ಚಳಿಯಲ್ಲಿ ಚಾ-ಕಾಫಿ ಹೀರುವಾಗ ಎಲ್ಲಾದರೂ ಸುಂದರ ತಾಣಕ್ಕೆ ಭೇಟಿ ನೀಡಬೇಕು ಎನ್ನುವ ತುಡಿತ ಹೆಚ್ಚುತ್ತಿದ್ದರೆ ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ. ದಟ್ಟವಾದ ಹಸಿರು ಸಿರಿಯಿಂದ ತುಂಬಿರುವ ಉದ್ಯಾನವನ ನಿಮ್ಮ ಮನ ಸೆಳೆಯದೆ ಬಿಡದು. ಚಿಕ್ಕಮಗಳೂರಿಗೆ ನೈರುತ್ಯ ಭಾಗದಲ್ಲಿ ಬರುವ ಗಿರಿಧಾಮ ಕುದುರೆ ಮುಖದ ಆಕೃತಿಯನ್ನು ಹೋಲುತ್ತದೆ.
ಇಲ್ಲಿ ಏನೇನಿದೆ?
ವಿಶಾಲವಾಗಿ ಹಬ್ಬಿರುವ ಈ ಪರ್ವತ ಶ್ರೇಣಿಯಲ್ಲಿ ಗುಹೆಗಳು, ಕಂದಕ, ಹಳ್ಳ ಕೊಳ್ಳ, ಚಿಕ್ಕ ಚಿಕ್ಕ ಬೆಟ್ಟಗಳು, ಜುಳು ಜುಳು ಹರಿಯುವ ನದಿಗಳು, ಅಲ್ಲಲ್ಲಿ ಸಣ್ಣ ಝರಿಗಳು, ಬಗೆ ಬಗೆಯ ಗಿಡಮರಗಳು, ವಿಭಿನ್ನ ಬಗೆಯ ಮಣ್ಣಿನ ರಾಶಿಗಳು, ವಿಶೇಷ ಪಕ್ಷಿ ಸಂಕುಲಗಳು ಇಲ್ಲಿವೆ.
ಚಿತ್ರಕೃಪೆ: Karunakar Rayker
ರಾಷ್ಟ್ರೀಯ ಉದ್ಯಾನವನ
ನಿತ್ಯ ಹರಿದ್ವರ್ಣದ ಕಾಡಿನಿಂದ ಕೂಡಿರುವ ಈ ಉದ್ಯಾನವನ ಸುಮಾರು 600 ಚ.ಮೀ. ವಿಸ್ತೀರ್ಣದಲ್ಲಿ ಹಬ್ಬಿಕೊಂಡಿದೆ. ಇಳಿಜಾರಿನ ರೀತಿಯಲ್ಲಿ ಹಬ್ಬಿರುವ ಈ ಬೆಟ್ಟದಲ್ಲಿ ಅನೇಕ ಸಸ್ತನಿಗಳು, ಕಾಡುಹಂದಿ, ಕಾಡುನಾಯಿ, ಸಾಂಬಾರ್, ಚಿರತೆ ಹಾಗೂ ವಾನರಗಳನ್ನು ಕಾಣಬಹುದು. ಇಲ್ಲಿ ಹುಲಿಗಳನ್ನು ರಕ್ಷಿಸುವ ಅಭಿಯಾನವನ್ನು ನೋಡಬಹುದು. ಈ ಪ್ರದೇಶವನ್ನು 1987ರಲ್ಲಿ ಅಭಯಾರಣ್ಯ ಎಂದು ಘೋಷಿಸಲಾಯಿತು. ಇದು ನಿತ್ಯಹರಿದ್ವರ್ಣ ಕಾಡಾಗಿದ್ದರೂ ಇಲ್ಲಿಯ ವಾತಾವರಣ ಕೆಲವೊಮ್ಮೆ ಹೆಚ್ಚು ಉಷ್ಣತೆಯನ್ನು ಹೊಂದುತ್ತಿರುತ್ತದೆ.
ಚಿತ್ರಕೃಪೆ: Gvarma.biomed
ಚಾರಣಕ್ಕೆ ಮೀಸಲು
ಈ ಅದ್ಭುತ ಗಿರಿಧಾಮದಲ್ಲಿ ಚಾರಣಕ್ಕೆ ಹೋಗಲೆಂದು ಕೆಲವು ಪ್ರದೇಶಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ ಕೆರೆಕಟ್ಟೆ, ನವೂರ್ ಅರಣ್ಯ ರೆಸ್ಟ್ ಹೌಸ್ ಹಾಗೂ ಬೆಳ್ತಂಗಡಿ.
ಅಭಯಾರಣ್ಯಕ್ಕೆ ಹತ್ತಿರ
ಸಮುದ್ರ ಮಟ್ಟಕ್ಕಿಂತ ಸುಮಾರು 1458 ಮೀ. ಎತ್ತರದಲ್ಲಿರುವ ಈ ಅಭಯಾರಣ್ಯಕ್ಕೆ ವರಹಾ ಪರ್ವತ ಸಾಲುಗಳು ಒರಗಿಕೊಂಡಂತಿದೆ. ಇಲ್ಲಿ ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಗಳು ತುಂಬಿ ಹರಿಯುತ್ತವೆ.
ಚಿತ್ರಕೃಪೆ: Jesjose
ಹನುಮಾನ್ ಗುಂಡಿ ಜಲಪಾತ
ಕುದುರೆಮುಖ ಪರ್ವತ ಶ್ರೇಣಿಗೆ ಸಮೀಪವಿರುವ ಜಲಧಾರೆ ಎಂದರೆ ಹನುಮಾನ್ ಗುಂಡಿ ಜಲಪಾತ. ಇಲ್ಲಿ ಬೀಳುವ ಜಲಧಾರೆ 100 ಅಡಿಗಿಂತ ಎತ್ತರಿಂದ ಧುಮುಕುತ್ತದೆ. ಈ ಜಲಪಾತದ ಬುಡದಲ್ಲಿ ಪ್ರವಾಸಿಗರು ಹೋಗಬಹುದು. ಅದಕ್ಕೆ ಅನುಕೂಲವಾಗುವಂತೆ ಮೆಟ್ಟಿಲುಗಳಿವೆ. ಆದರೆ ಪ್ರವೇಶ ಶುಲ್ಕ 30 ರೂಪಾಯಿ ಕೊಡಬೇಕಷ್ಟೆ.
ಹವಾಮಾನ
ಈ ಗಿರಿಧಾಮ ದಟ್ಟವಾದ ಹಸಿರುವನಗಳಿಂದ ಕೂಡಿದ್ದರೂ ಅಲ್ಲಿಯ ತಾಪಮಾನದಲ್ಲಿ ಏರಿಳಿತ ಆಗುತ್ತವೆ. ಬೇಸಿಗೆಯಲ್ಲಿ 25 ಡಿಗ್ರಿ ತಲುಪಿರುವ ದಾಖಲೆ ಇದೆ. ಬೇಸಿಗೆ ಹಾಗೂ ಚಳಿಗಾಲದಲ್ಲಿ 100 ರಿಂದ 200 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತದೆ. ಸಮುದ್ರ ಮಟ್ಟಕ್ಕಿಂತ 6,215 ಅಡಿ ಎತ್ತರ ಇರುವ ಈ ಪರ್ವತದಲ್ಲಿ ಕಾರಂಜಿ ಹೂ ಎನ್ನುವ ಅಪರೂಪದ ಹೂವು ಬಿಡುತ್ತದೆ.
ಇದು ಪ್ರತಿ 12 ವರ್ಷಕ್ಕೊಮ್ಮೆ ಬಿಡುತ್ತದೆ. ಈ ಹೂವು ಅರಳುವ ಕಾಲದಲ್ಲಿ ಮಾತ್ರ ನೀಲಿಯ ಹಾಸು ಬಿದ್ದಂತೆ ಕಾಣುತ್ತದೆ. ನಿಸರ್ಗದ ಈ ಒಂದು ಅಪರೂಪದ ದೃಶ್ಯ ಸಿಕ್ಕಿದರೆ ಪ್ರವಾಸಿಗನ ಅದೃಷ್ಟ ಎನ್ನಬಹುದು.
ಚಾರಣಕ್ಕೆ ಸರಿಯಾದ ಸಮಯ
ಅಕ್ಟೋಬರ್ನಿಂದ ಮೇ ವರೆಗೆ ಚಾರಣಕ್ಕೆ ಉತ್ತಮ ಕಾಲ. ಈ ಸಮಯದಲ್ಲಿ ವನ್ಯಜೀವಿಗಳು ನೋಡಲು ಸಿಗುವ ಸಾಧ್ಯತೆ ಹೆಚ್ಚು.
ಚಿತ್ರಕೃಪೆ: Gvarma.biomed
ಹತ್ತಿರ ಇರುವ ಪ್ರದೇಶಗಳು
ಗಂಗಾಮೂಲ, ಶೃಂಗೇರಿ ಶಾರದಾಂಬ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ.
ಗಿರಿಧಾಮಕ್ಕೆ ದೂರ
ಬೆಂಗಳೂರಿನಿಂದ 360 ಕಿ.ಮೀ. ದೂರ, ಚಿಕ್ಕಮಗಳೂರಿನಿಂದ 95 ಕಿ.ಮೀ. ದೂರ