ಉಜ್ಜಯಿನಿಯ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಚಿಂತಾಮಣಿ ಗಣೇಶ ದೇವಾಲಯವೂ ಒಂದು. ಗಣೇಶನ ಆಶೀರ್ವಾದ ಪಡೆಯುವ ಸಲುವಾಗಿ ಪ್ರತಿದಿನ ಹಲವಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಚಿಂತಾಮಣಿ ಎಂದರೆ ಚಿಂತೆಯಿಂದ ದೂರವಿರು ಎಂಬುದಾಗಿ ಅರ್ಥ. ಚಿಂತೆಯಲ್ಲಿ ಬಳಲುತ್ತಿರುವ ಯಾವುದೇ ವ್ಯಕ್ತಿ ಇಲ್ಲಿಗೆ ಭೇಟಿ ನೀಡಿ ಗಣಪನ ದರ್ಶನ ಪಡೆದರೆ ಅವರನ್ನು ಭಗವಂತ ಹರಸಿ, ಚಿಂತೆಯಿಂದ ಮುಕ್ತಿ ಕೊಡುತ್ತಾನೆ ಎಂಬ ಗಾಢವಾದ ನಂಬಿಕೆ ಇಲ್ಲಿಯ ಜನರದ್ದು.
ಚಿಂತಾಮಣಿ ದೇವಸ್ಥಾನ
PC: youtube
ಸುಮಾರು ಹನ್ನೊಂದು ಹನ್ನೆರಡನೇ ಶತಮಾನಕ್ಕೆ ಸೇರಿದ ಈ ದೇವಾಲಯವು ಮಧ್ಯಪ್ರದೇಶದಲ್ಲೇ ಅತೀ ಹೆಚ್ಚು ಭಕ್ತರು ಭೇಟಿ ನೀಡುವಂತಹ ದೇವಾಲಯವಾಗಿದೆ. ಹಿಂದಿ ಭಾಷೆಯಲ್ಲಿ ಚಿಂತಾಮಣಿ ವಿಷ್ಣು ಎಂದರ್ಥ; ಇದು ವಿಷ್ಣುವಿನ ಇನ್ನೊಂದು ಹೆಸರಾಗಿದೆ. ಆದ್ದರಿಂದ, ಗಣೇಶ ಮತ್ತು ವಿಷ್ಣುವಿನ ಮೂರ್ತಿಯನ್ನು ಹೊಂದಿರುವ ದೇವಸ್ಥಾನವನ್ನು ಚಿಂತಾಮಣಿ ದೇವಸ್ಥಾನವೆಂದು ಕರೆಯಲಾಗುತ್ತದೆ.
ದಂತ ಕಥೆಯ ಪ್ರಕಾರ
PC: youtube
ಚಿಂತಾಮಣಿ ಗಣೇಶ ದೇವಸ್ಥಾನದ ಇತಿಹಾಸ ಪ್ರಾಚೀನ ಕಾಲದಿಂದಲೂ ಇದೆ. ದೇವಾನು ದೇವತೆಗಳು ತಮ್ಮ ಭೂಮಿಗೆ ಬಂದು ತಮ್ಮ ಭಕ್ತರ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಕಲ್ಪನೆಯಲ್ಲಿ ಜನರು ನಂಬಿಕೆ ಇಟ್ಟುಕೊಂಡಿದ್ದರು. ಅಂತಹ ಒಂದು ಕಲ್ಪನೆಯಿಂದ ಗಣೇಶನು ಭೂಮಿಗೆ ಬಂದು ಈ ದೇವಸ್ಥಾನವನ್ನು ಉಜ್ಜಯಿಯಲ್ಲಿ ನಿರ್ಮಿಸಿದನು ಎನ್ನುವ ಕಥೆ ಬಹಳ ಜನಪ್ರಿಯವಾಗಿದೆ.
ಪವಿತ್ರ ತಾಣ ಉಜ್ಜೈನಿ
PC:Bernard Gagnon
ಸಾಗರ ಮಂಥನದ ಸಮಯದಲ್ಲಿ, ದೇವತೆಗಳು ಮತ್ತು ರಾಕ್ಷಸರು ಸಮುದ್ರದ ಮಂಥನ ಮಾಡಿದ ಸಮಯದಲ್ಲಿಸಾಗರದಿಂದ ಹೊರ ಬಂದಿದ್ದ ಅಮೃತದ ಒಂದು ಹನಿ ಉಜ್ಜೈನಿಯಲ್ಲಿ ಬಿದ್ದಿದೆ ಎನ್ನಲಾಗುತ್ತದೆ. ಇದರಿಂದ ಉಜ್ಜೈನಿ ಪವಿತ್ರವಾಯಿತು. ಈ ಸ್ಥಳಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಅಲ್ಲಿ ವಾಸಿಸುವ ದೇವತೆಗಳ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ.
ಸ್ವಯಂಭೂ ಗಣೇಶ
PC: Facebook
ದೇವಾಲಯದ ಗರ್ಭಗುಡಿಯಲ್ಲಿ ಗಣೇಶನ ವಿಗ್ರಹವಿದೆ. ಈ ಗಣೇಶನ ವಿಗ್ರಹವನ್ನು ಸ್ವಯಂಭೂ ಎನ್ನಲಾಗುತ್ತದೆ. ಗಣಪನ ವಿಗ್ರಹದ ಎರಡೂ ಬದಿಯಲ್ಲಿ ಅವನ ಪತ್ನಿಯರಾದ ರಿದ್ಧಿ ಹಾಗು ಸಿದ್ಧಿಯರ ವಿಗ್ರಹಗಳೂ ಇವೆ. ಈ ದೇವಾಲಯದಲ್ಲಿ ವಿಷ್ಣುವಿನ ವಿಗ್ರಹವೂ ಇದೆ. ಭಕ್ತರು ಗಣೇಶ ಹಾಗೂ ವಿಷ್ಣುವನ್ನು ಭಕ್ತಿಯಿಂದ ಆರಾಧಿಸುತ್ತಾರೆ.
ತಲುಪುವುದು ಹೇಗೆ?
PC: Facebook
ದೇಗುಲವಿರುವ ತಾಣದಲ್ಲಿ ಶಿಪ್ರಾ ನದಿಯು ಹರಿದಿದ್ದು ಪಕ್ಕದಲ್ಲೆ ಫತೇಹ್ಪುರ್ ರೈಲು ಮಾರ್ಗವನ್ನು ಕಾಣಬಹುದು. ಈ ದೇವಾಲಯಕ್ಕೆ ಪ್ರವಾಸಿಗರು ಅಥವಾ ಭಕ್ತರು ರಿಕ್ಷಾ, ಬಸ್ಸುಗಳ ಹೊರತಾಗಿ ರೈಲಿನಿಂದಲೂ ಸುಲಭವಾಗಿ ತಲುಪಬಹುದಾಗಿದೆ. ಉಜ್ಜಯಿನಿ ರೈಲು ನಿಲ್ದಾಣದಿಂದ ಈ ದೇವಾಲಯವು ಕೇವಲ ಐದು ಕಿ.ಮೀ ದೂರದಲ್ಲಿದೆ.