ಸಾಕಷ್ಟು ವಿಶೇಷವಾಗಿದೆ ಈ ಹೊಂಡ. ಇದರ ಶಕ್ತಿಯಂತೂ ಹೇಳ ತೀರದಷ್ಟು. ಅನೇಕ ಪವಾಡಗಳು ಇದರ ಮಹಿಮೆಯಿಂದ ಜರುಗಿದೆ ಹಾಗೂ ಇಂದಿಗೂ ಜರಗುತ್ತಲಿವೆ ಎನ್ನಲಾಗಿದೆ. ಮುಂಜಾವಿನ ಹಾಗೂ ಮುಸ್ಸಂಜೆಯ ಸೂರ್ಯನ ಕಿರಣಗಳು ಈ ಹೊಂಡದ ಮೇಲೆ ಬಿದ್ದಾಗ, ಹೊಂಡವು ಬಂಗಾರದಂತೆ ಹೊಳಪು ಪಡೆಯುತ್ತದೆ. ಈ ನೋಟ ಎಂಥವರನ್ನೂ ಬೆರುಗುಗೊಳಿಸದೆ ಇರಲಾರದು.
ಸೂರ್ಯದ ಸದಾಶಿವರುದ್ರ ದೇವಾಲಯ: ಮಣ್ಣಿನ ಬೊಂಬೆಗಳನ್ನೆ ಕೊಡಬೇಕಿಲ್ಲಿ!
ಇದರ ಸ್ಥಳ ಪುರಾಣ ಗಮನಿಸಿದಾಗ ತಿಳಿದು ಬರುವ ವಿಷಯವೆಂದರೆ, ಹಿಂದೆ ಬೇಲೂರು-ಹಳೇಬೀಡು ಸ್ಥಳಗಳಿಗೆ ಶತ್ರುಗಳು ಆಕ್ರಮಣ ಮಾಡಿದಾಗ ಅಲ್ಲಿ ವಾಸವಿದ್ದ ಅನೇಕ ಜನರು ಬೇರೆಡೆ ವಲಸೆ ಹೋದರು. ಅಂತಹ ಒಂದು ಸಂದರ್ಭದಲ್ಲಿ ಹೊಯ್ಸಳರ ಒಂದು ಕುಟುಂಬವು ಈ ಹೊಂಡವಿರುವ ಪ್ರದೇಶಕ್ಕೆ ಬಂದು ನೆಲೆಸಿದರು.
ಹಾಗೆ ಬಂದು ನೆಲೆಸಿದವರು ಶಿವನ ಪರಮ ಭಕ್ತರಾಗಿದ್ದು, ಶಿವನಿಗೆ ಮುಡಿಪಾದ ಐದು ದೇವಾಲಯಗಳನ್ನು ಮತ್ತೆ ವಿವಿಧೆಡೆ ನಿರ್ಮಿಸಿದರು. ಅವುಗಳನ್ನು ಪಂಚಶಂಕರ ಎಂದು ಕರೆಯಲಾಗಿದೆ. ಹಾಗೆ ಪಂಚ ಶಂಕರಗಳಲ್ಲಿ ಒಬ್ಬನಾಗಿದ್ದಾನೆ ಈ ಗುಳಿ ಗುಳಿ ಶಂಕರ. ಗುಳಿ ಗುಳಿ ಶಂಕರ ಲಿಂಗವು ಪ್ರತಿಷ್ಠಾಪಿತವಾದ ಜಾಗದ ಕುರಿತು ತಿಳಿದಾಗ ಒಂದು ಕ್ಷಣ ಅಚ್ಚರಿಯಾಗದೆ ಇರಲಾರದು.
ಇನ್ನೂ ಈ ಹೊಂಡದ ಕುರಿತು ಸಾಕಷ್ಟು ರೋಚಕವಾದ ಸಂಗತಿಗಳಿವೆ. ಪ್ರಪ್ರಥಮವಾಗಿ ಈ ಹೊಂಡದಲ್ಲಿನ ನೀರು ಸಾಕಷ್ಟು ವಿಶೇಷ ಹಾಗೂ ಪವಾಡಮಯ ಎನ್ನಲಾಗಿದೆ. ಇದನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದ್ದು ಇದರಲ್ಲಿ ಸಾಮಾನ್ಯವಾಗಿ ದೊರಕುವ ಕುಡಿಯುವ ನೀರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಕೆಲವು ವಿಶೇಷವಾದ ಖನಿಜಾಂಶಗಳು ಇರುವುದು ಪತ್ತೆಯಾಗಿದೆಯಂತೆ.
ಈ ಒಂದು ಕಾರಣದಿಂದ ಈ ನೀರು ಸಾಕಷ್ಟು ಔಷಧೀಯ ಗುಣ ಪಡೆದಿದ್ದು ಸರ್ವ ರೀತಿಯ ಚರ್ಮ ವ್ಯಾಧಿಗಳಿಗೆ, ಮೂತ್ರ ಕೋಶದ ಕಲ್ಲುಗಳಿಗೆ, ಶೀತಕ್ಕೆ ಸಂಬಂಧಿಸಿದ ಹಲವು ರೋಗಗಳಿಗೆ ಅತ್ಯಂತ ಪರಿಣಾಮಕಾರಿಯಾದ ಪರಿಹಾರ ಎಂದು ಇದರಿಂದ ಒಳಿತು ಕಂಡ ಹಲವಾರು ಭಕ್ತರ ಅಭಿಪ್ರಾಯವಾಗಿದೆ. ಇನ್ನೂ ಈ ನೀರು ಸದಾಕಾಲ ಉಕ್ಕಿ ಹರಿಯುತ್ತಲೆ ಇರುತ್ತದೆ. ಸಾಮಾನ್ಯವಾಗಿ ನೀರಿನಲ್ಲಿ ಎಲೆಗಳನ್ನು ಹಾಕಿದಾಗ ಅವು ತೇಲುತ್ತವೆ. ಆದರೆ ಶಿವನಿಗೆ ಪ್ರೀಯವಾದ ಬಿಲ್ವ ಪತ್ರೆಯನ್ನು ಹಾಕಿದಾಗ ನಿಮ್ಮ ಭಕ್ತಿ ಶಕ್ತಿಗನುಗುಣವಾಗಿ ಅದು ಮುಳುಗುತ್ತದೆ.
ಹೌದು, ಈ ಹೊಂಡಕ್ಕೆ ಬೇರೆ ಯಾವ ಬಾಹ್ಯ ನೀರಿನ ಮೂಲಗಳಿಲ್ಲ. ಆದರೂ ಇದರಲ್ಲಿನ ನೀರು ಕಡು ಬೇಸಿಗೆಯ ಸಮಯದಲ್ಲೂ ಸದಾ ಉಕ್ಕಿ ಹರಿಯುತ್ತಿರುತ್ತದೆ. ಇದಕ್ಕೆ ಕಾರಣ ಈ ಹೊಂಡದ ತಳದಲ್ಲಿರುವ ನೀರಿನ ಅಗಾಧ ಚಿಲುಮೆ. ಇದು ಸದಾ ನೀರನ್ನು ರಭಸದಿಂದ ಹೊರದಬ್ಬುತ್ತಿರುತ್ತದೆ. ಹಾಗಾಗಿ ನೀರಿನ ಗುಳ್ಳಿಗಳು ಈ ಹೊಂಡದಲ್ಲಿ ಜಿನುಗುತ್ತಿರುತ್ತವೆ.
ನೀರಿನಲ್ಲಿ ಸದಾ ಹೀಗೆ ಜಿನುಗುವ ಗುಳ್ಳಿಗಳಿಂದಾಗಿಯೆ ಇದಕ್ಕೆ ಗುಳಿ ಗುಳಿ ಶಂಕರ ಎಂಬ ಹೆಸರು ಬಂದಿದೆ. ಇನ್ನೂ ಈ ಹೊಂಡದಲ್ಲಿರುವ ಪಾಚಿ ಹಾಗೂ ಇತರೆ ಸಸ್ಯಗಳು ಹರಡದೆ ಖಂಬಗಳಂತೆ ನೇರವಾಗಿ ಎದ್ದು ನಿಂತಿರುವುದನ್ನು ಗಮನಿಸಬಹುದು. ಇದಕ್ಕೆ ಕಾರಣ ನೀರಿನಲ್ಲಿರುವ ಒತ್ತಡ. ಇವು ಬಂಗಾರದ ಬಣ್ಣವನ್ನು ಹೊಂದಿವೆ. ಆ ಕಾರಣದಿಂದಾಗಿಯೆ ಹೊಂಡವು ಬಂಗಾರದ ಹೊಂಡದಂತೆ ಕಂಗೊಳಿಸುತ್ತದೆ.
ಈ ಹೊಂಡ ಮಾಡುವ ಎಲ್ಲ ಚಮತ್ಕಾರಗಳಿಗೆ, ವಿಸ್ಮಯಗಳಿಗೆ ಮುಖ್ಯ ಕಾರಣ, ಈ ಹೊಂಡದಲ್ಲಿರುವ ಸ್ಪಷ್ಟವಾಗಿ ಕಂಡು ಬರುವ ಶಿವಲಿಂಗ. ಮೇಲೆ ತಿಳಿಸಿದ ಹಾಗೆ ಇಲ್ಲಿಗೆ ಬಂದಿದ್ದ ಹೊಯ್ಸಳ ಕುಟುಂಬವೊಂದು ಈ ಚಿಲುಮೆಯ ಹಾಗೂ ಹೊಂಡದ ಕುರಿತು ತಿಳಿದು ಇದರ ಒಳಗೆಯೆ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಹಾಗಾಗಿ ಶಿವನ ಶಕ್ತಿಯಿಂದ ಜಾಗೃತವಾಗಿರುವ ಮಾಯಾ ಹೊಂಡ ಎಂದೂ ಸಹ ಇದನ್ನು ಕರೆಯುತ್ತಾರೆ.
ಹೀಗೆ ಹೊಂಡದಲ್ಲಿ ಪ್ರತಿಷ್ಠಾಪಿಸಲಾದ ಶಿವಲಿಂಗದ ವಿಷಯ ಕಾಲ ಕಳೆದಂತೆ ಮರೆತೆ ಹೋಯಿತು. ಹೀಗಿರುವಾಗ ಒಂದೊಮ್ಮೆ ದನಗಳನ್ನು ಮೇಯಿಸುತ್ತ ಇಲ್ಲಿಗೆ ಬಂದಿದ್ದ ಒಬ್ಬರಿಗೆ ಅವರು ವಿಶ್ರಮಿಸುತ್ತಿರುವಾಗ ಓರ್ವ ಋಷಿಯು ಕನಸಲ್ಲಿ ಈ ಸ್ಥಳದ ಮಹಿಮೆಯ ಕುರಿತು ತಿಳಿಸಿ ಶಿವ ದೇವಾಲಯವೊಂದನ್ನು ನಿರ್ಮಿಸಲು ಸೂಚಿಸಿದರು. ಹಾಗಾಗಿ ಈ ಸ್ಥಳದಲ್ಲಿ ಶಿವನಿಗೆ ಮುಡಿಪಾದ ದೇವಾಲಯವಿದ್ದು ಅದನ್ನು ಶಂಕರೇಶ್ವರ ಎನ್ನುತ್ತಾರೆ.
ಇದರಲ್ಲಿರುವ ಪಾಚಿಗಳು ಶಿವನ ಜಟೆಗಳಂತೆಯೆ ಗೋಚರಿಸುವುದರಿಂದ ಇದನ್ನು ಜಟಾ ತೀರ್ಥ ಹಾಗೂ ಜಟಾ ಲಿಂಗ ಎಂತಲೂ ಕರೆಯಲಾಗಿದೆ. ಭಕ್ತಿಯಿಂದ ಈ ಶಿವನನ್ನು ಪೂಜಿಸಿ ಇದರಿಂದ ಉಕ್ಕಿ ಹರಿಯುವ ನೀರನ್ನು ಸೇವಿಸಿದರೆ ಎಲ್ಲ ಕಷ್ಟ-ಕಾರ್ಪಣ್ಯಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಈ ರೀತಿಯಾಗಿ ಜಾಗೃತ ಹಾಗೂ ಶಕ್ತಿಶಾಲಿ ಹೊಂಡವಾಗಿ ಗಮನ ಸೆಳೆವ ಗುಳಿ ಗುಳಿ ಶಂಕರ ಇರುವುದು ಕರ್ನಾಟಕದಲ್ಲಿ.
ಗಮನಸೆಳೆವ ಆಕರ್ಷಕ ಪುಷಕರಿಣಿಗಳು
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗುಬ್ಬಿಗ ಎಂಬ ಗ್ರಾಮದ ವ್ಯಾಪ್ತಿಯಲ್ಲಿ ಈ ಗುಳಿ ಗುಳಿ ಶಂಕರ ಮಾಯಾ ಹೊಂಡವಿದೆ. ಶಿವಮೊಗ್ಗ ಕೇಂದ್ರದಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಶಿವಮೊಗ್ಗದಿಂದ ಸುಮಾರು 40 ಕಿ.ಮೀ ದೂರದಲ್ಲಿ ಗುಬ್ಬಿಗ ಗ್ರಾಮವಿದ್ದು ಗುಬ್ಬಿಗ ತಲುಪುವ ಮುಂಚೆಯೆ ಈ ಸ್ಥಳವು ಸ್ಥಿತವಿದ್ದು ಸ್ಥಳೀಯವಾಗಿ ವಿಚಾರಿಸುತ್ತ ಈ ಹೊಂಡಕ್ಕೆ ಭೇಟಿ ನೀಡಬಹುದಾಗಿದೆ.