ಕರ್ನಾಟಕ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿರುವ ದಕ್ಷಿಣ ಭಾರತದ ರಾಜ್ಯವಾಗಿದೆ. ನಾಡಿನಾದ್ಯಂತ ಹಲವಾರು ಪುಣ್ಯ ಕ್ಷೇತ್ರಗಳು, ತೀರ್ಥ ಕ್ಷೇತ್ರಗಳು ನೆಲೆಸಿರುವುದನ್ನು ಕಾಣಬಹುದು. ಇನ್ನೂ ಇಲ್ಲಿರುವ ಚಿಕ್ಕ ಪುಟ್ಟ ದೇವಾಲಯಗಳ ಸಂಖ್ಯೆಗಳಂತೂ ಅಸಂಖ್ಯಾತ. ಗ್ರಾಮಕ್ಕೊಂದು ಅಧಿ ದೇವತೆಯಂತೆ ಸಾಮಾನ್ಯವಾಗಿ ಪ್ರತಿ ಗ್ರಾಮ, ಪಟ್ಟಣಗಳಲ್ಲಿ ಒಂದಿಲ್ಲ ಒಂದು ಮುಖ್ಯ ದೇವಸ್ಥಾನಗಳನ್ನು ಕಾಣಬಹುದಾಗಿದೆ.
ವಿಶೇಷ ಲೇಖನ : ದಕ್ಷಿಣ ಭಾರತದ ಪ್ರಸಿದ್ಧ ಯಾತ್ರೆಗಳು
ದೇವಾಲಯಗಳು ಪ್ರತಿಯೊಬ್ಬ ಹಿಂದೂವಿಗೆ ಒಂದು ಪವಿತ್ರವಾದ ಸ್ಥಳವಾಗಿದೆ. ಪ್ರತಿ ನಿತ್ಯ ಭೇಟಿಗರನ್ನು ಪಡೆಯುವ ದೇವಸ್ಥಾನಗಳು ಪ್ರವಾಸದ ಅವಿಭಾಜ್ಯ ಅಂಗಗಳೆಂದೆ ಹೇಳಬಹುದು. ಇನ್ನೂ ನಂಬಿಕೆಯ ತಳಹದಿಯ ಮೇಲೆ ಹೇಳಿದರೆ ದೇವಸ್ಥಾನಗಳು ಕಲುಶಿತ ಮನಸ್ಸನ್ನು ಶುದ್ಧಿಗೊಳಿಸಿ ಪ್ರಸನ್ನಗೊಳಿಸುವ, ಧನಾತ್ಮಕತೆಯನ್ನುಂಟು ಮಾಡುವ, ಒತ್ತಡಗಳನ್ನು ಓಡಿಸುವ, ದೈವದ ಉಪಸ್ಥಿತಿಯಿರುವ ದಿವ್ಯ ಆಲಯಗಳು.
ಪ್ರಸ್ತುತ ಲೇಖನದ ಮೂಲಕ ಕರ್ನಾಟಕ ರಾಜ್ಯದಲ್ಲಿರುವ ಪ್ರಮುಖ ನಗರಗಳಲ್ಲಿ ಕಂಡು ಬರುವ ಒಂದೊಂದು ಮುಖ್ಯ ದೇವಾಲಯದ ಕುರಿತು ತಿಳಿಯಿರಿ. ನೀವು ದೈವದಲ್ಲಿ ನಂಬಿಕೆಯಿಟ್ಟಿರುವವರಾದರೆ ಅಥವಾ ದೇವಾಲಯದ ವಾತಾವರಣ ನಿಮಗಿಷ್ಟ ಎನ್ನುವಂತಾಗಿದ್ದರೆ ಈ ನಗರಗಳಿಗೆ ತೆರಳಿದಾಗ ಅಲ್ಲಿರುವ ಆ ಮುಖ್ಯ ದೇವಾಲಯಗಳಿಗೆ ಭೇಟಿ ನೀಡಲು ಮರೆಯದಿರಿ.
ಪ್ರಮುಖ ನಗರಗಳ ದೇವಾಲಯಗಳು:
ಮೊದಲಿಗೆ ಕರ್ನಾಟಕದ ಉತ್ತರದ ತುದಿಯಲ್ಲಿ ನೆಲೆಸಿರುವ ಬೀದರ್ ನಗರದೊಂದಿಗೆ ಪ್ರಾರಂಭಿಸೋಣ. ಬೀದರ್ ನಗರದಲ್ಲಿ ಸಾಕಷ್ಟು ಇತರೆ ಪ್ರಮುಖ ದೇವಸ್ಥಾನಗಳಿವೆ. ಆದರೆ ಇಲ್ಲಿರುವ ಶ್ರೀಕ್ಷೇತ್ರ ಝರಣಿ ನರಸಿಂಹ ಗುಹಾ ದೇವಾಲಯ ಅತಿ ಪ್ರಮುಖ ದೇವಸ್ಥಾನವೆಂದೆ ಹೇಳಬಹುದು. ಇದೊಂದು ಸುರಂಗ ಮಾರ್ಗ ಹೊಂದಿರುವ ಕೊನೆಯಲ್ಲಿ ಗೋಡೆಯ ಮೇಲೆ ಸ್ವಯಂಭೂ ನರಸಿಂಹನಿರುವ ದೇವಾಲಯ ಎನ್ನಲಾಗುತ್ತದೆ. ಒಟ್ಟಾರೆ ಸುರಂಗ ಮಾರ್ಗವು 300 ಮೀ. ಗಳಷ್ಟು ಉದ್ದವಿದೆ. ಇನ್ನೊಂದು ವಿಶೇಷವೆಂದರೆ ಈ ಸುರಂಗ ಮಾರ್ಗದಲ್ಲಿ ನೂರಾರು ವರ್ಷಗಳಿಂದ ನೀರಿನ ಮೂಲವೊಂದು ಹರಿದಿರುವುದು. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: GourangaUK
ಪ್ರಮುಖ ನಗರಗಳ ದೇವಾಲಯಗಳು:
ದಂತಕಥೆಯ ಪ್ರಕಾರ, ಹಿಂದೆ ನರಸಿಂಹನು ಹಿರಣ್ಯಕಶಿಪು ರಾಕ್ಷಸನನ್ನು ಕೊಂದ ನಂತರ ಮತ್ತೆ ಜಲಾಸುರನೆಂಬ ರಾಕ್ಷಸನನ್ನು ಸಂಹರಿಸಲು ತೆರಳುತ್ತಾನೆ. ಜಲಾಸುರ ಶಿವನ ಅಪ್ರತಿಮ ಭಕ್ತ. ಆದರೂ ಪಾಪ ಕೃತ್ಯಗಳ ಫಲವಾಗಿ ನರಿಸಿಂಹ ದೇವರಿಂದ ಸಂಹರಿಸಲ್ಪಡುತ್ತಾನೆ ಮತ್ತು ನೀರಾಗಿ ನರಸಿಂಹನ ಪಾದಗಳಡಿಯಿಂದ ಹರಿಯಲಾರಂಭಿಸುತ್ತಾನೆ. ಇಂದಿಗೂ ಜಲಾಸುರನೆ ಆ ನೀರಾಗಿ ಹರಿಯುತ್ತಿದ್ದಾನೆ ಎಂಬ ಪ್ರತೀತಿಯಿದೆ.
ಚಿತ್ರಕೃಪೆ: epuja.co.in
ಪ್ರಮುಖ ನಗರಗಳ ದೇವಾಲಯಗಳು:
ಸುರಂಗ ಮಾರ್ಗವು ಸುಮಾರು 300 ಮೀ ಉದ್ದವಿದ್ದು ನೀರಿನಿಂದಾವೃತವಾಗಿದೆ. ನೀರು ಗರಿಷ್ಠ ನಾಲ್ಕು ಅಡಿಗಳಷ್ಟು ಎತ್ತರವಿದೆ. ಉಸಿರಾಡಲು ಕೃತಕ ವೆಂಟಿಲೇಟರ್ ಗಳನ್ನು ಹಾಗೂ ನಡೆಯಲು ಅನುಕೂಲವಾಗುವಂತೆ ಕೃತಕ ದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸುರಂಗದ ಗೋಡೆಗಳ ಮೇಲೆ ಬಾವಲಿಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇದರಿಂದ ಸಾಕಷ್ಟು ರೋಮಾಂಚನವೂ ಸಹ ಉಂಟಾಗುತ್ತದೆ. ಅಂತ್ಯದಲ್ಲಿ ಸ್ವಯಂಭೂ ನರಸಿಂಹ ಹಾಗೂ ಜಲಾಸುರನು ಪೂಜಿಸುತ್ತಿದ್ದ ಶಿವಲಿಂಗವನ್ನು ಕಾಣಬಹುದು. ಏಕಕಾಲದಲ್ಲಿ ಕೇವಲ ಎಂಟು ಜನರು ಮಾತ್ರ ಈ ದರ್ಶನ ಮಾಡಬಹುದು. ಮಿಕ್ಕವರು ನೀರಿನಲ್ಲೆ ತಮ್ಮ ಸರತಿಗಾಗಿ ಕಾಯಬೇಕು.
ಚಿತ್ರಕೃಪೆ: wikimapia
ಪ್ರಮುಖ ನಗರಗಳ ದೇವಾಲಯಗಳು:
ಇದು ಗುಹೆ ಪ್ರವೇಶಿಸುವ ಮುಂಚೆ ಪವಿತ್ರಗೊಳ್ಳಲು ಪ್ರೋಕ್ಷಿಸಿಕೊಂಡು ಹೋಗಬೇಕಾಗಿರುವ ಶುದ್ಧ ನೀರು. ಗೋ ಮುಖದಿಂದ ಬರುತ್ತಿರುವ ಹಾಗೆ ಇದರ ರಚನೆ ಮಾಡಲಾಗಿದೆ.
ಚಿತ್ರಕೃಪೆ: wikimapia
ಪ್ರಮುಖ ನಗರಗಳ ದೇವಾಲಯಗಳು:
ಕಲಬುರಗಿ : ಹಿಂದೆ ಗುಲಬರ್ಗಾ ಎಂದು ಕರೆಯಲ್ಪಡುತ್ತಿದ್ದ ಪ್ರಸ್ತುತ ಕಲಬುರಗಿಯಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ಆದರೆ ನಗರದ ಪ್ರಸಿದ್ಧ ಹಾಗೂ ಪ್ರಮುಖ ದೇವಸ್ಥಾನವೆಂದರೆ ವಚನ ಕವಿ, ಸಂತ ಬಸವೇಶ್ವರರಿಗೆ ಮುಡಿಪಾದ ಶರಣ ಬಸವೇಶ್ವರ ದೇವಾಲಯ. ಲಿಂಗಾಯತ ಸಮುದಾಯದವರ ನೆಚ್ಚಿನ ಸಂತರಾದ, ಕಾಯಕವೇ ಕೈಲಾಸವೆಂದು ಲೋಕಕ್ಕೆ ಪಾಠ ಹೇಳಿದ ಬಸವೇಶ್ವರರ ದರುಶನ ಕೋರಿ ಈ ದೇವಸ್ಥಾನಕ್ಕೆ ದಿನ ನಿತ್ಯ ಭಕ್ತಾದಿಗಳು ಹಾಗೂ ಪ್ರವಾಸಿಗರು ಆಗಮಿಸುತ್ತಿರುತ್ತಾರೆ.
ಚಿತ್ರಕೃಪೆ: gulbarga.nic.in
ಪ್ರಮುಖ ನಗರಗಳ ದೇವಾಲಯಗಳು:
ಪ್ರತಿ ವರ್ಷ ಬಸವೇಶ್ವರರ ಪುಣ್ಯ ಜಯಂತಿಯ ಸಂದರ್ಭದಲ್ಲಿ ಇಲ್ಲಿ ಅದ್ದೂರಿಯಾಗಿ ಜಾತ್ರೆ ಉತ್ಸವ ನಿರ್ಮಾಣವಾಗಿರುತ್ತದೆ. ಜಿಲ್ಲೆಯ ವಿವಿಧೆಡೆಗಳಿಂದ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಇದು ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಬರುತ್ತದೆ. ದೇವಸ್ಥಾನದ ಪಕ್ಕದಲ್ಲಿ ಒಂದು ಕೊಳವಿದ್ದು ಪ್ರಸ್ತುತ ಅದನ್ನು ನವೀಕರಿಸಲಾಗುತ್ತಿದೆ. ಶಾಂತ ವಾತಾವರಣ, ವಿಶಾಲವಾದ ಸ್ಥಳ ಹೊಂದಿರುವ ಈ ದೇವಸ್ಥಾನ ತಾಣವು ಭೇಟಿ ನೀಡುವವರ ಮನಸ್ಸಿಗೆ ಮುದ ನೀಡುತ್ತದೆ.
ಚಿತ್ರಕೃಪೆ: Manjunath Doddamani Gajendragad
ಪ್ರಮುಖ ನಗರಗಳ ದೇವಾಲಯಗಳು:
ಬೆಳಗಾವಿ : ಬೆಳಗಾವಿ ನಗರದಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ಹಿಂಡಲಗಾ ಗಣಪತಿ, ಮಿಲಿಟರಿ ಮಹಾದೇವ ಮಂದಿರ ಕೆಲವಿ ವಿಶೇಷ ರೀತಿಯ ದೇವಾಲಯಗಳಾಗಿವೆ. ಕಾರಣ ಇವು ಭಾರತೀಯ ಸೈನ್ಯದ ನಿರ್ವಹಣೆಯಲ್ಲಿರುವುದರಿಂದ. ಆದರೂ ನಗರಕ್ಕೆ ಸಂಬಂಧಿಸಿದಂತೆ ಹೇಳಬೇಕೆಂದರೆ ಇಲ್ಲಿರುವ ಶಿವನಿಗೆ ಮುಡಿಪಾದ ಕಪಿಲೇಶ್ವರ ದೇವಸ್ಥಾನವು ಪ್ರಮುಖ ದೇವಸ್ಥಾನ. ಇದು ನಗರದ ಅತಿ ಪುರಾತನ ದೇವಾಲಯಗಳ ಪೈಕಿ ಒಂದಾಗಿದೆ. ಇದನ್ನು ದಕ್ಷಿಣದ ಕಾಶಿ ಎಂತಲೂ ಸಹ ಕರೆಯುತ್ತಾರೆ. ಸ್ಥಳೀಯ ನಂಬಿಕೆಯಂತೆ ಶಿವನ 12 ಪವಿತ್ರ ಜ್ಯೋತಿರ್ಲಿಂಗಗಳ ದರ್ಶನದ ನಂತರ ಕಪಿಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡದಿದ್ದರೆ ಜ್ಯೋತಿರ್ಲಿಂಗ ಪ್ರವಾಸ ಅಪೂರ್ಣ ಎನ್ನಲಾಗುತ್ತದೆ.
ಚಿತ್ರಕೃಪೆ: belgaum.nic.in
ಪ್ರಮುಖ ನಗರಗಳ ದೇವಾಲಯಗಳು:
ಕಾರವಾರ : ಕಾಳಿ ನದಿಯ ದಂಡೆಯ ಮೇಲಿರುವ ಜೈ ಸಂತೋಷಿಮಾತಾ ದೇವಸ್ಥಾನವು ಕಾರವಾರ ನಗರದಿಂದ 4 ಕಿ.ಮೀ ದೂರದಲ್ಲಿದೆ. ಜನಪ್ರಿಯ ಜಾನಪದ ಕಥೆಯ ಪ್ರಕಾರ, ಸಂತೋಷಿಮಾತಾ ದೇವಿಯು, ಶಕ್ತಿ ಹಾಗು ಸನ್ನಡತೆಯ ಸಂಕೇತವಾದ ದುರ್ಗಾ ದೇವಿಯ ಮರು ಅವತಾರವಾಗಿದ್ದಾಳೆ. ಇಲ್ಲಿ ವರ್ಷ ಪೂರ್ತಿ ಜರುಗುವ ಉತ್ಸವಗಳಲ್ಲಿ ಅನೇಕ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ.ಮತ್ತೊಂದು ಮುಖ್ಯ ವಿಷಯವೆಂದರೆ ಇಲ್ಲಿ ಪ್ರತಿ ಮಂಗಳವಾರ ಹಾಗು ಶುಕ್ರವಾರದಂದು ದೀಪೊತ್ಸವವನ್ನು ಆಚರಿಸಲಾಗುತ್ತದೆ ಮತ್ತು ಅಂದು ಇಡಿ ಸ್ಥಳವು ದೀಪಗಳಿಂದ ಅಲಂಕೃತಗೊಂಡಿರುತ್ತದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: carrotmadman6
ಪ್ರಮುಖ ನಗರಗಳ ದೇವಾಲಯಗಳು:
ಹುಬ್ಬಳ್ಳಿ-ಧಾರವಾಡ : ಸಿದ್ಧಾರೂಢ ಮಠ ಹಾಗೂ ಇತರೆ ದೇವ ದೇವಿಯರ ಹಲವಾರು ದೇವಸ್ಥಾನಗಳು ಧಾರವಾಡ-ಹುಬ್ಬಳ್ಳಿ ಅವಳಿ ನಗರಗಳಲ್ಲಿ ಕಂಡುಬರುತ್ತವೆ. ಆದರೂ ಇಲ್ಲಿನ ಚಂದ್ರಮೌಳೀಶ್ವರ ದೇವಾಲಯವನ್ನು ಅದರ ಐತಿಹಾಸಿಕ ಹಾಗೂ ಶಿಲ್ಪಕಲೆಯ ಶ್ರೀಮಂತಿಕೆಯ ಆಧಾರದ ಮೇಲೆ ಪ್ರಮುಖ ದೇವಸ್ಥಾನ ಎಂದು ಹೇಳಬಹುದು. ಹುಬ್ಬಳ್ಳಿಯಿಂದ ಪುಣೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ೪ ಕಿಮೀ ಸಾಗಿದಾಗ ಸಿಗುವ ಉಣಕಲ್ ಕೆರೆಯ ಪಕ್ಕ ಬಲಕ್ಕೆ ತಿರುಗಿ ಸುಮಾರು ಒಂದು ಕಿಮೀ ಸಾಗಿದರೆ ಈ ದೇವಸ್ಥಾನ ಸಿಗುತ್ತದೆ. ಪ್ರಶಾಂತ ವಾತಾವರಣ ಬಯಸುವವರು, ಶಿಲ್ಪಕಲೆಯಲ್ಲಿ ಆಸಕ್ತಿಯುಳ್ಳವರು ಈ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ.
ಚಿತ್ರಕೃಪೆ: Chetuln
ಪ್ರಮುಖ ನಗರಗಳ ದೇವಾಲಯಗಳು:
ಬಾಗಲಕೋಟೆ : ಬಾಗಲಕೋಟೆ ನಗರದಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ಆದರೆ ಈ ಪ್ರಸಿದ್ಧ ಐತಿಹಾಸಿಕ ಜಿಲ್ಲೆಯು ತನ್ನಲ್ಲಿರುವ ಕೆಲವು ಅದ್ಭುತ ಪ್ರವಾಸಿ ತಾಣಗಳ ಆಕರ್ಷಕ ದೇವಾಲಯಗಳಿಗೆ ಅತಿ ಹೆಚ್ಚು ಪ್ರಸಿದ್ಧಿಗಳಿಸಿದೆ. ಐಹೊಳೆ, ಪಟ್ಟದಕಲ್ಲು, ಬಾದಾಮಿ, ಮಹಾಕೂಟ ಮುಂತಾದ ಸ್ಥಳಗಳು ಈ ಜಿಲ್ಲೆಯಲ್ಲಿವೆ. ಆದರೂ ನಗರಕ್ಕೆ ಸಂಬಂಧಿಸಿದಂತೆ ಪ್ರತಿ ನಿತ್ಯ ದರುಶನ ಕೋರಿ ಭೇಟಿ ನೀಡುವ ಪ್ರಮುಖ ಗುಡಿಯೆಂದರೆ ನಗರ ಕೇಂದ್ರದಿಂದ 45 ಕಿ.ಮೀ ದೂರದಲ್ಲಿ ಕೂಡಲ ಸಂಗಮದಲ್ಲಿರುವ ಸಂಗಮೇಶ್ವರ ದೇವಾಲಯ.
ಚಿತ್ರಕೃಪೆ: Vishwanath Hawargi
ಪ್ರಮುಖ ನಗರಗಳ ದೇವಾಲಯಗಳು:
ಗದಗ : ಹುಬ್ಬಳಿ-ಧಾರವಾಡದಂತೆಯೆ ಗದಗ-ಬೆಟಗೇರಿಯೂ ಸಹ ಒಂದೆ ಆಡಳಿತ ನಿರ್ವಹಣೆ ಹೊಂದಿರುವ ನಗರವಾಗಿದೆ. ಗದಗಿನಲ್ಲಿರುವ ಪ್ರಮುಖ ದೇವಸ್ಥಾನವೆಂದರೆ ವೀರನಾರಾಯಣ ದೇವಸ್ಥಾನ.
ಚಿತ್ರಕೃಪೆ: Vinayak Kulkarni
ಪ್ರಮುಖ ನಗರಗಳ ದೇವಾಲಯಗಳು:
ಹಾವೇರಿ : 12 ನೇಯ ಶತಮಾನದ ಪಶ್ಚಿಮ ಚಾಲುಕ್ಯರ ಅದ್ಭುತ ವಾಸ್ತುಶೈಲಿಗೆ ಉದಾಹರಣೆಯಾಗಿರುವ ಸಿದ್ಧೇಶ್ವರ ದೇವಾಲಯವು ಹಾವೇರಿಯಲ್ಲಿರುವ ಪ್ರಮುಖ ಹಾಗೂ ಪುರಾತನವಾದ ದೇವಸ್ಥಾನವಾಗಿದೆ.
ಚಿತ್ರಕೃಪೆ: Dineshkannambadi
ಪ್ರಮುಖ ನಗರಗಳ ದೇವಾಲಯಗಳು:
ಚಿತ್ರದುರ್ಗ : ಏಳು ಸುತ್ತಿನ ಕೋಟೆಯನ್ನು ಹೊಂದಿರುವ, ಕಲ್ಲು ಬಂಡೆಗಳ ಬೆಟ್ಟಗಳಿಂದ ಸುತ್ತುವರೆದಿರುವ ಚಿತ್ರದುರ್ಗವು ಒಂದು ಪ್ರಖ್ಯಾತ ಐತಿಹಾಸಿಕ ನಗರವಾಗಿದೆ. ನಗರದ ಬಳಿಯಿರುವ ಕೋಟೆಯ ಆವರಣದಲ್ಲಿ ಸಾಕಷ್ಟು ದೇವಾಲಯಗಳಿದ್ದು ಅವುಗಳಲ್ಲಿ ಹಿಡಿಂಬಾ ದೇವಸ್ಥಾನ, ಅಲ್ಲದೆ ನಗರದಿಂದ ಐದು ಕಿ.ಮೀ ದೂರದಲ್ಲಿರುವ ಆಡುಮಲ್ಲೇಶ್ವರ ದೇವಸ್ಥಾನ ಮುಂತಾದವುಗಳು ಪ್ರಸಿದ್ಧವಾಗಿವೆ. ಇನ್ನೂ ನಗರಕ್ಕೆ ಸಂಬಂಧಿಸಿದಂತೆ ಕೋಟೆಯ ತಾಣದ ಬಳಿಯಿರುವ ಸಂಪಿಗೆ ಸಿದ್ಧೇಶ್ವರ ದೇವಸ್ಥಾನವು ಅಪಾರವಾಗಿ ಜನರನ್ನು ಸೆಳೆಯುತ್ತದೆ.
ಚಿತ್ರಕೃಪೆ: Pavithrah
ಪ್ರಮುಖ ನಗರಗಳ ದೇವಾಲಯಗಳು:
ದಾವಣಗೆರೆ : ದಾವಣಗೆರೆ ನಗರದಲ್ಲೂ ಸಹ ಸಾಕಷ್ಟು ದೇವಾಲಯಗಳನ್ನು ಕಾಣಬಹುದು. ನವಗೃಹ ಮಂದಿರ, ರಾಮ ಮಂದಿರ, ಲಿಂಗೇಶ್ವರ ದೇವಸ್ಥಾನ, ಸುಬ್ರಹ್ಮಣ್ಯ ದೇವಸ್ಥಾನ ಹೀಗೆ ಹಲವು ದೇವಸ್ಥಾನಗಳನ್ನು ಕಾಣಬಹುದು. ದುರ್ಗಾಂಬಿಕಾ ದೇವಿಯ ದೇವಸ್ಥಾನವು ನಗರದ ಪ್ರಮುಖ ದೇವಸ್ಥಾನವಾಗಿದೆ.
ಚಿತ್ರಕೃಪೆ: Kiran Kollepalli
ಪ್ರಮುಖ ನಗರಗಳ ದೇವಾಲಯಗಳು:
ಬಳ್ಳಾರಿ : ಬಳ್ಳಾರಿಯಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ಆದರೆ ಬಳ್ಳಾರಿಯು ಪ್ರಮುಖವಾಗಿ ವಿಶ್ವ ವಿಖ್ಯಾತಿಗಳಿಸಿದೆ ಐತಿಹಾಸಿಕ ಪ್ರಸಿದ್ಧ, ಶ್ರೀಮಂತ ಶಿಲ್ಪಕಲೆಯ ಹಂಪಿಗೆ ತವರಾಗಿದೆ. ಹಂಪಿಯಲ್ಲಿ ಬಲು ಆಕರ್ಷಕವಾದ ಸಾಕಷ್ಟು ದೇವಾಲಯಗಳಿವೆ. ಹಂಪಿಯಲ್ಲಿರುವ ವಿರೂಪಾಕ್ಷ ದೇವಸ್ಥಾನ ನೋಡಲು ಬಹು ನಯನ ಮನೋಹರವಾಗಿದೆ.
ಚಿತ್ರಕೃಪೆ: Ajar
ಪ್ರಮುಖ ನಗರಗಳ ದೇವಾಲಯಗಳು:
ಶಿವಮೊಗ್ಗ : ಮಲೆನಾಡ ಸುಂದರಿ ಶಿವಮೊಗ್ಗ ಪಟ್ಟಣದಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ಪ್ರಮುಖವಾಗಿ ಭೇಟಿ ನೀಡಬಹುದಾದ ದೇವಾಲಯವೆಂದರೆ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ. ನಗರದಲ್ಲಿರುವ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾದ ಶಿವಪ್ಪ ನಾಯಕನ ಕೋಟೆಯ ಬಳಿಯಲ್ಲೆ ಈ ದೇವಸ್ಥಾನವಿರುವುದನ್ನು ಕಾಣಬಹುದು.
ಚಿತ್ರಕೃಪೆ: Chidambara
ಪ್ರಮುಖ ನಗರಗಳ ದೇವಾಲಯಗಳು:
ಹಾಸನ : ಹಾಸನಕ್ಕೆ ಹಾಸನ ಎಂಬ ಹೆಸರು ಬರಲು ಕಾರಣವಾದ ಹಾಸನಾಂಬೆಯ ದೇವಸ್ಥಾನ ನಗರದಲ್ಲಿರುವ ಪ್ರಮುಖ ದೇವಸ್ಥಾನವಾಗಿದೆ. ಈ ದೇವಸ್ಥಾನದ ವಿಶೇಷವೆಂದರೆ ವರ್ಷದಲ್ಲಿ ಒಂದು ಬಾರಿ ಮಾತ್ರವೆ ಈ ದೇವಾಲಯವು ತೆರೆಯಲ್ಪಡುತ್ತದೆ. ವರ್ಷದ ದೀಪಾವಳಿಯ ಹಬ್ಬದ ಸಮಯದಲ್ಲಿ ಮಾತ್ರವೆ ಈ ದೇವಾಲಯವು ತೆರೆಯುತ್ತದೆ ಹಾಗೂ ಈ ಸಂದರ್ಭದಲ್ಲಿ ಹಾಸನ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಪ್ರಮುಖ ನಗರಗಳ ದೇವಾಲಯಗಳು:
ಮಂಡ್ಯ : ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನ, ಶ್ರೀರಂಗನಾಥ ಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ ಹೀಗೆ ಹಲವಾರು ಪ್ರಖ್ಯಾತ ದೇವಾಲಯಗಳು ಮಂಡ್ಯ ಜಿಲ್ಲೆಯಲ್ಲಿವೆ. ಇನ್ನೂ ಮಡ್ಯ ಪಟ್ಟಣಕ್ಕೆ ಸಂಬಂಧಿಸಿದಂತೆ ಇಲ್ಲಿರುವ ಲಕ್ಷ್ಮಿ ಜನಾರ್ಧನಸ್ವಾಮಿಯ ದೇವಾಲಯವು ಪ್ರಮುಖ ಎಂದೆ ಹೇಳಬಹುದು.
ಚಿತ್ರಕೃಪೆ: rcmysore-portal.kar.nic.in
ಪ್ರಮುಖ ನಗರಗಳ ದೇವಾಲಯಗಳು:
ಚಾಮರಾಜನಗರ : 1826 ರಲ್ಲಿ ಮೈಸೂರಿನ ಅರಸರಾದ ಮುಮ್ಮಡಿ ಕೃಷ್ಣರಾಜ ವಡೇಯರ್ ಅವರಿಂದ ನಿರ್ಮಿಸಲ್ಪಟ್ಟ ಚಾಮರಾಜೇಶ್ವರ ದೇವಾಲಯವು ಚಾಮರಾಜನಗರದ ಪ್ರಮುಖ ದೇವಸ್ಥಾನವಾಗಿದೆ.
ಚಿತ್ರಕೃಪೆ: Tamilyomen
ಪ್ರಮುಖ ನಗರಗಳ ದೇವಾಲಯಗಳು:
ಕೋಲಾರ : ಚಿನ್ನದ ನಾಡು ಕೋಲಾರ ಪಟ್ಟಣವು ಪ್ರಮುಖವಾದ ಕೋಲಾರಮ್ಮನ ದೇವಸ್ಥಾನವನ್ನು ಹೊಂದಿದೆ. ಇದು ಪಾರ್ವತಿ (ಕೋಲಾರಮ್ಮ) ದೇವಿಯ ದೇವಾಲಯವಾಗಿದೆ. ಇದು L ಆಕಾರದ ದೇವಾಲಯವಾಗಿದ್ದು ದ್ರಾವಿಡ ವಿಮಾನ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಇದು ಚೋಳರಿಂದ ಸ್ಥಾಪನೆಗೊಂಡಿದ್ದು ಸುಮಾರು 1000 ವರ್ಷಗಳಷ್ಟು ಹಿಂದಿನದು ಎಂದು ಭಾವಿಸಲಾಗಿದೆ.
ಚಿತ್ರಕೃಪೆ: Hariharan Arunachalam ( NIC )
ಪ್ರಮುಖ ನಗರಗಳ ದೇವಾಲಯಗಳು:
ಮೈಸೂರಿನ ಹಿಂದಿನ ಅರಸರು ಇಲ್ಲಿನ ದೇವಿಯ ಅನುಗ್ರಹ ಪಡೆಯುವ ಸಲುವಾಗಿ ಇಲ್ಲಿಗೆ ಆಗಾಗ ಭೇಟಿಕೊಡುತ್ತಿದ್ದರಂತೆ. ಪ್ರವಾಸಿಗರು ಇಲ್ಲಿನ ದೇವಾಲಯಕ್ಕೆ ಭೇಟಿಕೊಟ್ಟ ತಕ್ಷಣ ಈ ದೇವಾಲಯದಲ್ಲಿನ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿರುವ ಮೂರ್ತಿಗಳು ಮತ್ತು ಶಿಲ್ಪಕಲಾ ರಚನೆಗೆ ಮಾರು ಹೋಗುತ್ತಾರೆ.
ಚಿತ್ರಕೃಪೆ: Hariharan Arunachalam
ಪ್ರಮುಖ ನಗರಗಳ ದೇವಾಲಯಗಳು:
ಚೇಳುಗಳ ದೇವತೆಯಾದ ಚೇಳಮ್ಮ, ಕೋಲಾರಮ್ಮ ದೇವಾಲಯದಲ್ಲಿರುವ ಮತ್ತೊಂದು ದೇವತೆಯ ವಿಗ್ರಹವಾಗಿದೆ. ಸ್ಥಳೀಯರ ನಂಬಿಕೆಯಂತೆ ಚೇಳಮ್ಮನನ್ನು ಪೂಜಿಸಿದರೆ ಆಕೆ ಭಕ್ತಾಧಿಗಳನ್ನು ಚೇಳಿನ ಕಡಿತದಿಂದ ಕಾಪಾಡುತ್ತಾಳಂತೆ. ಇಲ್ಲೊಂದು ಹುಂಡಿಯಿದ್ದು ಭಕ್ತಾದಿಗಳಿಂದ ಕಾಣಿಕೆ ಸಂಗ್ರಹಿಸಲು ಇದನ್ನು ಸ್ಥಾಪಿಸಲಾಗಿದೆ. ಸಂಪ್ರದಾಯದಂತೆ ಭಕ್ತಾಧಿಗಳು ಈ ಸ್ಥಳಕ್ಕೆ ಬಂದಾಗ ಒಂದು ನಾಣ್ಯವನ್ನು ಇದರಲ್ಲಿ ಹಾಕುತ್ತಾರೆ.
ಚಿತ್ರಕೃಪೆ: Shailesh.patil
ಪ್ರಮುಖ ನಗರಗಳ ದೇವಾಲಯಗಳು:
ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರವಾದ ಮಂಗಳೂರು ನಗರದಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ಅವುಗಳ ಪೈಕಿ ಪ್ರಮುಖವಾದ ಎರಡು ದೇವಾಲಯಗಳೆಂದರೆ ಒಂದು ಮಂಗಳಾದೇವಿ ದೇವಾಲಯ. ಮಂಗಳೂರಿನಿಂದ ಮೂರು ಕಿ.ಮೀ. ದೂರದಲ್ಲಿರುವ ಬೋಳಾರ ಎಂಬಲ್ಲಿ ಮಂಗಳಾದೇವಿ ದೇವಾಲಯವಿದೆ. ಈ ದೇವಾಲಯವು ಹಲವು ಬಂದರುಗಳಿಂದ ಸುತ್ತುವರಿಯಲ್ಪಟ್ಟಿದೆ. ಮಂಗಳೂರಿನ ಹೆಸರಿನ ಹಿಂದೆ ದೇವಾಲಯಕ್ಕೆ ಸಂಬಂಧಿಸಿದ ಹೆಸರಿದೆ. ಅಂದರೆ ಮಂಗಳೂರು ಮಂಗಳ ನಗರವಾಗಿದೆ ಎಂಬ ಅರ್ಥ ಇದೆ. ಈ ದೇವಾಲಯವು 9ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದಾಗಿದೆ.
ಚಿತ್ರಕೃಪೆ: Ssriram mt
ಪ್ರಮುಖ ನಗರಗಳ ದೇವಾಲಯಗಳು:
ಇನ್ನೊಂದು ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ. ಇದು ಮಂಗಳೂರು ನಗರದ ಕುದ್ರೋಳಿ ಎಂಬ ಪ್ರದೇಶದಲ್ಲಿದೆ. ಶಿವನಿಗೆ ಮುಡಿಪಾದ ದೇವಾಲಯ ಇದಾಗಿದ್ದು ನೋಡಲು ಆಕರ್ಷಕವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಸಾಕಷ್ಟು ಪ್ರಕಾಶಮಾನವಾಗಿ ದೀಪಗಳಿಂದ ಅಲಂಕೃತಗೊಂಡಿರುತ್ತದೆ.
ಚಿತ್ರಕೃಪೆ: Karunakar Rayker
ಪ್ರಮುಖ ನಗರಗಳ ದೇವಾಲಯಗಳು:
ಉಡುಪಿ : ಬಹುತೇಕ ಎಲ್ಲರಿಗೂ ತಿಳಿದಿರುವ ಹಾಗೆ ಉಡುಪಿಯಲ್ಲಿ ಪ್ರಖ್ಯಾತವಾದ ದೇವಸ್ಥಾನವೆಂದರೆ ಶ್ರೀಕೃಷ್ಣನ ದೇವಸ್ಥಾನ. ಉಡುಪಿಯ ಕೃಷ್ಣ ದೇಗುಲವು ದಕ್ಷಿಣ ಭಾರತದಲ್ಲೇ ತುಂಬಾ ಪವಿತ್ರವಾದ ದೇಗುಲ. ಕೃಷ್ಣನ ದರ್ಶನವನ್ನು ಪಡೆಯಲು ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ, ಕನಕನ ಕಿಂಡಿ. ಕಿಂಡಿಯಲ್ಲಿರೊ ಒಂಭತ್ತು ರಂಧ್ರಗಳಿಂದ ಕೃಷ್ಣನ ದರ್ಶನ ಪಡೆಯಬಹುದು. ಕನಕನ ಕಿಂಡಿಯಲ್ಲಿರೊ ನವರಂಧ್ರಗಳಿಂದ ಕೃಷ್ಣನ ದರ್ಶನ ಪಡೆದರೆ ಪುಣ್ಯ ಬರುತ್ತದೆ ಎಂದು ನಂಬಲಾಗಿದೆ.
ಚಿತ್ರಕೃಪೆ: Ashok Prabhakaran
ಪ್ರಮುಖ ನಗರಗಳ ದೇವಾಲಯಗಳು:
ಮೈಸೂರು : ಚಾಮುಂಡಿ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1065 ಮೀ.ನಷ್ಟು ಎತ್ತರದಲ್ಲಿ ನೆಲೆಸಿದ್ದು, ಮೈಸೂರಿಗೆ ಬರುವ ಪ್ರವಾಸಿಗರು ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು. ಚಾಮುಂಡಿ ಬೆಟ್ಟದ ಮೇಲೆ ವೊಡೆಯರ ದೇವತೆಯಾದ, ಪಾರ್ವತಿಯ ಅವತಾರಿಣಿ ತಾಯಿ ಚಾಮುಂಡೇಶ್ವರಿಯ ದೇವಾಲಯವಿದೆ. ಈ ದೇವಾಲಯವನ್ನು 11ನೇ ಶತಮಾನದಲ್ಲಿ ನಿರ್ಮಿಸಲಾಯಿತು. ನಂತರ ಮೈಸೂರಿನ ಅರಸರು 1827ರಲ್ಲಿ ಇದನ್ನು ದುರಸ್ತಿಗೊಳಿಸಿದರು. ಈ ದೇವಾಲಯದ ಮುಂಭಾಗದಲ್ಲಿ ರಾಕ್ಷಸರ ರಾಜನಾದ ಮಹಿಷಾಸುರನ ಬೃಹತ್ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಇದು ನಗರದ ಪ್ರಮುಖ ದೇವಾಲಯವಾಗಿದೆ.
ಚಿತ್ರಕೃಪೆ: Sanjay Acharya
ಪ್ರಮುಖ ನಗರಗಳ ದೇವಾಲಯಗಳು:
ಬೆಂಗಳೂರು : ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸಾಕಷ್ಟು ಸುಂದರ ದೇವಸ್ಥಾನಗಳಿವೆ. ಆದರೂ ಇತಿಹಾಸ, ಸ್ಥಳ ಹಿನ್ನಿಲೆ ಗಮನಿಸಿ ಹೇಳಬೇಕೆಂದರೆ ಇಲ್ಲಿರುವ ಪ್ರಮುಖ ದೇವಾಲಯಗಳೆಂದರೆ, ದೊಡ್ಡಗಣಪತಿ ದೇವಸ್ಥಾನ, ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ, ಬನಶಂಕರಿ ದೇವಸ್ಥಾನ, ಬಸವನಗುಡಿ, ಗವಿ ಗಂಗಾಧರೇಶ್ವರ ದೇವಸ್ಥಾನ, ರಾಗಿಗುಡ್ಡ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಧರ್ಮರಾಯನ ದೇವಸ್ಥಾನ ಎಂದು ಹೇಳಬಹುದು. ಗವಿಪುರಂ ಗುಹಾ ದೇವಾಲಯ ಎಂತಲೂ ಕರೆಯಿಸಿಕೊಳ್ಳುವ ಈ ದೇವಸ್ಥಾನವು ಗವಿಪುರಂನ (ಗುಟ್ಟಹಳ್ಳಿ) ಕೆಂಪೇಗೌಡ ನಗರದಲ್ಲಿದ್ದು ಬಸವನಗುಡಿಯಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಭಾರತೀಯ ಶಿಲಾ ಕೆತ್ತನೆ ವಾಸ್ತುಶಿಲ್ಪ (ಇಂಡಿಯನ್ ರಾಕ್ ಕಟ್ ಆರ್ಕಿಟೆಕ್ಚರ್) ಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಈ ದೇವಾಲಯದ ಅತಿ ಆಸಕ್ತಿದಾಯಕ ವಿಷಯವೆಂದರೆ ವರ್ಷದ ಒಂದು ನಿಗದಿತ ಸಮಯ (ಮಕರ ಸಂಕ್ರಾಂತಿ) ದಲ್ಲಿ ಸೂರ್ಯನ ಕಿರಣವು ಇಲ್ಲಿನ ಶಿವಲಿಂಗದ ಮೇಲೆ ಬೀಳುವ ಹಾಗೆ ವಿನ್ಯಾಸಗೊಳಿಸಲ್ಪಟ್ಟಿರುವುದು.
ಚಿತ್ರಕೃಪೆ: Pavithrah
ಪ್ರಮುಖ ನಗರಗಳ ದೇವಾಲಯಗಳು:
ಬನಶಂಕರಿ ದೇವಸ್ಥಾನ ಬೆಂಗಳೂರು ದಕ್ಷಿಣದಲ್ಲಿರುವ ಬನಶಂಕರಿ ಬೆಂಗಳೂರಿಗರಿಗೆ ಅತಿ ಚಿರಪರಿಚಿತವಿರುವ ಪ್ರದೇಶ. ಬೃಹತ್ತಾಗಿ ವಿಸ್ತರಿಸಿರುವ ಈ ಪ್ರದೇಶಕ್ಕೆ ಬನಶಂಕರಿ ಎಂಬ ಹೆಸರು ಬರಲು ಕಾರಣ ಇಲ್ಲಿನ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ಅಮ್ಮನ ದೇವಸ್ಥಾನ. ಸೊಮಣ್ಯ ಶೆಟ್ಟಿ ಎಂಬ ಬನಶಂಕರಿ ಅಮ್ಮನ ಭಕ್ತರು ಈ ದೇವಸ್ಥಾನವನ್ನು 1915 ರಲ್ಲಿ ನಿರ್ಮಿಸಿದ್ದಾರೆ. ಇವರು ದೇವಿಯ ಮೂರ್ತಿಯನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ತೆಗೆದುಕೊಂಡು ಬಂದು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ. ಈ ದೇವಸ್ಥಾನದ ವಿಶೇಷತೆಯೆಂದರೆ, ಹಿಂದೂಗಳಲ್ಲಿ ಸಾಮಾನ್ಯವಾಗಿ ಒಳ್ಳೆಯ ಘಳಿಗೆಯಲ್ಲ ಎಂದು ನಂಬಲ್ಪಡುವ ರಾಹು ಕಾಲದಲ್ಲಿ ದೇವಿಗೆ ಪೂಜೆಯನ್ನು ಮಾಡಲಾಗುತ್ತದೆ. ದೇವಿಯು ಎಲ್ಲ ವಿಘ್ನಗಳನ್ನು ಪರಿಹರಿಸುತ್ತಾಳೆ ಎಂಬುದು ಇದರ ಸಂಕೇತವಾಗಿದೆ. ಅರ್ಧ ಸಿಳಿದ ನಿಂಬೆ ಹಣ್ಣಿನ ತೊಗಟೆಯನ್ನು ಹಣತೆಯನ್ನಾಗಿ ಮಾಡಿ ಅದರಲ್ಲಿ ದೀಪ ಬೆಳಗಿ ಭಕ್ತರು ದೇವಿಯನ್ನು ಆರಾಧಿಸುತ್ತಾರೆ. ಬನಶಂಕರಿ ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದು.
ಪ್ರಮುಖ ನಗರಗಳ ದೇವಾಲಯಗಳು:
ಬಸವನಗುಡಿ : ಬೆಂಗಳೂರಿನ ಒಂದು ಪ್ರಮುಖ ಹಾಗು ಜನಪ್ರಿಯ ಪ್ರದೇಶವಾದ ಬಸವನಗುಡಿ ತನ್ನ ಹೆಸರನ್ನು ಬಸವನ ಗುಡಿ (ದೇವಸ್ಥಾನ) ಯಿಂದಲೆ ಪಡೆದಿದೆ. ಬಸವ ಎಂದರೆ ಶಿವನ ವಾಹನ ನಂದಿಯಾಗಿದ್ದು ಅದಕ್ಕೆ ಸಮರ್ಪಿತವಾದ ದೇವಸ್ಥಾನ ಇದಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ನಿಂದ 4.8 ಕಿ.ಮೀ ದೂರದಲ್ಲಿ ನೆಲೆಸಿರುವ ಈ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದಾಗಿದ್ದು ಮೆಜೆಸ್ಟಿಕ್ ನಿಲ್ದಾಣದಿಂದಲೂ ಸಹ ಬಿ.ಎಂ.ಟಿ.ಸಿ ಬಸ್ಸುಗಳ ಮೂಲಕ ತಲುಪಬಹುದು. ನಂದಿಗೆ ಸಮರ್ಪಿತವಾಗಿರುವ ಹಾಗು ನಂದಿಯ ಬೃಹತ್ ವಿಗ್ರಹವಿರುವ ಜಗತ್ತಿನ ಏಕಮಾತ್ರ ದೇವಸ್ಥಾನವೆಂದು ನಂಬಲಾಗಿದೆ.
ಚಿತ್ರಕೃಪೆ: js42
ಪ್ರಮುಖ ನಗರಗಳ ದೇವಾಲಯಗಳು:
ದೊಡ್ಡ ಗಣಪತಿ ದೇವಸ್ಥಾನ : ಬಸವನಗುಡಿಯು ಚಿಕ್ಕದಾದ ಬೆಟ್ಟವೊಂದರ ಮೇಲೆ ನೆಲೆಸಿದ್ದು ಮೆಟ್ಟಿಲುಗಳನ್ನು ಏರುವುದರ ಮೂಲಕ ತಲುಪಬಹುದಾಗಿದೆ. ಅದೆ ಮೆಟ್ಟಿಲುಗಳನ್ನು ಇಳಿದು ಬಲಭಾಗಕ್ಕೆ ತೆರಳಿದರೆ ಏಕ ಶಿಲೆಯಲ್ಲಿ ಒಡಮೂಡಿರುವ ದೊಡ್ಡ ಗಣೇಶನ ದೇವಸ್ಥಾನವನ್ನು ನೋಡುತ್ತೇವೆ. ಈ ಗಣಪನ ದರುಶನ ಕೋರಿ ಬಹು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಂತೂ ಈ ವಿನಾಯಕನ ದರುಶನ ಪಡೆಯಲು ಸುಮಾರು ಎರಡು ಮೂರು ಕಿ.ಮೀ ಗಳಷ್ಟು ಉದ್ದದ ಸರತಿಯ ಸಾಲಿನಲ್ಲಿ ನಿಲ್ಲಲೇಬೇಕು.
ಚಿತ್ರಕೃಪೆ: Mallikarjunasj