ಕೇರಳ ರಾಜ್ಯದಲ್ಲಿರುವ ಒಟ್ಟು 14 ಜಿಲ್ಲೆಗಳ ಪೈಕಿ ಒಂದಾಗಿರುವ ಇಡುಕ್ಕಿ ಜಿಲ್ಲೆಯು ಪ್ರವಾಸಿ ಮಹತ್ವ ಪಡೆದಿರುವ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಪ್ರಮುಖವಾಗಿರುವ ಪೆರಿಯಾರ್ ನದಿಯಿಂದ ಹಿಡಿದು ಇಡುಕ್ಕಿ ಆರ್ಚ್ ಡ್ಯಾಮ್ ವರೆಗೆ, ಮುನ್ನಾರ್ ನಂತಹ ಅದ್ವಿತಿಯ ಪ್ರಕೃತಿ ಸೌಂದರ್ಯ ತಾಣದಿಂದ ಹಿಡಿದು ತಟ್ಟೆಕಾಡು ವನ್ಯ ಜೀವಿಧಾಮದವರೆಗೆ ಹಲವು ವೈವಿಧ್ಯಮಯ ಆಕರ್ಷಣೆಗಳನ್ನು ಈ ಜಿಲ್ಲೆಯಲ್ಲಿ ಕಾಣಬಹುದಾಗಿದೆ.
ಜನವರಿ 26, 1972 ರಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಜಿಲ್ಲೆಯು ಭೌಗೋಳಿಕವಾಗಿ ಕೇರಳದ ಎರಡನೇಯ ಅತಿ ದೊಡ್ಡ ಜಿಲ್ಲೆಯಾಗಿದೆ. (ಮೊದಲನೇಯ ಅತಿ ದೊಡ್ಡ ಜಿಲ್ಲೆ ಪಾಲಕ್ಕಾಡ್). ಹೆಚ್ಚಾಗಿ ಗಿರಿ ಪರ್ವತಗಳು, ಕಾಡು ಪ್ರದೇಶವನ್ನೆ ಹೊಂದಿರುವ ಈ ಜಿಲ್ಲೆಯು ಪ್ರಕೃತಿಕ ಸಂಪತ್ತಿನಿಂದ ಸಂಪದ್ಭರಿತವಾಗಿದ್ದು, ಪ್ರಕೃತಿ ಪ್ರಿಯ ಪ್ರವಾಸಿಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಪ್ರಕೃತಿ ಸೌಂದರ್ಯ ಮಡುಗಟ್ಟಿರುವ ಇಡುಕ್ಕಿ ಜಿಲ್ಲೆಯ ಅಮೋಘ ಸೌಂದರ್ಯವನ್ನು ಈ ಲೇಖನದ ಸ್ಲೈಡುಗಳ ಮೂಲಕ ನಿಮ್ಮ ಕಣ್ಣಾರೆ ಸವಿಯಿರಿ.
ಇಡುಕ್ಕಿ ಜಿಲ್ಲೆ:
ಇಡುಕ್ಕಿಯಲ್ಲಿ ಅತಿದೊಡ್ಡ ಪರ್ವತಗಳ ಸಾಲಿನಲ್ಲಿ ಮಂಚೂಣಿಯಲ್ಲಿರುವ ಆನಮುಡಿ ಶಿಖರವನ್ನು ಕಾಣಬಹುದಾಗಿದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ವಿಶ್ವದ ಎರಡನೇ ಅತೀದೊಡ್ಡ ಕಮಾನು ಆಣೆಕಟ್ಟು (ಆರ್ಚ್ ಡ್ಯಾಮ್) ಇಲ್ಲಿದೆ.
ಚಿತ್ರಕೃಪೆ: aphotoshooter
ಇಡುಕ್ಕಿ ಜಿಲ್ಲೆ:
ಇಡುಕ್ಕಿಯಲ್ಲಿರುವ ಕಾಡುಗಳು ಜಿಲ್ಲೆಯ ಕಂಗೊಳಿಸುವ ಸಂಪತ್ತಾಗಿದ್ದು ತೇಗ, ಗಂಧ, ರೋಸ್ವುಡ್ನಂತಹ ಬೆಲೆಬಾಳುವ ಮರಗಳು ಇಲ್ಲಿನ ಕಾಡುಗಳಲ್ಲಿ ಅವ್ಯಾಹತವಾಗಿ ಕಂಡುಬರುತ್ತವೆ. ಜಿಲ್ಲೆಯ ಆರ್ಥಿಕ ಸ್ಥಿತಿ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನೂ ನೀಡುತ್ತಿವೆ.
ಚಿತ್ರಕೃಪೆ: Dhruvaraj S
ಇಡುಕ್ಕಿ ಜಿಲ್ಲೆ:
ಇಡುಕ್ಕಿ ಆರ್ಚ್ ಡ್ಯಾಮ್ (ಕಮಾನಿನಾಕಾರದಲ್ಲಿ ನಿರ್ಮಿತವಾದ ಆಣೆಕಟ್ಟು) ನಮ್ಮ ದೇಶದ ಹೆಮ್ಮೆಯ ರಚನೆಗಳ ಪೈಕಿ ಒಂದಾಗಿದೆ. ಕುರುವನಮಲ ಹಾಗೂ ಕುರತಿಮಲ ಎಂಬ ಎರಡು ಗುಡ್ಡಗಳ ಮಧ್ಯದಲ್ಲಿ ನಿರ್ಮಿತವಾಗಿ ಗಂಭೀರವಾಗಿ ಗೋಚರಿಸುವ ಈ ಆಣೆಕಟ್ಟು 168.91 ಮೀ.(554 ಅಡಿಗಳು) ಗಳಷ್ಟು ಎತ್ತರವಾಗಿದೆ.
ಚಿತ್ರಕೃಪೆ: Sreejithk2000
ಇಡುಕ್ಕಿ ಜಿಲ್ಲೆ:
ಪೆರಿಯಾರ್ ನದಿಗೆ ಅಡ್ಡಲಾಗಿ ಕಟ್ಟಲಾದ ಈ ಕಮಾನು ಆಣೆಕಟ್ಟು ಜಲ ವಿದ್ಯುತ್ ಉತ್ಪಾದನೆಯ ಭಾಗವಾಗಿದ್ದು ಏಷಿಯಾ ಖಂಡದಲ್ಲಿ ಕಂಡುಬರುವ ಅತಿ ದೊಡ್ಡ ಆರ್ಚ್ ಆಣೆಕಟ್ಟುಗಳ ಪೈಕಿ ಒಂದಾಗಿದೆ ಹಾಗೂ ಮೂರನೇಯ ಅತಿ ದೊಡ್ಡ ಕಮಾನು ಆಣೆಅಕಟ್ಟು ಎಂಬ ಪಟ್ಟ ಹೊಂದಿದೆ.
ಚಿತ್ರಕೃಪೆ: Jayeshj
ಇಡುಕ್ಕಿ ಜಿಲ್ಲೆ:
ಮೂಲವಾಗಿ ಈ ಆಣೆಕಟ್ಟನ್ನು ಚೆರಿತೋಣಿ ಹಾಕುಲುಮಾವು ಗಳೆಂಬ ಎರಡು ಪ್ರದೇಶಗಳಲ್ಲಿ ಕಟ್ಟಲಾದ ಇತರೆ ಎರಡು ಆಣೆಕಟ್ಟುಗಳ ಜೊತೆಯಲ್ಲೆ ನಿರ್ಮಿಸಲಾಗಿದೆ. ಆದ್ದರಿಂದ ಈ ಮೂರು ಆಣೆಕಟ್ಟುಗಳು ಸೇರಿ ಒಂದು ಬೃಹತ್ತಾದ 60 ಚ.ಕಿ.ಮೀ ವಿಶಾಲವಾಗಿ ಹರಡಿರುವ ಕೃತಕ ಕೆರೆಯನ್ನು ನಿರ್ಮಿಸಿವೆ.
ಚಿತ್ರಕೃಪೆ: Seb Powen
ಇಡುಕ್ಕಿ ಜಿಲ್ಲೆ:
ಮೊದಲು ಭದ್ರತಾ ದೃಷ್ಟಿಯಿಂದ ಈ ಆಣೆಕಟ್ಟೆಗೆ ಪ್ರವೇಶಿಸಲು ಸಾರ್ವಜನಿಕರಿಗೆ ಅನುಮತಿಯಿರಲಿಲ್ಲ. ಕಾಲಕ್ರಮೇಣ ಈ ನಿಷೇಧವನ್ನು ತೆರವುಗೊಳಿಸಿ ರಾಜ್ಯದ ಪ್ರಮುಖ ಪ್ರವಾಸಿ ಹಬ್ಬವಾದ "ಓಣಂ" ಸಂದರ್ಭದಲ್ಲಿ ಒಂದು ತಿಂಗಳ ಕಾಲ ನಿಗದಿಪಡಿಸಲಾದ ಶುಲ್ಕಕ್ಕೆ ಇಲ್ಲಿ ಪ್ರವೇಶಿಸಲು ಅನುವು ಮಾಡಿಕೊಡಲಾಗಿದೆ.
ಚಿತ್ರಕೃಪೆ: Ramesh NG
ಇಡುಕ್ಕಿ ಜಿಲ್ಲೆ:
ಕುರುವನ್ ಮತ್ತು ಕುರತಿ ಪ್ರತಿಮೆಗಳು. ಕಥೆಯ ಪ್ರಕಾರ, ಈ ಜೊತೆಯು ಜಲಾಶಯ ನಿರ್ಮಿಸಲು ಜಾಗ ತೋರಿಸಿದರು. ಅವರಿಗೆ ಗೌರವ ಸೂಚಕವಾಗಿ ಇಡುಕ್ಕಿ ಜಲಾಶಯದ ಬಳಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.
ಚಿತ್ರಕೃಪೆ: Anoop Joy
ಇಡುಕ್ಕಿ ಜಿಲ್ಲೆ:
ಹತ್ತಿರದಲ್ಲೆ ಇರುವ ಇಡುಕ್ಕಿ ಕಣಿವೆಯು ಒಂದು ಸುಂದರವಾದ ಚಿಕ್ಕ ಪಟ್ಟಣವಾಗಿದ್ದು, ನಿಸರ್ಗ ಸೌಂದರ್ಯದಿಂದ ಕೂಡಿದ ಪ್ರದೇಶವಾಗಿದೆ. ದಟ್ಟ ಹಸಿರು, ಶುಭ್ರ ವಾತಾವರಣ, ಹಿತಕರವಾದ ಪರಿಸರ, ಎಲ್ಲೆಲ್ಲೂ ಗೋಛರಿಸುವ ಗಿಡ ಮರಗಳು ಈ ಒಂದು ಕಣಿವೆಯನ್ನು ಧರೆಗಿಳಿದ ಸ್ವರ್ಗದಂತೆ ಮಾಡಿದೆ. ಇದು ಕೊಟ್ಟಾಯಂ ನಿಂದ 121 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: green umbrella
ಇಡುಕ್ಕಿ ಜಿಲ್ಲೆ:
ತಟ್ಟೆಕಾಡು ಪಕ್ಷಿಧಾಮ ಇಡುಕ್ಕಿ ಜಿಲ್ಲೆಯಲ್ಲಿರುವ ಅದ್ಭುತ ಪಕ್ಷಿಧಾಮವಾಗಿದೆ. ಇದರ ಪ್ರತಿಷ್ಠೆ ಎಷ್ಟಿದೆ ಎಂದರೆ ಸ್ವತಃ ಭಾರತದ ಖ್ಯಾತ ಪಕ್ಷಿ ತಜ್ಞರಾಗಿದ್ದ ಸಲೀಂ ಅಲಿಯವರು ಈ ಒಂದು ಪಕ್ಷಿಧಾಮವನ್ನು ಪೆನಿನ್ಸುಲಾ ಭಾರತದಲ್ಲಿ ಕಂಡುಬರುವ ಪಕ್ಷಿಗಳಿಂದ ಸಂಪದ್ಭರಿತವಾದ ಧಾಮವೆಂದು ಹೇಳಿದ್ದಾರೆ.
ಚಿತ್ರಕೃಪೆ: Dilshad Roshan
ಇಡುಕ್ಕಿ ಜಿಲ್ಲೆ:
25 ಚ.ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಹೊಂದಿರುವ ಕೇರಳದ ಕೋತಮಂಗಲಂನಿಂದ 12 ಕಿ.ಮೀ ದೂರವಿರುವ ಈ ಪಕ್ಷಿಧಾಮವು ಕೇರಳ ರಾಜ್ಯದ ಪ್ರಪ್ರಥಮ ಪಕ್ಷಿಧಾಮವೆಂಬ ಖ್ಯಾತಿಗೆ ಪಾತ್ರವಾಗಿದೆ.
ಚಿತ್ರಕೃಪೆ: PP Yoonus
ಇಡುಕ್ಕಿ ಜಿಲ್ಲೆ:
ಈ ಸುಂದರ ಪಕ್ಷಿಧಾಮದಲ್ಲಿ ಬಗೆ ಬಗೆಯ ಹಾಗೂ ವಿಶಿಷ್ಟವಾದಂತಹ ಪಕ್ಷಿಗಳನ್ನು ಕಾಣಬಹುದು. ಕೆಲ ಪಕ್ಷಿಗಳಂತೂ ಈ ಪಕ್ಷಿಧಾಮಕ್ಕೆ ಚಳಿಗಾಲದ ಸಮಯದಲ್ಲಿ ಮಾತ್ರ ಭೇಟಿ ನೀಡಿ ಹೆಚ್ಚು ಕಮ್ಮಿ ಆರು ತಿಂಗಳುಗಳಷ್ಟು ಕಾಲ ಇಲ್ಲಿ ಕಳೆಯುತ್ತದೆ.
ಚಿತ್ರಕೃಪೆ: Snowmanradio
ಇಡುಕ್ಕಿ ಜಿಲ್ಲೆ:
ತಟ್ಟೆಕಾಡು ಪಕ್ಷಿಧಾಮದಿಂದ ಕೇವಲ 15 ಕಿ.ಮೀ ಗಳಷ್ಟು ದೂರದಲ್ಲಿ ಎಡಮಲಯಾರ್ ಅರಣ್ಯವಿದೆ. ಈ ನಿತ್ಯಹಸಿರಿನ ಕಾಅಡಿನಲ್ಲಿ ಬೆಟ್ಟದ ರಣ ಹದ್ದುಗಳನ್ನು ಕಾಣಬಹುದು. ಈ ಕಾಡು ಕೂಡ ದಟ್ಟ ಹಸಿರಿನಿಂದ ಆವೃತವಾಗಿದ್ದು ನೋಡಲು ಮನಮೋಹಕವಾಗಿದೆ.
ಚಿತ್ರಕೃಪೆ: Augustus Binu
ಇಡುಕ್ಕಿ ಜಿಲ್ಲೆ:
ಮರಯೂರು, ಇಡುಕ್ಕಿ ಜಿಲ್ಲೆಯ ಮುನ್ನಾರ್ ನಿಂದ 42 ಕಿ.ಮೀ ಗಳಷ್ಟು ದೂರದಲ್ಲಿ ಈ ಪುಟ್ಟ ಹಳ್ಳಿಯು ನೆಲೆಸಿದೆ. ವೈಶಿಷ್ಟ್ಯವೆಂದರೆ ಕೇರಳದ ಈ ಒಂದು ಹಳ್ಳಿಯಲ್ಲಿ ಮಾತ್ರ ನೈಸರ್ಗಿಕವಾಗಿ ಬೆಳೆಯುವ ಚಂದನ ಮರಗಳ ಕಾಡನ್ನು ಕಾಣಬಹುದು.
ಇಡುಕ್ಕಿ ಜಿಲ್ಲೆ:
ಅದ್ಭುತ ಮೈಸಿರಿಯ ತೂವನಂ ಜಲಪಾತ. ಮರಯೂರಿನ ಬಳಿ ಈ ಸುಂದರವಾದ ಜಲಪಾತ ತಾಣವನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Dhruvaraj S
ಇಡುಕ್ಕಿ ಜಿಲ್ಲೆ:
ಅಲ್ಲದೆ ಮರಯೂರಿನಲ್ಲಿ ಲೋಹ ಯುಗಕ್ಕೆ ಸಂಬಂಧಿಸಿದ ಡಾಲ್ಮೆನ್ ಗಳನ್ನು ಕಾಣಬಹುದಾಗಿದೆ. ಈ ಕೌತುಕಮಯ ರಚನೆಗಳು ಸಾಕಷ್ಟು ಜನರನ್ನು ತನ್ನೆಡೆ ಆಕರ್ಷಿಸುತ್ತವೆ. ಸಾಮಾನ್ಯವಾಗಿ ಇವು ಕಲ್ಲಿನ ಹೊದಿಕೆ ಹೊಂದಿರುವ ಅತಿ ಪುರಾತನ ರಚನೆಗಳು. ಮೂಲತಃ ಇವು ದೊಡ್ಡ ಗಾತ್ರದ ಸಮಾಧಿ ಸ್ಮಾರಕಗಳಾಗಿವೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Hairwizard91
ಇಡುಕ್ಕಿ ಜಿಲ್ಲೆ:
ಮುನ್ನಾರ್, ಇಡುಕ್ಕಿ ಜಿಲ್ಲೆಯಲ್ಲಿರುವ ದೇಶವ್ಯಾಪಿ ಖ್ಯಾತಿಗಳಿಸಿರುವ ಅದ್ಭುತ ಪ್ರವಾಸಿ ಕಮ್ ಮಧುಚಂದ್ರದ ತಾಣವಾಗಿ ಕಂಗೊಳಿಸುತ್ತದೆ. ಪಶ್ಚಿಮ ಘಟ್ಟಗಳ ಮೈಸಿರಿಯು ಮೈನೊರೆದು ನಿಂತ ಪ್ರದೇಶವಾಗಿರುವ ಮುನ್ನಾರ್ ಸುಂದರ ಅನುಭೂತಿಯನ್ನು ಭೇಟಿ ನೀಡಿದವರಿಗೆ ಕರುಣಿಸುತ್ತದೆ. [ಮುನ್ನಾರ್ ಕುರಿತು ತಿಳಿಯಿರಿ]
ಚಿತ್ರಕೃಪೆ: Kerala Tourism
ಇಡುಕ್ಕಿ ಜಿಲ್ಲೆ:
ಎರವಿಕುಲಂ, ಇಡುಕ್ಕಿ ಜಿಲ್ಲೆಯಲ್ಲಿರುವ, ಪ್ರವಾಸಿ ಆಕರ್ಷಣೆಯುಳ್ಳ ಒಂದು ರಾಷ್ಟ್ರೀಯ ಉದ್ಯಾನವಾಗಿದೆ. ನೀಲ್ಗಿರಿ ತಾಹ್ರ್ ಅಥವಾ ಕಾಡು ಜಿಂಕೆ ಎಂಬ ಅಪರೂಪದ ಪ್ರಾಣಿಯನ್ನು ಇಲ್ಲಿ ಕಾಣಬಹುದು. ನೀಲ್ಗಿರಿ ಕಾಡು ಜಿಂಕೆ ತಮಿಳುನಾಡು ರಾಜ್ಯದ ರಾಜ್ಯಪ್ರಾಣಿಯಾಗಿದೆ ಎನ್ನುವುದು ತಿಳಿಯಬೇಕಾಗಿರುವ ಸಂಗತಿ.
ಚಿತ್ರಕೃಪೆ: Arun Suresh
ಇಡುಕ್ಕಿ ಜಿಲ್ಲೆ:
ಆನಮುಡಿ, ದಕ್ಷಿಣ ಭಾರತದ ಅತಿ ಎತ್ತರದ ಗಿರಿ ಶಿಖರ. ಭಾರತದಲ್ಲಿ ಹಿಮಾಲಯದ ನಂತರ ದಕ್ಷಿಣದಲ್ಲಿ ಇರುವ ಬೃಹತ್ ಗಿರಿ ಶಿಖರ ಎಂಬ ನಾಮಕ್ಕೆ ಭಾಜನವಾಗಿದೆ ಇಡುಕ್ಕಿ ಜಿಲ್ಲೆಯ ಆನಮುಡಿ ಶಿಖರ.
ಚಿತ್ರಕೃಪೆ: Arunguy2002