ಇದು ಅಂತಿಂಥ ಸಾಮಾನ್ಯವಾದ ಆಣೆಕಟ್ಟೆಯಲ್ಲ. ಸಾಕಷ್ಟು ನೈಪುಣ್ಯತೆಯಿಂದ, ಕುಶಲತೆಯಿಂದ ನಿರ್ಮಿಸಲಾದ ಅದ್ಭುತ ರಚನೆ. ತಾಂತ್ರಿಕವಾಗಿ ಸಾಕಷ್ಟು ಪ್ರಬುದ್ಧವಾಗಿರುವ ರಚನೆ. ಕೇವಲ ಜನೋಪಯೋಗಿ ಅಥವಾ ರೈತೋಪಯಾಗಿಯಾಗಿ ಈ ರಚನೆ ಪ್ರಸಿದ್ಧಿ ಪಡೆದಿಲ್ಲ. ಬದಲಾಗಿ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುವ ಅದ್ಭುತ ಪ್ರವಾಸಿ ತಾಣವಾಗಿಯೂ ಹೆಸರುವಾಸಿಯಾಗಿದೆ.
ಇದೆ ಇಡುಕ್ಕಿ ಆಣೆಕಟ್ಟು ಹಾಗೂ ಜಲಾಶಯ. ಜೋಡಿ ವಕ್ರತೆಯ ಕಮಾನಿನಾಕಾರದ ಆಣೆಕಟ್ಟು ಇದಾಗಿದ್ದು ಎರಡು ಅದ್ಭುತ ಬೆಟ್ಟಗಳ ಮಧ್ಯೆ ಕುಶಲ ತಂತ್ರಗಾರಿಕೆಯಿಂದ ಅದ್ಭುತವಾಗಿ ನಿರ್ಮಿಸಲಾದ ಇಂಜಿನಿಯರಿಂಗ್ ನ ಅದ್ಭುತ ರಚನೆ ಇದಾಗಿದೆ. ಇದು ವಿವಿಧೋದ್ದೇಶದ ಆಣೆಕಟ್ಟಾಗಿದ್ದು ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿಗೆಂದೂ ಸಹ ಬಳಸಲ್ಪಡುತ್ತದೆ.
ಚಿತ್ರಕೃಪೆ: Sreejithk2000
ಒಂದೊಮ್ಮೆ 1920 ರಸಮಯದಲ್ಲಿ ಊರಾಳಿ ಸಮುದಾಯದ ಕೊಲುಂಬನ್ ಎಂಬುವವರು ಮಲಂಕಾರಾ ಎಸ್ಟೇಟಿನ ಮುಖ್ಯಸ್ಥ ಹಾಗೂ ಅವರ ಸ್ನೇಹಿತರಿಗೆ ಮೊದಲ ಬಾರಿ ಈ ಆಣೆಕಟ್ಟು ಇರುವ ಸ್ಥಳವನ್ನು ತೋರಿಸಿದರು. ಆ ಸಮಯದಲ್ಲಿ ಅವರು ಬೇಟೆಗೆಂದು ಇಲ್ಲಿ ಅಲೆದಾಡುತ್ತಿದ್ದರು. ಎಸ್ಟೇಟಿನ ಮುಖ್ಯಸ್ಥರ ಸ್ನೇಹಿತ ಎರಡು ಬೆಟ್ಟಗಳ ಮಧ್ಯದಿಂದು ರಭಸವಾಗಿ ಧುಮುಕುವ ಪೆರಿಯಾರ್ ನದಿಯಿಂದಾಅಕರ್ಷಿತರಾಗಿದ್ದರು.
ಈ ಒಂದು ಸಂದರ್ಭದಲ್ಲೆ ಅವರಿಗೆ ಆಣೆಕಟ್ಟೆಯ ನಿರ್ಮಾಣದ ಉಪಾಯ ಹೊಳೆದದ್ದು. ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಈ ಆಣೆಕಟ್ಟೆಯ ಕುರಿತು ಹಲವು ಬಾರಿ ಕೂಗುಗುಗಳು ಎದ್ದು ಕೊನೆಯದಾಗಿ ತಿರುವಾಂಕೂರಿನ ಸರ್ಕಾರವು ಕೇಂದ್ರ ಜಲ ಆಯೋಗಕ್ಕೆ ಈ ಸ್ಥಳದ ಪರಿಶೀಲನೆ ಹಾಗೂ ಜಲಾಶಯ ನಿರ್ಮಾಣದ ಕುರಿತು ವಿಸ್ತೃತ ವರದಿ ನೀಡಲು ಮನವಿ ಸಲ್ಲಿಸಿತು.
ಚಿತ್ರಕೃಪೆ: Jayeshj
ಅದರಂತೆ ಎಲ್ಲ ಕಾರ್ಯಗಳು ಪೂರ್ಣಗೊಂಡು ಕೊನೆಯದಾಗಿ 30 ಎಪ್ರಿಲ್ 1969 ರಂದು ಈ ಆಣೆಕಟ್ಟೆಯ ನಿರ್ಮಾಣ ಕಾಮಗಾರಿಯು ಪ್ರಾರಂಭವಾಯಿತು. ಸಾಕಷ್ಟು ಕುಶಲ ಅಭಿಯಂತರರು ಈ ನಿರ್ಮಾಣದ ಹಿಂದೆ ಕೆಲಸ ಮಾಡಿದ್ದಾರೆ. ನಂತರ ಕ್ರಮೇಣವಾಗಿ ಒಂದೊಂದೆ ವೈಶಿಷ್ಟ್ಯಗಳನ್ನು ಇದಕ್ಕೆ ಸೇರಿಸಲಾಯಿತು. ಇಲ್ಲಿಂದು ಧುಮುಕುವ ನೀರಿನಿಂದ ವಿದ್ಯುತ್ ಉತ್ಪಾದನೆಯಾಗಿತ್ತದೆ ಹಾಗೂ ಅದನ್ನು ಮೂಲಮಟ್ಟಂ ಎಂಬ ಪ್ರದೇಶದ ಭೂತಳದಲ್ಲಿ ನಿರ್ಮಾಣ ಮಾಡಲಾದ ಶಕ್ತಿಗೃಹದಲ್ಲಿ ಸಂಗ್ರಹಿಸಲಾಗುತ್ತದೆ.
554 ಅಡಿಗಳಷ್ಟು ಅಗಾಧ ಎತ್ತರ ಹೊಂದಿರುವ ಇಡುಕ್ಕಿ ಆಣೆಕಟ್ಟು ಕುರವನಮಲ್ ಹಾಗೂ ಕುರವತಿಮಲ ಎಂಬ ಎರಡು ಬೆಟ್ಟಗಳ ಮಧ್ಯೆ ನಿರ್ಮಾಣಗೊಂಡಿದೆ. ನೋಡಲು ರುದ್ರಭಯಂಕರವಾಗಿ ಕಾಣುವ ಈ ಅದ್ಭುತ ಆಣೆಕಟ್ಟು ಭಾರತದ ಹೆಮ್ಮೆಯ ಇಂಜಿನಿಯರಿಂಗ್ ರಚನೆಗಳಲ್ಲಿ ಒಂದಾಗಿ ಗಮನಸೆಳೆಯುತ್ತದೆ. ಭೂತಳದ ಶಕ್ತಿ ಸಂಗ್ರಹಣಾ ಮನೆಯು ಮೂಲಮಟ್ಟಂನಲ್ಲಿದ್ದು ಅದು ಇಲ್ಲಿಂದ 40 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Rameshng
ಭದ್ರತೆಯ ಕಾರಣಗಳಿಂದಾಗಿ ಮೊದ ಮೊದಲು ಈ ಆಣಕಟ್ಟೆಗೆ ಪ್ರವೇಶಿಸಲು ಅನುಮತಿ ಇರಲಿಲ್ಲ. ಆದರೆ ಈ ಆಣೆಕಟ್ಟೆಯಿಂದ ರೂಪಗೊಂಡ ಭವ್ಯ ಜಲಾಶಯವು ಅದ್ಭುತವಾದ ಸೃಷ್ಟಿ ಸೌಂದರ್ಯದ ದೃಶ್ಯಾವಳಿಗಳಿಂದ ಕೂಡಿದ್ದು ಇದನ್ನು ಪ್ರವಾಸಿ ತಾಣವಾಗಿ ಪರಿವರ್ತಿಸುವ ಕೂಗು ಹೆಚ್ಚಾಯಿತು. ಅಂತೆಯೆ ಪ್ರವಾಸೋದ್ಯಮವನ್ನು ಗಮನದಲ್ಲಿರಿಸಿಕೊಳ್ಳಲಾಯಿತು.
ಆ ಕಾರಣದಿಂದಾಗಿ ಕೇರಳದ ಪ್ರಮುಖ ಉತ್ಸವಗಳಾದ ಓಣಂ ಹಾಗೂ ಕ್ರಿಸ್ಮಸ್ ಸಂದರ್ಭದಲ್ಲಿ ಪ್ರವಾಸಿಗರಿಗೆಂದು ಹತ್ತು ದಿನಗಳ ಕಾಲ ಈ ಜಲಾಶಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಯಿತು ಅದೂ ಶ ನಿಗದಿತ ಶುಲ್ಕಕ್ಕೆ. ಇದರಿಂದ ಪ್ರವಾಸಿ ಚಟುವಟಿಕೆ ಸಾಕಷ್ಟು ಬೆಳೆದಾಗ ಪ್ರಸ್ತುತ ಆ ಸಮಯವನ್ನು ಹತ್ತು ದಿನಗಳ ಬದಲಾಗಿ ಒಂದು ತಿಂಗಳವರೆಗೆ ಏರಿಸಲಾಗಿದೆ.
ಚಿತ್ರಕೃಪೆ: Vipinmeppurathu10
ದೋಣಿ ವಿಹಾರದ ಸೌಲಭ್ಯವನ್ನೂ ಸಹ ನಿಗದಿತ ಶುಲ್ಕಕ್ಕೆ ಒದಗಿಸ್ಲಾಗುತ್ತದೆ. ಇದೊಂದು ರೋಮಾಂಚಕ ಪ್ರವಾಸಿ ಚಟುವಟಿಕೆಯಾಗಿದೆ. ಓಣಂ ಹಾಗೂ ಕ್ರಿಸ್ಮಸ್ ಸಂದರ್ಭದಲ್ಲಿ ಕೇರಳದ ಮೂಲೆ ಮೂಲೆಗಳಿಂದ ಜನಸಾಗರವೆ ಇಡುಕ್ಕಿ ಜಲಾಶಯಕ್ಕೆ ಹರಿದು ಬರುತ್ತದೆ. ಇಲ್ಲಿನ ಅದ್ಭುತ ಆಣೆಕಟ್ಟೆಯನ್ನು ನೋಡುವುದಲ್ಲದೆ ಇಲ್ಲಿನ ಹಿನ್ನೀರಿನಲ್ಲಿ ದೋಣಿ ವಿಹಾರನ್ನೂ ಆನಂದಿಸುತ್ತಾರೆ.
ಹೋಗಲು ಮನ ಚಡಪಡಿಸುವ ಇಡುಕ್ಕಿ
ಇಡುಕ್ಕಿ ಜಿಲ್ಲೆಯಲ್ಲಿರುವ ಈ ಜಲಾಶಯವು ಕಟ್ಟಪ್ಪನ ಎಂಬ ಪಟ್ಟಣದಿಂದ ಕೇವಲ 20 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಸ್ಸುಗಳು ಹಾಗೂ ಬಾಡಿಗೆ ಕಾರುಗಳು ನಿರಾಯಾಸವಾಗಿ ದೊರೆಯುತ್ತವೆ. ಇನ್ನೂ ಕೇರಳದ ಪ್ರಮುಖ ನಗರಗಳಿಂದ ಕಟ್ಟಪ್ಪನಕೆ ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಬೆಂಗಳೂರಿನಿಂದಲೂ ಸಹ ನಿತ್ಯ ರಾತ್ರಿ ಕಟ್ಟಪ್ಪನಕ್ಕೆ ತೆರಳಲು ಬಸ್ಸುಗಳು ದೊರೆಯುತ್ತವೆ.