ಸಾಮಾನ್ಯವಾಗಿ ಸುಂದರತೆಯನ್ನು ಪ್ರತಿನಿಧಿಸುವ ವಸ್ತುಗಳನ್ನು ಸ್ತ್ರೀತನಕ್ಕೆ ಹೋಲಿಸುವುದು ವಾಡಿಕೆ. ಉದಾಹರಣೆಗೆ ಪ್ರಕೃತಿ, ನದಿ, ಕೊಳ, ಕೆರೆ ಮುಂತಾದವುಗಳು. ವಿಶೇಷವಾಗಿ ಕೆರೆಗಳು ನದಿಗಳಂತೆ ಕಡಿಮೆ ಅಗಲವಿರುವ ಹಾಗೂ ಸದಾ ಹರಿಯುತ್ತಿರುವ ನೀರಲ್ಲ. ಬದಲಾಗಿ ಸಾಕಷ್ಟು ವಿಶಾಲವಾಗಿ ವ್ಯಾಪಿಸಿರುತ್ತದೆ.
ಇನ್ನೂ ಕೆರೆಯ ಸುತ್ತಮುತ್ತಲಿನ ಸ್ಥಳದ ಮಣ್ಣಿನಲ್ಲಿ ತೇವಾಂಶವಿದ್ದು ಅಲ್ಲಿ ಗಿಡ-ಮರಗಳು ಸಾಮಾನ್ಯವಾಗಿ ಬೆಳೆದಿರುತ್ತವೆ. ಹಾಗಾಗಿ ಕೆರೆಯು ತನ್ನ ಸುತ್ತಮುತ್ತಲು ದಟ್ಟ ಹಸಿರಿನಿಂದ ಕೂಡಿರುವ ಗಿಡ-ಮರಗಳಿಂದ ಆವೃತವಾಗಿರುವುದರಿಂದ ಪ್ರಾಕೃತಿಕ ಸೌಂದರ್ಯದಿಂದ ಕೂಡಿರುತ್ತದೆ. ಕವಿಗಳು ಸಾಮಾನ್ಯವಾಗಿ ಕೆರೆಗಳ ಈ ಸೌಂದರ್ಯವನ್ನು ಸ್ತ್ರೀತನಕ್ಕೆ ಹೋಲಿಸುವುದಿದೆ.
ಬೆಂಗಳೂರಿನ ಕೆರೆಗಳು ಹಾಗು ಕಂಡುಬರುವ ಪಕ್ಷಿಗಳು
ಅಲ್ಲದೆ, ಪ್ರವಾಸಿ ದೃಷ್ಟಿಯಿಂದ ನೋಡಿದಾಗ ಯಾವುದೆ ಕೆರೆಗಳಿರಲಿ ಒಂದು ಆಕರ್ಷಕ ತಾಣವಾಗಿ ಗಮನಸೆಳೆಯುತ್ತವೆ. ಪಿಕ್ನಿಕ್ ಗೆಂದು ಹೇಳಿ ಮಾಡಿಸಿದ ಕೇಂದ್ರಗಳಾಗಿ ಬಿಡುತ್ತವೆ. ವಾರಾಂತ್ಯದ ಸಮಯದಲ್ಲೊ ಅಥವಾ ಬಿಡುವಿದ್ದಾಗಲೊ ಕುಟುಂಬ ಸಮೇತರಾಗಿ ಇಲ್ಲವೆ ಸ್ನೇಹೊತರೊಡನೆ ಅದೂ ಸಾಧ್ಯವಿಲ್ಲವೆಂದರೆ ಏಕಾಂಗಿಯಾಗಿಯೆ ಕೆರೆಗಳಿಗೆ ಭೇಟಿ ನೀಡಿ ಒಂದಿಷ್ಟು ಸಮಯ ಕಳೆಯುವುದೆಂದರೆ ಮನಸ್ಸಿಗೆ ನಿರಾಳತೆಯ ಅನುಭವ ಉಂಟಾಗುವುದರಲ್ಲಿ ಸಂಶಯವೆ ಇಲ್ಲ. ಪ್ರಸ್ತುತ ಲೇಖನದಲ್ಲಿ ನೀವು ಭೇಟಿ ನೀಡಲು ಇಷ್ಟ ಪಡುವ ಕೆಲವು ಆಯ್ದ ಕೆರೆಗಳ ಕುರಿತು ತಿಳಿಸಲಾಗಿದೆ. ಎಲ್ಲವೂ ಇರುವುದು ನಮ್ಮ ಕರ್ನಾಟಕದಲ್ಲೆ!
ರಾಮನಗರ
ತಟ್ಟೆಕೆರೆ ಎಂಬುದು ಕರ್ನಾಟಕದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿರುವ ಒಂದು ಗ್ರಾಮ. ಈ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕೆರೆಯನ್ನು ತಟ್ಟೆಕೆರೆ ಎಂದೆ ಕರೆಯಲಾಗುತ್ತದೆ. ಬೆಂಗಳೂರಿನಿಂದ ಕೇವಲ 40 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Unni.hariharan
ಮಹದೇಶ್ವರ ದೇವಾಲಯ
ಪಕ್ಷಿವೀಕ್ಷಣೆಗೂ ಸಹ ಆದರ್ಶಮಯ ಸ್ಥಳವಾಗಿರುವ ತಟ್ಟೆಕೆರೆ ಪಶ್ಚಿಮದಲ್ಲಿ ಬನ್ನೇರುಘಟ್ಟ ರಾಶ್ಟ್ರೀಯ ಉದ್ಯಾನದ ಆನೆಗಳ ವಿಹಾರ ಸ್ಥಳವಿದ್ದು ಅಲ್ಲಿ ಮಹದೇಶ್ವರನ ದೇವಾಲಯವಿದೆ.
ಚಿತ್ರಕೃಪೆ: Unni.hariharan
ಬೀದರ್
ಕರ್ನಾಟಕದ ಉತ್ತರದ ತುದಿಯಲ್ಲಿ ಸ್ಥಿತವಿರುವ ಬೀದರ್ ಜಿಲ್ಲೆಯ ಬೀದರ್ ನಗರದಿಂದ 18 ಕಿ.ಮೀ ಗಳಷ್ಟು ದೂರದಲ್ಲಿರುವ ಬ್ಲ್ಯಾಕ್ ಬಕ್ ರಿಸಾರ್ಟ್ ಒಂದು ಪ್ರವಾಸಿ ತಾಣವಾಗಿದೆ. ಇಲ್ಲಿರುವ ಕೆರೆಯು ಇದರ ಅಂದಚೆಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಚಿತ್ರಕೃಪೆ: Santosh3397
ರಾಯಚೂರು
ಹೈದರಾಬಾದ್ ಕರ್ನಾಟಕದ ಭಾಗವಾಗಿರುವ ರಾಯಚೂರು ನಗರ ಪ್ರದೇಶದಲ್ಲಿರುವ ಅದ್ಭುತ ಪಿಕ್ನಿಕ್ ಸ್ಥಳವಾಗಿ ಮಾವಿನ ಕೆರೆ ಪ್ರಸಿದ್ಧಿ ಪಡೆದಿದೆ. ಆಮ್ ತಲಾಬ್ ಎಂತಲೂ ಕರೆಯಲಾಗುವ ಈ ಕೆರೆತು ಮಾವಿನ ಹಣ್ಣಿನ ಆಕಾರದಲ್ಲಿರುವುದರಿಂದ ಮಾವಿನ ಕೆರೆ ಎಂಬ ಹೆಸರು ಬಂದಿದೆ. ಸಂಜೆಯ ಹಾಗೂ ಬೆಳೆಗ್ಗೆಯ ವಾಯು ವಿಹಾರಕ್ಕೆ ಪ್ರಶಸ್ತವಾಗಿದೆ ಈ ತಾಣ.
ಚಿತ್ರಕೃಪೆ: Tanzeelahad
ಶರಾವತಿ ನದಿ
ಶರಾವತಿ ನದಿಯ ಹಿನ್ನೀರಿನ ಪ್ರದೇಶಗಳಲ್ಲಿ ನೆಲೆಸಿರುವ ಪುಟ್ಟ ಗ್ರಾಮ ಹೊನ್ನೆಮರುಡು. ಲಿಂಗನಮಕ್ಕಿಯ ಜಲಾಶಯಕ್ಕೆ ಎದುರಾಗಿರುವ ಹೊನ್ನೆಮರುಡು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಹೊನ್ನೆಮರುಡು ಕೆರೆ ಎಂಬ ಹೆಸರಿನಿಂದಲೆ ಕರೆಯಲಾಗುವ ಈ ಜಲಾಶಯದ ಮಧ್ಯದಲ್ಲಿ ದ್ವೀಪವೊಂದಿದ್ದು ಯುವ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ.
ಚಿತ್ರಕೃಪೆ: Srinath.holla
ಮೈಸೂರು
ಮೈಸೂರು ನಗರದ ಹೃದಯ ಭಾಗದಲ್ಲೆ ನೆಲೆಸಿದ್ದು, ಹಲವು ಪ್ರಖ್ಯಾತ ಕಟ್ಟಡಗಳನ್ನು ಜೊತೆಗಾರರನ್ನಾಗಿ ಪಡೆದು ಭೇಟಿ ನೀಡುವವರಿಗೆ ಶಾಂತಿ, ನೆಮ್ಮದಿ ಕರುಣಿಸುವ ಕುಕ್ಕರಹಳ್ಳಿ ಕೆರೆ ನಗರದ ಒಂದು ಹಿತಕರವಾದ ಪ್ರವಾಸಿ ಆಕರ್ಷಣೆಯಾಗಿದೆ. ಒತ್ತಡದ ಜೀವನ ನಡೆಸುವವರಿಗೆ ಚೈತನ್ಯ ಕರುಣಿಸುವ ಈ ಕೆರೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಶ್ರಮದ ಫಲವಾಗಿ ರೂಪಗೊಂಡಿದೆ. 1864 ರಲ್ಲಿ ನಗರದ ಹೊರವಲಯದ ಕೃಷಿ ಭೂಮಿಗೆ ನೀರೋದಗಿಸುವ ದೃಷ್ಟಿಯಿಂದ ನಿರ್ಮಿಸಲಾಗಿರುವ ಈ ಕೆರೆ ಇಂದು ಪ್ರವಾಸಿ ಆಕರ್ಷಣೆಯಾಗಿದೆ.
ಚಿತ್ರಕೃಪೆ: mysore.nic.in
ಹಂಪಿ
ಹಂಪಿಯ ಬಳಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿರುವ ಪಂಪ ಸರೋವರವು ಒಂದು ಪವಿತ್ರವಾದ ಕೆರೆಯಾಗಿದೆ. ರಾಮಾಯಣದಲ್ಲೂ ಸಹ ಉಲ್ಲೇಖಿತಗೊಂಡಿರುವ ಈ ಕರೆಯು ಶಬರಿಯು ರಾಮನಿಗಾಗಿ ಕಾಯುತ್ತಿದ್ದ ಸ್ಥಳವಾಗಿತ್ತೆಂದು ಹೇಳಲಾಗಿದೆ. ಇನ್ನೊಂದು ಕಥೆಯ ಪ್ರಕಾರ ಪಂಪ ಎನ್ನುವವಳು ಪಾರ್ವತಿಯ ಅವತಾರವೆನ್ನಲಾಗಿದ್ದು ಶಿವನನ್ನು ನೆಚ್ಚಿಸಲು ಇಲ್ಲಿ ತಪ ಗೈದಿದ್ದಳೆನ್ನಲಾಗಿದೆ. ಕಥೆ ಏನೇ ಇರಲಿ ಪಂಪ ಸರೋವರವು ಭಾರತದ ಪವಿತ್ರ ಸರೋವರಗಳ ಪೈಕಿ ಒಂದಾಗಿದೆ.
ಚಿತ್ರಕೃಪೆ: Indiancorrector
ಬೆಳಗಾವಿ
ಹಿಂದೆ "ವೇಣುಗ್ರಾಮ" ಎಂಬ ಹೆಸರು ಹೊಂದಿದ್ದ ಇಂದಿನ ಬೆಳಗಾವಿ ನಗರದಲ್ಲಿರುವ ಕೋಟೆ ಕೆರೆಯು ಒಂದು ಪ್ರಸಿದ್ಧ ಕೆರೆಯಾಗಿದೆ. ಇಂದಿಗೂ ತನ್ನ ವೈಭವವನ್ನು ಉಳಿಸಿಕೊಂಡು ಬಂದಿರುವ ಈ ಕೆರೆಯು ಬೆಳಗಾವಿಯ ಹೆಗ್ಗುರುತು ಎಂದರೂ ತಪ್ಪಾಗಲಾರದು.
ಚಿತ್ರಕೃಪೆ: Mahant025
ಹುಬ್ಬಳ್ಳಿ
ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳ ಪ್ರಮುಖ ಹೆಗ್ಗುರುತಾದ ಉಣಕಲ್ ಕೆರೆಯು ಪ್ರದೇಶದ ಜನಪ್ರೀಯ ಪಿಕ್ನಿಕ್ ತಾಣವಾಗಿದೆ. ದೋಣಿ ವಿಹಾರದ ಸೌಲಭ್ಯವಿರುವ ಈ ಕೆರೆಯ ಸುತ್ತಮುತ್ತಲಿನ ಪ್ರದೇಶವು ಹಾಯಾದ ಅನುಭವ ನೀಡುತ್ತವೆ. ಇತ್ತೀಚಿಗಷ್ಟೆ ಪುನಿತ್ ರಾಜ್ ಕುಮಾರ್ ಅಭಿನಯದ ಕನ್ನಡ ಚಿತ್ರವೊಂದರ ಸನ್ನಿವೇಷವು ಇಲ್ಲಿ ಚಿತ್ರೀಕರಣಗೊಂಡಿತ್ತು.
ಚಿತ್ರಕೃಪೆ: Mohd Khaise Ahmed
ಪ್ರಶಾಂತಮಯ
ಮೈಸೂರಿನಲ್ಲಿದ್ದಾಗ, ಪ್ರಶಾಂತಮಯ ಹಾಗೂ ಹಿತಕರವಾದ ಸ್ಥಳದಲ್ಲಿ ತುಸು ವಿಶ್ರಾಂತಿಯನ್ನು ಪಡೆಯಲು ಮನ ಬಯಸಿದರೆ ಇಲ್ಲಿನ ಕಾರಂಜಿ ಕೆರೆಗೊಮ್ಮೆ ಭೇಟಿ ನೀಡಿ ಹಾಗೂ ನಿರಾಳರಾಗಿ. ಮೈಸೂರು ಮೃಗಾಲಯದ ಒಂದು ಭಾಗವಾಗಿರುವ ಕಾರಂಜಿ ಕೆರೆಯು ಸುತ್ತಲೂ ಸುಂದರ ಹಾಗೂ ಪ್ರಶಾಂತಮಯ ಉದ್ಯಾನ ಹೊಂದಿರುವ ಅದ್ಭುತ ಪ್ರವಾಸಿ ಆಕರ್ಷಣೆಯಾಗಿ ನೋಡುಗರ ಗಮನ ಸೆಳೆಯುತ್ತದೆ.
ಚಿತ್ರಕೃಪೆ: Riju K
ಬಾಗಲಕೋಟೆ
ಬಾಗಲಕೋಟೆ ಜಿಲ್ಲೆಯಲ್ಲಿರುವ ಪ್ರಸಿದ್ಧ ಹಾಗೂ ಧಾರ್ಮಿಕ ಕೇಂದ್ರವಾದ ಬಾದಾಮಿಯ ಗುರುತರವಾದ ಆಕರ್ಷಣೆಗಳಲ್ಲೊಂದಾಗಿದೆ ಅಗಸ್ತ್ಯ ಕೆರೆ. ಎರಡು ಬೆಟ್ಟಗಳ ಮಧ್ಯೆ ಸ್ಥಿತವಿರುವ ಈ ಕೆರೆಗೆ ಸಪ್ತರ್ಷಿಗಳ ಪೈಕಿ ಒಬ್ಬರಾದ ಅಗಸ್ತ್ಯ ಮುನಿಗಳ ಗೌರವಾರ್ಥವಾಗಿ ಕೆರೆಗೆ ಈ ಹೆಸರು ಬಂದಿದೆ ಹಾಗೂ ಆ ಎರಡು ಬೆಟ್ಟಗಳು ವಾತಾಪಿ ಮತ್ತು ಇಲ್ವಲ ಎಂಬ ಇಬ್ಬರು ರಕ್ಕಸರನ್ನು ಬಿಂಬಿಸುತ್ತದೆ.
ಚಿತ್ರಕೃಪೆ: Akshatha
ಕೊಡಗು
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಲಿಮಲ್ತೆ ಬಳಿಯಿರುವ ದೊಡ್ಡಮಲ್ತೆ ಎಂಬಲ್ಲಿ ಈ ಸುಂದರ ಕೆರೆಯಿದೆ. ಕೊಡಗಿನಲ್ಲೆ ಅತಿ ದೊಡ್ಡದಾದ ಕೆರೆ ಇದಾಗಿದೆ. ವರ್ಷಕ್ಕೊಮ್ಮೆ ಗೌರಿ ಪೂಜೆಯ ಸಂದರ್ಭದಲ್ಲಿ ಹೊನ್ನಮ್ಮದೇವಿಗೆ ಸಂಬಂಧಿಸಿದ ವಸ್ತುಗಳನ್ನು ಬಾಗಿಣ ರೂಪದಲ್ಲಿ ಕೆರೆಗೆ ಅರ್ಪಿಸಲಾಗುತ್ತದೆ.
ಜಲಾಶಯ ಕೆರೆ
ಕೊಡಗಿನಲ್ಲಿರುವ ಒಂದು ಸುಂದರ ಕೆರೆ ಇದು. ವಿಶೇಷವೆಂದರೆ ಬಹುತೇಕರಿಗೆ ಈ ನೀರಿನ ಮೂಲದ ಕುರಿತು ಅಷ್ಟೊಂದು ಮಾಹಿತಿ ಇಲ್ಲ. ಇನ್ನೂ ಭೇಟಿ ನೀಡುವುದಂತೂ ಕೊಂಚ ದೂರವೆ. ಆದರೂ ನೀವೇನಾದರೂ ಕೊಡಗಿಗೆ ಪ್ರವಾಸ ಮಾಡಿದರೆ ಈ ಜಲಾಶಯ ತಾಣವನ್ನು ನೋಡಲು ಮರೆಯದಿರಿ.
ಚಿತ್ರಕೃಪೆ: Ravi Aparanji
ನೂರು ವರ್ಷ ಪುರಾತನ
ಸುಮಾರು 100 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರಿನ ಸ್ಯಾಂಕಿ ಕೆರೆಯ ಪರಿಸರ ಅದ್ಭುತ ಮನಶಾಂತಿಯನ್ನು ಭೇಟಿ ನೀಡುವವರಿಗೆ ಕರುಣಿಸುತ್ತದೆ. ಸ್ಯಾಂಕಿ ಕೆರೆಯು 37 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿದೆ. ಇದೊಂದು ಕೃತಕ ಕೆರೆಯಾಗಿದ್ದು, 1882 ರಲ್ಲಿ ಬ್ರಿಟೀಷರ ಆಡಳಿತದಲ್ಲಿ ಕರ್ನಲ್ ಆಗಿದ್ದ ರೈಚರ್ಡ್ ಹೈರ್ಯಾಮ್ ಸ್ಯಾಂಕಿ ಎಂಬಾತನು ಈ ಕೆರೆಯ ನಿರ್ಮಾತೃ. ಬೆಂಗಳೂರಿನ ನೀರಿನ ಬೇಡಿಕೆ ತಣಿಸಲು ನಿರ್ಮಾಣವಾದ ಈ ಕೆರೆ "ಗಂಧದಕೋಟಿ ಕೆರೆ" ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿತ್ತು. ಏಕೆಂದರೆ ಸರ್ಕಾರದ ಗಂಧದ ಸೋಪ್ ಕಚೇರಿಯು ಕೆರೆಯ ಬಳಿಯಲ್ಲೆ ಕಾರ್ಯ ನಿರ್ವಹಿಸುತ್ತಿತ್ತು. ಇಂದು ಇದು ಹಾಯಾಗಿ ವಿಶ್ರಾಂತಿ ಪಡೆಯಲು, ವಾಯು ವಿಹಾರ ಮಾಡಲು ಯೋಗ್ಯವಾದ ಸ್ಥಳವಾಗಿ ಜನಪ್ರೀಯವಾಗಿದೆ.
ಚಿತ್ರಕೃಪೆ: Aravinth Rajan