ಕರ್ನಾಟಕ ಪ್ರವಾಸಿಗರಿಗೆ ಖಂಡಿತವಾಗಿಯೂ ನಿರಾಸೆ ಮಾಡದ ಒಂದು ಅದ್ಭುತ ಹಾಗೂ ಸುಂದರ ರಾಜ್ಯ. ಇಲ್ಲಿನ ಪ್ರಾಕೃತಿಕ ಸೊಬಗು ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಅದರಲ್ಲೂ ವಿಶೇಷವಾಗಿ "ಭಾರತದ ಸ್ಕಾಟ್ ಲ್ಯಾಂಡ್" ಎಂದೆ ಪ್ರೀತಿಯಿಂದ ಕರೆಯಲ್ಪಡುವ ಕೊಡಗಿನ ಮೈಮಾಟವಂತೂ ಮೋಡಿ ಮಾಡುವಂಥದ್ದು.
ಕೊಡಗೆಂಬ ಮೋಡಿ ಮಾಡುವ ನಾಡನ್ನೊಮ್ಮೆ ನೋಡಿ
ಸಾಕಷ್ಟು ಅದ್ಭುತ ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಹತ್ತು ಹಲವು ತಾಣಗಳನ್ನು ಕೊಡಗಿನಲ್ಲಿ ಕಾಣಬಹುದಾಗಿದೆ. ಕರ್ನಾಟಕದ ಈ ಸುಂದರ ಗಿರಿಧಾಮ ವರ್ಷದ ಎಲ್ಲಾ ಸಮಯದಲ್ಲೂ ಭೇಟಿ ನೀಡುವಂತಿದ್ದರೂ ಮಳೆಗಾಲ ಹಾಗೂ ನಂತರದ ಸಮಯ ಇಲ್ಲಿನ ಸೃಷ್ಟಿ ಸೌಂದರ್ಯ ದುಪ್ಪಟ್ಟುಗೊಳ್ಳುತ್ತದೆ. ಗರಿಗೆದರುವ ಜಲಪಾತಗಳು, ಮಂಜು ಮುಸುಕಿದಂತಹ ವಾತಾವರಣ, ಎಲ್ಲೆಲ್ಲೂ ಕಂಗೊಳಿಸುವ ಹಚ್ಚ ಹಸಿರು ಅಕ್ಷರಶಃ ಕೊಡಗನ್ನು ಭೂಮಿಯ ಮೇಲಿನ ಸ್ವರ್ಗದಂತೆ ಮಾಡಿಬಿಡುತ್ತವೆ.
ಚಿತ್ರಕೃಪೆ: Ravi Aparanji
ಈ ಸಮಯದಲ್ಲಿ ಸಾಕಷ್ಟು ಜನ ಜಲಾಶಯ, ಜಲಪಾತಗಳಂತಹ ಸುಂದರ ತಾಣಗಳನ್ನು ನೋಡಲು ಕೊಡಗಿಗೆ ಪ್ರವಾಸ ಮಾಡುತ್ತಾರೆ. ಬಹುಶಃ ಎಲ್ಲರೂ ಕೊಡಗಿನಲ್ಲಿ ಅತಿ ಜನಪ್ರೀಯವಾದ ತಾಣಗಳಿಗೆಯೆ ಭೇಟಿ ನೀಡುತ್ತಾರೆ. ಆದರೆ ಪ್ರಸ್ತುತ ಲೇಖನವು ಕೊಡಗಿನಲ್ಲಿರುವ ಒಂದು ಸುಂದರ ಜಲಾಶಯದ ಕುರಿತು ತಿಳಿಸುತ್ತದೆ. ವಿಶೇಷವೆಂದರೆ ಬಹುತೇಕರಿ ಈ ಜಲಾಶಯದ ಕುರಿತು ಅಷ್ಟೊಂದು ಮಾಹಿತಿ ಇಲ್ಲ. ಇನ್ನೂ ಭೇಟಿ ನೀಡುವುದಂತೂ ಕೊಂಚ ದೂರವೆ. ಆದರೂ ನೀವೇನಾದರೂ ಕೊಡಗಿಗೆ ಪ್ರವಾಸ ಮಾಡಿದರೆ ಈ ಜಲಾಶಯ ತಾಣವನ್ನು ನೋಡಲು ಮರೆಯದಿರಿ.
ಚಿತ್ರಕೃಪೆ: Ravi Aparanji
ಇದರ ಮುಖ್ಯ ಆಕರ್ಷಣೆ, ಇಲ್ಲಿನ ಶಾಂತವಾದ ಪರಿಸರ ಹಾಗೂ ಸುತ್ತಮುತ್ತಲಿನಲ್ಲಿ ಕಂಡುಬರುವ ಅಗಾಧ ಪ್ರಮಾಣದ ಹಸಿರು. ಸ್ಥಳೀಯವಾಗಿ ಇದೊಂದು ಅದ್ಭುತ ಪಿಕ್ನಿಕ್ ತಾಣವಾಗಿ ಗುರುತಿಸಿಕೊಂಡಿದೆ. ಇದೇನು ದೊಡ್ಡದಾದ ಜಲಾಶಯವಲ್ಲವಾದರೂ ಇದರ ಸೌಂದರ್ಯದ ವಿಶಾಲತೆಯು ನೋಡುಗರನ್ನು ಸಂತಸಗೊಳಿಸದೆ ಇರಲಾರದು. ಇದನ್ನು ಚಿಕ್ಲಿಹೊಳೆ ಜಲಾಶಯ ಎಂದು ಕರೆಯುತ್ತಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಹರಿಯುವ ಚಿಕ್ಕ ಚಿಕ್ಲಿಹೊಳೆ ನದಿಗೆ ಅಡ್ಡಲಾಗಿ ಈ ಜಲಾಶಯವನ್ನು ನಿರ್ಮಿಸಲಾಗಿದೆ.
ಚಿತ್ರಕೃಪೆ: Ravi Aparanji
ಈ ಪ್ರದೇಶದ ಸುತ್ತಮುತ್ತಲಿನ ಹಳ್ಳಿಗಳ ಕೃಷಿ ಭೂಮಿಗೆ ನೀರೊದಗಿಸುವ ಸದುದ್ದೇಶದಿಂದ ಈ ಜಲಾಶಯದ ನಿರ್ಮಾಣವನ್ನು 1983 ರಲ್ಲಿ ಮಾಡಲಾಯಿತು. ಇಂದು 865 ಹೆಕ್ಟೇರುಗಳಷ್ಟು ವಿಸ್ತಾರವಾದ ಕೃಷಿ ಭೂಮಿಗೆ ನೀರೊದಗಿಸಲಿ ಇದನ್ನು ಬಳಸಲಾಗುತ್ತದೆ. ಇದರ ಇನ್ನೊಂದು ವಿಶೇಷತೆ ಎಂದರೆ ಇದಕ್ಕೆ ಕಟ್ಟಲಾಗಿರುವ ಆಣೆಕಟ್ಟೆಗೆ ಯಾವುದೆ ಕ್ರೆಸ್ಟ್ ಗೇಟುಗಳಿಲ್ಲ. ಅಂದರೆ ಸಾಮಾನ್ಯವಾಗಿ ನೀರಿನ ಮಟ್ಟ ಜಲಾಶಯದಲ್ಲಿ ಸಾಕಷ್ಟು ಏರಿದಾಗ ಅದನ್ನು ಹೊರ ಹಾಕಲು ನಿರ್ಮಿಸಲಾಗುವ ಹೊರದ್ವಾರಗಳಿಲ್ಲ.
ಮೈನವಿರೇಳಿಸುವ ಕೊಡಗಿನ ಚಿತ್ರಗಳು
ಬದಲು ನೀರು ಮೇಲ್ಮೈದಿಂದಲೆ ಇದರ ಮೂಲಕ ತುಂಬಿ ತುಳುಕುತ್ತದೆ. ಇದರ ಇನ್ನೊಂದು ವಿಶೇಷವೆಂದರೆ ಅರ್ಧವೃತ್ತಾಕಾರದಲ್ಲಿರುವ ಇದರ ಆಕಾರ. ಇದು ನೋಡುಗರನ್ನು ಸಾಕಷ್ಟು ಆಕರ್ಷಿಸುತ್ತದೆ. ನೀವು ಕೊಡಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಸುಂದರ ಜಲಾಶಯವನ್ನು ನೋಡಲು ಮರೆಯದಿರಿ. ಈ ಚಿಕ್ಲಿಹೊಳೆ ಜಲಾಶಯವು ಕೊಡಗು-ಕುಶಾಲನಗರ ಮಾರ್ಗದಲ್ಲಿ ಬರುತ್ತದೆ. ಈ ಮಾರ್ಗದ ಮಧ್ಯೆ ಬರುವ ನಂಜರಾಯಪಟ್ಟಣದ ಬಳಿ ಈ ಜಲಾಶಯ ಸ್ಥಿತವಿದೆ. ಪ್ರಸಿದ್ಧ ಪ್ರವಾಸಿ ಕೇಂದ್ರವಾದ ದುಬಾರೆ ಇಲ್ಲಿಂದ ಕೇವಲ ಐದು ಕಿ.ಮೀ ಗಳಷ್ಟು ದೂರದಲ್ಲಿದೆ.