ರಾಜ್ಯ : ಕರ್ನಾಟಕ
ಜಿಲ್ಲೆ : ಮಂಡ್ಯ
ಹತ್ತಿರದ ಪಟ್ಟಣ : ಮೈಸೂರು
ವಿಶೇಷತೆ : "ಬೈರಾಗಿ ವೆಂಕಟರಮಣ" ನೆಂದು ಕರೆಯಲ್ಪಡುವ ಕರಿಗಿರಿವಾಸನ ದಿವ್ಯ ಸನ್ನಿಧಿಯಲ್ಲಿರುವ ವೆಂಕಟ ರಮಣನ ದೇವಾಲಯ ಹಾಗೂ ಈ ವೆಂಕಟರಮಣನ ಕೃಪೆಯಿಂದ ಜೀವನದಲ್ಲಿ ಎದುರಾಗುವ ಎಲ್ಲ ಕಹಿ ಘಟನೆಗಳು ಮಂಜಿನಂತೆ ಕರಗಿ ಹೋಗುತ್ತವೆಂದು ಹೇಳಲಾಗುತ್ತದೆ.
ಚಿತ್ರಕೃಪೆ: Kannadawiki123
ಪರಿಚಯ
ಮಂಡ್ಯ ಜಿಲ್ಲೆಯು ಧಾರ್ಮಿಕವಾಗಿ ಬಲು ಪ್ರಸಿದ್ಧಿ ಪಡೆದಿರುವ ನಾಡು. ಇಲ್ಲಿ ಸಾಕಷ್ಟು ಪ್ರಾಮುಖ್ಯತೆಯುಳ್ಳ, ಐತಿಹ್ಯಯುಳ್ಳ ಪುರಾತನ ದೇವಾಲಯಗಳು ವಿವಿಧ ಸ್ಥಳಗಳಲ್ಲಿ ಕಂಡುಬರುತ್ತವೆ. ಅಂತಹ ಒಂದು ಸ್ಥಳವಾಗಿದೆ ಕರಿಘಟ್ಟ. ಮಂಡ್ಯ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಈ ಬೆಟ್ಟವು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಿಂದ ಕೆಲವೆ ಕೆಲವು ಕಿ.ಮೀ ಗಳಷ್ಟು ದೂರದಲ್ಲಿದೆ.
ಬೆಂಗಳೂರು-ಮೈಸೂರು ಹೆದ್ದಾರಿ ಮೇಲೆ ಸಾಗುವಾಗ ಇನ್ನೇನು ಶ್ರೀರಂಗಪಟ್ಟಣ ಬರುತ್ತಿರುವಂತೆಯೆ ಮುಖ್ಯ ಹೆದ್ದಾರಿ ತೊರೆದು ಎಡ ತಿರುವು ಪಡೆದು ಕೆಲವು (ಆರು ಕಿ.ಮೀ) ಕಿ.ಮೀ ಸಾಗಿ ಕರಿಘಟ್ಟವನ್ನು ಸುಲಭವಾಗಿ ತಲುಪಬಹುದು. ಕರ್ನಾಟಕದ ಬಹುಜನರಿಗೆ ಈ ಪವಿತ್ರ ಬೆಟ್ಟದ ಕುರಿತು ತಿಳಿದಿಲ್ಲ. ಅದರಲ್ಲೂ ವಿಶೇಷವಾಗಿ ಇದನ್ನು ಚಿಕ್ಕ ತಿರುಪತಿ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆನ್ನುವ ವಿಷಯ ಬಹಳಷ್ಟು ಜನರಿಗೆ ಗೊತ್ತಿಲ್ಲ.
ಚಿತ್ರಕೃಪೆ: Akashbalakrishna
ಪೌರಾಣಿಕ ಹಿನ್ನೆಲೆ
ತ್ರೇತಾಯುಗದಲ್ಲಿ ರಾಮನು ಸೀತೆಯನ್ನು ಹಿಂತಿರುಗಿ ತರಲೆಂದು ಲಂಕೆಗೆ ಹೋಗುವಾಗ ಸಮುದ್ರವು ತಡೆಯೊಡ್ಡಿತ್ತು. ಅದರ ಮೇಲೆ ಸಾಗಲು ಸೇತುವೆ ನಿರ್ಮಿಸುವ ಕುರಿತು ನಿರ್ಧರಿಸಲಾಯಿತು. ಅದರಂತೆ ಕಪಿ ಸೈನ್ಯದ ವೀರಾಧಿವೀರರೆಲ್ಲ ಸೇತುವೆ ನಿರ್ಮಿಸುವ ಉದ್ದೇಶದಿಂದ ಚಿಕ್ಕ ಪುಟ್ಟ ಗುಡ್ಡಗಳನ್ನೆಲ್ಲೆ ತರಲು ಪ್ರಾರಂಭಿಸಿದರು.
ಸುಗ್ರೀವನು ಶೇಷಾಚಲ ಬೆಟ್ಟ ಶ್ರೇಣಿಯಲ್ಲಿದ್ದ ನೀಲಾಚಲ ಬೆಟ್ಟದಿಂದ ಪ್ರಭಾವಿತನಾಗಿ ಅದನ್ನು ಬುಡ ಮೆಲು ಮಾಡಿ ಕೊಂಡೊಯ್ಯ ತೊಡಗಿದನು. ಹೀಗೆ ಸಾಗುವಾಗ ಪ್ರಸ್ತುತ ಈ ಗಿರಿಯಿರುವ ಸ್ಥಳದ ಮೂಲಕ ಹಾದು ಹೋಗುತ್ತಿದ್ದನು. ಇದೆ ಸಂದರ್ಭದಲ್ಲಿ ಹಲವಾರು ಋಷಿಗಳು ವಿಷ್ಣುವಿನನ್ನು ಧ್ಯಾನಿಸುತ್ತಿದ್ದರು. ಅವರಿಗೆ ಸುಗ್ರೀವನು ಹೊತ್ತೊಯ್ಯುತಿರುವ ಬೆಟ್ಟದ ಕುರಿತು ತಿಳಿಯಿತು.
ತಕ್ಷಣ ಅವರೆಲ್ಲ ಸೇರಿ ಸುಗ್ರೀವನನ್ನು ತಡೆದು ಆ ನೀಲಾಚಲದ ಮಹಿಮೆ ಹಾಗೂ ಹಿರಿಮೆಯನ್ನು ವಿವರಿಸಿ ಅದನ್ನು ಸೇತುವೆ ಕಟ್ಟಲು ಬಳಸದಿರುವಂತೆ ವಿನಂತಿಸಿದರು. ಸುಗ್ರೀವನು ಆ ಬೆಟ್ಟವನ್ನಲ್ಲೆ ಬಿಟ್ಟು ಬೇರೆಡೆ ಹುಡುಕಾಡಲು ಸಾಗಿದನು. ಹೀಗೆ ಇಲ್ಲಿ ನೆಲೆ ನಿಂತ ಆ ನಿಲಾಚಲ ಬೆಟ್ಟವೆ ಇಂದು ಕರಿಘಟ್ಟ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.
ಕರಿಘಟ್ಟದ ಮೇಲಿಂದ ಲೋಕಪಾವನಿ ನದಿ, ಚಿತ್ರಕೃಪೆ: Nagesh Kamath
ಅಲ್ಲದೆ ಏಳು ಬೆಟ್ಟಗಳ ಒಡೆಯನ ಹಾಗೆ ಇಲ್ಲಿಯೂ ಸಹ ವೆಂಕಟರಮಣನು ಬೆಟ್ಟದ ಮೇಲೆ ನೆಲೆಸಿರುವುದಲ್ಲದೆ ಬೆಟ್ಟವು ಹೆಚ್ಚಾಗಿ ಕಪ್ಪು ಬಣ್ಣದಿಂದಲೆ ಕೂಡಿರುವುದರಿಂದ ಕರಿಗಿರಿವಾಸ ಎಂಬ ಹೆಸರಿನಿಂದ ಕರೆಯಲ್ಪಡುತ್ತಾನೆ. ಇನ್ನೊಂದು ವಿಶೇಷವೆಂದರೆ ಲೋಕಪಾವನಿ ನದಿ ತಟದ ಮೇಲೆ ನೆಲೆಸಿರುವ ಈ ಪ್ರದೇಶದಲ್ಲಿ ಕಂಡುಬರುವ ಏಕೈಕ ಬೆಟ್ಟ ರಚನೆ ಇದಾಗಿದೆ. ಇದೊಂದು ರೀತಿಯಲ್ಲಿ ಕುತೂಹಲ ಮೂಡಿಸುತ್ತದೆ.
ಮತ್ತಷ್ಟು ಕಥೆಗಳು!
ಹಿಂದೆ ಈ ಬೆಟ್ಟ ಪ್ರದೇಶದಲ್ಲಿ ಕರಿ ಎಂಬ ಹೆಸರಿನ ಕಾಡಾನೆಯೊಂದು ವಿಷ್ಣು ಭಕ್ತರು ಕೊಳವೊಂದರಲ್ಲಿ ಸ್ನಾನ ಮಾಡುತ್ತಿರುವಾಗ ಅವರನ್ನು ಸಾಯಿಸಿತ್ತು. ಕೌಸ್ತುಭ ಮುನಿಗಳು ಇದರಿಂದ ಬೇಸರಗೊಂಡು ವಿಷ್ಣುವಿನನ್ನು ಬೇಡಿದಾಗ ವಿಷ್ಣು ತನ್ನ ಭಕ್ತರಿಗೆ ಜೀವನವನ್ನು ಮರುದಾನವಾಗಿ ನೀಡಿದ್ದನು. ನಂತರ ಈ ಪ್ರದೇಶಕ್ಕೆ ಕರಿಘಟ್ಟ ಎಂಬ ಹೆಸರು ಬಂದಿತೆನ್ನಲಾಗಿದೆ.
ಕಂಡೂ ಕಾಣದಂತಿರುವ ಪಾಂಡವಪುರ ವಿಶೇಷ
ಈ ದೇವಸ್ಥಾನದ ಸುತ್ತಲು ದರ್ಬೆ ಹುಲ್ಲು ಹೇರಳವಾದ ಪ್ರಮಾಣದಲ್ಲಿ ಸಿಗುತ್ತವೆ. ವಿಶೇಷವೆಂದರೆ ಆ ಹುಲ್ಲು ಈ ನಿರ್ದಿಷ್ಟ ಸ್ಥಳವೊಂದರಲ್ಲಿ ಮಾತ್ರವೆ ಕಂಡುಬರುತ್ತದಂತೆ! ಇದಕ್ಕೆ ಕಾರಣವು ವರಾಹ ಪುರಾಣದಲ್ಲಿ ಸಿಗುತ್ತದೆಂದು ಹೇಳಲಾಗುತ್ತದೆ. ಅದರ ಪ್ರಕಾರ, ವರಾಹ ಅವತಾರದಲ್ಲಿದ್ದ ವಿಷ್ಣು ತನ್ನ ಮೈಯನ್ನೊಮ್ಮೆ ಅಲುಗಾಡಿಸಿದಾಗ ವರಾಹದ ಮೇಲಿದ್ದ ರೋಮಗಳು ಈ ಸ್ಥಳದಲ್ಲಿ ಬಿದ್ದು ಇಂದು ಅವು ಗರಿಕೆಗಳಾಗಿವೆಯಂತೆ!
ವೈಖಾನಸ ಮುನಿಗಳು ಶಿಷ್ಯರೊಂದಿಗೆ, ಚಿತ್ರಕೃಪೆ: Debanjon
ಪ್ರತಿ ವರ್ಷವೂ ಇಲ್ಲಿ ಅದ್ದೂರಿಯಾಗಿ ರಥೋತ್ಸವ ನಡೆಯುತ್ತದೆ. ಮೊದಲ ಬಾರಿಗೆ ಇಲ್ಲಿನ ವೆಂಕಟರಮಣನಿಗೆ ರಥೋತ್ಸವನ್ನು ತ್ರೇತಾಯುಗದಲ್ಲಿ ವೈಖಾನಸ ಮುನಿಗಳು ಕುಂಭ ಮಾಸದ ಉತ್ತರ ಫಾಲ್ಗುಣ ನಕ್ಷತ್ರದ ದಿನದಂದು ನೆರವೇರಿಸಿದ್ದರು. ಅಂದಿನಿಂದಲೂ ಇಲ್ಲಿ ರಥೋತ್ಸಚ ನಡೆಯುತ್ತಲೆ ಬಂದಿದೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಈ ಉತ್ಸವ ಫೆಬ್ರುವರಿ-ಮಾರ್ಚ್ ಸಮಯದಲ್ಲಿ ಬರುತ್ತದೆ.
ಹೀಗೆ ಬನ್ನಿ
ಬೆಂಗಳೂರು-ಮೈಸೂರು ಹೆದ್ದಾರಿ ಮೇಲೆ ಸಾಗುವಾಗ ಇನ್ನೇನು ಶ್ರೀರಂಗಪಟ್ಟಣ ಬರುತ್ತಿರುವಂತೆಯೆ ಮುಖ್ಯ ಹೆದ್ದಾರಿ ತೊರೆದು ಎಡ ತಿರುವು ಪಡೆದು ಕೆಲವು (ಆರು ಕಿ.ಮೀ) ಕಿ.ಮೀ ಸಾಗಿ ಕರಿಘಟ್ಟವನ್ನು ಸುಲಭವಾಗಿ ತಲುಪಬಹುದು. ದೇವಾಲಯ ತಲುಪಲು ಸುಮಾರು 300 ಮೆಟ್ಟಿಲುಗಳಿದ್ದು ಅದರ ಮುಲಕ ಸುಲಭವಾಗಿ ಏರಬಹುದು. ಇಲ್ಲವಾದಲ್ಲಿ ಮುಂದೆ ಸಾಗುವ ರಸ್ತೆಯನ್ನು ಬಳಸಿಯೂ ಸಹ ಬೆಟ್ಟವನ್ನೇರಬಹುದು.
ಆದಿ, ಮಧ್ಯ, ಅಂತ್ಯ ರಂಗಗಳ ಶ್ರೀರಂಗನಾಥ