶ್ಚಿಮ ಘಟ್ಟದ ಬುಡದಲ್ಲಿ ಭವ್ಯವಾಗಿ ನೆಲೆಸಿರುವ ಈ ಊರು ಹಲವು ಶತಮಾನಗಳ ಹಿಂದೆ ಜೈನ ರಾಜರ ಆಳ್ವಿಕೆಗೆ ಒಳಪಟ್ಟಿತ್ತು ಹಾಗೂ ಪಾಂಡ್ಯ ನಗರಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು.
ಥಾಮಸ್ ಕುಕ್ ಎಲ್ಲ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ
ಈ ಊರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಪ್ಪು ಬಣ್ಣದ ಬಂಡೆಗಳು ಇದ್ದಿದುದರಿಂದ ಕಾಲ ಉರುಳಿದಂತೆ ಇದು "ಕರಿಕಲ್ಲು" ಎಂಬ ಹೆಸರಿನಿಂದಲೂ ಸಹ ಪ್ರಸಿದ್ಧವಾಗಿತ್ತು. ನಂತರ ಈ ಹೆಸರು ಮತ್ತೆ ಮುಂದುವರೆದು ಮತ್ತಷ್ಟು ಸಮಯದ ನಂತರ ತುಳು ಭಾಷೆಯ ಕರ್ಲು ಎಂತಲೂ ಕೊನೆಗೆ ಕನ್ನಡದಲ್ಲಿ ಕಾರ್ಕಳ ಎಂಬ ಹೆಸರನ್ನು ಪಡೆದುಕೊಂಡಿತು. ಜೈನರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಇಲ್ಲಿ ಸಾಕಷ್ಟು ಜೈನ ಸ್ಮಾರಕಗಳನ್ನು ನೋಡಬಹುದಾಗಿದೆ.
ವಿಶೇಷ ಲೇಖನ : ಕರ್ನಾಟಕದಲ್ಲಿರುವ ಗೊಮ್ಮಟೇಶ್ವರ ಪ್ರತಿಮೆಗಳು
ಕರ್ನಾಟಕ ಹಾಗೂ ಭಾರತದೆಲ್ಲೆಡೆಯಿರುವ ಜೈನ ಬಾಂಧವರಿಗೆ ಈ ಕ್ಷೇತ್ರವು ಪವಿತ್ರವಾಗಿದ್ದು "ಜೈನ ಕಾಶಿ" ಅಥವ "ಜೈನ ತೀರ್ಥ"ಎಂತಲೂ ಸಹ ಪ್ರೀತಿಯಿಂದ ಕರೆಯಲ್ಪಡುತ್ತದೆ. ಇಲ್ಲಿರುವ 42 ಅಡಿಗಳಷ್ಟು ಎತ್ತರದ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ, ಚತುರ್ಮುಖ ಬಸದಿ ಹಾಗೂ ಇತರೆ ಅನೇಕ ಸುಂದರ ಸ್ಮಾರಕಗಳಿದ್ದು ಅವೆಲ್ಲವೂ ಸಹ ಪ್ರವಾಸಿ ದೃಷ್ಟಿಯಿಂದ ಮಹತ್ವ ಪಡೆದು ಇಂದಿಗೂ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ತಮ್ಮತ್ತ ಆಕರ್ಷಿಸುತ್ತಿವೆ. ಪ್ರಸ್ತುತ ಲೇಖನದ ಮೂಲಕ ಕಾರ್ಕಳದ ಕುರಿತು ಸಂಕ್ಷೀಪ್ತವಾಗಿ ತಿಳಿಯಿರಿ ಹಾಗೂ ಸಮಯ ಸಿಕ್ಕಾಗ ಈ ಪಶ್ಚಿಮ ಘಟ್ಟದ ಬುಡದಲ್ಲಿರುವ ಈ ಸೌಂದರ್ಯವನ್ನು ನೋಡಲು ಮರೆಯದಿರಿ.
ಆಕರ್ಷಕ ಕಾರ್ಕಳ:
ಕಾರ್ಕಳವು ಜೈನ ರಾಜರು ಆಳುತ್ತಿದ್ದ ಕಾಲದಲ್ಲಿ ಪಾಂಡ್ಯ ನಗರಿ ಎಂಬ ಹೆಸರಿನಿಂದ ಗುರುತಿಸಿಕೊಂಡಿತ್ತು. ಕಾರ್ಕಳದ ಆಸುಪಾಸಿನ ಪ್ರದೇಶದಲ್ಲಿ ಬಂಡೆಕಲ್ಲುಗಳು ಹೇರಳವಾಗಿದ್ದುದರಿಂದ ಇದನ್ನು"ಕರಿಕಲ್ಲು" ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತಿತ್ತು.
ಚಿತ್ರಕೃಪೆ: Anoopratnaker
ಆಕರ್ಷಕ ಕಾರ್ಕಳ:
ಇದಲ್ಲದೆ ಕೆಲವು ಮೂಲಗಳನ್ನು ಉಲ್ಲೇಖಿಸುವುದಾದರೆ, ಕಾರ್ಕಳದ ಮಧ್ಯಭಾಗದಲ್ಲಿರುವ 'ಆನೆಕರೆ'ಯು ಹಿಂದೆ 'ಕರಿ-ಕೊಳ' ಎಂದು ಗುರುತಿಸಿಕೊಂಡಿತ್ತು, ಅದರಿಂದ ಕಾರ್ಕಳದ ಹೆಸರು ಈ ಊರಿಗೆ ಬಂತೆಂದೂ ತಿಳಿದುಬರುತ್ತದೆ.
ಚಿತ್ರಕೃಪೆ: Abhewday
ಆಕರ್ಷಕ ಕಾರ್ಕಳ:
ಕಾರ್ಕಳದಲ್ಲಿ ಬಹುಸಂಖ್ಯೆಯಲ್ಲಿರುವ ತುಳುವರು "ಕಾರ್ಲ" ಎಂದು ಕರೆಯುತ್ತಾರೆ ಹಾಗೆಯೇ, ಕೊಂಕಣಿ ಮಾತನಾಡುವ ಜನರು "ಕಾರ್ಕೊಳ್" ಎಂದು ಕರೆಯುತ್ತಾರೆ. ಕಾರ್ಕಳವು ಇಲ್ಲಿರುವ ಜೈನ ಬಸದಿಗಳು ಮತ್ತು ಗೊಮ್ಮಟೇಶ್ವರ ಮೂರ್ತಿಯಿಂದ ಪ್ರಸಿದ್ದವಾಗಿದೆ.
ಚಿತ್ರಕೃಪೆ: Shiva shankar
ಆಕರ್ಷಕ ಕಾರ್ಕಳ:
ಇತಿಹಾಸ ಕೆದಕಿದಾಗ ಕಾರ್ಕಳದಲ್ಲಿ ಆರಂಭವಾದ ಜನಜೀವನದ ಸಮಯ ನಿಖರವಾಗಿ ತಿಳಿಯದಿದ್ದರೂ ಸಹ ಶಿಲಾಯುಗಕ್ಕೆ ಸಂಬಂಧಿಸಿದಂತೆ ಹಲವು ಪುರಾವೆಗಳು ಇಲ್ಲಿ ದೊರಕುತ್ತವೆ. ತತ್ಸಂಬಂಧವಾದ ಹಲವಾರು ಪಳೆಯುಳಿಕೆಗಳು ಕಾಣಸಿಗುತ್ತವೆ.
ಚಿತ್ರಕೃಪೆ: Srashmi01
ಆಕರ್ಷಕ ಕಾರ್ಕಳ:
ಕಾರ್ಕಳದಲ್ಲಿ ಸಾಮಾನ್ಯವಾಗಿ ನೋಡಬಹುದಾದ ಅಥವಾ ಭೇಟಿ ನೀಡಬಹುದಾದ ಪ್ರವಾಸಿ ಆಕರ್ಷಣೆಗಳೆಂದರೆ ಗುಹೆಗಳು ಮತ್ತು ಸಮಾಧಿಗಳು. ಇಲ್ಲಿನ ಹಿರಿಯಂಗಡಿ ಬಳಿ ಇರುವ ಪರ್ಪಲೆ ಬೆಟ್ಟದ ಮಧ್ಯಭಾಗದಲ್ಲಿ ಒಂದು ಗುಹೆಯಿದ್ದು ಈ ಮುರಕಲ್ಲು ಗುಹೆ ಶಿಲಾಯುಗಕ್ಕೆ ಸಂಬಂಧಿಸಿದ್ದಾಗಿದೆ.
ಚಿತ್ರಕೃಪೆ: vivek raj
ಆಕರ್ಷಕ ಕಾರ್ಕಳ:
ಕಾಲದ ಪ್ರಭಾವದಿಂದಾಗಿ ಆದ ಹಲವಾರು ಬದಲಾವಣೆಗಳನ್ನು ನಾವು ಇಲ್ಲಿ ಕಾಣಬಹುದು. ಗುಹೆಯ ಮುಂದೆ ಕಿರಿದಾದ ಸಣ್ಣ ಕಣಿವೆಯಿದ್ದು, ಇಲ್ಲೊಂದು ಅಷ್ಟೇ ಸಣ್ಣದಾದ ನೀರಿ ತೊರೆಯಿದೆ. ಇದು ಪ್ರಾಚೀನ ಕಾಲದಲ್ಲಿ ಮಾನವ ವಾಸ್ತವ್ಯಕ್ಕೆ ಅತ್ಯಂತ ಸೂಕ್ತವಾದ ಸ್ಥಳವಾಗಿತ್ತು. ಆಧುನಿಕ ಮಾನವನ ಸಂಪರ್ಕ ಹೊಂದಿರುವ ಈ ಗವಿ ಇದ್ದಿರಬಹುದಾದ ಪಳೆಯುಳಿಕೆಗಳನ್ನು ತನ್ನ ಗರ್ಭದಲ್ಲಿ ಸೇರಿಸಿಕೊಂಡಿದೆ ಎಂದು ಹೇಳಬಹುದು.
ಚಿತ್ರಕೃಪೆ: Riju K
ಆಕರ್ಷಕ ಕಾರ್ಕಳ:
ಇಲ್ಲಿನ ಬೆಳುವಾಯಿ ಸಮೀಪದಲ್ಲಿರುವ ದರೆಗುಡ್ಡೆ ಮತ್ತು ಬೈಲೂರು ಬಳಿಯ ಕಣಜಾರು ಬೆಟ್ಟ ಪ್ರದೇಶಗಳಲ್ಲಿ ಹೆಬ್ಬಂಡೆಗಳಲ್ಲಿ ಮಾಡಲಾಗುತ್ತಿದ್ದ ವಾಸ್ತವ್ಯಕ್ಕೆ ಸಂಬಂಧಿಸಿದ ಅನೇಕ ಕುರುಹುಗಳಿವೆ.
ಇಲ್ಲಿ ಬೃಹತ್ ಶಿಲಾಯುಗಕ್ಕೂ ಹಿಂದಿನ ಕಾಲದ ಮಾನವ ವಾಸವಾಗಿದ್ದಿರಬಹುದು. ಸಾವಿರಾರು ವರ್ಷಗಳ ಘನಘೋರ ವರ್ಷಧಾರೆಯಿಂದ ಇಲ್ಲಿನ ಕುರುಹುಗಳು ನಾಶವಾಗಿವೆ.
ಚಿತ್ರಕೃಪೆ: Dr Murali Mohan Gurram
ಆಕರ್ಷಕ ಕಾರ್ಕಳ:
ಅಲುಪರು ಕಾರ್ಕಳವನ್ನಾಳಿದವರಲ್ಲಿ ಮೊದಲಿಗರು. ತದನಂತರ ಸಂತರರು ಆಳ್ವಿಕೆಯನ್ನು ಮುಂದುವರೆಸಿದರು. ಕಾರ್ಕಳದ ರಾಜಮನೆತನ ಹೊಯ್ಸಳರ ಕಾಲದಲ್ಲಿ ಪ್ರಾಧಾನ್ಯ ಪಡೆದುಕೊಂಡಿತು. ಮುಂದೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ತನ್ನ ವೈಭವವನ್ನು ಇನ್ನೂ ವಿಸ್ತರಿಸಿಕೊಂಡಿತು.
ಚಿತ್ರಕೃಪೆ: Dvellakat
ಆಕರ್ಷಕ ಕಾರ್ಕಳ:
ಭೈರರಸರ ಕಾಲದಲ್ಲಿ ಕಾರ್ಕಳವು ಒಂದು ಜೈನಕ್ಷೇತ್ರವಾಗಿ ಮಾರ್ಪಟ್ಟಿತು. ಅವರು ಇಲ್ಲಿ ಸಾಕಷ್ಟು ಬಸದಿಗಳನ್ನೂ, ಕೆರೆಗಳನ್ನೂ ನಿರ್ಮಿಸಿದರು. ಇಂದು ಇಲ್ಲಿ ಅರಸರಿಂದ ಕಟ್ಟಲ್ಪಟ್ಟ ಸುಮಾರು 18 ಬಸದಿಗಳನ್ನು ಕಾಣಬಹುದಾಗಿದೆ. ಅಲ್ಲದೆ ಇಲ್ಲಿರುವ ಬಾಹುಬಲಿಯ ಗೊಮ್ಮಟೇಷವರ ವಿಗ್ರಹವು ಬಲು ಜನಪ್ರೀಯವಾಗಿದೆ.
ಚಿತ್ರಕೃಪೆ: Noeljoe85
ಆಕರ್ಷಕ ಕಾರ್ಕಳ:
ಕಥೆಯ ಪ್ರಕಾರ, ಬಾಹುಬಲಿ 12 ವರ್ಷಗಳ ಕಾಲ ತಪಸ್ಸನ್ನಾಚರಿಸಿದ್ದ ಕಾರಣ ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಮಸ್ತಕಾಭಿಷೇಕವನ್ನು ಆಚರಿಸಲಾಗುತ್ತದೆ ಎಂಬ ಅಭಿಪ್ರಾಯವಿದೆ. ಅಲ್ಲದೆ ಬೃಹತ್ ಗಾತ್ರದ ಮೂರ್ತಿಗೆ ಪ್ರತಿ ನಿತ್ಯವೂ ಅಭಿಷೇಕ ಮಾಡುವುದು ಅಸಾಧ್ಯ ಮತ್ತು ಅತಿ ವೆಚ್ಚದಾಯಕವಾದ್ದರಿಂದ 12 ವರ್ಷಗಳಿಗೊಮ್ಮೆ ಅಭಿಷೇಕ ಮಾಡಲಾಗುತ್ತದೆ. ಆ ನೆಪದಲ್ಲಿ ಮೂರ್ತಿಯನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಗುತ್ತದೆ.
ಚಿತ್ರಕೃಪೆ: vivek raj
ಆಕರ್ಷಕ ಕಾರ್ಕಳ:
ಈ ಬಾಹುಬಲಿ ಪ್ರತಿಮೆಯು ರಾಜ್ಯದ ಎರಡನೆಯ ಅತಿ ಎತ್ತರದ ಬಾಹುಬಲಿ ಪ್ರತಿಮೆಯಾಗಿದೆ. ಮೊದಲನೆಯ ಎತ್ತರದ ಪ್ರತಿಮೆಯು ಹಾಸನದ ಶ್ರವಣಬೆಳಗೋಳದಲ್ಲಿದೆ. ಕಾರ್ಕಳ ತಾಲೂಕಿನಲ್ಲಿ ಹಿಂದೂ-ಕ್ರೈಸ್ತ-ಮುಸಲ್ಮಾನ-ಜೈನ ಧರ್ಮಗಳು ಸಾಮರಸ್ಯದಿಂದ ಪರಿ ಪಾಲಿಸಲ್ಪಡುತ್ತವೆ.
ಆಕರ್ಷಕ ಕಾರ್ಕಳ:
ಕಾರ್ಕಳವು ಜೈನಕಾಶಿ ಎಂದೇ ಖ್ಯಾತಿ ಪಡೆದಿರುವುದರಿಂದ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜೈನಧರ್ಮೀಯರು ವಾಸವಾಗಿದ್ದಾರೆ. ಸಾಕಷ್ಟು ಜೈನ ಬಸದಿಗಳು ಇಲ್ಲಿದ್ದು ಅವುಗಳಲ್ಲಿ ಚತುರ್ಮುಖ ಬಸದಿಯು ತನ್ನ ವಾಸ್ತುಶಿಲ್ಪದ ಹಿರಿಮೆಯಿಂದಾಗಿ ಹೆಚ್ಚು ಪ್ರಸಿದ್ಧಿ ಪಡೆದಿದೆ.
ಚಿತ್ರಕೃಪೆ: Shiva shankar
ಆಕರ್ಷಕ ಕಾರ್ಕಳ:
ಕಾರ್ಕಳದ ಅನಂತಪದ್ಮನಾಭ ದೇವಸ್ಥಾನ, ಪಡುತಿರುಪತಿ ಎಂದೇ ಖ್ಯಾತವಾದ ವೆಂಕಟರಮಣ ದೇಗುಲ ಕಾರ್ಕಳದಲ್ಲಿರುವ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಮುಖವಾದವುಗಳಾಗಿವೆ. ಕಾರ್ಕಳದಲ್ಲಿರುವ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ.
ಚಿತ್ರಕೃಪೆ: Shiva shankar
ಆಕರ್ಷಕ ಕಾರ್ಕಳ:
ಕಾರ್ಕಳದ ಅತ್ತೂರಿನ ಚರ್ಚ್(ಇಗರ್ಜಿ) ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೇ ಕ್ರೈಸ್ತರಲ್ಲಿ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ.
ಚಿತ್ರಕೃಪೆ: Arun Keerthi K. Barboza
ಆಕರ್ಷಕ ಕಾರ್ಕಳ:
ತುಳುನಾಡಿನಲ್ಲಿರುವುದರಿಂದ ಇಲ್ಲಿ ತುಳುವೇ ಪ್ರಮುಖ ಆಡುಭಾಷೆಯಾಗಿದೆ. ಅಲ್ಲದೆ ಇಲ್ಲಿ ಕನ್ನಡವೂ ಸಹ ಪ್ರಮುಖ ಭಾಷೆಯಾಗಿದ್ದು, ಕೊಂಕಣಿ, ಮರಾಠಿ, ಉರ್ದು, ಬ್ಯಾರಿ ಭಾಷೆಗಳೂ ಸಹ ಚಾಲ್ತಿಯಲ್ಲಿವೆ.
ಚಿತ್ರಕೃಪೆ: Philip Tellis
ಆಕರ್ಷಕ ಕಾರ್ಕಳ:
ಇನ್ನೂ ಸಂಪ್ರದಾಯದೆಡೆ ನೋಡಿದಾಗ ಹುಲಿವೇಷವು ಇಲ್ಲಿನ ಆಚರಣೆಗಳಲ್ಲಿ ಪ್ರಮುಖವಾಗಿದ್ದು ದಸರಾ ಮತ್ತು ಶ್ರೀಕೃಷ್ಣಜನ್ಮಾಷ್ಟಮಿ ಸಮಯಗಳಲ್ಲಿ ಇದನ್ನು ಆಯೋಜಿಸಲಾಗುತ್ತದೆ. ತುಳುನಾಡಿನ ಬಹುಪ್ರಮುಖ ಆಚರಣೆಯಾದಂತಹ ಭೂತದ ಕೋಲವನ್ನೂ ಸಹ ಇಲ್ಲಿ ಪಾಲಿಸಲಾಗುತ್ತದೆ. ಕಂಬಳ ಕೂಡ ಒಂದು ಆಕರ್ಷಕ ಕ್ರೀಡಾ ಚಟುವಟಿಕೆಯಾಗಿದೆ.
ಚಿತ್ರಕೃಪೆ: B B Susheel Kumar