ನೈಸರ್ಗಿಕ ಸೌಂದರ್ಯತೆಯಿಂದ ಹಿಡಿದು ಮಾನವ ನಿರ್ಮಿತ ಅದ್ಬುತಗಳವರೆಗೆ ಎಲ್ಲವನ್ನೂ ಒಳಗೊಂಡಿರುವ ತಮಿಳುನಾಡು ಅಸಂಖ್ಯಾತ ಅದ್ಬುತಗಳು ಭವ್ಯತೆಗಳನ್ನು ತನ್ನಲ್ಲಿ ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ಇಂತಹ ಪರಂಪರೆ ಮತ್ತು ಗಮನಸೆಳೆಯುವಂತಹ ಸೌಂದರ್ಯತೆ ಇರುವ ಈ ನೆಲಕ್ಕೆ ನಿಮ್ಮ ಪಾದವನ್ನು ಇಡಿ. ಅವುಗಳಲ್ಲಿ ಮಹಾಬಲಿಪುರಂ ಬೆಲೆಕಟ್ಟಲಾಗದ ಈ ಯುಗದ ಅದ್ಬುತಗಳಲ್ಲೊಂದಾಗಿದೆ.
ಇದನ್ನು ಮಾಮಲ್ಲಪುರಂ ಎಂದೂ ಕರೆಯಲಾಗುತ್ತದೆ. ಮಾಮಲ್ಲಪುರಂ ಸಮುದ್ರದ ಹತ್ತಿರವಿರುವ ಪಟ್ಟಣವಾಗಿದ್ದು ಇದು ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿದೆ. ಪಲ್ಲವರ ಆಳ್ವಿಕೆಯ ಕಾಲದ ಈ ಪಟ್ಟಣದ ಇತಿಹಾಸ 7 ನೇ ಶತಮಾನದ್ದಾಗಿದೆ.
ಇಂದು, ಇದು ಯುನೆಸ್ಕೋದ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿರುವ ಭಾರತದ ಪ್ರಮುಖ ಐತಿಹಾಸಿಕ ಪಟ್ಟಣಗಳಲ್ಲಿ ಒಂದಾಗಿದೆ. ರಥದ ರೂಪದಲ್ಲಿರುವ ದೇವಾಲಯಗಳಿಗೆ ಈ ಸ್ಥಳವು ಪ್ರಸಿದ್ದವಾಗಿದ್ದು, ಕಲ್ಲಿನಿಂದ ಕೆತ್ತಲಾದ ಕೆತ್ತನೆಗಳು ಮತ್ತು ಪ್ರಾಚೀನ ದೇವಾಲಯಗಳಿಗೆ ಹೆಸರುವಾಸಿಯಾಗಿರುವ ಮಹಾಬಲಿಪುರಂ ಖಚಿತವಾಗಿಯೂ ಐತಿಹಾಸಿಕ ರತ್ನವೆಂದರೆ ತಪ್ಪಾಗಲಾರದು.
ಈ ಪ್ರತಿಷ್ಠಿತ ಪಟ್ಟಣಕ್ಕೆ ಪ್ರವಾಸ ಮಾಡಲು ಮತ್ತು ಅದರ ಇತಿಹಾಸದ ದಟ್ಟ ಗುಹೆಗಳನ್ನು ಅನ್ವೇಷಿಸುವ ಬಗೆ ಹೇಗೆ?
ಭೇಟಿ ಕೊಡಲು ಸೂಕ್ತ ಸಮಯ
ಮಹಾಬಲಿಪುರಂ ಉಷ್ಣವಲಯದ ಹವಾಗುಣವನ್ನು ಹೊಂದಿರುವುದರಿಂದ ಬೇಸಿಗೆಯಲ್ಲಿ ಉಷ್ಣಾಂಶ ಮತ್ತು ಆರ್ದ್ರತೆಯು ಅನುಕೂಲಕರವಾಗಿರುವುದಿಲ್ಲ. ಆದುದರಿಂದ ಈ ಸಮಯದಲ್ಲಿ ಅಂದರೆ ಎಪ್ರಿಲ್ ನಿಂದ ಸೆಪ್ಟೆಂಬರ್ ವರೆಗಿನ ಸಮಯವು ಸೂಕ್ತವಾಗಿರುವುದಿಲ್ಲ.
ಇಲ್ಲಿಗೆ ಭೇಟಿಕೊಡಲು ಸೂಕ್ತವಾದ ಸಮಯವೆಂದರೆ ಅದು ನವೆಂಬರ್ ತಿಂಗಳಿನಿಂದ ಫ಼ೆಬ್ರವರಿ ತಿಂಗಳು ಕೊನೆಯವರೆಗೆ. ಈ ಸಮಯದಲ್ಲಿ ಇಲ್ಲಿ ಗರಿಷ್ಟ ಬಿಸಿ ಹವಾಮಾನದ ವಾತಾವರಣವು ಬದಲಾಗಿ ನಿಮಗೆ ಆರಾಮವಾಗಿ ಇಲ್ಲಿಯ ಪ್ರದೇಶಗಳಲ್ಲಿ ತಿರುಗಾಡಲು ಅನುಕೂಲವಾಗಿರುತ್ತದೆ.
ಚೆನ್ನೈನಿಂದ ಮಹಾಬಲಿಪುರಂ ತಲುಪುವುದು ಹೇಗೆ
ವಾಯುಮಾರ್ಗದ ಮೂಲಕ: ನೀವು ವಿಮಾನದ ಮೂಲಕ ಚೆನ್ನೈಗೆ ಪ್ರಯಾಣ ಮಾಡಬೇಕೆಂದಿದ್ದರೆ ವಿಮಾನನಿಲ್ದಾಣದಿಂದ ಕ್ಯಾಬ್ ಮಾಡಿಕೊಂಡು ಮಹಾಬಲಿಪುರಂಗೆ ಹೋಗಬಹುದು ಅಥವಾ ಚೆನ್ನೈ ನಗರಕ್ಕೆ ಒಂದು ಕ್ಯಾಬ್ ಮಾಡಿಕೊಂಡು ಹೋಗಬಹುದು ಮತ್ತು ಅಲ್ಲಿಂದ ಮಹಾಬಲಿಪುರಂ ಗೆ ಬಸ್ಸಿನಲ್ಲಿ ಹೋಗಬಹುದು. ಚೆನ್ನೈ ವಿಮಾನ ನಿಲ್ದಾಣವು ಮಹಾಬಲಿಪುರಂಗೆ ಹತ್ತಿರದ ನಿಲ್ದಾಣವಾಗಿದ್ದು ಇದು 55. ಕಿ.ಮೀ ಅಂತರದಲ್ಲಿದೆ.
ರೈಲು ಮಾರ್ಗದ ಮೂಲಕ: ಚೆನ್ನೈನಿಂದ ಮಹಾಬಲಿಪುರಂಗೆ ನೇರ ರೈಲು ಸಂಪರ್ಕವಿಲ್ಲ. ಆದುದರಿಂದ ನೀವು ಚೆನ್ನೈನಿಂದ ರೈಲು ಮೂಲಕ ಚೆಂಗಲ್ ಪಟ್ಟುವಿಗೆ ಹೋಗಬಹುದು ನಂತರ ಅಲ್ಲಿಂದ ಕ್ಯಾಬ್ ಮೂಲಕ ಮಹಾಬಲಿಪುರಂಗೆ ಹೋಗಬಹುದು. ಚೆಂಗಲ್ಪಟ್ಟು ಮಹಾಬಲಿಪುರದಿಂದ 28 ಕಿ.ಮೀ ದೂರದಲ್ಲಿದೆ.
ರಸ್ತೆ ಮೂಲಕ: ಚೆನ್ನೈನಿಂದ 57 ಕಿ.ಮೀ ದೂರದಲ್ಲಿರುವ ಮಹಾಬಲಿಪುರಂಗೆ, ಚೆನ್ನೈ ಮತ್ತು ಇತರ ಪ್ರಮುಖ ನಗರಗಳಿಂದ ಸುಲಭವಾಗಿ ತಲುಪಬಹುದು. ನೀವು ಚೆನ್ನೈನಿಂದ ಮಹಾಬಲಿಪುರಕ್ಕೆ ಕ್ಯಾಬ್ ಅನ್ನು ತೆಗೆದುಕೊಳ್ಳಬಹುದು ಅಥವಾ ಚೆನ್ನೈನಿಂದ ಮಹಾಬಲಿಪುರಕ್ಕೆ ನೇರವಾಗಿ ಬಸ್ ಅನ್ನು ಹಿಡಿಯಬಹುದು. ನೀವು ನಿಮ್ಮ ಸ್ವಂತ ವಾಹನದಲ್ಲಿ ಪ್ರಯಾಣಿಸಬೇಕೆಂದಿದ್ದಲ್ಲಿ ಈ ಕೆಳಗಿನ ಮಾರ್ಗಗಳನ್ನು ಅನುಸರಿಸಿ.
ಮಾರ್ಗ 1: ಚೆನ್ನೈ - ಕೋವಲಂ - ತಿರುವಿಧಂಡೈ - ಮಹಾಬಲಿಪುರಂ
ಮಾರ್ಗ 2: ಚೆನ್ನೈ - ತಂಡಲಂ - ವಂದಲೂರು - ಮಹಾಬಲಿಪುರಂ
ಆದರೂ ಮಾರ್ಗ 1ರಲ್ಲಿ ವೇಗವಾಗಿ ತಲುಪಬಹುದು ಆದ್ದರಿಂದ ಇದು ಹೆಚ್ಚು ಸೂಕ್ತ.
ನೀವು ಮಹಾಬಲಿಪುರಂ ಮಾರ್ಗದಲ್ಲಿ ಪ್ರಯಾಣಿಸುತ್ತಿರುವಾಗ ಈ ಕೆಳಗಿನ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯಬಹುದು.
1) ಕೊವಲಂ
ಚೆನ್ನೈನಿಂದ ಸುಮಾರು 40 ಕಿ.ಮೀ. ದೂರದಲ್ಲಿದ್ದು ಇದನ್ನು ಕಾರ್ನಾಟಿಕ್ ನವಾಬರ ಕಾಲದಲ್ಲಿ ನಿರ್ಮಿಸಲ್ಪಟ್ಟಿತು ಮತ್ತು ಕೊವಲಂ ಅನ್ನು ಬಂದರು ಪಟ್ಟಣವಾಗಿ ಅಭಿವೃದ್ಧಿಪಡಿಸಲಾಯಿತು. ಇದನ್ನು ಕೋವೆಲಾಂಗ್ ಎಂದೂ ಉಚ್ಚರಿಸಲಾಗುತ್ತದೆ. ಇದು ಇದರ ಕಚ್ಚಾ ಕಡಲತೀರಗಳು ಮತ್ತು ಉತ್ತಮ ವಾತಾವರನಗಳಿಂದ ಹೆಸರುವಾಸಿಯಾಗಿದ್ದು, ಇಲ್ಲಿನ ನಯನಮನೋಹರ ಸೌಂದರ್ಯತೆಗಾಗಿ ಕೋವಲಮ್ ಪ್ರವಾಸಿಗರಲ್ಲಿ ಹೆಚ್ಚಿನ ಪ್ರಸಿದ್ದಿಯನ್ನು ಪಡೆದಿದೆ.
ಇಲ್ಲಿ ಜನರು ವಿಂಡ್ ಸರ್ಫಿಂಗ್ ಮಾಡುವುದನ್ನು ಮತ್ತು ಕಡಲಿನ ನೀರಿನಲ್ಲಿ ಅಡ್ಡಾಡುವುದನ್ನು ಕಾಣಬಹುದು. ನಿಮ್ಮ ಪ್ರಯಾಣವನ್ನು ಸ್ವಲ್ಪ ಸಮಯದ ಮಟ್ಟಿಗೆ ಈ ನೀರಿನ ವಾತಾವರಣದಲ್ಲಿ ನಿಲ್ಲಿಸಲು ಯೋಚನೆ ಮಾಡುತ್ತಿದ್ದಲ್ಲಿ ಇದೊಂದು ಉತ್ತಮ ನಿಲುಗಡೆಯ ಸ್ಥಳವಾಗಿದೆ.
2) ತಿರುವಿಧಂದೈ
ನಿಮ್ಮ ಮಹಾಬಲಿಪುರಂ ನ ಪ್ರಯಾಣದ ಸಮಯದಲ್ಲಿ ನೀವು ತಿರುವಿಧಂದೈ ನಲ್ಲಿ ಒಂದು ವಿರಾಮವನ್ನು ಪಡೆಯಬಹುದಾಗಿದೆ ಮತ್ತು ಇಲ್ಲಿಯ ದಡಗಳಲ್ಲಿ ನೂರಾರು ಮೊಸಳೆಗಳು ವಿಶ್ರಾಂತಿ ಪಡೆಯುತ್ತಿರುವುದನ್ನು ಮತ್ತು ತೆವಳುತ್ತಾ ಸುತ್ತ ಮುತ್ತ ಅಡ್ಡಾಡುವುದನ್ನು ಕಾಣಬಹುದು. ನೀವು ಮೊಸಳೆಯನ್ನು ಇಷ್ಟ ಪಡುವವರಾಗಿದ್ದರೆ, ಈ ಸ್ಥಳವು ನಿಮಗೆ ಇಷ್ಟವಾಗುವ ಸ್ಥಳವಾಗಿದೆ. ಇಲ್ಲಿ ನೀವು ಮುಗ್ಗರ್, ಘರಿಯಾಲ್ ಮತ್ತು ಉಪ್ಪುನೀರಿನ ಮೊಸಳೆಯಂತಹ ಅಳಿವಂಚಿನಲ್ಲಿರುವ ಜಾತಿಯ ಮೊಸಳೆಗಳನ್ನು ಕಾಣಬಹುದು.
ಮಹಾಬಲಿಪುರಂ ನಲ್ಲಿ ಭೇಟಿ ನೀಡಬಹುದಾದ ಸ್ಥಳಗಳು
ನೀವು ಒಮ್ಮೆ ಮಹಾಬಲಿಪುರಂ ಅನ್ನು ತಲುಪಿದ ಕೂಡಲೇ ನಿಮ್ಮ ಉತ್ಸಾಹದ ಗರಿ ಬಿಚ್ಚಿ ಇಲ್ಲಿಯ ಅದ್ಬುತ ಮತ್ತು ಭವ್ಯತೆಯನ್ನು ಅನ್ವೇಷಣೆ ಮಾಡಬಹುದು. ಇಲ್ಲಿಯ ಕೆಲವು ಪ್ರಮುಖ ಸ್ಥಳಗಳನ್ನು ಈ ಕೆಳಗೆ ಸೂಚಿಸಲಾಗಿದೆ ಈ ಸ್ಥಳಗಳನ್ನು ಮಹಾಬಲಿಪುರಂ ನಲ್ಲಿರುವಾಗ ಭೇಟಿ ಕೊಡಲೇ ಬೇಕಾದವುಗಳು. ಈ ಗಮನಾರ್ಹ ತಾಣಗಳು ಮಹಾಬಲಿ ಪುರಂ ಅನ್ನು ವಿಶ್ವ ಪರಂಪರೆಯ ತಾಣಗಳಲ್ಲಿ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದರೆ ತಪ್ಪಾಗಲಾರದು.
1) ಶೋರ್(ಕಡಲ ತೀರದ) ದೇವಾಲಯ
ಬಂಗಾಳಕೊಲ್ಲಿಯ ಕಡಲ ತೀರದಲ್ಲಿ ನೆಲೆಸಿರುವ ಶೋರ್ ದೇವಾಲಯ ಇದನ್ನು 8 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು ಇದನ್ನು ಗ್ರಾನೈಟ್ ಗಳ ಬ್ಲಾಕ್ ಗಳನ್ನು ಉಪಯೋಗಿಸಿ ಕಟ್ಟಲ್ಪಟ್ಟಿದೆ ಮತ್ತು ಇದು ಏಳು ಪಗೋಡಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ.
ಇದು ಕೂಡಾ ಭಾರತದ ಅತ್ಯಂತ ಪ್ರಾಚೀನ ಕಲ್ಲಿನ ಕೆತ್ತನೆಯ ರಚನೆಗಳಲ್ಲೊಂದಾಗಿದೆ. ಇ ದೇವಾಲಯದ ಸಂಕೀರ್ಣಗಳಲ್ಲಿಯ ಕೆತ್ತನೆಯ ಶೈಲಿಗಳು ಮತ್ತು ವಿನ್ಯಾಸಗಳು ದೇವಾಲಯದ ಅನನ್ಯ ಸೌಂದರ್ಯತೆಯನ್ನು ಪ್ರತಿಬಿಂಬಿಸುತ್ತದೆ. ನೀವು ಶೋರ್ ನಲ್ಲಿ ಕುಳಿತುಕೊಂಡು ಇಲ್ಲಿಯ ದೇವಾಲಯದ ಹುದುಗಿರುವ ಸೌಂದರ್ಯತೆಯನ್ನು ಅನ್ವೇಷಿಸಬೇಕೆಂದಿದ್ದರೆ ಮಹಾಬಲಿಪುರಂನಲ್ಲಿಯ ಶೋರ್ ದೇವಾಲಯ ನೀವು ಭೇಟಿಕೊಡಲೇ ಬೇಕಾದ ಸ್ಥಳವಾಗಿದೆ.
2) ಅರ್ಜುನನ ಪ್ರಾಯಶ್ಚಿತ್ತ
ಗಂಗಾ ವಂಶಾವಳಿಯೆಂದೂ ಸಹ ಕರೆಯಲ್ಪಡುತ್ತದೆ, ಇದು ಈ ನಗರದ ಒಂದು ಹಳೆಯ ಸ್ಮಾರಕವಾಗಿದೆ. ಮತ್ತು ಈ ಬಂಡೆಯ ಮೇಲೆ ಮಾಡಿದ ಕೆತ್ತನೆಯ ಕಾರ್ಯವು ನಂಬಲಾಗದ ಮತ್ತು ಖಂಡಿತವಾಗಿಯೂ ಅತ್ಯುತ್ತಮ ಕಲಾ ಕೃತಿಗಳಲ್ಲಿ ಒಂದಾಗಿದೆ ಗಂಗಾ ಮೂಲದ ಚಿತ್ರಣ ಮತ್ತು ಅರ್ಜುನನ ಪ್ರಾಯಶ್ಚಿತ್ತದ ಚಿತ್ರಣವು ಈ ಊಹಿಸಲಾಗದ ಕಲೆಯ ಸೃಜನಶೀಲತೆ ಮತ್ತು ಭವ್ಯತೆಯನ್ನು ಸಾರುತ್ತದೆ. ಬೌದ್ಧಧರ್ಮದ ಮೇಲೆ ಹಿಂದೂ ಧರ್ಮದ ವಿಜಯವನ್ನು ಆಚರಿಸಲು ಮಧ್ಯಕಾಲೀನ ಅವಧಿಯಲ್ಲಿ ಇದನ್ನು ರಚಿಸಲಾಯಿತು.
ಈ ಅದ್ಭುತ ಸ್ಥಳಕ್ಕೆ ಭೇಟಿ ನೀಡುವ ಬಗೆ ಹೇಗೆ?
3) ಪಂಚ ರಥಗಳು
ಇಲ್ಲಿಯ ಚಾಣಾಕ್ಷ ಕೆತ್ತನೆಯ ಇನ್ನೊಂದು ತುಣುಕನ್ನು ಪಂಚರಥಗಳಲ್ಲಿ ಕಾಣಬಹುದು. ಇವು ಮಹಾಕಾವ್ಯ ಮಹಾಭಾರತದ ಐದು ಪಾಂಡವರ ಹೆಸರಿನ ಏಕಶಿಲೆಯ ಪಿರಮಿಡ್ ಮಾದರಿಯ ವಿನ್ಯಾಸಗಳಾಗಿವೆ, ಇವುಗಳು ಸಾಮಾನ್ಯವಾಗಿ ರಥಗಳ ರೂಪದ ದೇವಾಲಯಗಳಾಗಿವೆ. ಈ ಪಂಚ ರಥಗಳ ಪ್ರಮುಖ ವಿಶೇಷತೆ ಎಂದರೆ ಇದರ ಇಡೀ ಸಂಕೀರ್ಣವನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ. ಆದುದರಿಂದ ಈ ಸಂಪೂರ್ಣ ಕಲಾ ಪ್ರಕಾರವನ್ನು ಏಕೆ ಭೇಟಿ ಮಾಡಬಾರದು ಮತ್ತು ಅದರ ಆಕರ್ಷಣೆಯಿಂದ ಏಕೆ ದಿಗ್ಭ್ರಮೆಗೊಳ್ಳಬಾರದು?
4) ಕೃಷ್ಣನ ಬಟರ್ ಬಾಲ್ (ಬೆಣ್ಣೆ ಚೆಂಡು)
ಒಂದು ದೊಡ್ಡ ಬಂಡೆ ಕಲ್ಲು ಒಂದು ಇಳಿಜಾರಿನಲ್ಲಿ ವಿಶ್ರಮಿಸುತ್ತಿರುವಂತೆ ಕಾಣುವುದೇ ಕೃಷ್ಣನ ಬಟರ್ ಬಾಲ್ (ಬೆಣ್ಣೆ ಚೆಂಡು) . ಈ ದೈತ್ಯಾಕಾರದ ಕಲ್ಲಿನ ಚೆಂಡಿನ ಸ್ಥಳಾಂತರಕ್ಕೆ ಸಂಬಂಧಿಸಿದ ಹಲವಾರು ಕಥೆಗಳು ಇವೆ. ಇಲ್ಲಿನ ನಂಬಿಕೆಯ ಪ್ರಕಾರ ಒಮ್ಮೆ ಪಲ್ಲವರ ರಾಜನು ಈ ಕಲ್ಲನ್ನು ಸ್ಥಳಾಂತರಿಸಬೇಕೆಂದು ಏಳು ಆನೆಗಳ ಸಹಾಯದಿಂದ ಪ್ರಯತ್ನಿಸಿದನು ಆದರೆ ಈ ಕಲ್ಲು ತನ್ನ ಜಾಗ ಬಿಟ್ಟು ಒಂದು ಇಂಚೂ ಅಲುಗಾಡಲಿಲ್ಲ ಎಂದು ಹೇಳಲಾಗುತ್ತದೆ. ಈ ದೈತ್ಯ ಕಲ್ಲಿಗೆ ಸಂಬಂಧಿಸಿದ ಸ್ಥಳೀಯ ಕಥೆಗಳನ್ನು ನೀವು ಕೇಳಲು ಬಯಸಿದರೆ, ಪ್ರತಿ ಹಂತದಲ್ಲೂ ನೀವು ಆಶ್ಚರ್ಯಚಕಿತರಾಗಲು ಈ ಪಟ್ಟಣವನ್ನು ಭೇಟಿ ಮಾಡಬೇಕು.