ಸುತ್ತಲೂ ಎಲ್ಲ ದಿಕ್ಕುಗಳಲ್ಲಿ ನೀರಿನಿಂದ ಆವೃತವಾಗಿರುವ ಭೂಪ್ರದೇಶಗಳು ಮೊದಲಿನಿಂದಲೂ ಮಾನವನಿಗೆ ಸಹಜ ಆಕರ್ಷಣೆಗಳಾಗಿವೆ. ನಡುಗಡ್ಡೆಗಳು ಅಥವಾ ದ್ವೀಪಗಳು ಎಂದು ಕರೆಯಲಾಗುವ ಇವು ಇಂದು ಅದ್ಭುತ ಪ್ರವಾಸಿ ವಿಶೇಷತೆಯುಳ್ಳ ತಾಣಗಳಾಗಿ ಗಮನಸೆಳೆಯುತ್ತವೆ.
ಈ ರೀತಿಯ ಪ್ರದೇಶಗಳು ತಕ್ಕಮಟ್ಟಿಗೆ ಅಂದರೆ ಹಳ್ಳಿಗಳಷ್ಟು, ಚಿಕ್ಕ ಪಟ್ಟಣಗಳಷ್ಟು ವಿಶಾಲವಾಗಿದ್ದರೆ ದ್ವೀಪಗಳೆಂತಲೂ ಹಾಗೂ ಅತಿ ಚಿಕ್ಕದಾಗಿದ್ದಲ್ಲಿ ನಡುಗಡ್ಡೆಗಳೆಂತಲೂ ಸಾಮಾನ್ಯವಾಗಿ ಕರೆಸಿಕೊಳ್ಳುತ್ತವೆ. ಈ ನಡುಗಡ್ಡೆಗಳು ಸಾಮಾನ್ಯವಾಗಿ ನದಿಗಳು ಹಾಗೂ ಸಮುದ್ರದಲ್ಲಿ ಕಂಡುಬರುತ್ತವೆ.
ಮನಸೆಳೆವ ಕೇರಳದ ಅದ್ಭುತ ಕಾಡುಗಳು!
ಭಾರತದಲ್ಲಿಯೂ ಅದರಲ್ಲೂ ವಿಶೇಷವಾಗಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳಗಳಂತಹ ರಾಜ್ಯಗಳಲ್ಲಿ ನಡುಗಡ್ಡೆಗಳನ್ನು ಕಾಣಬಹುದಾಗಿದೆ. ಅವು ಪ್ರವಾಸಿ ಆಕರ್ಷಣೆಗಳಾಗಿಯೂ ಸಹ ಜನರನ್ನು ಆಕರ್ಷಿಸುತ್ತವೆ. ಇನ್ನೂ ಈ ನಡುಗಡ್ಡೆಗೆ ತೆರಳಲು ನೀರಿನ ಮೇಲೆ ದೋಣಿಗಳ ಮೂಲಕವೆ ಸಾಗಬೇಕಾಗಿರುವುದರಿಂದ ಇವು ಇನ್ನಷ್ಟು ರೋಮಾಂಚಕ ತಾಣಗಳಾಗಿ ಕಂಡುಬರುತ್ತವೆ.
ಪ್ರಸ್ತುತ ಲೇಖನದಲ್ಲಿ ಕೇರಳ ರಾಜ್ಯದಲ್ಲಿ ಭೇಟಿ ನೀಡಬಹುದಾದ ಅಥವಾ ಭೇಟಿ ನೀಡಿದಾಗ ನಿಮ್ಮ ಮನಸನ್ನೆ ತಮ್ಮ ಪ್ರಕೃತಿ ಸೌಂದರ್ಯದಿಂದ ಕದಿಯಬಲ್ಲ ಸಾಮರ್ಥ್ಯವಿರುವಂತಹ ಕೆಲವು ಆಯ್ದ ನಡುಗಡ್ಡೆ/ದ್ವೀಪಗಳ ಕುರಿತು ತಿಳಿಸಲಾಗಿದೆ. ನಿಮಗನುಕೂಲಕರವಾದ ಯಾವುದೆ ಸಮಯದಲ್ಲಾದರೂ ಸರಿ, ಇವುಗಳಿಗೊಮ್ಮೆ ಭೇಟಿ ನೀಡಲೇಬೇಕು.
ಆಕರ್ಷಕ
ದಟ್ಟ ಹಸಿರಿನಿಂದ ಕೂಡಿರುವ ಈ ದ್ವೀಪವು ಭೇಟಿ ನೀಡಿದ ಕ್ಷಣ ಮಾತ್ರದಲ್ಲೆ ಪ್ರವಾಸಿಗರ ಮನ ಕದ್ದು ಬಿಡುವ ಸಾಮರ್ಥ್ಯ ಹೊಂದಿದೆ. ಪ್ರಮುಖ ನದಿಯೊಂದರ ನದಿಪಾತ್ರ ಭೂಮಿಯಾಗಿರುವ ಈ ದ್ವೀಪವು ಒಂದು ದಿನದ ಥಟ್ ಪ್ರವಾಸ ಅಥವಾ ಚುಟುಕು ಪ್ರವಾಸಕ್ಕೆ ಹೇಳಿ ಮಾಡಿಸಿದ ಹಾಗಿದೆ.
ಎಲ್ಲಿದೆ?
ಈ ದ್ವಿಪ ಇರುವುದು ಕೇರಳದ ವಯನಾಡ್ ಜಿಲ್ಲೆಯಲ್ಲಿ. ವಯನಾಡ್ ನ ಮನಂತವಾಡಿಯ ಪೂರ್ವಕ್ಕೆ ಸುಮಾರು 18 ಕಿ.ಮೀ ಗಳಷ್ಟು ದೂರದಲ್ಲಿ ಕಬಿನಿ ನದಿಯಲ್ಲಿ ನಿರ್ಮಿತ ಈ ಅದ್ಭುತ ದ್ವಿಪವಿದೆ. ಸುತ್ತಲೂ ಕಬಿನಿ ಹಾಗೂ ಇತರೆ ನೀರಿನ ಮೂಲಗಳಿಂದ ಸುತ್ತುವರೆದಿದೆ. ಇದನ್ನು ಕುರುವದ್ವೀಪ ಎಂದು ಕರೆಯುತ್ತಾರೆ.
ಕಡ್ಡಾಯವಾಗಿ
ಈ ದ್ವೀಪಕ್ಕೆ ತೆರಳಲು ಕೇರಳ ಪ್ರವಾಸೋದ್ಯಮ ಇಲಾಖೆಯು ದೋಣಿಗಳ ವ್ಯವಸ್ಥೆ ಕಲ್ಪಿಸಿದೆ. ಆದರೆ ಈ ದ್ವೀಪಕ್ಕೆ ಬೆಕೆಂದಾಗ ಪ್ರವೇಶಿಸಲು ಅನುಮತಿಯಿಲ್ಲ. ಇದನ್ನು ಪ್ರವೇಶಿಸಬಯಸಿದ್ದಲ್ಲಿ ಮುಂಚಿತವಾಗಿಯೆ ಅರಣ್ಯ ಇಲಾಖೆಯಿಂದ ಅನುಮತಿ ಪತ್ರವನ್ನು ಪಡೆಯಬೇಕಾಗಿರುತ್ತದೆ.
ಸಮೂಹ
ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿಯಿರುವ ಚಿಕ್ಕ ಪುಟ್ಟ ನಡುಗಡ್ಡೆಗಳ ಸಮೂಹವಾಗಿದೆ ಕವ್ವಾಯಿ ದ್ವೀಪ. ನೋದಲು ಬಲು ಆಕರ್ಷಕವಾಗಿದೆ. ಕವ್ವಾಯಿ ನದಿಯಲ್ಲಿರುವ ಈ ನಡುಗಡ್ಡೆಗೆ ತೆರಳಲು ಪಯ್ಯನೂರಿನಿಂದ ಸೇತುವೆ ನಿರ್ಮಿಸಲಾಗಿದ್ದು ಆ ಮೂಲಕ ಕವ್ವಾಯಿಗೆ ತೆರಳಬಹುದಾಗಿದೆ.
ಸಾಂಪ್ರದಾಯಿಕ ಗ್ರಾಮ
ತ್ರಿಶ್ಶೂರ್ ಜಿಲ್ಲೆಯ ಇಂಗಂಡಿಯೂರು ಹಾಗೂ ಕಾಡಪ್ಪುರಂ ನಗರಪಂಚಾಯತಿಗಳ ವ್ಯಾಪ್ತಿಯ ಮಧ್ಯದಲ್ಲಿ ಸ್ಥಿತವಿರುವ ಚೆಟ್ಟುವಾ ದ್ವೀಪವು ಬಲು ಆಕರ್ಷಕ ತಾಣವಾಗಿದೆ. ಎನಮಕ್ಕಲ್ ಹಿನ್ನೀರಿನ ಕೆರೆಯಲ್ಲಿರುವ ಚೆಟ್ಟುವಾ ಸಾಂಪ್ರದಾಯಿಕ ಗ್ರಮಾವಾಗಿದೆ.
ದಟ್ಟಹಸಿರು
ಹಿನ್ನೀರಿನ ಸೌಂದರ್ಯ, ದಟ್ಟ ಹಸಿರಿನ ವನರಾಶಿ, ಮ್ಯಾಂಗ್ರೋವ್ ಕಾಡುಗಳು, ಮೀನುಗಳನ್ನು ಹಿಡಿಯುವ ಚೀನಿ ಮಾದರಿಯ ಬಲೆಗಳು ಈ ದ್ವೀಪದ ಪ್ರಮುಖ ಆಕರ್ಷಣೆಗಳಾಗಿವೆ.
ತಲಶೆರಿ
ಕನ್ನೂರು ಜಿಲ್ಲೆಯ ತಲಶೆರಿಯ ಅರಬ್ಬಿ ಸಮುದ್ರದಲ್ಲಿ ಕಂಡುಬರುವ ಆಕರ್ಷಕ ನಡುಗಡ್ಡೆ ಇದಾಗಿದೆ. ಇದನ್ನು ದರ್ಮಡಂ ನಡುಗಡ್ಡೆ ಎಂದು ಕರೆಯುತ್ತಾರೆ. ದಟ್ಟವಾದ ಪಾಮ್, ತೆಂಗಿನ ಗಿಡಗಳು ಹಾಗೂ ಇತರೆ ಬಳ್ಳಿ, ಸಸ್ಯಗಳಿಂದ ತುಂಬಿರುವ ಈ ನಡುಗಡ್ಡೆ ಮುಳಪ್ಪಿಳಂಗಾಡ್ ಕಡಲ ತೀರದಿಂದ ಅದ್ಭುತವಾಗಿ ಕಂಡುಬರುತ್ತದೆ.
ಅನುಮತಿ ಬೇಕು
ಸಮುದ್ರದಲ್ಲಿ ಅಲೆಗಳು ಕಡಿಮೆಯಿದ್ದಾಗ ನಡೆಯುತ್ತಲೂ ಸಹ ಈ ನಡುಗಡ್ಡೆಯನ್ನು ಮುಟ್ಟಬಹುದು. ಆದರೆ ಇದನ್ನು ಪ್ರವೇಶಿಸಲು ಅನುಮತಿ ಪಡೆಯಬೇಕಾಗಿರುವುದು ಕಡ್ಡಾಯವಾಗಿದೆ.
ಕೊಲ್ಲಂ
ಕೇರಳದ ಕೊಲ್ಲಂ ಜಿಲ್ಲೆಯ ಅಷ್ಟಮುಡಿ ಕೆರೆ ಹಾಗೂ ಕಲ್ಲಾಡಾ ನದಿಯ ಸಂಗಮದ ಬಳಿ ಸ್ಥಿತವಿರುವ ಮುನ್ರೋ ದ್ವೀಪ ಆಕರ್ಷಕ ಪ್ರವಾಸಿ ತಾಣವಾಗಿದೆ. ದೋಣಿ ಸ್ಪರ್ಧೆಗೆ ಹೆಸರುವಾಸಿಯಾದ ಈ ನಡುಗಡ್ಡೆ ಅನೇಕ ವಿದೇಶಿ ಪ್ರವಾಸಿಗರಿಂದ ಸಾಮಾನ್ಯವಾಗಿ ಭೇಟಿ ನೀಡಲ್ಪಡುತ್ತದೆ.
ಚಿತ್ರಕೃಪೆ: DhanushSKB
ಎರ್ನಾಕುಲಂ
ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಚಿಕ್ಕ ನಡುಗಡ್ಡೆ ತಾಣ ಇದಾಗಿದೆ. ತನ್ನ ಸುಂದರ ವಾತಾವರಣದಿಂದ ಜನರನ್ನು ಬಹುವಾಗಿ ಆಕರ್ಷಿಸುತ್ತದೆ ಈ ನಡುಗಡ್ಡೆ.
ಹಿತಕರ
ಡಿಸೆಂಬರ್ ನಿಂದ ಫೆಬ್ರುವರಿವರೆಗಿನ ಸಮಯವು ಈ ದ್ವೀಪಕ್ಕೆ ಭೇಟಿ ನೀಡಲು ಪ್ರಶಸ್ತವಾದ ಸಮಯವಾಗಿದ್ದು ಆ ಸಮಯದಲ್ಲಿ ಇಲ್ಲಿ ಹಿತಕರವಾದ ವಾತಾವರಣವನ್ನು ಕಾಣಬಹುದು.
ಅಲಪ್ಪುಳ
ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಬರುವ ಈ ಚಿಕ್ಕ ನಡುಗಡ್ಡೆಯು ನೋಡಲು ಬಲು ಆಕರ್ಷಕವಾಗಿದೆ. ಈ ನಡುಗಡ್ಡೆಯ ಹೆಸರನ್ನು ಅರ್ಥೈಸಿದಾಗ ಮಧ್ಯರಾತ್ರಿಯ ಮರಳು ಎಂಬ ಭಾವಾರ್ಥ ಬರುತ್ತದೆ.
ಚಿತ್ರಕೃಪೆ: Navaneeth Krishnan S
ತಿರುವನಂತಪುರಂ
ತಿರುವನಂತಪುರಂನ ದಕ್ಷಿಣದ ತುದಿಯಲ್ಲಿರುವ ಒಂದು ದ್ವಿಪ ಪ್ರದೇಶವಾಗಿದೆ ಪೂವಾರ್. ಹಿನ್ನೀರು ಹಾಗೂ ನಯನಮನೋಹರ ಕಡಲ ತೀರಗಳಿಂದ ಭೂಷಿತವಾಗಿರುವ ಪೂವಾರ್ ದ್ವೀಪವು ತಿರುವನಂತಪುರಂನ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ.
ನೈಸರ್ಗಿಕ ಬಂದರು
ಪೂವಾರ್ ನದಿಮುಖಜ ಭೂಮಿ ಹೊಂದಿದ್ದು ನೆಯ್ಯಾರ್ ನದಿ ಪೂವಾರ್ ಬಳಿಯಲ್ಲೆ ಅರಬ್ಬಿ ಸಮುದ್ರಕ್ಕೆ ಸೇರುತ್ತದೆ. ಇಲ್ಲಿನ ನೈಸರ್ಗಿಕ ಬಂದರು ಸಾಕಷ್ಟು ಸುಂದರವಾಗಿದ್ದು ಪ್ರವಾಸಿಗರನ್ನು ಚ್ಂಬಕದಂತೆ ಸೆಳೆಯುತ್ತದೆ.
ಕುಮರಕಮ್
ಒಮ್ಮೆ ಯೋಚಿಸಿ...ಎಲ್ಲಾದರೂ ಹೋಗಬೇಕೆಂದರೆ ದೋಣಿಯಲ್ಲೆ ಸಾಗುವುದು, ಇರುವ ಮನೆಯೆಂದರೆ ದೋಣಿ ಮನೆ, ಮನೆಯ ಮುಂಭಾಗದಲ್ಲೂ ನೀರು ಹಿಂಭಾಗದಲ್ಲೂ ನೀರು. ಅಲ್ಲಲ್ಲಿ ಸಂಚಾರಕ್ಕೂ ದೋಣಿಗಳೆ. ಒಂದು ವಿಶಿಷ್ಟ ರೀತಿಯ ಅನುಭವವುಂಟಾಗುವುದು ಸಹಜ. ಈ ಒಂದು ಸುಂದರ ಅನುಭವವನ್ನು ಅರಸಿ ಹೊರಟಾಗ ಸಿಗುವುದೆ ಕುಮರಕಮ್. ಹಿನ್ನೀರಿನ ದ್ವೀಪ.
ವಿದೇಶಿಯರ ನೆಚ್ಚಿನ
ಕುಮರಕಮ್ ತಾಣವು ಕೇರಳದ ತಾಜಾ ನೀರಿನ ಅತಿ ದೊಡ್ಡ ಸರೋವರವಾದ ವೆಂಬನಾಡ್ ಕೆರೆಯ ಹಿನ್ನಿಲೆಯಲ್ಲಿ ನೆಲೆಸಿರುವುದರಿಂದ ಹಿನ್ನೀರಿನ ಪ್ರವಾಸೋದ್ಯಮಕ್ಕೆ ಅತ್ಯಂತ ಹೆಸರುವಾಸಿಯಾಗಿದೆ. ಕೇವಲ ಭಾರತೀಯರು ಮಾತ್ರವಲ್ಲ, ವಿದೇಶಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ತಾಣವನ್ನು ಅರಸುತ್ತಾ ಇಲ್ಲಿಗೆ ಬರುತ್ತಾರೆ.
ವಲಸೆ ಪಕ್ಷಿಗಳು
ಕುಮರಕಮ್ ಒಂದು ಸುಂದರ ಪಕ್ಷಿ ಧಾಮವೂ ಆಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಹಕ್ಕಿಗಳು ಇಲ್ಲಿ ವಲಸೆ ಬರುತ್ತವೆ. ನಿಮ್ಮಲ್ಲಿರುವ ಛಾಯಾಗ್ರಾಹಕ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಉತ್ತಮ ಪ್ರದೇಶವಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಇಲ್ಲಿರುವ ಪಕ್ಷಿಧಾಮವು ಬೆಳಿಗ್ಗೆ ಆರರಿಂದ ಸಂಜೆ ಆರು ಘಂಟೆಯವರೆಗೆ ಮಾತ್ರ ತೆರೆದಿರುತ್ತದೆ.