ರಾವಣನು ತನ್ನ ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿದ್ದಾಗ ಜಟಾಯು(ಮಾನವ ರೂಪದ ಹದ್ದು) ಸೀತೆಯನ್ನು ರಕ್ಷಿಸಲು ಬಂದು ರಾವಣನಿಂದ ತೀವ್ರವಾಗಿ ಹೊಡೆಯಲ್ಪಟ್ಟು ಕೆಳಗೆ ಬೀಳುತ್ತಾನೆ ಮತ್ತು ರಾವಣನು ಸೀತೆಯನ್ನು ಹೊತ್ತುಕೊಂಡು ಹೋಗುತ್ತಾನೆ. ಅದೇ ದಾರಿಯಲ್ಲಿ ಬಂದ ರಾಮ ದೇವರು ಅರೆ ಪ್ರಜ್ಞಾವಸ್ಥೆಯಲ್ಲಿ ಇರುವ ಜಟಾಯುವನ್ನು ಕಾಣುತ್ತಾರೆ. ಮತ್ತು ರಾಮನು ತನ್ನ ದಿವ್ಯ ಶಕ್ತಿಯಿಂದ ಜಟಾಯುವನ್ನು ಗುಣ ಪಡಿಸುತ್ತಾ ಹಕ್ಕಿಯೇ ಎದ್ದೇಳು ಎಂದು ಹೇಳುವ ಅರ್ಥದಲ್ಲಿ ಲೇ ಪಕ್ಷಿ ಎಂದು ಕರೆದುದರಿಂದ ಈ ಸ್ಥಳಕ್ಕೆ ಅದೇ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಸ್ಥಳವು ಹಿಂದುಪುರದಲ್ಲಿದೆ. ವಿಜಯನಗರ ಕಾಲದ ವಾಸ್ತುಶಿಲ್ಪವು ಈ ಸ್ಥಳಕ್ಕೆ ಇನ್ನಷ್ಟು ಅಂದವನ್ನು ತಂದುಕೊಟ್ಟಿದೆ ಹಾಗೂ ಈ ಸ್ಥಳವು ಅನ್ವೇಷಣೆಗೆ ಹಲವಾರು ಅವಕಾಶಗಳನ್ನು ಒದಗಿಸಿ ಕೊಡುತ್ತದೆ.
ಬೆಂಗಳೂರಿನಿಂದ ಸುಮಾರು 125 ಕಿ.ಮೀ ಪ್ರಯಾಣ ಮಾಡಿದಲ್ಲಿ ನೀವು ಪರಂಪರೆಯ ತಾಣ ಲೇಪಾಕ್ಷಿಯನ್ನು ತಲುಪಬಹುದಾಗಿದೆ. ಇಲ್ಲಿಯ ಪ್ರತಿಯೊಂದು ಮೂಲೆ ಮೂಲೆಗಳಲ್ಲಿಯೂ ಅದ್ಭುತಗಳು ನಿಮ್ಮನ್ನು ಅಚ್ಚರಿಗೊಳಿಸುತ್ತವೆ. ಈ ದೇವಾಲಯಕ್ಕೆ ತಲುಪುವುದಕ್ಕೆ ಸುಮಾರು 200 ಮೀಟರುಗಳಷ್ಟು ದೂರದಿಂದಲೇ ಬೃಹತ್ ಆಕಾರದ ಏಕಶಿಲೆಯಿಂದ ನಿರ್ಮಿಸಲಾಗಿರುವ ನಂದಿಯ ವಿಗ್ರಹವು ನಿಮ್ಮನ್ನು ಸ್ವಾಗತಿಸುತ್ತದೆ. ಈ ನಂದಿಯ ವಿಗ್ರಹವು ಲೇಪಾಕ್ಷಿಯ ಪ್ರಮುಖ ರಚನೆಗಳಲ್ಲಿ ಒಂದಾಗಿದೆ.
ಈ ನಂದಿಯ ವಿಗ್ರಹವು ದೇವಾಲಯದ ಹೊರಭಾಗದ ಅಂಗಳದಲ್ಲಿದ್ದು, ಶಿವಲಿಂಗಕ್ಕೆ ಅಭಿಮುಖವಾಗಿದೆ. ಈ ಸೂಕ್ಷ್ಮವಾಗಿ ಗಮನಿಸಿದಲ್ಲಿ, ಈ ದೇವಾಲಯವನ್ನು ಒಂದೇ ಬಂಡೆಯಲ್ಲಿ ಕೆತ್ತಲಾಗಿದೆ ಎಂಬ ಅರಿವಾಗುತ್ತದೆ.
ವೀರಭದ್ರ ದೇವಾಲಯ
ವೀರಭದ್ರ ದೇವಾಲಯವನ್ನು ಆಮೆಯ ಆಕಾರದಲ್ಲಿರುವ ಗ್ರಾನೈಟ್ ಬಂಡೆಯ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಪ್ರದೇಶವನ್ನು ಕುರುಮ ಸೈಲಾ ಎಂದೂ ಕರೆಯುತ್ತಾರೆ.
ವೀರಭದ್ರ ದೇವಾಲಯವು ಕೆಲವು ಸೊಗಸಾದ ಕೆತ್ತನೆಗಳು ಮತ್ತು ತಾಜಾ ಚಿತ್ರಗಳೊಂದಿಗೆ ಸುಂದರವಾಗಿ ಕಂಗೊಳಿಸುತ್ತದೆ. ಇಲ್ಲಿಯ ಕಂಬಗಳು ಪುರಾಣಗಳನ್ನು ಬಿಂಬಿಸುವ ಶಿಲ್ಪಗಳನ್ನು ಹೊಂದಿದ್ದರೆ, ಗೋಡೆಗಳು ಮತ್ತು ಛಾವಣಿಗಳು ಮ್ಯೂರಲ್ ವರ್ಣಚಿತ್ರಗಳನ್ನು ಹೊಂದಿವೆ. ಶಿವ ಮತ್ತು ಪಾರ್ವತಿಯ ವಿವಾಹದ ದಂತಕಥೆಗಳನ್ನು ಮತ್ತು ರಾಮಾಯಣದ ಕಥೆಗಳನ್ನು ಚಿತ್ರಿಸುವ ಅಪರೂಪದ ಹಾಗೂ ಇಂದಿಗೂ ತಾಜಾತನವನ್ನು ಉಳಿಸಿಕೊಂಡಿರುವ ಸುಂದರ ಚಿತ್ರಗಳನ್ನು ಇಲ್ಲಿ ಕಾಣಬಹುದು. ಹೆಚ್ಚಿನ ಮ್ಯೂರಲ್ ಪೇಂಟಿಂಗ್ಗಳು ಕಾಲಾನಂತರದಲ್ಲಿ ಹಾಳಾಗುತ್ತವೆ ಆದರೆ ಇಲ್ಲಿಯ ಕೆಲವು ಚಿತ್ರಗಳು 16 ನೇ ಶತಮಾನದಲ್ಲಿ ಮಾಡಿದ ಅತ್ಯುತ್ತಮ ಗುಣಮಟ್ಟದ ವಸ್ತುಗಳು ಮತ್ತು ಚಿತ್ರಕಲಾ ಕೌಶಲ್ಯವನ್ನು ಸೂಚಿಸುತ್ತವೆ.
ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಏಳು ಹೆಡೆಯ ಸರ್ಪವಿರುವ ಶಿವಲಿಂಗ. ಈ ಅದ್ಭುತವಾದ ಶಿಲ್ಪವನ್ನು ಒಂದೇ ಬಂಡೆಯಿಂದ ಕೆತ್ತಲಾಗಿದ್ದು,ಇದು ಲೇಪಾಕ್ಷಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ದೇವಾಲಯದ ಹೊರಗಿನ ನಂದಿಯು ಈ ಶಿವಲಿಂಗಕ್ಕೆ ಅಭಿಮುಖವಾಗಿದೆ.
ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ಕೊಡುವಾಗ ಇಲ್ಲಿ ನೋಡಲು ತುಂಬಾ ಇರುವ ಕಾರಣದಿಂದಾಗಿ ಜಾಸ್ತಿ ಸಮಯದ ಅವಶ್ಯಕತೆ ಇರುತ್ತದೆ. ಲೇಪಾಕ್ಷಿಯ ಅತ್ಯಂತ ಆಸಕ್ತಿದಾಯಕ ಭಾಗವೆಂದರೆ ಅದು ನೇತಾಡುವ ಕಂಬಗಳು (ಹ್ಯಾಂಗಿಂಗ್ ಪಿಲ್ಲರ್ಸ್). ಹೌದು ಇಲ್ಲಿರುವ ಕಂಬಗಳ ತಳಭಾಗಕ್ಕೂ ನೆಲಕ್ಕೂ ಅಂತರವಿರುವುದನ್ನು ಗಮನಿಸಬಹುದು. ಇದು ಆ ಕಾಲದಲ್ಲಿಯ ನಿರ್ಮಾಣದ ಕರಕುಶಲತೆ ಮತ್ತು ಅದ್ಬುತ ತಂತ್ರಗಳನ್ನು ತೋರಿಸುತ್ತದೆ.
ಶಿವಲಿಂಗದಿಂದ ಕೆಲವೇ ಗಜ ದೂರದಲ್ಲಿ ಈ ಭವ್ಯವಾದ ಸ್ತಂಭಗಳಿವೆ (ಶಿಲ್ಪಕಲೆಗಳಿರುವ ಕಂಬಗಳು) ದಂತಕಥೆಗಳ ಪ್ರಕಾರ ಇದು ಶಿವ ಪಾರ್ವತಿಯರು ಮದುವೆಯಾದ ಸ್ಥಳವಾಗಿದೆ ಈ ಸ್ಥಂಭಗಳು ಶಿವ ಪಾರ್ವತಿಯರ ವಿವಾಹದಲ್ಲಿ ಪಾಲ್ಗೊಳ್ಳಲು ಬಂದ ಅತಿಥಿಗಳನ್ನು ಅಂದರೆ ದೇವ ದೇವತೆಯರನ್ನು ಚಿತ್ರಿಸುತ್ತವೆ. ದೇವಾಲಯದ ಕಂಬಗಳು ಮತ್ತು ವೇದಿಕೆಗಳು ವಿಶಿಷ್ಟವಾದ ಸೌಂದರ್ಯತೆಯಿಂದ ಕೂಡಿದೆ.
ಹಂಪೆಗಿಂತ ಲೇಪಾಕ್ಷಿಯು ತುಂಬಾ ಚಿಕ್ಕದಾಗಿದ್ದರೂ ಇದು ಅತ್ಯಂತ ಸುಂದರವಾದ ಮೇರು ಶಿಲ್ಪಕೃತಿಗಳಲ್ಲಿ ಒಂದಾಗಿದೆ. ಈ ಭವ್ಯ ಪರಂಪರೆಯ ಸುತ್ತ ಒಂದು ವಿಹಾರ ಇಲ್ಲಿಗೆ ಭೇಟಿ ಕೊಡುವವರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ ವಿಜಯನಗರ ಸಾಮ್ರಾಜ್ಯದ ಕುಶಲಕರ್ಮಿಗಳು ಮತ್ತು ಶಿಲ್ಪಿಗಳಿಂದ ನಿರ್ಮಿತವಾದ ಲೇಪಾಕ್ಷಿಯು ನಿಮ್ಮನ್ನು ಪದೇ ಪದೆ ಭೇಟಿಕೊಡಲು ಪ್ರೇರೇಪಿಸುತ್ತದೆ.
ಬೆಂಗಳೂರಿನಿಂದ ಲೇಪಾಕ್ಷಿಯು ವಾರಾಂತ್ಯದಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶದ ಹಿಂದೂಪುರದಿಂದಲೂ ಇದನ್ನು ತಲುಪಬಹುದು
ಲೇಪಾಕ್ಷಿಯನ್ನು ತಲುಪುವುದು ಹೇಗೆ?
ಲೇಪಾಕ್ಷಿಯು ಬೆಂಗಳೂರಿನಿಂದ ಸುಮಾರು 125 ಕಿಮೀ ದೂರದಲ್ಲಿದೆ ಮತ್ತು ದೇವನಹಳ್ಳಿ, ರಾಷ್ಟ್ರೀಯ ಹೆದ್ದಾರಿ 7ರ ಮಾರ್ಗದ ಮೂಲಕ ತಲುಪಬಹುದು. ಲೇಪಾಕ್ಷಿ ಹಿಂದೂಪುರಕ್ಕೆ ಬಹಳ ಹತ್ತಿರದಲ್ಲಿದೆ ( ಕೇವಲ 15 ಕಿಮೀ ಅಂತರದಲ್ಲಿದೆ ).
ಬಸ್ ಮೂಲಕ: ಅನೇಕ ಎಪಿಆರ್ ಟಿಸಿ ಬಸ್ಸುಗಳು ಹಿಂದೂಪುರದಿಂದ ಲೇಪಾಕ್ಷಿಗೆ ಪ್ರಯಾಣಿಸುತ್ತವೆ. ನೀವು ವೈಯಕ್ತಿಕ ವಾಹನಗಳು ಅಥವಾ ಖಾಸಗಿ ಕ್ಯಾಬ್ಗಳಲ್ಲಿ ಸಹ ಹೋಗಬಹುದು. ಪ್ರಯಾಣದ ಬಹುತೇಕ ಭಾಗದ ರಸ್ತೆಗಳು ಸುಸ್ಥಿತಿಯಲ್ಲಿವೆ.
ರೈಲಿನಿಂದ:
ಹಿಂದೂಪುರ ರೈಲು ನಿಲ್ದಾಣವು ಲೇಪಾಕ್ಷಿಗೆ ಹತ್ತಿರದ ರೈಲು ನಿಲ್ದಾಣವಾಗಿದೆ.
ಲೇಪಾಕ್ಷಿಯ ವಾಸ್ತುಶಿಲ್ಪದ ಅದ್ಭುತಗಳು ಹಳೆಯ ಪ್ರಪಂಚದ ಮೋಡಿಯೊಂದಿಗೆ ನಿಮ್ಮನ್ನು ಸ್ವಾಗತಿಸುತ್ತವೆ. ಆಂಧ್ರಪ್ರದೇಶದ ಈ ಅದ್ಭುತ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿ. ಲೇಪಾಕ್ಷಿಗೆ ನಿಮ್ಮ ಪ್ರವಾಸದ ಜೊತೆಗೆ ನೀವು ನಂದಿ ಬೆಟ್ಟಗಳಿಗೆ ಭೇಟಿ ಕೊಡುವುದನ್ನು ಕೂಡಾ ಸೇರಿಸಿ ಪ್ರಯಾಣ ಮಾಡಬಹುದು.