ಎಲ್ಲರಿಗಲ್ಲದಿದ್ದರೂ ಕೆಲವರಿಗೆ ಭಯಾನಕ ಸ್ಥಳಗಳು, ಭೂತ-ಪಿಶಾಚಗ್ರಸ್ಥ ಸ್ಥಳಗಳಿಗೆ ತೆರಳುವುದೆಂದರೆ ಎಲ್ಲಿಲ್ಲದ ಒಂದು ರೋಮಾಂಚನ ಇಂತಹ ಸ್ಥಳಗಳಿಗೆ ಪ್ರಪಂಚದಲ್ಲೇನೂ ಕೊರತೆಯಿಲ್ಲ. ಅದರಂತೆ ಭಾರತದಲ್ಲೂ ಸಹ ಈ ರೀತಿಯ ಭಯಾನಕ ಹಿನ್ನಿಲೆಯುಳ್ಳ, ಅಸ್ವಾಭಾವಿಕ ಶಕ್ತಿಗಳ ಪ್ರಭಾವವಿರುವ ಸಾಕಷ್ಟು ಕುತೂಹಲಕಾರಿ ಸ್ಥಳಗಳಿವೆ.
ಕುತೂಹಲ ಕೆರಳಿಸುವ ಭೂತ, ಪಿಶಾಚಗ್ರಸ್ಥ ಸ್ಥಳಗಳು
ನಿಮಗೂ ಈ ರೀತಿಯ ಸ್ಥಳಗಳನ್ನು ಅನ್ವೇಷಿಸಬೇಕೆಂಬ ಹಂಬಲ, ಕುತೂಹಲವಿದ್ದಲ್ಲಿ ಪುಣೆಗೊಮ್ಮೆ ಭೇಟಿ ನೀಡಬಹುದು. ಮಹಾರಾಷ್ಟ್ರದ ಅತಿ ದೊಡ್ಡ ನಗರಗಳ ಪೈಕಿ ಒಂದಾದ, ಮಾಹಿತಿ ತಂತ್ರಜ್ಞಾನದಲ್ಲಿ ಮಂಚೂಣಿಯಲ್ಲಿರುವ ಪುಣೆಯಲ್ಲಿ ಕೆಲವು ಭಯಾನಕ ಸ್ಥಳಗಳಿದ್ದು ಈ ಲೇಖನದಲ್ಲಿ ಅವುಗಳ ಕುರಿತು ತಿಳಿಸಲಾಗಿದೆ.
ವಿಕ್ಟರಿ ಚಿತ್ರಮಂದಿರ, ಚಿತ್ರಕೃಪೆ: Faizanansari
ವಿಕ್ಟರಿ ಚಿತ್ರಮಂದಿರ: ಪುಣೆ ನಗರದಲ್ಲಿ ದಿನದ ಸಮಯ ನೂರಾರು ಜನರಿಂದ ತುಂಬಿ ತುಳುಕುವ ಈ ಚಿತ್ರ ಮಂದಿರ, ರಾತ್ರಿಯ ಸಮಯದಲ್ಲಿ ಮಾತ್ರ ಎಲ್ಲರಿಗೂ ಬೇಡವಾದ ಭಯಾನಕ ಸ್ಥಳವಾಗಿ ಮಾರ್ಪಾಡಾಗುತ್ತದಂತೆ. ಸೀಟುಗಳಲ್ಲಿ ಶಬ್ದ, ವಿಚಿತ್ರವಾದ ಧ್ವನಿ ಹೀಗೆ ಎಲ್ಲರೂ ಬೆಚ್ಚಿ ಬೀಳುವಂತಹ ಪರಿಸ್ಥಿತಿ ಈ ಚಿತ್ರ ಮಂದಿರದಲ್ಲಾಗುತ್ತದಂತೆ.
ಸಿಂಹಗಡ್ ಕೋಟೆ, ಚಿತ್ರಕೃಪೆ: Dmpendse
ಸಿಂಹಗಡ್ ಕೋಟೆ : ಪುಣೆ ನಗರ ಕೇಂದ್ರದಿಂದ 40 ಕಿ.ಮೀ ದೂರದಲ್ಲಿರುವ ಈ ಐತಿಹಾಸಿಕ ಕೋಟೆ ಒಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದ್ದರೂ ಸಹ ಇದರ ಸುತ್ತ ಹಲವಾರು ಪ್ರೇತಾತ್ಮಗಳ ಕಥೆ ಅಂಟಿಕೊಂಡಿದೆ. ಇಲ್ಲಿನ ಗ್ರಾಮಸ್ಥರ ಪ್ರಕಾರ, ರಾತ್ರಿಯ ಸಮಯದಲ್ಲಿ ಯುದ್ಧ ನಡೆಯುತ್ತಿರುವ ಹಾಗೆ, ಸೈನಿಕರು ಕಿರುಚುತ್ತ ಹೋರಾಡುತ್ತಿರುವ ಹಾಗೆ ಧ್ವನಿಗಳು ಕೇಳಿಬರುತ್ತವಂತೆ! ಅಲ್ಲದೆ ಕೆಲ ವರ್ಷಗಳ ಹಿಂದೆ ಈ ಸ್ಥಳದಲ್ಲಿ ಅಪಘಾತವೊಂದು ಸಂಭವಿಸಿ ಅದರಲ್ಲಿ ಮಕ್ಕಳು ಅಸುನೀಗಿದ್ದರು. ಇಂದಿಗೂ ಅವರ ಮಕ್ಕಳ ಕಿರುಚಾಟ ಆಗಾಗ ಕೇಳಿ ಬರುತ್ತದೆ ಎಂದು ಹೇಳಲಾಗುತ್ತದೆ.
ಶನಿವಾರವಾಡಾ ಕೋಟೆ, ಚಿತ್ರಕೃಪೆ: Ashok Bagade
ಶನಿವಾರವಾಡಾ ಪುಣೆಯಲ್ಲಿರುವ ಮತ್ತೊಂದು ಐತಿಹಾಸಿಕ ಸ್ಥಳ. ಸಾಕಷ್ಟು ಪ್ರವಾಸಿಗರಿಂದ ನಿತ್ಯವೂ ಇದು ಭೇಟಿ ನೀಡಲ್ಪಡುತ್ತದೆ. ಮರಾಠಾ ಸಾಮ್ರಾಜ್ಯದ ಪೇಶ್ವೆಗಳು ವಾಸಿಸುತ್ತಿದ್ದ ಈ ಕೋಟೆಯು ಪಿಶಾಚಗ್ರಸ್ಥವಗಿದೆ ಎಂದು ಹೇಳಲಾಗುತ್ತದೆ. ಇಂದಿಗೂ ಕೆಲ ಸಮಯಗಳಲ್ಲಿ ರಾತ್ರಿಯ ಹೊತ್ತು ಬಾಲಾಜಿ ಬಾಜೀರಾವ್ ಮಗನಾಗಿದ್ದ ನಾರಾಯಣ ರಾವನ ಆಕ್ರಂದದ ಧ್ವನಿ ಕೇಳಿ ಬರುತ್ತದೆ ಎನ್ನಲಾಗಿದೆ. ಈ ಒಂದು ಕೋಟೆಯಲ್ಲೆ ನಾರಾಯಣ ರಾವನನ್ನು ಅಟ್ಟಾಡಿಸಿಕೊಂಡು ಕೊಲ್ಲಲಾಗಿತ್ತೆನ್ನಲಾಗಿದೆ. "ಕಾಕಾ ಮಲಾ ಬಚಾವ್" (ಕಾಕಾ ನನ್ನನ್ನು ಕಾಪಾಡು) ಎಂದು ಧ್ವನಿ ಒಮ್ಮೊಮ್ಮೆ ಇಲ್ಲಿ ಕೇಳಿ ಬರುತ್ತದಂತೆ!
ಶನಿವಾರವಾಡಾದ ಘೋರ ರಹಸ್ಯ
ಚಂದನ ನಗರ ಪುಣೆಯಲ್ಲಿರುವ ಮತ್ತೊಂದು ಪಿಶಾಚಗ್ರಸ್ಥ ಸ್ಥಳವೆಂದೆ ಹೇಳಲಾಗುತ್ತದೆ. ಕೆಲವು ವರ್ಷಗಳ ಹಿಂದೆ ಕಟ್ಟಡ ನಿರ್ಮಾಣ ಕೆಲಸವೊಂದರಲ್ಲಿ ಪುಟ್ಟ ಹುಡುಗಿಯೊಂದು ಅಪಘಾತ ಸಂಭವಿಸಿ ತೀರಿ ಹೋಗಿದ್ದಳು. ಆ ಹುಡುಗಿಯ ಆತ್ಮವೆ ಇಂದು ಇಲ್ಲಿ ಅಲೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು. ಪುಟ್ಟ ಹುಡುಗಿಯೊಂದು ಬೊಂಬೆಯ ರೀತಿಯಲ್ಲಿ ಶ್ವೇತ ವರ್ಣದ ಫ್ರಾಕ್ ಧರಿಸಿ ರಾತ್ರಿಯ ಸಮಯದಲ್ಲಿ ಅಲೆದಾಡುವುದನ್ನು ಇಲ್ಲಿನ ಎಷ್ಟೊ ಜನರು ಸ್ವತಃ ವೀಕ್ಷಿಸಿದ್ದಾರಂತೆ.
ಖಡ್ಕಿ ಯುದ್ಧ ಸ್ಮಾರಕ, ಚಿತ್ರಕೃಪೆ: Joe Zachs
ಖಡ್ಕಿ ಯುದ್ಧ ಮರಾಠರು ಹಾಗೂ ಬ್ರಿಟೀಷರ ಮಧ್ಯೆ ನಡೆದ ಒಂದು ಘೋರ ಯುದ್ಧವಾಗಿತ್ತು. ಈ ಯುದ್ಧದಲ್ಲಿ ಸಾಕಷ್ಟು ಜನ ಸೈನಿಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಬಲಿದಾನದ ಗೌರವಾರ್ಥವಾಗಿ ಇಂದು ಪುಣೆಯಲ್ಲಿ ಖಡ್ಕಿ/ಕಿರ್ಕಿ ಯುದ್ಧ ಸ್ಮಾರಕವನ್ನು ನಿರ್ಮಿಸಲಾಗಿರುವುದನ್ನು ಕಾಣಬಹುದು. ಆದರೆ ಮೂಲಗಳ ಪ್ರಕಾರ, ಇಲ್ಲಿ ಒಂದೊಂದು ಸಮಯ ಯುದ್ಧದಲ್ಲಿ ಮಡಿದವರ ಆತ್ಮಗಳ ಆಕ್ರಂದನ ಕೇಳಿ ಬರುತ್ತದೆ ಎನ್ನಲಾಗಿದೆ. ಹೀಗಾಗಿ ಪುಣೆಯು ಒಂದು ರೀತಿಯ ರೋಮಾಂಚನಗಳನ್ನು ಉಣಬಡಿಸುವ ನಗರವಾಗಿದೆ.
ಪುಣೆಗಿರುವ ರೈಲುಗಳು