ಬೆಂಗಳೂರಿನಿಂದ ಸುಮಾರು 170 ಕಿ.ಮೀ ಗಳಷ್ಟು ದೂರದಲ್ಲಿರುವ ಈ ತಾಣವು ವಾರಾಂತ್ಯದ ರಜೆಗಳಲ್ಲಿ ಹಾಯಾಗಿ ಸಮಯ ಕಳೆಯ ಬಯಸುವವರಿಗೆ ಒಂದು ಆದರ್ಶಪ್ರಾಯವಾದ ಸ್ಥಳವಾಗಿದೆ. ಮುಖ್ಯವಾಗಿ ಪ್ರಶಾಂತಮಯ ಸ್ಥಳದಲ್ಲಿರುವುದರಿಂದ ಈ ಜಲಾಶಯ ತಾಣವು ಸಾಕಷ್ಟಿ ಮನಸ್ಸಿಗೆ ಮುದ ನೀಡುತ್ತದೆ.
ಕನ್ನಡಿಗರು ಹೆಮ್ಮೆಪಡುವಂತಹ ಕರ್ನಾಟಕದ ಆಣೆಕಟ್ಟುಗಳು
ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜಲಾಶಯ ಇದಾಗಿದ್ದು ಸುವರ್ಣಮುಖಿ ನದಿಗೆ ಅಡ್ಡಲಾಗಿ ಇದನ್ನು ನಿರ್ಮಿಸಲಾಗಿದೆ. ಪ್ರದೇಶದ ಸುತ್ತಮುತ್ತಲಿನ ಸೌಂದರ್ಯ ಅದ್ಭುತವಾಗಿದ್ದು ಪಕ್ಷಿ ವೀಕ್ಷಣೆಗೆ ಆದರ್ಶಮಯವಾದ ಸ್ಥಳವಾಗಿದೆ. 160 ಅಡಿಗಳಷ್ಟು ಉದ್ದದ ಇಲ್ಲಿನ ಆಣೆಕಟ್ಟಿನ ನಿರ್ಮಾಣ ಕಾಮಗಾರಿಯನ್ನು 1951 ರಲ್ಲಿ ಪ್ರಾರಂಭಿಸಿ 1963 ರಲ್ಲಿ ಪೂರ್ಣಗೊಳಿಸಲಾಗಿದೆ.
ಚಿತ್ರಕೃಪೆ: Ravi Aparanji
ಈ ಆಣೆಕಟ್ಟು ನಿರ್ಮಾಣದ ಪ್ರಮುಖ ಉದ್ದೇಶ ಸುತ್ತಮುತ್ತಲಿನ ಹೊಲಗದ್ದೆಗಳಿಗೆ ನೀರುಣಿಸುವುದಾಗಿದೆ. ಇದರಿಂದ ಉಂಟಾದ ಹಿನ್ನೀರಿನ ಜಲಾಶಯವು ಒಂದು ಆದರ್ಶಮಯವಾದ ಪಿಕ್ನಿಕ್ ಸ್ಥಳವಾಗಿದ್ದು ಬಹಳಷ್ಟು ಜನರಿಗೆ ಇದರ ಕುರಿತು ತಿಳಿದೆ ಇಲ್ಲ ಎಂದರೆ ಆಶ್ಚರ್ಯವಾದರೂ ಸತ್ಯವಾದ ಸಂಗತಿ.
ಚಿತ್ರಕೃಪೆ: Ravi Aparanji
ಈ ಜಲಾಶಯವನ್ನು ತಲುಪುವುದು ಅಷ್ಟೊಂದೇನೂ ಕಷ್ಟಕರವಾಗಿಲ್ಲವಾದರೂ ನೇರವಾದ ಬಸ್ಸುಗಳ ಸೌಲಭ್ಯವಿಲ್ಲ. ನಿಮ್ಮ ಸ್ವಂತ ಅಥವಾ ಬಾಡಿಗೆ ವಾಹನಗಳ ಮೂಲಕ ಹೋಗುವುದರಿಂದ ಉತ್ತಮವಾದ ಅನುಭವ ದೊರೆಯುವುದಲ್ಲದೆ ಯಾವ ಅಡೆ ತಡೆಗಳು ಉಂಟಾಗುವುದಿಲ್ಲ.
ಚಿತ್ರಕೃಪೆ: Ravi Aparanji
ಉತ್ತರ ಕರ್ನಾಟಕದ ಕಡೆಯಿಂದ ಬರುವವರಿದ್ದರೆ ಮೊದಲಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಲುಪಿ ಅಲ್ಲಿಂದ ಹಿರಿಯೂರು-ಸಿರಾ ರಸ್ತೆಯ ಮೇಲೆ ಸಾಗುತ್ತ ಜವನಗೊಂಡನಹಳ್ಳಿಗೆ ಬಂದು ಅಲ್ಲಿಂದ ಗಾಯಿತ್ರಿ ಜಲಾಶಯವನ್ನು ತಲುಪಬಹುದು. ಈ ಜಲಾಶಯವು ಹಿರಿಯೂರಿನಿಂದ 22 ಕಿ.ಮೀ ಹಾಗೂ ಜವನಗೊಂಡನಹಳ್ಳಿಯಿಂದ 6 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Ravi Aparanji
ಇನ್ನೂ ಬೆಂಗಳೂರು ಕಡೆಯಿಂದ ಹೊರಡುವವರಿದ್ದರೆ ಮೊದಲು ತುಮಕೂರು ನಂತರ ಸಿರಾ ತಲುಪಿ ಅಲ್ಲಿಂದ ಸಿರಾ-ಹಿರಿಯೂರು ರಸ್ತೆಯ ಮೂಲಕ ಸಿರಾದಿಂದ 23 ಕಿ.ಮೀ ದೂರದಲ್ಲಿರುವ ಜವನಗೊಂಡನಹಳ್ಳಿ ತಲುಪಿ ಅಲ್ಲಿಂದ ಎಡ ತಿರುವು ಪಡೆದು ಮತ್ತೆ ಆರು ಕಿ.ಮೀ ಕ್ರಮಿಸಿ ಗಾಯಿತ್ರಿ ಜಲಾಶಯ ತಾಣವನ್ನು ತಲುಪಬಹುದಾಗಿದೆ.
ಕೇರಳದ ಈ ಜಲಾಶಯಗಳಿಗೆ ಒಮ್ಮೆ ಭೇಟಿ ನೀಡಲೇಬೇಕು ಕಣ್ರಿ!
ಇನ್ನೊಂದು ವಿಚಾರವೆಂದರೆ ಇಲ್ಲಿ ತಂಗಲು ಹಾಗೂ ತಿನ್ನಲು ಯಾವುದೆ ಹೋಟೆಲುಗಳಿಲ್ಲದ ಕಾರಣ ಒಂದು ದಿನದ ಪ್ರವಾಸಕ್ಕೆ ಅಥವಾ ಪಿಕ್ನಿಕ್ಕಿಗೆ ಮಾತ್ರ ಹೇಳಿ ಮಾಡಿಸಿದ ಸ್ಥಳವಾಗಿದೆ. ತಿನ್ನಲು ಸಿರಾ ಅಥವಾ ಹಿರಿಯೂರು ಹತ್ತಿರದ ಸುಸಜ್ಜಿತ ಹೋಟೆಲುಗಳುಳ್ಳ ತಾಲೂಕು ಪ್ರದೇಶಗಳಾಗಿವೆ.