ಧರ್ಮಸ್ಥಳದ ನಿತ್ಯಾನಂದ ನಗರದಲ್ಲಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಇಂದು ಭಕ್ತರ ಜನಾಕರ್ಷಣೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗಮನಸೆಳೆದಿದೆ. ಇದು ಧರ್ಮಸ್ಥಳ ಮಂಗಳೂರು ಹೆದ್ದಾರಿಯಲ್ಲಿ ಧರ್ಮಸ್ಥಳದಿಂದ ಕೇವಲ ನಾಲ್ಕು ಕಿ.ಮೀ ಹಾಗೂ ಮಂಗಳೂರಿನಿಂದ 67 ಕಿ.ಮೀ ಗಳಷ್ಟು ದೂರದಲ್ಲಿದೆ. ಪವಿತ್ರ ನದಿ ನೇತ್ರಾವತಿಗೆ ತೀರಾ ಸಮೀಪದಲ್ಲಿರುವುದು ಇದರ ವಿಶೇಷತೆಗಳಲ್ಲೊಂದು.
ಇನ್ನೂ ಹೇಳಬೇಕೆಂದರೆ ಇದನ್ನು ದಕ್ಷಿಣ ಭಾರತದ ಅಯೋಧ್ಯೆ ಎಂತಲೂ ಸಹ ಕರೆಯುತ್ತಾರೆ. ಅಲ್ಲದೆ ಪ್ರಾಕೃತಿಕ ಸೌಂದರ್ಯದ ಮಧ್ಯೆ ನೆಲೆ ನಿಂತಿರುವ ಸುಂದರ ಕ್ಷೇತ್ರವಾಗಿಯೂ ಶ್ರೀ ರಾಮಕ್ಷೇತ್ರ ಗಮನ ಸೆಳೆಯುತ್ತದೆ. ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಈ ದೇವಸ್ಥಾನ ಸಂಕೀರ್ಣದ ನಿರ್ಮಾತೃ. ಅವರು ಶ್ರೀ ನಿತ್ಯಾನಂದ ಸ್ವಾಮೀಜಿಯವರ ಶಿಷ್ಯರಾಗಿದ್ದರು.
ಚಿತ್ರಕೃಪೆ: MuteX023
ಇಂದು ಪವಿತ್ರ ಕ್ಷೇತ್ರ ಎಂದೆ ಕರೆಸಿಕೊಳ್ಳುವ ಶ್ರೀ ರಾಮಕ್ಷೇತ್ರದಲ್ಲಿ 1978 ರವರೆಗೆ ಏನೂ ಇರಲಿಲ್ಲ ಕೇವಲ ಚಿಕ್ಕದಾದ ನಿತ್ಯಾನಂದ ಮಂದಿರ ಮಾತ್ರವಿತ್ತು. ಪ್ರಸ್ತುತ ಶ್ರೀ ರಾಮ ದೇವಸ್ಥಾನಕ್ಕೆ 1978 ರಲ್ಲಿ ಬೆಂಗಳೂರಿನ ಶ್ರೀ ಶ್ರೀ ಶಿವ ಬಾಲಯೋಗಿ ಮಹರಾಜರು ಭೂಮಿಪೂಜೆ ನೆರವೇರಿಸಿ ನಂತರ ರಾಮ ಮಂದಿರದ ರಚನೆಯನ್ನು ಶ್ರೀ ಆತ್ಮಾನಂದ ಸ್ವಾಮೀಜಿಗಳು ನಿರ್ದೇಶಿಸಿದರು. ಅಲ್ಲಿಂದ ದೇವಾಲಯದ ನಿರ್ಮಾಣ ಕಾರ್ಯ ಭರದಿಂದ ಸಾಗಿತು.
ಇಂದು ಇಲ್ಲಿ ಅತಿ ಸುಂದರವಾದ ರಾಮನ ದೇವಾಲಯವನ್ನು ಕಾಣಬಹುದಾಗಿದೆ. ದೇಶ ವಿದೇಶಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಶ್ರೀರಾಮನ ದರ್ಶನ ಕೋರಿ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರತಿವರ್ಷ "ರಾಮ ನವಮಿ"ಯ ಹಬ್ಬದ ಸಂದರ್ಭದಲ್ಲಿ ಇಲ್ಲಿ ಏಳು ದಿನಗಳ "ರಾಮ ಭಜನಾ ಸಪ್ತಾಹ"ವನ್ನು ಇಲ್ಲಿ ನಡೆಸಲಾಗುತ್ತದೆ.
ಚಿತ್ರಕೃಪೆ: shreeramakshetra.com
ಇದರ ಇತಿಹಾಸ ಕೆದಕಿದಾಗ ತಿಳಿಯುವ ವಿಷಯವೆಂದರೆ, ವಿಶೇಷವಾದ ಪವಾಡ ಶಕ್ತಿಯನ್ನು ಹೊಂದಿದ್ದ ಶ್ರೀ ನಿತ್ಯಾನಂದ ಸ್ವಾಮಿಗಳು ತಮ್ಮ ಧರ್ಮಸ್ಥಳ ಯಾತ್ರೆಯ ಸಂದರ್ಭದಲ್ಲಿ ಪ್ರಸ್ತುತ ಕ್ಷೇತ್ರಕ್ಕೆ ಬಂದಿದ್ದರು ಹಾಗೂ ಒಂದು ದಿನ ಇಲ್ಲಿ ತಂಗಿದ್ದರು. ಆ ಸಮಯದಲ್ಲೆ ಅವರಿಗೆ ಶ್ರೀರಾಮನ ಪ್ರೇರಣೆಯಾಗಿ ಇಲ್ಲೊಂದು ರಾಮನ ದೇವಾಲಯ ನಿರ್ಮಾಣ ಮಾಡಬೇಕೆಂಬ ಮನೋಕಾಮನೆ ಬೇರೊಡೆಯಿತು.
ಗುರುಗಳ ಈ ಬಯಕೆಯನ್ನು ಈಡೇರಿಸಬೇಕೆಂದು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಅಪೇಕ್ಷಿಸಿದ್ದರು. ಅದರಂತೆ 1969 ರಲ್ಲಿ ಶ್ರೀಗಳು ಧರ್ಮಸ್ಥಳಕ್ಕೆ ಬಂದು ತಮ್ಮ ಪ್ರಯತ್ನವನ್ನು ಪ್ರಾರಂಭಿಸಿದರು. ಮುಂದೆ 1971 ರಲ್ಲಿ ಪ್ರದೇಶದ ಶಾನುಭೋಗರಿಂದ ಪ್ರಸ್ತುತ ಸ್ಥಳವನ್ನು ಬಳುವಳಿಯಾಗಿ ಪಡೆದು ದೇವಾಲಯ ಕಾರ್ಯಕ್ಕೆ ನಾಂದಿ ಹಾಡಿದರು.
ವನವಾಸದಲ್ಲಿ ರಾಮನು ಭೇಟಿ ನೀಡಿದ್ದ ಸ್ಥಳಗಳು
ಹೀಗೆ ಈ ದೇವಾಲಯವು ಶ್ರೀರಾಮಚಂದ್ರನು ನೆಲೆಸಿರುವ ಪವಿತ್ರ ಸ್ಥಳವಾಗಿ ಪರಿವರ್ತಿತವಾಯಿತು ಹಾಗೂ ಇಂದು ದಕ್ಷಿಣದ ಅಯೋಧ್ಯೆ ಎಂದು ಸಕಲ ಭಕ್ತ ಜನರಿಂದ ಪ್ರಶಂಸಿಸಲ್ಪಡುತ್ತದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೀತಾನ್ವೇಷಣೆಯ ಸಂದರ್ಭದಲ್ಲಿ ಕೆಲವು ಕಾಲ ಶ್ರೀ ರಾಮಚಂದ್ರ ಈ ಸ್ಥಳದಲ್ಲಿ ತಂಗಿದ್ದ ಎಂಬ ಪ್ರತೀತಿಯೂ ಇದೆ.