ಜೀವನಕ್ಕೆ ಬೇಕಾಗಿರುವ ಅತ್ಯವಶ್ಯಕ ಮೂಲಭೂತಗಳ ಪೈಕಿ ನೀರೂ ಸಹ ಒಂದು. ನೀರು ಸಕಲ ಜೀವರಾಶಿಗಳಿಗೆ ಬದುಕಲು ಅವಶ್ಯಕವಾಗಿರುವುದೂ ಅಲ್ಲದೆ ಮನುಷ್ಯನಿಗೆ ನಾನಾ ವಿಧಗಳಲ್ಲಿ ಪ್ರಯೋಜನಕಾರಿಯೂ ಸಹ ಆಗಿದೆ, ಅದು ಕೂಡ ಯಾವುದೆ ಅಪೇಕ್ಷೆಗಳನ್ನು ಬಯಸದೆ. ಹಿಂದಿನಿಂದಲೂ ಸನಾತನ ಹಿಂದೂ ಧರ್ಮದಲ್ಲಿ ನೀರಿಗೆ ಅಪಾರವಾದ ಮಹತ್ವ ನೀಡಲಾಗಿರುವುದನ್ನು ಕಾಣಬಹುದು. ಕೇವಲ ದೈಹಿಕ ಕಲ್ಮಶ ಮಾತ್ರವಲ್ಲದೆ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾಡಿದ ಪಾಪ ಕರ್ಮಗಳನ್ನೂ ಸಹ ನೀರು ತೊಳೆಯಬಲ್ಲುದು ಎಂದು ನಂಬಲಾಗಿದೆ.
ವಿಶೇಷ ಲೇಖನ : ಕಾವೇರಿಯ ಸೌಂದರ್ಯ ವರ್ಣಿಸುವ ಭೀಮೇಶ್ವರಿ
ಅದರಂತೆ ಇಂದು ಭಾರತದಲ್ಲಿ ಸಾಕಷ್ಟು ಪಾವಿತ್ರ್ಯತೆಯುಳ್ಳ ಹಲವಾರು ನದಿ, ಉಪನದಿಗಳು ಹರಿದಿರುವುದನ್ನು ಕಾಣುತ್ತೇವೆ. ಆಯಾ ಪ್ರದೇಶಗಳಲ್ಲಿ ಹರಿದಿರುವ ನದಿಗಳ ನೀರು ಅದರದೆ ಆದ ಮಹತ್ವವನ್ನು ಹೊಂದಿವೆ. ಈ ವಿಷಯದಲ್ಲಿ ಕರ್ನಾಟಕವೂ ಸಹ ಹಲವು ಸುಂದರ ನದಿಗಳು ಹರಿದಿರುವ ನಾಡಾಗಿದೆ. ಅದರಲ್ಲೂ ವಿಶೇಷವಾಗಿ ಕಾವೇರಿಯು ಕರ್ನಾಟಕ ಭಾಗದ ಗಂಗೆಯಂತೆ ಪಾವಿತ್ರ್ಯತೆ ಹೊಂದಿರುವ ನದಿಯಾಗಿದೆ. ಕರ್ನಾಟಕದ ಜೀವ ನದಿ ಎಂತಲೂ ಸಹ ಕರೆಯಲ್ಪಡುವ ಕಾವೇರಿಯು ಭಾರತದ ಏಳು ಪವಿತ್ರ ನದಿಗಳ ಪೈಕಿ ಒಂದಾಗಿದೆ.
ವಿಶೇಷ ಲೇಖನ : ಮೋಡಿ ಮಾಡುವ ನಾಡು ಕೊಡಗು
ಒಟ್ಟಾರೆ 745 ಕಿ.ಮೀ ಗಳಷ್ಟು ಉದ್ದವನ್ನು ಹೊಂದಿರುವ ಕಾವೇರಿ ನದಿಯು ಕರ್ನಾಟಕ ರಾಜ್ಯದ ಕೊಡಗಿನ ತಲಕಾವೇರಿಯಲ್ಲಿ ಉಗಮಗೊಂಡು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಜನರ ಬಾಯಾರಿಕೆ, ಆಸೆ - ಆಕಾಂಕ್ಷೆಗಳನ್ನು ನಿಸ್ವಾರ್ಥತೆಯಿಂದ ತಿರಿಸುತ್ತ ತನ್ನ ಹರಿಯುವ ಸೇವೆಯನ್ನು ಮುಂದುವರೆಸಿ ಕೊನೆಗೆ ಬಂಗಾಳ ಕೊಲ್ಲಿ ಸಮುದ್ರದಲ್ಲಿ ಸಮಾಗಮಗೊಳ್ಳುತ್ತಾಳೆ. ಕಾವೇರಿ ನದಿ ಹರಿದಿರುವ ತೀರದಗುಂಟ ಸಾಕಷ್ಟು ಸ್ಥಳಗಳು ನೆಲೆಸಿದ್ದು ಅದರಲ್ಲಿ ಹಲವು ತಾಣಗಳು ಪಾವಿತ್ರ್ಯತೆ ಪಡೆದಿದ್ದು, ಪ್ರವಾಸಿ ಸ್ಥಳಗಳಾಗಿಯೂ ಹೆಸರುವಾಸಿಯಾಗಿವೆ.
ಕಾವೇರಿಯ ಕರ್ನಾಟಕ ಸ್ಥಳಗಳು:
ಪ್ರಸ್ತುತ ಲೇಖನದ ಮೂಲಕ ಕರ್ನಾಟಕ ಭಾಗದಲ್ಲಿ ಮಾತ್ರವೆ ಕಂಡುಬರುವ ಕಾವೇರಿ ನದಿಯ ಉಗಮ ಸ್ಥಾನದಿಂದ ಹಿಡಿದು ಕರ್ನಾಟಕ ಗಡಿ ದಾಟುವ ಮುಂಚಿನ ಅದರ ದಂಡೆಗಳಲ್ಲಿ ನೆಲೆಸಿರುವ ಕೆಲ ಸುಂದರ, ಆಕರ್ಷಕ ಸ್ಥಳಗಳ ಕುರಿತು ತಿಳಿಯಿರಿ.
ಕಾವೇರಿಯ ಕರ್ನಾಟಕ ಸ್ಥಳಗಳು:
ತಲಕಾವೇರಿ : ಹಿಂದೂಗಳಿಗೆ ತಲಕಾವೇರಿಯು ಪವಿತ್ರ ಯಾತ್ರಾಸ್ಥಳ. ಬ್ರಹ್ಮಗಿರಿ ಬೆಟ್ಟದಲ್ಲಿರುವ ಇದು ಕಾವೇರಿಯ ಮೂಲ ಎಂದ ಪರಿಗಣಿಸಲ್ಪಟ್ಟಿದೆ. ಸಮುದ್ರ ಮಟ್ಟದಿಂದ ಸುಮಾರು 1276 ಮೀಟರು ಎತ್ತರದಲ್ಲಿದೆ. ಸದ್ಯ ಇಲ್ಲೊಂದು ಕೆರೆಯಿದ್ದು, ಇಲ್ಲಿ ಕಾವೇರಿಯ ಜನ್ಮವಾಗಿದೆ ಎಂದು ನಂಬಲಾಗಿದೆ. ನದಿಯಿಂದ ಕೆರೆಗೆ ನೀರು ಹರಿಯುತ್ತದೆ. ನಂತರದಲ್ಲಿ ನೀರು ಕೆಳಗೆ ಹರಿದು ಸ್ವಲ್ಪ ದೂರದಲ್ಲಿರುವ ಹರಿಯುವ ನೀರಿನ ಮೂಲವನ್ನು ಸೇರುತ್ತದೆ. ಇದರಲ್ಲಿ ವಿಶೇಷ ದಿನಗಳಲ್ಲಿ ಸ್ನಾನ ಮಾಡುವುದು ಪವಿತ್ರ ಎಂದು ನಂಬಲಾಗಿದೆ.
ಚಿತ್ರಕೃಪೆ: GoDakshin
ಕಾವೇರಿಯ ಕರ್ನಾಟಕ ಸ್ಥಳಗಳು:
ಭಾಗಮಂಡಲ : ಕಾವೇರಿ ಹರಿದಿರುವ ಭಾಗಮಂಡಲವು ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ. ಇಲ್ಲಿ ಕಾವೇರಿಯು ಕನ್ನಿಕೆ, ಸುಜ್ಯೋತಿ ಎಂಬ ಉಪನದಿಗಳೊಂದಿಗೆ ಭೂ ಒಡಲಿನಲ್ಲಿ ಸೇರ್ಪಡೆಯಾಗುತ್ತಾಳೆಂದು ನಂಬಲಾಗಿದ್ದು ಇದನ್ನು ತ್ರಿವೇಣಿ ಸಂಗಮ ಎಂತಲೂ ಸಹ ಕರೆಯಲಾಗುತ್ತದೆ. ತುಲಾ ಸಂಕ್ರಮಣದ ಸಂದರ್ಭದಲ್ಲಿ ತಲಕಾವೇರಿಗೆ ಹೋಗುವ ಮುನ್ನ ಭಾಗಮಂಡಲದಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಚಿತ್ರದಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮ ಹಾಗೂ ಹಿನ್ನಿಲೆಯಲಿ ಭಾಗಂದೇಶ್ವರ ದೇವಾಲಯ.
ಚಿತ್ರಕೃಪೆ: Ashok Prabhakaran
ಕಾವೇರಿಯ ಕರ್ನಾಟಕ ಸ್ಥಳಗಳು:
ದುಬಾರೆ : ಕರ್ನಾಟಕ ರಾಜ್ಯದಲ್ಲಿರುವ ದುಬಾರೆ ದಟ್ಟವಾದ ಕಾಡುಗಳಿಂದೊಡಗೂಡಿದ ಸುಂದರ ತಾಣವಾಗಿದೆ. ಇದು ವಿಶೇಷವಾಗಿ ಆನೆ ತರಬೇತಿ ಶಾಲೆಯಿಂದ ಪ್ರಸಿದ್ಧಿ ಹೊಂದಿದೆ. ಕೊಡಗು ಜಿಲ್ಲೆಯ ಬಳಿ ಇರುವ ದುಬಾರೆ ದಟ್ಟಾರಣ್ಯ ಪ್ರದೇಶವು ಕಾವೇರಿ ನದಿ ದಂಡೆಯಲ್ಲಿ ನೆಲೆಸಿದೆ. ದುಬಾರೆ ಸುಂದರ ಪರಿಸರದಲ್ಲಿರುವ ಅದ್ಭುತ ಪ್ರವಾಸಿ ತಾಣವಾಗಿದ್ದು ರಜೆಯ ಮಜದೊಂದಿಗೆ, ಆನೆಗಳ ತರಬೇತಿ ಶಾಲೆ, ಪ್ರಕೃತಿ ಸೌಂದರ್ಯ, ಜಲಪಾತಗಳು, ಬೆಟ್ಟ ಗುಡ್ಡ ಮತ್ತು ನದಿಯಲ್ಲಿ ಸಾಹಸ ಕ್ರೀಡೆಗಳನ್ನು ಪ್ರವಾಸಿಗರು ಇಲ್ಲಿ ಆನಂದಿಸಬಹುದು.
ಚಿತ್ರಕೃಪೆ: Manigandan Selvarajan
ಕಾವೇರಿಯ ಕರ್ನಾಟಕ ಸ್ಥಳಗಳು:
ನಿಸರ್ಗಧಾಮ : ನಿಸರ್ಗಧಾಮವು ಕಾವೇರಿ ನದಿಯಲ್ಲಿನ ಒಂದು ದ್ವೀಪವಾಗಿದೆ. ಕೊಡಗು ಜಿಲ್ಲೆಯ ಕುಶಾಲ ನಗರದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ. ಇದೊಂದು ಪಾರಂಪರಿಕ ಪಾರ್ಕ್ ಆಗಿದ್ದು ಸುಮಾರು 35 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿದೆ. 90 ಮೀಟರು ಉದ್ದದ ಸೇತುವೆಯನ್ನು ಮುಖ್ಯ ಭೂಮಿಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿದೆ. ಇದರ ಮೂಲಕ ಕಾವೇರಿಯ ನದಿಯನ್ನು ಪ್ರವಾಸಿಗರು ದಾಟಬಹುದು.
ಚಿತ್ರಕೃಪೆ: Tinucherian
ಕಾವೇರಿಯ ಕರ್ನಾಟಕ ಸ್ಥಳಗಳು:
ಕುಶಾಲನಗರ : ಕಾವೇರಿ ನದಿಯ ದಂಡಎಯ ಮೆಲೆ ನೆಲೆಸಿರುವ ಕುಶಾಲನಗರವು ಬೌದ್ಧರ ಕರ್ನಾಟಕದ ಅತಿ ಮುಖ್ಯ ಕೇಂದ್ರವಾದ ಬೈಲುಕುಪ್ಪೆಗೆ ಬಹು ಹತ್ತಿರದಲ್ಲಿದೆ. ಬೈಲುಕುಪ್ಪೆ ಕುಶಾಲನಗರದಿಂದ ಕೇವಲ ಆರು ಕಿ.ಮೀ ದೂರದಲ್ಲಿದೆ. ಕುಶಾಲನಗರದಲ್ಲಿ ಕಾವೇರಿಯ ಸುಂದರ ಹರಿವನ್ನು ಕಾಣಬಹುದು.
ಚಿತ್ರಕೃಪೆ: Kmkutty
ಕಾವೇರಿಯ ಕರ್ನಾಟಕ ಸ್ಥಳಗಳು:
ಚುಂಚನಕಟ್ಟೆ ಜಲಪಾತ : ಚುಂಚನಕಟ್ಟೆ ಜಲಪಾತ ಅಥವಾ ಫಾಲ್ಸ್, ಕಾವೇರಿ ನದಿಯಿಂದ ರೂಪಗೊಳ್ಳುವ ಒಂದು ಸುಂದರ ಜಲಪಾತವಾಗಿದ್ದು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಹ ಯೋಗ್ಯವಾದ ತಾಣವಾಗಿದೆ. ಅಲ್ಲದೆ ಸಾಕಷ್ಟು ಕನ್ನಡ ಚಿತ್ರಗಳು ಇಲ್ಲಿ ಚಿತ್ರೀಕರಣ ಸಹ ಗೊಂಡಿವೆ. ಅಷ್ಟೊಂದು ಹೆಸರುವಾಸಿಯಾಗಿಲ್ಲದಿದ್ದರೂ ತನ್ನದೆ ಆದ ಸುಂದರ ಪ್ರಕೃತಿಯಿಂದ ಭೇಟಿ ನೀಡುವವರ ಹೃದಯ ಕದಿಯುತ್ತದೆ ಈ ಜಲಪಾತ ತಾಣ. ಮಳೆಗಾಲದ ಸಮಯದಲ್ಲಂತೂ ಮೈದುಂಬಿ ಹರೆಯುವ ಜಲಪಾತದ ನೋಟ ಅಂದವೋ ಅಂದ...ವರ್ಣಿಸಲಾಗದಷ್ಟು ಚೆಂದವೋ ಚೆಂದ. ಚುಂಚನಕಟ್ಟೆ ಹೆಚ್ಚಿನ ಓದು
ಚಿತ್ರಕೃಪೆ: Rks 80
ಕಾವೇರಿಯ ಕರ್ನಾಟಕ ಸ್ಥಳಗಳು:
ಕೃಷ್ಣರಾಜಸಾಗರ : ಮಂಡ್ಯದ ಕೃಷ್ಣರಾಜಸಾಗರದಲ್ಲಿ ಕಾವೇರಿ ನದಿಗೆ ಜಲಾಶಯವನ್ನು ನಿರ್ಮಿಸಲಾಗಿದ್ದು ಇದನ್ನು ಕೃಷ್ಣರಾಜಸಾಗರ ಜಲಾಶಯ ಎನ್ನಲಾಗುತ್ತದೆ. ಭೌಗೋಳಿಕವಾಗಿ ಇದು ಮೈಸೂರು ನಗರಕ್ಕೆ ಅತಿ ಹತ್ತಿರದಲ್ಲಿದ್ದು ನಗರದ ಸುತ್ತಮುತ್ತಲಿನ ಪ್ರವಾಸಿ ಆಕರ್ಷಣೆಗಳ ಪೈಕಿ ಪ್ರಮುಖವಾಗಿ ಗಮನ ಸೆಳೆಯುತ್ತದೆ. ಇದರ ಪಕ್ಕದಲ್ಲಿರುವ ಉದ್ಯಾನವಂತೂ ನೋಡಲು ಬಹು ಆಕರ್ಷಕವಾಗಿದೆ.
ಚಿತ್ರಕೃಪೆ: Ashwin Kumar
ಕಾವೇರಿಯ ಕರ್ನಾಟಕ ಸ್ಥಳಗಳು:
ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣವು ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಶ್ರೀರಂಗಪಟ್ಟಣವು ಕಾವೇರಿ ನದಿಯ ಎರಡು ಕವಲುಗಳಿಂದ ನಿರ್ಮಾಣವಾದ ದ್ವೀಪದ ಊರಾಗಿದೆ. ಈ ದ್ವೀಪವು 13 ಚ.ಕಿ.ಮೀ ವಿಸ್ತೀರ್ಣವಿದ್ದು, ಮೈಸೂರಿಗೆ ತುಂಬ ಹತ್ತಿರದಲ್ಲಿದೆ. ಈ ಊರು ಇಲ್ಲಿ 9ನೇ ಶತಮಾನದಲ್ಲಿ ನಿರ್ಮಾಣವಾದ ರಂಗನಾಥಸ್ವಾಮಿ ದೇವಾಲಯದಿಂದಾಗಿ ಶ್ರೀರಂಗಪಟ್ಟಣ ಎಂಬ ಹೆಸರು ಪಡೆದಿದೆ.
ಚಿತ್ರಕೃಪೆ: Bipin Gupta
ಕಾವೇರಿಯ ಕರ್ನಾಟಕ ಸ್ಥಳಗಳು:
ಮಹಾದೇವಪುರ : ಶ್ರೀರಂಗಪಟ್ಟಣ ಬಳಿಯಿರುವ ಮಹಾದೇವಪುರವು ಕಾವೇರಿ ನದಿ ತಟದಲ್ಲಿ ನೆಲೆಸಿರುವ ಒಂದು ಸುಂದರವಾದ ಹಳ್ಳಿಯಾಗಿದೆ. ಅಲ್ಲದೆ ಇದೊಂದು ಪುಟ್ಟ ಪಕ್ಷಿಧಾಮವಾಗಿಯೂ ಹೆಸರುವಾಸಿಯಾಗಿದೆ. ಕನ್ನಡದ ಅನೇಕ ಚಿತ್ರಗಳ ಸನ್ನಿವೇಶಗಳು ಈ ಸುಂದರ ಕಾವೇರಿ ತಟದ ಹಳ್ಳಿಯಲ್ಲಿ ಚಿತ್ರೀಕರಣಗೊಂಡಿವೆ.
ಚಿತ್ರಕೃಪೆ: Ashwin Kumar
ಕಾವೇರಿಯ ಕರ್ನಾಟಕ ಸ್ಥಳಗಳು:
ತಿರುಮಕೂಡಲ ನರಸೀಪುರ : ಜನಪ್ರೀಯವಾಗಿ ಟಿ.ನರಸೀಪುರ ಎಂದು ಕರೆಯಲ್ಪಡುವ ತಿರುಮಕೂಡಲ ನರಸೀಪುರವು ಮೈಸೂರು ಜಿಲ್ಲೆಯಲ್ಲಿರುವ ಒಂದು ಪರಮ ಪಾವನ ಕ್ಷೇತ್ರವಾಗಿದೆ. ನರಸೀಪುರ ಎಂಬುದು ಪ್ರದೇಶದ ಹೆಸರಾಗಿದ್ದು ತ್ರಿಮಕೂಟ ಎಂಬ ಸಂಸ್ಕೃತ ಪದದಿಂದ ಕಾಲ ಉರುಳಿದಂತೆ ತಿರುಮಕೂಡಲ ನರಸೀಪುರ ಎಂಬ ಹೆಸರು ಬಂದಿದೆ. ಅದರಂತೆ ಇಲ್ಲಿ ಕಾವೇರಿ, ಕಬಿನಿ (ಕಪಿಲಾ) ಹಾಗೂ ಸ್ಫಟಿಕ ಸರೋವರ (ಗುಪ್ತಗಾಮಿನಿ) ಒಂದಕ್ಕೊಂದು ಸಂಗಮಗೊಂಡು ಈ ಕ್ಷೇತ್ರವನ್ನು ಪವಿತ್ರವನ್ನಾಗಿಸಿದೆ. ಇಲ್ಲಿ ಗುಪ್ತಗಾಮಿನಿಯು ರಹಸ್ಯಮಯವಾಗಿದ್ದು ಕಣ್ಣಿಗೆ ಗೋಚರಿಸುವುದಿಲ್ಲ.
ಚಿತ್ರಕೃಪೆ: romana klee
ಕಾವೇರಿಯ ಕರ್ನಾಟಕ ಸ್ಥಳಗಳು:
ತಲಕಾಡು : ಕರ್ನಾಟಕದ ಪುರಾತನ ನಗರಿ ಕಾವೇರಿ ನದಿ ತಟದ ತಲಕಾಡಿನಲ್ಲಿ ನೆಲೆಸಿರುವ ಪಂಚ ರೂಪಗಳ ಈಶ್ವರನ ಪಂಚ ಲಿಂಗ ದೇವಸ್ಥಾನಗಳೂ ಕೂಡ ಹಲವು ವರ್ಷಗಳಿಗೊಮ್ಮೆ ಪಂಚಲಿಂಗ ದರ್ಶನ ಮಹೋತ್ಸವವನ್ನು ಕಾಣುತ್ತದೆ. 2006 ರ ನಂತರ ಮತ್ತೊಮ್ಮೆ ಈ ಉತ್ಸವವು 2013 ರ ನವಂಬರ್ 28 ರಿಂದ ಡಿಸೆಂಬರ್ 2 ರ ವರೆಗೆ ಆಯೋಜನೆಗೊಂಡಿದೆ. ಸಹಸ್ರಾರು ಭಕ್ತ ಜನ ಭೇಟಿ ನೀಡುವ ಈ ತಲಕಾಡು ಸ್ಥಳವು ಬೆಂಗಳೂರಿನ ನೈರುತ್ಯ ಭಾಗಕ್ಕೆ ಸುಮಾರು 130 ಕಿ.ಮೀ ದೂರದಲ್ಲಿ ನೆಲೆಸಿದ್ದು, ಮೈಸೂರಿನಿಂದ ಕೇವಲ 45 ಕಿ.ಮೀ ದೂರದಲ್ಲಿದೆ.
ಚಿತ್ರಕೃಪೆ: Ashwin Kumar
ಕಾವೇರಿಯ ಕರ್ನಾಟಕ ಸ್ಥಳಗಳು:
ಶಿವನಸಮುದ್ರ : ಶಿವನಸಮುದ್ರವು ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳಿಗೆ ಪ್ರಖ್ಯಾತಿ ಪಡೆದಿದೆ. ಮಳೆಗಾಲದ ಮಧ್ಯದ ಸಮಯದಿಂದ ಹಿಡಿದು ಹೆಚ್ಚು ಕಮ್ಮಿ ಚಳಿಗಾಲದವರೆಗೆ ಕಾವೇರಿ ನೀರು ಹಾಲ್ನೋರೆಯಂತೆ ಹೂಂಕಾರ ಹಾಕುತ್ತ ರಭಸದಿಂದ ಭುವಿಗೆ ಬಿಳುವುದನ್ನು ನೋಡಿದಾಗ ರೋಮ ರೋಮಗಳೂ ಸೆಟೆದು ನಿಲ್ಲುತ್ತವೆ. ಈ ಜಲಪಾತಗಳನ್ನು ಸ್ಪಷ್ಟವಾಗಿ ವೀಕ್ಷಿಸಲು ವೀಕ್ಷಣಾ ಸ್ಥಳವೊಂದು ನಿರ್ಮಾಣ ಮಾಡಲಾಗಿದ್ದು, ಅಲ್ಲಿಂದ ಜಲಪಾತದ ಅತಿ ಮನಮೋಹಕ ದೃಶ್ಯಗಳನ್ನು ವೀಕ್ಷಿಸಬಹುದು ಹಾಗೂ ನಿಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಬಹುದು.
ಕಾವೇರಿಯ ಕರ್ನಾಟಕ ಸ್ಥಳಗಳು:
ಭೀಮೇಶ್ವರಿ : ಭೀಮೇಶ್ವರಿ ನಿಜವಾಗಿಯೂ ಆನಂದ ಕರುಣಿಸುವ ಒಂದು ಅದ್ಭುತ ಪ್ರದೇಶ. ಕಾವೇರಿ ನದಿಯು ಸುಶ್ರಾವ್ಯವಾಗಿ ಹಾಡುತ್ತ ಹರಿದಿರುವ, ಸುತ್ತ ಮುತ್ತಲಿನಲ್ಲಿ ದಟ್ಟವಾದ ಹಸಿರು ಹೊತ್ತ, ಬೆರುಗುಗೊಳಿಸುವ ಬೆಟ್ಟ ಗುಡ್ಡಗಳ ಮಧ್ಯೆ ನೆಲೆಸಿರುವ ಭೀಮೇಶ್ವರಿ ಅವಿಶ್ರಾಂತ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ವಿಶ್ರಾಂತಮಯ ತಾಣವಾಗಿದೆ.
ಚಿತ್ರಕೃಪೆ: Ashwin Kumar
ಕಾವೇರಿಯ ಕರ್ನಾಟಕ ಸ್ಥಳಗಳು:
ಮೇಕೆದಾಟು : ಭೀಮೇಶ್ವರಿ ಸನಿಹವಿರುವ ಕನಕಪುರ ತಾಲೂಕಿನಲ್ಲಿರುವ ಮೇಕೆದಾಟು ಒಂದು ಪ್ರಬುದ್ಧ ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ. ಸಂಗಮದಲ್ಲಿ ಕಾವೇರಿಯು ಅರ್ವತಿಯೊಡನೆ ಸೇರಿ ಮುಂದೆ ದಟ್ಟ ಕಾಡಿನ ಮಧ್ಯದಲ್ಲಿ ಕಲ್ಲು ಬಂಡೆಯ ಸಂಧಿಯೊಂದರ ಮೂಲಕ ಆಳವಾಗಿ ಹಾಗೂ ರಭಸವಾಗಿ ಹರಿಯುತ್ತಾಳೆ. ನದಿ ಹರಿಯುವ ಈ ಸಂಧಿಯು ಎಷ್ಟು ಚಿಕ್ಕದಾಗಿದೆಯೆಂದರೆ ಒಂದು ಮೇಕೆಯು ಕೂಡ ಒಂದೆ ಒಂದು ಜಿಗಿತದಲ್ಲಿ ದಾಟಬಹುದೆಂದು ಅನಿಸುವುದರಿಂದ ಇದಕ್ಕೆ ಮೇಕೆದಾಟು ಎಂಬ ಹೆಸರು ಬಂದಿದೆ. ಇಲ್ಲಿ ಕಾವೇರಿಯು ತೀಕ್ಷ್ಣವಾಗಿರುವುದರಿಂದ ಜಾಗರೂಕತೆಯಿಂದಿರಬೇಕು.
ಚಿತ್ರಕೃಪೆ: Madzmadz