ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿ-ತಿರುಮಲ ಕ್ಷೇತ್ರವೆಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ವಿಶ್ವವಿಖ್ಯಾತಿಗಳಿಸಿರುವ ಈ ಕ್ಷೇತ್ರವು ಜಗದೊಡೆಯ ವೆಂಕಟೇಶ್ವರ ಅರ್ಥಾತ್ ಬಾಲಾಜಿಗೆ ಮುಡಿಪಾದ ದೇವಾಲಯವಿರುವ ಪರಮ ಪಾವನ ಕ್ಷೇತ್ರ. ಈ ಬಾಲಾಜಿಯ ಮಹಿಮೆಯೆ ಅಪಾರ ಹಾಗೂ ಪವಾಡಗಳೂ ನಿರಂತರ ಎಂಬ ನಂಬುಗೆಯಿದೆ.
ಅಂತೆಯೆ ದೇಶದ ಮೂಲೆ ಮೂಲೆಗಳಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ನಿತ್ಯವೂ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಇನ್ನೊಂದು ವಿಶೇಷವೆಂದರೆ ಬಾಲಾಜಿಯ ದೇವಾಲಯ. ಈ ದೇವಾಲಯವನ್ನು ನೋಡಿದಾಗ ಇದರ ರಚನೆಯಿಂದಲೆ ಸಾಕಷ್ಟು ಜನ ಸ್ಫೂರ್ತಿ ಪಡೆಯುತ್ತಾರೆ. ಇದರ ವಿನ್ಯಾಸದಿಂದಲೆ ಮಾರು ಹೋಗುತ್ತಾರೆ. ದೇವಾಲಯ ರಚನೆ ನೋಡಿದರೆ ಸಾಕು ಇದು ಬಾಲಾಜಿ ದೇವಾಲಯ ಎಂದು ಥಟ್ ಅಂತ ಹೇಳುವವರೂ ಇದ್ದಾರೆ.
ಚಿತ್ರಕೃಪೆ: Bsnehal
ಬಾಲಾಜಿಯ ದೇವಾಲಯದಂತೆಯೆ ಆದರೆ ಅದಕ್ಕಿಂತಲೂ ಬಲು ಚಿಕ್ಕದಾದ ದೇವಾಲಯದ ರಚನೆಗಳನ್ನು ದೇಶದ ಕೆಲವು ಸ್ಥಳಗಳಲ್ಲಿ ಕಂಡುಬರುವುದನ್ನು ಗಮನಿಸಬಹುದು. ಕರ್ನಾಟಕದಲ್ಲಿರುವ ಚಿಕ್ಕ ತಿರುಪತಿಯಾಗಲಿ ಅಥವಾ ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲಿರುವ ಮಿನಿ ತಿರುಪತಿಯಾಗಲಿ ಉದಾಹರಸಿಬಹುದು.
ಆದರೆ ನಿಮಗೆ ಗೊತ್ತೆ, ಮಹಾರಾಷ್ಟ್ರದ ಪುಣೆ ನಗರದ ಬಳಿಯೂ ಬಾಲಾಜಿಯ ಒಂದು ದೇವಾಲಯವಿದೆ. ಇದನ್ನು ಮಿನಿ ತಿರುಪತಿ ಬಾಲಾಜಿ ಮಂದಿರ ಎಂತಲೆ ಕರೆಯುತ್ತಾರೆ. ಇದರ ರಚನೆಯೂ ಸಹ ತಿರುಮಲ ಕ್ಷೇತ್ರದ ಬಾಲಾಜಿಯ ದೇವಾಲಯದ ರೀತಿಯಲ್ಲೆ ಇರುವುದನ್ನು ಕಾಣಬಹುದು. ಇಲ್ಲಿರುವ ಅರಚಕರೂ ಸಹ ತಿರುಮಲ ಕ್ಷೇತ್ರದವರಾಗಿರುವುದೂ ಇನ್ನೊಂದು ವಿಶೇಷ.
ಚಿತ್ರಕೃಪೆ: Bsnehal
ಇನ್ನೂ ತಿರುಮಲದಲ್ಲಿ ನಡೆಯುವಂತೆಯೆ ಇಲ್ಲಿ ಬಾಲಾಜಿ ವಿಧಿವತ್ತಾಗಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಭೇಟಿ ನೀಡಿ ಬಾಲಾಜಿಯ ದರ್ಶನ ಪಡೆಯುವ ಭಕ್ತರಿಗೆ ಲಾಡೂ ಪ್ರಸಾದವೂ ಸಹ ದೊರೆಯುತ್ತದೆ. ಪುಣೆಯ ಸುತ್ತಮುತ್ತ ವಾಸವಿರುವ ಸಹಸ್ರಾರು ಸಂಖ್ಯೆಯ ಬಾಲಾಜಿ ಭಕ್ತರಿಗೆ ಈ ದೇವಾಲಯವು ಅತ್ಯಂತ ಆನಂದವನ್ನುಂಟು ಮಾಡಿದೆ.
ಅಲ್ಲದೆ ಮಹಾರಾಷ್ಟ್ರದ ಹಲವಾರು ಭಾಗಗಳಿಂದ ತಿರುಪತಿಗೆ ಹೋಗಲು ಆಗದವರು ಬಾಲಾಜಿಯ ದರ್ಶನ ಕೋರಿ ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗಾಗಿ ಬಾಲಾಜಿಯ ಈ ದೇವಾಲಯ ದಿನೆ ದಿನೆ ಸಾಕಷ್ಟು ಜನಪ್ರೀಯತೆಗಳಿಸುತ್ತಿದೆ ಎಂದರೂ ತಪ್ಪಾಗಲಿಕ್ಕಿಲ್ಲ.
ಚಿತ್ರಕೃಪೆ: Bsnehal
ದೇವಾಲಯದಾವರಣ ಪ್ರವೇಶಿಸುತ್ತಿದ್ದಂತೆಯೆ ಸಾಕಷ್ಟು ಧನಾತ್ಮಕ ಭಾವನೆಯು ಮನದಲ್ಲಿ ಮೂಡುತ್ತದೆ ಎಂಬುದು ಇಲ್ಲಿಗೆ ಭೇಟಿ ಭಕ್ತಾದಿಗಳ ಅಭಿಪ್ರಾಯ. ದೇವಾಲಯವನ್ನು ಕಲ್ಲು ಹಾಗೂ ಕಟ್ಟಿಗೆಗಳನ್ನು ಬಳಸಿ ಸುಂದರವಾಗಿ ನಿರ್ಮಿಸಲಾಗಿದೆ. ಶಿಲ್ಪಕಲೆಯು ಸಾಕಷ್ಟು ಆಕರ್ಷಕವಾಗಿದೆ. ಬಾಲಾಜಿಯನ್ನು ಹೊರತುಪಡಿಸಿ ಇತರೆ ದೇವ ದೇವತೆಯರ ಸನ್ನಿಧಿಗಳೂ ಸಹ ಇಲ್ಲಿವೆ.
ಯಾರಿಗೆ ಬೇಕಿಲ್ಲ ತಿಮ್ಮಪ್ಪನ ದರ್ಶನ? ನೀವೂ ಹೋಗಿ!
ಹಾಗಾದರೆ, ತಡ ಮಾಡದೆ ಪುಣೆಗೆ ಭೇಟಿ ನೀಡಿದರೆ ಬಾಲಾಜಿಯ ದರ್ಶನ ಪಡೆದು ಕೃತಾರ್ಥರಾಗಿ. ಈ ದೇವಾಲಯವು ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಪುಣೆ ನಗರದಿಂದ ಸುಮಾರು 50 ಕಿ.ಮೀ ಗಳಷ್ಟು ದೂರದಲ್ಲಿರುವ ನಾರಾಯಣಪುರ ಎಂಬ ಹಳ್ಳಿಯ ಬಳಿಯಿದೆ. ನಾರಾಯಣಪುರ ಗ್ರಾಮವು ಐತಿಹಾಸಿಕವಾಗಿ ಪ್ರಮುಖವಾಗಿದ್ದು ಒಂದೆ ಶಿರವುಳ್ಳ ಏಕೈಕ ದತ್ತ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ.