ಮನಸ್ಸು ಆಗಾಗ ಬೇರೆ ಬೇರೆ ರೀತಿಯ ಹಿತವನ್ನು ಬಯಸುತ್ತದೆ. ಕೆಲವೊಮ್ಮೆ ಹಸಿರು ಸಿರಿಯ ಮಧ್ಯೆ ಕಾಲ ಕಳೆಯಬೇಕೆನಿಸಿದರೆ, ಇನ್ನು ಕೆಲವೊಮ್ಮೆ ಪುರಾತನ ಶೈಲಿಯ ವಾಸ್ತುಶಿಲ್ಪದ ಸೌಂದರ್ಯ ಸವಿಯಬೇಕು ಅನಿಸುತ್ತದೆ. ಇಂತಹ ಒಂದು ಸುಂದರ ಬಯಕೆ ಈಡೇರಿಕೆಗೆ ಸೂಕ್ತವಾದ ಸ್ಥಳವೆಂದರೆ ಚಂದ್ರಮೌಳೀಶ್ವರ ದೇವಾಲಯ. ಹುಬ್ಬಳ್ಳಿ ಹಾಗೂ ಧಾರವಾಡ ಮಧ್ಯೆ ಉಣಕಲ್ ಎಂಬ ಊರಿದೆ. ಈ ಊರಿನಿಂದ 1 ಕಿ.ಮೀ. ದೂರ ಸಾಗಿದರೆ ಸಿಗುವ ಸುಂದರ ದೇಗುಲವೇ ಚಂದ್ರಮೌಳೀಶ್ವರ ದೇಗುಲ.
ಹಿನ್ನೆಲೆ
ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣಗೊಂಡ ಈ ದೇಗುಲ ಸುಮಾರು 900 ವರ್ಷಗಳಷ್ಟು ಪುರಾತನದ್ದು. ಇದನ್ನು ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ದೇವಾಲಯಗಳ ಮಾದರಿಯಲ್ಲೇ ಕಟ್ಟಲಾದ ಕಲ್ಲಿನ ದೇಗುಲ. ಸೂಕ್ಷ್ಮ ಕಲಾಕೃತಿ ಹೊಂದಿರುವ ಈ ದೇಗುಲ ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಉಳಿದ ದೇವಾಲಯಕ್ಕೆ ಇರುವಂತೆ ಗೋಪುರಳಿಲ್ಲದ ಈ ಗುಡಿಯನ್ನು ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ.
PC: wikipedia.org
ವಿಶೇಷತೆ
ಈ ದೇವಾಲಯ ಉತ್ತರ ಕರ್ನಾಟಕದಲ್ಲಿರುವ ಶಿವನ ದೇವಾಲಯಕ್ಕಿಂತ ಸ್ವಲ್ಪ ಭಿನ್ನವಾಗಿದೆ. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳಿವೆ. ಒಟ್ಟು ಸೇರಿಸಿದರೆ 12 ಬಾಗಿಲುಗಳಾಗುತ್ತವೆ. ಅಲ್ಲದೆ ಎರಡು ಶಿವಲಿಂಗಗಳಿದ್ದು, ಬಾಗಿಲ ಎದುರು ನಂದಿಯ ವಿಗ್ರಹವಿದೆ. ಇಲ್ಲಿರುವ ಒಂದು ಶಿವಲಿಂಗಕ್ಕೆ ಚತುರ್ಮುಖಗಳಿರುವುದು ವಿಶೇಷ. ಅದಕ್ಕಾಗಿಯೇ ಚತುರ್ಲಿಂಗೇಶ್ವರ ದೇವಾಲಯ ಎಂದು ಕರೆಯುತ್ತಾರೆ.
PC: wikipedia.org
ನೋಡಲೇಬೇಕು
ದೇವಾಲಯದ ಜಾಲಂಧರಗಳಲ್ಲಿ, ಗೋಡೆಯ ಒಳಭಾಗದಲ್ಲಿ ಹಾಗೂ ಹೊರ ಭಾಗದಲ್ಲಿ ವಿಶೇಷವಾದ ಕೆತ್ತನೆಗಳಿವೆ. ದೇವಾಲಯದ ಮಧ್ಯ ಭಾಗದಲ್ಲಿ ಇರುವ ಗರ್ಭಗುಡಿ, ಅದಕ್ಕೆ ನಾಲ್ಕು ಬಾಗಿಲು, ಪ್ರತಿಯೊಂದು ಬಾಗಿಲ ಮೇಲೆ ಮತ್ತು ಕೆಳ ಭಾಗದಲ್ಲಿ ಅಪರೂಪದ ಕೆತ್ತನೆಗಳಿವೆ. ಎರಡು ನಂದಿ ವಿಗ್ರಹ ಇರುವ ಇಲ್ಲಿ ಇಂದಿಗೂ ದೇವರ ಆರಾಧನೆ ನಡೆಯುತ್ತದೆ ಎನ್ನುವುದು ವಿಶೇಷ.
PC: wikipedia.org
ಆಕರ್ಷಣೆ
ಈ ದೇವಾಲಯಕ್ಕೆ ಬಂದರೆ ಹತ್ತಿರದಲ್ಲಿ ಇರುವ ನೃಪತುಂಗ ಬೆಟ್ಟ, ನವರಂಗ ತೀರ್ಥ, ಇಂದಿರಾ ಗಾಂಧಿ ಗ್ಲಾಸ್ ಹೌಸ್ಗಳಿಗೂ ಭೇಟಿ ನೀಡಬಹುದು.
PC: wikipedia.org
ವಿವರದೊಂದಿಗೆ ದಾರಿ ದೂರ
ಪ್ರತಿ ದಿನ ಬೆಳಗ್ಗೆ 6 ರಿಂದ 11ರ ವರೆಗೆ, ಸಂಜೆ 5 ರಿಂದ 7.30ರ ವರೆಗೆ ದೇವಾಲಯ ತೆರೆದಿರುತ್ತದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದರೆ ಅಲ್ಲಿಂದ 5 ಕಿ.ಮೀ. ದೂರದಲ್ಲಿರುವ ಈ ದೇಗುಲಕ್ಕೆ ಖಾಸಗಿ ಆಟೋ, ಕ್ಯಾಬ್ಗಳ ಮೂಲಕ ಸುಲಭವಾಗಿ ಹೋಗಬಹುದು.
PC: wikipedia.org