ದಕ್ಷಿಣ ಭಾರತದಲ್ಲಿರುವ ಎಲ್ಲ ರಾಜ್ಯಗಳು ಐತಿಹಾಸಿಕವಾಗಿ ಶ್ರೀಮಂತವಾಗಿರುವ ಸ್ಥಳಗಳಾಗಿವೆ. ಅದರಲ್ಲಿ ಆಂಧ್ರಪ್ರದೇಶವೂ ಸಹ ಒಂದು. ತನ್ನದೆ ಆದ ಐತಿಹಾಸಿಕತೆ, ಪ್ರಾಚೀನತೆ ಹಾಗೂ ಸಾಂಸ್ಕೃತಿಕತೆ ಹೊಂದಿರುವ ಈ ರಾಜ್ಯಗಳಲ್ಲಿ ಕೆಲವು ಗಮನಾರ್ಹವಾದ ವಾಸ್ತುಶೈಲಿಯ ದೇವಾಲಯ ರಚನೆಗಳನ್ನು ಕಾಣಬಹುದು.
ಕಾಕತೀಯರಿಂದ ನಿರ್ಮಾಣಗೊಂಡ ರಚನೆಗಳಿರಲಿ ಅಥವಾ ಪೂರ್ವ ಚಾಲುಕ್ಯರಿಂದ ನಿರ್ಮಿತವಾದ ರಚನೆಗಳಿರಲಿ, ಎಲ್ಲವೂ ಈ ರಾಜ್ಯದಲ್ಲಿ ಕಂಡುಬರುತ್ತವೆ. ಅಂತಹುದೆ ಒಂದು ದೇವಾಲಯದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಅದೆ ಬಿಕ್ಕಾವೋಲು ಗಣಪತಿ ದೇವಾಲಯ ಅಥವಾ ಶ್ರೀ ಲಕ್ಷ್ಮಿ ಗಣಪತಿ ದೇವಾಲಯ.
ಚಿತ್ರಕೃಪೆ: Adityamadhav83
ಬಿಕ್ಕಾವೋಲು ಗಣಪತಿ ಎಂದು ಪ್ರಸಿದ್ಧನಾದ ಈ ಗಣೇಶನನ್ನು ನೋಡಲು ಬರುವ ಭಕ್ತಾದಿಗಳ ಸಂಖ್ಯೆ ಅಪಾರ. ಗಣೇಶ ಚತುರ್ಥಿಯಲ್ಲಂತೂ ಸುತ್ತಮುತ್ತಲಿನ ಪ್ರದೇಶಗಳೆಲ್ಲೆಡೆಯಿಂದ ಜನಸಾಗರವೆ ಈ ಗಣಪನನ್ನು ದರ್ಶಿಸಲು ಹಾಗೂ ಮನಃ ಪೂರ್ವಕವಾಗಿ ಕಾಮನೆಗಳನ್ನು ಬೇಡಿಕೊಳ್ಳಲೆಂದು ಇಲ್ಲಿಗೆ ಭೇಟಿ ನೀಡುತ್ತಾರೆ.
ಆಂಧ್ರಪ್ರದೇಶ ರಾಜ್ಯದ ಪೂರ್ವ ಗೋದಾವರಿ ಜಿಲ್ಲೆಯಲ್ಲೆ ಅತ್ಯಂತ ಪ್ರಸಿದ್ಧಿ ಪಡೆದ ಗಣೇಶ ಇತನಾಗಿದ್ದಾನೆ. ಅಲ್ಲದೆ ಸಾಕಷ್ಟು ಶಕ್ತಿಶಾಲಿ ಹಾಗೂ ಪ್ರಭಾವಶಾಲಿ ಗಣಪ ಇತನೆಂಬ ಬಿರುದನ್ನೂ ಸಹ ಪಡೆದಿದ್ದಾನೆ. ಹಾಗಾಗಿ ಬಿಕ್ಕಾವೋಲು ಲಕ್ಷ್ಮಿ ಗಣೇಶ ತನ್ನದೆ ಆದ ವಿಶೇಷತೆಯನ್ನು ಹೊಂದಿರುವ ಗಣಪನಾಗಿದ್ದಾನೆ.
ಚಿತ್ರಕೃಪೆ: Adityamadhav83
ಪೂರ್ವ ಗೋದಾವರಿ ಜಿಲ್ಲೆಯ ಬಿಕ್ಕಾವೋಲು ಮಂಡಲ (ತಾಲೂಕು)ದಲ್ಲಿ ಈ ಈ ಗಣೇಶನ ದೇವಾಲಯವಿದೆ. ಬಿಕ್ಕಾವೋಲು ಕಾಕಿನಾಡಾದಿಂದ 33 ಕಿ.ಮೀ ಹಾಗೂ ರಾಜಮಂಡ್ರಿಯಿಂದ 40 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಇನ್ನೂ ಕಾಕಿನಾಡಾ ತನ್ನದೆ ಆದ ರೈಲು ನಿಲ್ದಾಣ ಹೊಂದಿದ್ದು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.
ಸುಮಾರು ಎಂಟರಿಂದ ಒಂಭತ್ತನೇಯ ಶತಮಾನದ ಮಧ್ಯದ ಸಮಯದಲ್ಲಿ ನಿರ್ಮಾಣವಾದ ದೇವಾಲಯ ಇದಾಗಿದ್ದು ಚಾಲುಕ್ಯರಿಂದ ನಿರ್ಮಿತವಾಗಿದೆ. ಅದ್ಭುತವಾದ ದ್ರಾವಿಡ ಶೈಲಿಯ ಕೆತ್ತನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೆ ಗಣೇಶನ ವಿಗ್ರಹವು ಸುಮಾರು ಹನ್ನೊಂದು ಅಡಿಗಳಷ್ಟು ಎತ್ತರವಿದೆ.
ಗೋಲಿಂಗೇಶ್ವರ ದೇವಾಲಯ, ಚಿತ್ರಕೃಪೆ: Adityamadhav83
ಚಾಲುಕ್ಯರಲ್ಲಿ ನಿರ್ಮಾಣ ಮಾಡಲಾದ ಇದೆ ಮೊದಲ ಇಷ್ಟು ಎತ್ತರದ ವಿಗ್ರಹ ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟರೆ ಸ್ಥಳ ಪುರಾಣವು ಇನ್ನೊಂದು ಬೇರೆಯದೆ ಆದ ಕಥೆಯನ್ನು ಹೇಳುತ್ತದೆ. ಬಲು ಹಿಂದೆ ಈ ದೇವಾಲಯವಿದ್ದ ಸ್ಥಳದಲ್ಲಿ ಹೊಲವಿದ್ದು ರೈತನು ಭೂಮಿಯನ್ನು ಊಳುವಾಗ ಈ ಸ್ವಯಂಭು ವಿಗ್ರಹ ದೊರೆಯಿತಂತೆ.
ತದನಂತರ ಪ್ರದೇಶದ ಆಡಳಿತಗಾರ ಈ ವಿಗ್ರಹವನ್ನು ಶಾಸ್ತ್ರೋಕ್ತವಾಗಿ ಅಲ್ಲೆ ಪ್ರತಿಷ್ಠಾಪಿಸಿ ದೇವಾಲಯ ನಿರ್ಮಾಣ ಮಾಡಿದನೆಂಬ ಪ್ರತೀತಿಯಿದೆ. ಇನ್ನೂ ರೋಚಕವೆಂದರೆ ಇಲ್ಲಿನ ಹಿರಿಯರ ಪೂರ್ವಜರಿಂದ ನಡೆದುಕೊಂಡ ಬಂದ ಸಂತತಿಯವರು ಹೇಳುವಂತೆ ಈ ವಿಗ್ರಹ ಕೇವಲ ತೆಂಗಿನ ಕಾಯಿಯಷ್ಟು ಗಾತ್ರದ್ದಾಗಿತ್ತು. ತದ ನಂತರ ವರ್ಷದಿಂದ ವರ್ಷಕ್ಕೆ ಇಂಚಿಂಚು ಬೆಳೆಯುತ್ತ ಪ್ರಸ್ತುತ ಎತ್ತರವನ್ನು ಪಡೆದಿದೆಯಂತೆ.
ಗಣಪನ ಕೆಲವು ಪ್ರಮುಖ ದೇವಾಲಯಗಳು
ಹಾಗಾಗಿ ಈ ದೇವಾಲಯ ಬಿಕ್ಕಾವೋಲಿನ ಪ್ರಮುಖ ಆಕರ್ಷಣೆಯಾಗಿ ಗಮನಸೆಳೆಯುತ್ತದೆ. ಇದಲ್ಲದೆ ಇಲ್ಲಿ ಗೋಲಿಂಗೇಶ್ವರ, ಶ್ರೀ ಚಂದ್ರಶೇಖರಸ್ವಾಮಿ, ಶ್ರೀರಾಜರಾಜ ಹೀಗೆ ಇನ್ನೂ ಕೆಲವು ದೇವಾಲಯಗಳನ್ನು ನೋಡಬಹುದಾಗಿದೆ. ಎಲ್ಲವೂ ಚಾಲುಕ್ಯ ನಿರ್ಮಿತ ದೇವಾಲಯಗಳಾಗಿದ್ದು ಅದರಲ್ಲಿ ಗೋಲಿಂಗೇಶ್ವರ ಎಲ್ಲಕ್ಕಿಂತಲೂ ದೊಡ್ಡದಾದ ದೇವಾಲಯವಾಗಿದೆ. ಇಲ್ಲಿನ ವಾಸ್ತುಶೈಲಿ ಬಲು ಆಕರ್ಷಕವಾಗಿದೆ.