ರಾಜ್ಯ : ಕರ್ನಾಟಕ
ಜಿಲ್ಲೆ : ಚಾಮರಾಜನಗರ
ಪಟ್ಟಣ : ಯಳಂದೂರು
ವಿಶೇಷತೆ : ಹದಿನಾರನೇಯ ಶತಮಾನದ, ಗಮನಸೆಳೆವ ಶಿಲ್ಪಕಲೆಯುಳ್ಳ ಶಿವನಿಗೆ ಮುಡಿಪಾದ ಗೌರೀಶ್ವರನ ದೇವಾಲಯ
ಕಿರು ಪರಿಚಯ
ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಯಳಂದೂರು ಜಿಲ್ಲೆಯ ಅತಿ ಚಿಕ್ಕದಾದ ತಾಲೂಕು ಕೇಂದ್ರವಾಗಿದ್ದರೂ ತನ್ನಲ್ಲಿರುವ ಆಕರ್ಷಕ ಹದಿನಾರನೇಯ ಶತಮಾನದ ಗೌರೀಶ್ವರ ದೇವಾಲಯದಿಂದಾಗಿ ಸುತ್ತಮುತ್ತಲು ಸಾಕಷ್ಟು ಜನಪ್ರೀಯತೆ ಪಡೆದಿದೆ. ಅಂತೆಯೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಈ ಪುಟ್ಟ ಪಟ್ಟಣ ಆಕರ್ಷಿಸುತ್ತದೆ.
ಮೈಸೂರಿನಿಂದ 60 ಕಿ.ಮೀ, ಬೆಂಗಳೂರಿನಿಂದ 150 ಕಿ.ಮೀ, ಚಾಮರಾಜನಗರ ಕೇಂದ್ರದಿಂದ 44 ಕಿ.ಮೀ ಹಾಗೂ ಕೊಳ್ಳೆಗಾಲದಿಂದ 18 ಕಿ.ಮೀ ಗಳಷ್ಟು ದೂರದಲ್ಲಿರುವ ಯೆಳಂದೂರಿಗೆ ತೆರಳಲು ಸಾಕಷ್ಟು ಬಸ್ಸುಗಳು ಲಭ್ಯವಿದ್ದು ಸುಲಭವಾಗಿ ತೆರಳಬಹುದಾಗಿದೆ.
ಚಿತ್ರಕೃಪೆ: Dineshkannambadi
ದೇವಾಲಯ ಇತಿಹಾಸ
ಚೋಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯ ಇದಾಗಿದ್ದು ನೋಡಲು ಬಲು ಆಕರ್ಷಕವಾಗಿ ಕಂಡುಬರುತ್ತದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಚೋಳರ ಅಧೀನ ಅಥವಾ ಸಾಮಂತ ದೊರೆಯಾದ ಸಿಂಗದೇಪ (ದೇವಭೂಪಾಲ) ರಾಜನಿಂದ ಹದಿನಾರನೇಯ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ.
1550 ರಲ್ಲಿ ನಿರ್ಮಾಣಗೊಂಡಿದ್ದ ಈ ದೇವಾಲಯ ಸುಮಾರು ಒಂದು ನೂರು ವರ್ಷಗಳಷ್ಟು ಸದೃಢವಾಗಿದ್ದು ತದನಂತರ ಸಾಕಷ್ಟು ಹಾನಿಗೊಳಗಾಯಿತು. ಇದರ ದಯನೀಯ ಸ್ಥಿತಿಗಂಡು ಬೇಸರಗೊಂಡ ದೇವಭೂಪಾಲನ ಮೊಮ್ಮಗನಾದ ಮುದ್ದಭೂಪನಿಂದ 1664 ರಲ್ಲಿ ಇದು ಜೀರ್ಣೋದ್ಧಾರ ಕಂಡಿತು.
ಚಿತ್ರಕೃಪೆ: Dineshkannambadi
ಚೋಳರ ವಾಸ್ತುಶೈಲಿಯ ಗುರುತರವಾದ ಗುಣಲಕ್ಷಣಗಳಾದ ಮೂಲೆಯಲ್ಲಿ ಬಳೆಗಳಾಕಾರದಲ್ಲಿ ಕಲ್ಲಿನಲ್ಲಿ ರಿಂಗುಗಳನ್ನು ಕೆತ್ತಿರುವುದು ಹಾಗೂ ಅದ್ಭುತ ಶಿಲ್ಪಕಲೆಯ ಕೆತ್ತನೆಗಳು ದೇವಾಲಯದ ಗೋಡೆಗಳ ಮೇಲೆ ಹಾಸು ಹೊಕ್ಕಾಗಿದ್ದು ಅಂದಿನ ಕಾಲದ ಶಿಲ್ಪಕಲಾ ಶ್ರೀಮಂತಿಕೆಯನ್ನು ಎತ್ತಿ ಹಿಡಿದು ತೋರಿಸುತ್ತವೆ. ಇನ್ನೊಂದು ವಿಶೇಷವೆಂದರೆ ಈ ದೇವಾಲಯಕ್ಕೆ ಉಳಿದಂತೆ ಎಲ್ಲೆಡೆ ಕಂಡುಬರುವಂತೆ ಗೋಪುರವಿಲ್ಲದೆ ಇರುವುದು.
ಹೀಗೆ ತಲುಪಿ
ಕೊಳ್ಳೆಗಾಲ ಹಾಗೂ ಚಾಮರಾಜನಗರಕ್ಕೆ ಬಲು ಹತ್ತಿರದಲ್ಲಿರುವುದರಿಂದ ಯಳಂದೂರನ್ನು ಸುಲಭವಾಗಿ ತಲುಪಬಹುದಾಗಿದೆ. ಬೆಂಗಳೂರು, ಮೈಸೂರು ಮುಂತಾದ ನಗರಗಳಿಂದ ಕೊಳ್ಳೆಗಾಲ ಹಾಗೂ ಚಾಮರಾಜನಗರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಒಂದೊಮ್ಮೆ ಕೊಳ್ಳೆಗಾಲ ಅಥವಾ ಚಾಮರಾಜನಗರಕ್ಕೆ ತಲುಪಿದರೆ ಅಲ್ಲಿಂದ ಯಳಂದೂರಿಗೆ ಸುಲಭವಾಗಿ ಬಸ್ಸುಗಳ ಮೂಲಕ ತೆರಳಬಹುದು.
ಅತ್ಯಾಕರ್ಷಕ ಹಿಮವದ್ ಗೋಪಾಲಸ್ವಾಮಿ ಬೆಟ್ಟ!