ರಾಣಿ ಎಲಿಜಬೆತ್ II ರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಕೊಹಿನೂರ್ ಟ್ರೆಂಡ್ ಶುರುವಾಯಿತು. ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವಂತೆ ಟ್ವಿಟರ್ನಲ್ಲಿ ನೆಟ್ಟಿಗರು ಯುಕೆಗೆ ಒತ್ತಾಯಿಸಿದರು. ರಾಣಿಯ ಕಿರೀಟದ ಮೇಲೆ ಅಳವಡಿಸಲಾಗಿರುವ ಕೊಹಿನೂರ್ ವಜ್ರವು ಭಾರತಕ್ಕೆ ಮರಳಬೇಕೆಂದು ಅನೇಕರು ಆಗ್ರಹಿಸಿದರು. ಕೊಹಿನೂರ್ ಅನ್ನು ವಿಶ್ವದ ಅತ್ಯಂತ ಅಮೂಲ್ಯವಾದ ವಜ್ರ ಎಂದು ಹೇಳಲಾಗುತ್ತದೆ. ಇದು ಸುಮಾರು 105.6 ಕ್ಯಾರೆಟ್ ತೂಗುತ್ತದೆ.
ವಜ್ರವು 14 ನೇ ಶತಮಾನದಲ್ಲಿ ಭಾರತದಲ್ಲಿ ಕಂಡುಬಂದಿದೆ. ಈ ವಜ್ರಕ್ಕಾಗಿ ಅನೇಕ ಆಡಳಿತಗಾರರು ಕಾದಾಡಿದ್ದಾರೆ. ಈ ವಜ್ರದ ಮೂಲವು ಅಸ್ಪಷ್ಟವಾಗಿದೆ. ಆದರೆ ಈಗ ಲಂಡನ್ನ ಜ್ಯುವೆಲ್ ಹೌಸ್ನಲ್ಲಿ ಪ್ರದರ್ಶನಕ್ಕಿಡಲಾಗಿರುವ ಕೊಹಿನೂರ್ ವಜ್ರ ಮೊದಲು ತೆಲಂಗಾಣದ ಭದ್ರಕಾಳಿ ದೇವಿಯ ದೇವಸ್ಥಾನದಲ್ಲಿತ್ತು ಎನ್ನುತ್ತವೆ ಕೆಲವು ಮೂಲಗಳು.
ರಾಜ ಪುಲಕೇಶಿನ್ II ಕುಲದೇವತೆಯಾಗಿದ್ದ ‘ಭದ್ರಕಾಳಿ’
ಚಾಲುಕ್ಯ ರಾಜವಂಶದ ರಾಜ ಪುಲಕೇಶಿನ್ II ಕ್ರಿ.ಶ. 625 ರಲ್ಲಿ ತೆಲಂಗಾಣದ ವಾರಂಗಲ್ನಲ್ಲಿ ಭದ್ರಕಾಳಿ ದೇವಸ್ಥಾನವನ್ನು ನಿರ್ಮಿಸಿದನು. ರಾಜನು ಭದ್ರಕಾಳಿ ದೇವಿಯನ್ನು ತನ್ನ ಕುಲದೇವತೆಯನ್ನಾಗಿ ಮಾಡಿಕೊಂಡನು. ಇಲ್ಲಿಗೆ ಭೇಟಿ ನೀಡಿದಾಗ, ನೀವು ದೇವಾಲಯದ ಗೋಡೆಗಳ ಮೇಲೆ ಲಿಪಿಗಳನ್ನು ನೋಡಬಹುದು. ಇದು ವೆಂಗಿ ಪ್ರದೇಶ ವಶಪಡಿಸಿಕೊಂಡ ನಂತರ ತನ್ನ ವಿಜಯವನ್ನು ಆಚರಿಸಲು ರಾಜ ಪುಲಕೇಶಿನ್ II ಸ್ಥಾಪಿಸಿದಂತಿದೆ. ವಿಜಯ ಗುರುತಿಸಲು ದೇವತೆಗಳಿಗೆ ದೇವಾಲಯಗಳನ್ನು ಅರ್ಪಿಸುವುದು ಭಾರತೀಯ ಆಡಳಿತಗಾರರಲ್ಲಿ ಸಾಮಾನ್ಯ ಅಭ್ಯಾಸವಾಗಿತ್ತು.
ಕೈಯಿಂದ ಕೈಗೆ ಹಾದುಹೋದ ವಜ್ರ
ಈ ಪ್ರದೇಶವು ಕಾಕತೀಯ ದೊರೆಗಳ ಆಳ್ವಿಕೆಗೆ ಒಳಪಟ್ಟಾಗ ಕಾಕತೀಯ ರಾಜರು ದೇವಾಲಯವನ್ನು ದತ್ತು ಪಡೆದು, ಭದ್ರಕಾಳಿ ದೇವಿಯನ್ನು ತಮ್ಮ ಕುಲದೇವತೆ ಎಂದು ಪರಿಗಣಿಸಿದರು. ನಂತರ ಅಪರೂಪದ ಕೊಹಿನೂರ್ ವಜ್ರವನ್ನು ವಿಗ್ರಹದ ಎಡಗಣ್ಣಾಗಿ ಇರಿಸಿದರು. ಈ ಆಕರ್ಷಕ ವಜ್ರವನ್ನು ಕೊಲ್ಲೂರು ಗಣಿಗಳಿಂದ (ಗೋಲ್ಕೊಂಡಾ ಗಣಿಗಳಿಂದ) ಗಣಿಗಾರಿಕೆ ಮಾಡಲಾಗಿದೆ. ಭದ್ರಕಾಳಿ ದೇವಸ್ಥಾನದ ಸರೋವರ ಅವರ ಕೊಡುಗೆಯಾಗಿದೆ. ಇದರ ನಂತರ, ಖಿಲ್ಜಿಗಳು, ತುಘಲಕರು ಮತ್ತು ಬಹಮನಿಗಳ ಆಳ್ವಿಕೆಯಲ್ಲಿ ಭದ್ರಕಾಳಿ ದೇವಾಲಯವು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು.
ಆದರೆ, ಕ್ರಿ.ಶ. 1310ರ ಸುಮಾರಿಗೆ ದೆಹಲಿಯ ಸುಲ್ತಾನ್ ಅಲಾವುದ್ದೀನ್ ಖಿಲ್ಜಿ ತನ್ನ ಸೇನಾಪತಿ ಮಲಿಕ್ ಕಫೂರ್ ಸಹಾಯದಿಂದ ವಜ್ರವನ್ನು ವಶಪಡಿಸಿಕೊಂಡ. ಕೊಹಿನೂನ್ ವಜ್ರವು ಬಾಬರ್, ಹುಮಾಯೂನ್, ಶೇರ್ ಷಾ ಸೂರಿಯಿಂದ ಷಹಜಹಾನ್, ಔರಂಗಜೇಬ್ ಮತ್ತು ಪಟಿಯಾಲಾದ ಮಹಾರಾಜ ರಂಜಿತ್ ಸಿಂಗ್ಗೆ ಒಂದು ಕೈಯಿಂದ ಇನ್ನೊಂದು ಕೈಗೆ ಹಾದುಹೋಯಿತು. ಕ್ರಮೇಣ ಇದನ್ನು ಬ್ರಿಟಿಷರು ವಶಪಡಿಸಿಕೊಂಡರು ಮತ್ತು ನಂತರ ಅದನ್ನು ವಿಕ್ಟೋರಿಯಾ ರಾಣಿಗೆ ಉಡುಗೊರೆಯಾಗಿ ನೀಡಿದರು.
ನಾಲ್ಕು ರಾಣಿಯರೊಂದಿಗೆ ಇತ್ತು ‘ಕೊಹಿನೂರ್’
ರಾಣಿ ವಿಕ್ಟೋರಿಯಾ ನಂತರ, ಈ ವಜ್ರವು ರಾಣಿ ಅಲೆಕ್ಸಾಂಡ್ರಾ ಬಳಿ ಇತ್ತು. ಆಕೆಯ ಮರಣದ ನಂತರ, ಈ ವಜ್ರವು ರಾಣಿ ಮೇರಿಯ ಕಿರೀಟದ ಆಭರಣವಾಯಿತು. ಇದರ ನಂತರ, ಕೊಹಿನೂರ್ ವಜ್ರವನ್ನು ರಾಣಿ ಎಲಿಜಬೆತ್ II ರ ತಲೆಯ ಮೇಲೆ ಅಲಂಕರಿಸಿತು. ಕೊಹಿನೂರ್ ರಾಣಿ ಎಲಿಜಬೆತ್ ಜೊತೆಯಲ್ಲಿ ಬಹಳ ವರ್ಷಗಳ ಕಾಲವಿತ್ತು. ಅಂದರೆ ಸುಮಾರು 70 ವರ್ಷಗಳಿಗೂ ಹೆಚ್ಚು ಕಾಲ ಈ ವಜ್ರವು ರಾಣಿಯ ಕಿರೀಟವನ್ನು ಅಲಂಕರಿಸಿತ್ತು. ಈಗ ಈ ವಜ್ರವು ಕಿಂಗ್ ಚಾರ್ಲ್ಸ್ III ರ ಪತ್ನಿ ಕ್ಯಾಮಿಲ್ಲಾಗೆ ಸೇರಿದೆ.
ಹಲವಾರು ಬಾರಿ ಲೂಟಿಗೊಳಗಾದ ದೇವಸ್ಥಾನ
ವಾರಂಗಲ್ ಮತ್ತು ಹನಮಕೊಂಡ ನಡುವೆ ಇರುವ ಭದ್ರಕಾಳಿ ದೇವಸ್ಥಾನವು ಭದ್ರಕಾಳಿ ದೇವಿಗೆ ಅರ್ಪಿತವಾದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಭದ್ರಕಾಳಿ ದೇವಸ್ಥಾನವು ಪ್ರತಿವರ್ಷ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಭದ್ರಕಾಳಿ ಅಥವಾ ಭದ್ರಕಾಳಿ ಅಮ್ಮನವರನ್ನು ಮಹಿಳೆಯರ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ದೇವಾಲಯವು ಭದ್ರಕಾಳಿ ಸರೋವರದ ದಡದಲ್ಲಿದೆ. ಸುತ್ತಲೂ ಹಚ್ಚ ಹಸಿರಿನಿಂದ ಆವೃತವಾಗಿದೆ.
ಸುಂದರವಾದ ಸರೋವರವು ಮನಮೋಹಕ ಬೆಟ್ಟಗಳ ನಡುವೆ ಇದೆ. ಈ ದೇವಾಲಯವನ್ನು ಹಲವಾರು ಬಾರಿ ಲೂಟಿ ಮಾಡಲಾಯಿತು. ಇದರಿಂದಾಗಿ ಈ ದೇವಾಲಯವು ಅವಶೇಷಗಳಾಗಿ ಮಾರ್ಪಟ್ಟಿತು. ಆದರೆ ಇದನ್ನು 1950 ರ ದಶಕದಲ್ಲಿ ಶ್ರೀ ಗಣೇಶ್ ರಾವ್ ಶಾಸ್ತ್ರಿ ಅವರು ಕೆಲವು ಶ್ರೀಮಂತ ಸ್ಥಳೀಯರೊಂದಿಗೆ ನವೀಕರಿಸಿದರು.
ಚಿನ್ನದ ಬಣ್ಣದ ದೇವಾಲಯ
ಭದ್ರಕಾಳಿ ದೇವಸ್ಥಾನದ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯದ ಜೊತೆಗೆ ಪ್ರಾಚೀನ ಚಾಲುಕ್ಯ ವಾಸ್ತುಶಿಲ್ಪವನ್ನು ನೀವು ಖಂಡಿತವಾಗಿ ಇಷ್ಟಪಡುತ್ತೀರಿ. ದೇವಾಲಯದ ಪ್ರವೇಶದ್ವಾರದ ಬಳಿ ಕಾಕತೀಯ ವಾಸ್ತುಶೈಲಿಯನ್ನು ಸಹ ತೋರಿಸಲಾಗಿದೆ. ಭದ್ರಕಾಳಿ ದೇವಸ್ಥಾನವು ಅತ್ಯಂತ ಪ್ರಶಾಂತವಾದ ಸ್ಥಳವಾಗಿದೆ. ಇಲ್ಲಿನ ಐತಿಹಾಸಿಕ ಆಕರ್ಷಣೆ, ಪ್ರಕೃತಿಯ ಪ್ರಶಾಂತತೆ ಸಂಯೋಜನೆ ನೋಡಿ ಜನರು ಮಂತ್ರಮುಗ್ಧರಾಗುತ್ತಾರೆ.
ಈ ಚಿನ್ನದ ಬಣ್ಣದ ದೇವಾಲಯವು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ವಿಭಿನ್ನ ಅನುಭವವನ್ನು ನೀಡುತ್ತದೆ. ದೇವಾಲಯದಲ್ಲಿ ನಾವು ಎಂಟು ತೋಳುಗಳನ್ನು ಹೊಂದಿರುವ ಭದ್ರಕಾಳಿ ದೇವಿಯ ಏಕಶಿಲೆಯ ವಿಗ್ರಹವನ್ನು ನೋಡಬಹುದಾಗಿದೆ. ದೇವಿಯ ಪ್ರತಿಮೆಯು ತಲೆಯಲ್ಲಿ ಕಿರೀಟವನ್ನು ಹೊಂದಿರುವ ಕುಳಿತುಕೊಂಡಿರುವ ಭಂಗಿಯಲ್ಲಿದೆ.
ದೇವಸ್ಥಾನಕ್ಕೆ ಹೋಗುವುದು ಹೇಗೆ?
ಸಾವಿರಾರು ದೀಪಗಳಿಂದ ಅಲಂಕರಿಸಲ್ಪಟ್ಟಿರುವ ದೇವಾಲಯವನ್ನು ನೋಡಲು ಮತ್ತು ಪೂಜೆ ಸಲ್ಲಿಸಲು ತೆಲಂಗಾಣ ಮತ್ತು ಆಂಧ್ರದಾದ್ಯಂತ ಜನರು ಇಲ್ಲಿಗೆ ಬರುತ್ತಾರೆ. ಭದ್ರಕಾಳಿ ದೇವಸ್ಥಾನವು ವಾರಂಗಲ್ ರೈಲು ನಿಲ್ದಾಣದಿಂದ 5 ಕಿಲೋಮೀಟರ್ ದೂರದಲ್ಲಿ ಲಾಲ್ ಬಹದ್ದೂರ್ ಕಾಲೇಜ್ ಸಮೀಪದಲ್ಲಿದೆ. ಯಾವುದೇ ಆಟೋ ರಿಕ್ಷಾ ಅಥವಾ ಟ್ಯಾಕ್ಸಿಗಳು ದೇವಸ್ಥಾನದ ಪ್ರವೇಶ ದ್ವಾರದ ಮುಂದೆ ನಿಮ್ಮನ್ನು ಕರೆದೊಯ್ಯುತ್ತವೆ.
ಛಾಯಾಗ್ರಹಣವನ್ನು ದೇವಸ್ಥಾನದ ಹೊರಗೆ ಮತ್ತು ಸರೋವರದ ಆವರಣದಲ್ಲಿ ಅನುಮತಿಸಲಾಗಿದೆ. ಆದರೆ ದೇವಾಲಯದ ಒಳಗೆ ಅಲ್ಲ. ದೇವಾಲಯದ ಆವರಣದೊಳಗೆ ಕುಳಿತಿರುವ ಕೆಲವು ವ್ಯಾಪಾರಿಗಳಿಂದ ನೀವು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಸೀರೆಗಳನ್ನು ಖರೀದಿಸಬಹುದು.