ಇಂದು ಭಾರತದ ಪ್ರತಿಯೊಂದೂ ರಾಜ್ಯವೂ ಒಂದಲ್ಲ ಒಂದು ಕಾರಣದಿಂದಾಗಿ ಪ್ರಸಿದ್ದಿಯನ್ನು ಪಡೆದಿದೆ. ಅವುಗಳಲ್ಲಿ ಕೆಲವು ರಾಜ್ಯಗಳು ತಮ್ಮ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದರೆ, ಇನ್ನು ಕೆಲವು ಆಧುನಿಕ ವಾಸ್ತುಶಿಲ್ಪಗಳಿಗೆ ಮತ್ತು ಕೆಲವು ಅವುಗಳಲ್ಲಿಯ ಅದ್ಭುತ ಇತಿಹಾಸಗಳಿಗಾಗಿ ಪ್ರಸಿದ್ದಿಯನ್ನು ಪಡೆದಿದೆ. ಅಂತಹ ರಾಜ್ಯಗಳಲ್ಲಿ ಕರ್ನಾಟಕವೂ ಒಂದೆನಿಸಿದ್ದು, ಎಲ್ಲಾ ತರಹದ ಪ್ರಯಾಣಿಕರಿಗೂ ವರ್ಷದ ಎಲ್ಲಾ ಸಮಯದಲ್ಲೂ ಭೇಟಿ ಕೊಡಬಹುದಾದಂತಹ ಆದರ್ಶ ಸ್ಥಳವೆನಿಸಿದೆ.
ಇಲ್ಲಿ ಆಧುನಿಕ ನಗರಗಳಿಂದ ಹಿಡಿದು ಪ್ರಾಚೀನ ಪಟ್ಟಣಗಳವರೆಗೆ ಮತ್ತು ಭವ್ಯವಾದ ಪರಿಸರದಿಂದ ಹಿಡಿದು ಮಂತ್ರಮುಗ್ದ ಗೊಳಿಸುವ ಸೌಂದರ್ಯತೆಗಳವರೆಗೆ ಕರ್ನಾಟಕವು ಎಲ್ಲವನ್ನೂ ಹೊಂದಿದೆ. ಆದರೂ ಕರ್ನಾಟಕದಲ್ಲಿ ಇನ್ನೂ ಹಲವಾರು ಸ್ಥಳಗಳು ಅನಾವರಣಗೊಳ್ಳಲು ಕಾಯುತ್ತಿವೆ. ಪಶ್ಚಿಮ ಘಟ್ಟಗಳ ದಟ್ಟವಾದ ಕಾಡುಗಳು ಮತ್ತು ಕಣಿವೆಗಳ ಮಧ್ಯೆ ಹುದುಗಿರುವ ಕೆಲವು ಅನ್ವೇಷಣೆಗೊಳಗಾಗದ ಜಲಪಾತಗಳು ಖಂಡಿತವಾಗಿಯೂ ಹೆಚ್ಚಿನ ಪ್ರಶಂಸೆಗೆ ಕಾರಣವಾಗಲು ಅರ್ಹವಾದವುಗಳಾಗಿವೆ. ಈ ಋತುವಿನಲ್ಲಿ ಕರ್ನಾಟದಲ್ಲಿಯ ಇಂತಹ ಗುಪ್ತ ಜಲಪಾತಗಳಿಗೆ ಭೇಟಿ ನೀಡಿ ಇಲ್ಲಿಯ ಶಾಂತಿಯುತ ಪರಿಸರದಲ್ಲಿ ಭಾಗಿಯಾಗಿ ಈ ಸ್ಥಳಗಳನ್ನು ಪ್ರತಿಯೊಬ್ಬ ಪ್ರವಾಸಿಗನ ಪ್ರವಾಸದ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಂತೆ ಮಾಡಿದರೆ ಹೇಗೆ?
1) ಕುಂಚಿಕಲ್ ಜಲಪಾತ
ಅಂದಾಜು 1500 ಅಡಿ ಎತ್ತರದಿಂದ ಕೆಳಕ್ಕೆ ಚಲಿಸುವ ಕುಂಚಿಕಲ್ ಜಲಪಾತವು ಭಾರತದ ಅತಿ ಎತ್ತರದ ಜಲಪಾತವಾಗಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿಯ ಹತ್ತಿರದಲ್ಲಿರುವ ಮಸ್ತಿಕಟ್ಟೆಯಲ್ಲಿ ನೆಲೆಸಿರುವ ಈ ಜಲಪಾತವು ರೋಮಾಂಚಕ ಹಾಗೂ ನೋಡುಗರಲ್ಲಿ ಬೆರಗು ಮೂಡಿಸುತ್ತದೆ. ಕುಂಚಿಕಲ್ ಜಲಪಾತವು ಜಲ ವಿದ್ಯುತ್ ಸ್ಥಾವರದ ಮೂಲವಾಗಿದ್ದು, ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಿದೆ. ಶಿಳ್ಳೆಹೊಡೆಯುವಂತೆ ಕೇಳುವ ಗಾಳಿ, ಗಾಳಿಯಲ್ಲಿ ಅಲ್ಲಾಡುತ್ತಿರುವ ಎಲೆಗಳು ಮತ್ತು ಭೋರ್ಗರೆಯುತ್ತಾ ಧುಮುಕುವ ಜಲಪಾತಗಳಿಂದ ಆವೃತವಾಗಿರುವ ವಾತಾವರಣಕ್ಕಿಂತ ಹೆಚ್ಚಿನದು ಇನ್ನೇನು ಬೇಕು? ಆದ್ದರಿಂದ ಕುಂಚಿಕಲ್ ಜಲಪಾತವು ನಿಸ್ಸಂದೇಹವಾಗಿಯೂ ಈ ಋತುವಿನಲ್ಲಿ ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಇರಬೇಕಾದ ಸ್ಥಳವಾಗಿದೆ.
2) ಅಲೇಕನ್ ಜಲಪಾತ
ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ ನಿಂದ ಸುಮಾರು 18ಕಿ.ಮೀ ಅಂತರದಲ್ಲಿರುವ ಅಲೇಕನ್ ಜಲಪಾತವು ಕರ್ನಾಟಕದ ಅತ್ಯಂತ ಸುಂದರವಾದ ಮತ್ತು ಹೆಚ್ಚು ಬೇಡಿಕೆಯಲ್ಲಿರುವ ಜಲಪಾತಗಳಲ್ಲೊಂದಾಗಿದೆ. ಸಾಮಾನ್ಯ ಪ್ರವಾಸಿಗರಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿಲ್ಲವಾದರೂ ಮಳೆಗಾಲದ ಸಮಯದಲ್ಲಿ ಇದು ಸಾಹಸಪ್ರಿಯರಲ್ಲಿ ಹೆಚ್ಚಿನ ಆಕರ್ಷಣೆಯನ್ನು ಪಡೆದಿದೆ. ಇಲ್ಲಿಯ ಅತ್ಯಂತ ಸ್ವಚ್ಚವಾದ ನೀರಿನ ಜೊತೆಗೆ ಸುಂದರವಾದ ಹಸಿರು ಸಸ್ಯ ರಾಶಿಯಲ್ಲಿ ನೀವು ಆನಂದಿಸಬಹುದಾಗಿದೆ. ನಿಮ್ಮ ಇಂದ್ರಿಯಗಳನ್ನು ತೃಪ್ತಿ ಪಡಿಸುವ ಇಂತಹ ಸ್ಥಳದಲ್ಲಿ ಒಂದು ದಿನ ಕಳೆದರೆ ಹೇಗಿರಬಹುದು?
3) ವಿಭೂತಿ ಜಲಪಾತ
ಶಿರ್ಸಿಯಿಂದ 50 ಕಿ.ಮೀ ದೂರದಲ್ಲಿ ನೆಲೆಸಿರುವ ಈ ಸಣ್ಣ ಹಾಗೂ ಬಹು-ಹಂತದ ಜಲಪಾತವು ಸುಂದರವಾದ ನೋಟ ಮತ್ತು ಶಾಂತಿಯುತ ಸೆಳವಿನೊಂದಿಗೆ ನೆಮ್ಮದಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಕಾಡು ಹೂವುಗಳು ಮತ್ತು ಬಿದಿರುಗಳಿಂದ ಸುತ್ತುವರೆದಿರುವ ವಿಭೂತಿ ಜಲಪಾತವು ಪಶ್ಚಿಮ ಘಟ್ಟದ ಹಚ್ಚ ಹಸಿರಿನಾದ್ಯಂತ ಹರಡಿದ್ದು, ಮೋಡಿಮಾಡುತ್ತದೆ. ಈ ಜಲಪಾತದ ಹತ್ತಿರದಲ್ಲಿರುವ ಸುಣ್ಣದ ಬಂಡೆಯಿಂದಾಗಿ ಈ ಹೆಸರನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತದೆ. ನೀವು ಪಶ್ಚಿಮ ಘಟ್ಟದ ಅಪರಿಚಿತ ಭಾಗಗಳಲ್ಲಿ ಸುಮ್ಮನೆ ಕುಳಿತುಕೊಳ್ಳಲು ಮತ್ತು ಜೀವನದ ಒತ್ತಡದಿಂದ ದೂರವಾಗಿ, ಕಾಡುಗಳಲ್ಲಿಯ ಮಾರ್ದನಿಯೊಂದಿಗೆ ಕಳೆಯಲು ಬಯಸಿದರೆ, ಇದು ನಿಮಗೆ ಸೂಕ್ತವಾದ ಗಮ್ಯಸ್ಥಾನವಾಗಿದೆ.
4) ಬಂಡಾಜೆ ಜಲಪಾತ
200 ಅಡಿ ಎತ್ತರದಿಂದ ಧುಮುಕುವ ಬಂಡಾಜೆ ಜಲಪಾತವು ನೇತ್ರವತಿ ನದಿಯಿಂದ ಉಗಮವಾದುದಾಗಿದೆ. ಇದು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿದ್ದು, ಸುತ್ತಲೂ ನಿತ್ಯಹರಿದ್ವರ್ಣವಾದ ದಟ್ಟವಾದ ಕಾಡುಗಳು ಮತ್ತು ಸಮೃದ್ದವಾದ ಬಯಲು ಪ್ರದೇಶದಿಂದ ಆವೃತವಾಗಿದೆ. ನೀವು ಜಲಪಾತದ ಪಕ್ಕದಲ್ಲಿ ಕುಳಿತುಕೊಳ್ಳಲು ಅಥವಾ ಅದರ ನೀರಿನಲ್ಲಿ ಸ್ನಾನ ಮಾಡಿ ನಿಮ್ಮನ್ನು ನೀವು ಪುನಶ್ಚೇತಗೊಳಿಸಿಕೊಳ್ಳಲು ಬಯಸುವಿರಾದಲ್ಲಿ, ನೀವು ಸುತ್ತಮುತ್ತಲಿನ ಕಾಡುಗಳ ಮೂಲಕ ಸ್ವಲ್ಪ ಚಾರಣ ಮಾಡಿ ಇಲ್ಲಿ ತಲುಪಬಹುದಾಗಿದೆ. ಪಶ್ಚಿಮ ಘಟ್ಟದ ದಟ್ಟವಾದ ಮತ್ತು ನಿಗೂಢವಾದ ಕಾಡುಗಳಲ್ಲಿ ಕಳೆದುಹೋಗಲು ನೀವು ಬಯಸಿದಲ್ಲಿ ಇಲ್ಲಿಯ ಸ್ಥಳೀಯರಿಂದ ಸಹಾಯ ಪಡೆಯುವುದು ಸೂಕ್ತ. ಕೆಲವು ಸಾಹಸಗಳನ್ನು ಕೈಗೊಳ್ಳುವುದು ಮತ್ತು ನಿಮ್ಮ ಅಲೆದಾಡುವಿಕೆಗೆ ಸವಾಲು ಮಾಡುವ ಅನುಭವ ಹೇಗಿರಬಹುದು? ಕರ್ನಾಟಕದ ಈ ಗುಪ್ತ ಜಲಪಾತವನ್ನು ನಿಮ್ಮ ಪ್ರವಾಸ ಪಟ್ಟಿಗೆ ಸೇರಿಸಲು ಮರೆಯಬೇಡಿ.
5) ಬರ್ಕಾನಾ ಜಲಪಾತ
ಸೀತಾ ನದಿಯಿಂದ ರೂಪುಗೊಂಡ ಮತ್ತು 850 ಅಡಿ ಎತ್ತರದಿಂದ ಧುಮುಕುವ ಬಾರ್ಕಾನಾ ಜಲಪಾತವು ಕರ್ನಾಟಕದ ಅತಿ ಕಡಿಮೆ ಭೇಟಿ ನೀಡುವ ಜಲಪಾತಗಳಲ್ಲಿ ಒಂದಾಗಿದೆ. ಇದರ ಭೋರ್ಗರೆಯುವ ಹಿತವಾದ ನೀರಿನಿಂದಾಗಿ ಕಲುಷರಹಿತ ಸೌಂದರ್ಯತೆ ಮತ್ತು ಸೌಮ್ಯವಾದ ವಾತಾವರಣವು ಸೃಷ್ಟಿಯಾಗಿರುವುದರಿಂದ, ಈ ಮನಮೋಹಕ ಜಲಪಾತವು ದಾರಿಹೋಕ ಪ್ರಯಾಣಿಕರಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಮತ್ತು ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳಿಂದ ಆವೃತವಾಗಿರುವ ಬಾರ್ಕಾನಾ ಜಲಪಾತವು ಮಳೆಗಾಲದಲ್ಲಿ ಮಾತ್ರ ಹರಿಯುವ ಜಲಪಾತವಾಗಿದ್ದು, ಜೋರಾಗಿ ಮಳೆಯಾಗುವ ಸಮಯದಲ್ಲಿ ಮಾತ್ರ ಈ ಜಲಪಾತಕ್ಕೆ ಜೀವಂತಿಕೆ ಬರುತ್ತದೆ.