ನಮ್ಮ ರಾಜ್ಯದಲ್ಲಿ ಎಷ್ಟೇಲ್ಲಾ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆ ಜಾತ್ರೆಗಳಿರುತ್ತವೆ, ಉತ್ಸವಗಳಿರುತ್ತವೆ. ನೀವು ಸಾಕಷ್ಟು ಜಾತ್ರೆಗಳನ್ನು ನೋಡಿರುವಿರಿ. ಆದರೆ ಕಿಚಡಿ ಜಾತ್ರೆಯನ್ನು ನೋಡಿದ್ದೀರಾ? ಈ ಬಗ್ಗೆ ಕೇಳಿದ್ದೀರಾ? ಈ ಕಿಚಡಿ ಜಾತ್ರೆಯ ಸ್ಪೆಶಾಲಿಟಿ ಏನು ಗೊತ್ತಾ?
ಎಲ್ಲಿ ನಡೆಯುತ್ತೆ ಈ ಜಾತ್ರೆ
PC: FaceBook
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿನ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ಈ ಕಿಚಡಿ ಜಾತ್ರೆಯನ್ನು ನಡೆಸಲಾಗುತ್ತದೆ. ಸಾಮಾನ್ಯವಾಗಿ ಬೇರೆ ಬೇರೆ ಊರುಗಳಲ್ಲಿ ದೇವರ ಜಾತ್ರೆ ನಡೆದ್ರೆ ಚಿಮ್ಮಡ ಗ್ರಾಮದಲ್ಲಿ ಕಿಚಡಿ ಜಾತ್ರೆ ನಡೆಯುತ್ತದೆ.
ಕಿಚಡಿಯೇ ಪ್ರಸಾದ
PC: FaceBook
ಈ ಜಾತ್ರೆಗೆ ಆಗಮಿಸುವ ಭಕ್ತರಿಗೆಲ್ಲಾ ಕಿಚಡಿಯೇ ಪ್ರಸಾದ. ಎಷ್ಟೇ ಶ್ರೀಮಂತನಾದ್ರೂ ಇಲ್ಲಿನ ಕಿಚಡಿ ಸ್ವೀಕರಿಸುತ್ತಾರೆ. ಒಂದೇ ದಿನದಲ್ಲಿ ಲಕ್ಷಾಂತರ ಜನರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ ಇಲ್ಲಿ.
ಸರ್ವರೋಗಕ್ಕೂ ಮದ್ದು
PC: FaceBook
ಇಲ್ಲಿನ ಅನ್ನಪ್ರಸಾದವನ್ನು ಸ್ವೀಕರಿಸಿದ್ರೆ ಸರ್ವರೋಗ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಇಲ್ಲಿನ ಕಿಚಡಿಯನ್ನು ಸೇವಿಸುವುದರ ಜೊತೆಗೆ ಪ್ರಸಾದವನ್ನು ತಮ್ಮ ಮನೆಗೂ ತೆಗೆದುಕೊಂಡು ಹೋಗುತ್ತಾರೆ. ಮಧ್ಯಾಹ್ನ ಕಿಚಡಿ ಪ್ರಸಾದ ಸಂತರ್ಪಣೆ ಪ್ರಾರಂಭವಾದರೆ, ರಾತ್ರಿ ವರೆಗೂ ನಡೆಯುತ್ತದೆ.
ಜಾತಿ, ಮತದ ಭೇದವಿಲ್ಲ
PC: FaceBook
ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲಾ ಜಾತಿಯವರು ಜಾತ್ರೆಗೆ ಬರುತ್ತಾರೆ. ಪ್ರಸಾದ ಸ್ವೀಕರಿಸುತ್ತಾರೆ. ಭಾವೈಕ್ಯತೆಯನ್ನು ಸಾರುವ ಉತ್ಸವ ಇದಾಗಿದೆ. ಚಿಮ್ಮಡದ ಕಿಚಡಿ ಜಾತ್ರೆಗೆ ನೆರೆ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ.
ಎಲ್ಲಾ ಧರ್ಮದವರು ಸೇರಿ ನಡೆಸುವ ಜಾತ್ರೆ
PC: FaceBook
ಭಕ್ತರು ದಾನವಾಗಿ ನೀಡಿದ ಅನ್ನ ಹಾಗು ಬೇಳೆಯಿಂದ ಈ ಪ್ರಸಾದವನ್ನು ತಯಾರಿಸಲಾಗುತ್ತದೆ. ಪ್ರತಿಯೊಬ್ಬರು ತಮ್ಮ ಇಚ್ಛಾನುಸಾರ ದೇಣಿಗೆಯನ್ನು ನೀಡುತ್ತಾರೆ. ಪ್ರತಿಯೊಬ್ಬರು ಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ. ಎಲ್ಲಾ ಧರ್ಮದ ಜನರು ಒಂದೇ ಕುಟುಂಬದವರಂತೆ ಸೇರಿ ಈ ಜಾತ್ರೆಯನ್ನು ಯಶಸ್ವಿಯಾಗಿಸುತ್ತಾರೆ.
ಪ್ರಭುಲಿಂಗೇಶ್ವರ
PC: FaceBook
ಸಾಕಷ್ಟು ಜನರು ಇಲ್ಲಿಗೆ ಬಂದು ಪ್ರಭುಲಿಂಗೇಶ್ವರ ಕೃಪೆಗೆ ಪಾತ್ರರಾಗುತ್ತಾರೆ. ಈ ಬಾರಿ ಇದೇ ಸೋಮವಾರ ಸೆ.24ರಂದು ಕಿಚಡಿ ಜಾತ್ರೆ ನಡೆಯಲಿದೆ. ನೀವು ಈ ವರೆಗೆ ಈ ಕಿಚಡಿ ಜಾತ್ರೆಯಲ್ಲಿ ಪಾಲ್ಗೊಂಡಿಲ್ಲ, ಅಲ್ಲಿನ ಮಹಾ ಪ್ರಸಾದವನ್ನು ಸ್ವೀಕರಿಸಿಲ್ಲವೆಂದಾದಲ್ಲಿ ಈ ಬಾರಿ ನಡೆಯಲಿರುವ ಕಿಚಡಿ ಜಾತ್ರೆಯಲ್ಲಿ ಪಾಲ್ಗೊಂಡು ನಿಮ್ಮ ಕಣ್ಣಾರೆ ಕಿಚಡಿ ಜಾತ್ರೆಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಿ.