ಮುಕ್ತವಾದ ದಾರಿಯಲ್ಲಿ ಸ್ವಚ್ಛಂದವಾಗಿ ಸುದೀರ್ಘ ತಿರುಗಾಟ ನಡೆಸುವುದು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಬೈಕ್ ಅಥವಾ ಸ್ಪೋಟ್ ಕಾರಿನಲ್ಲಿ ಜಾಲಿ ರೈಡ್ ಹೋಗುವುದು ಜೀವನದ ಅತ್ಯಂತ ರೋಮಾಂಚಕ ಅನುಭವಗಳಲ್ಲೊಂದು. ಪ್ರಕೃತಿ ಗರ್ಭದೊಳಗೆ ಹಾದು ಹೋಗುವ ಹಸಿರು ವನಗಳ ಮಧ್ಯದ ದುರ್ಗಮ ದಾರಿಗಳ ಪ್ರಯಾಣ ಬೇರೆಯದೇ ಖುಷಿ ನೀಡುತ್ತದೆ. ಇಂಥ ದುರ್ಗಮ ಹಾಗೂ ಸಾಹಸದ ಪಯಣಕ್ಕೆ ಈವರೆಗೂ ವಿರಳವಾಗಿ ತಿಳಿದಿರುವ 6 ಪ್ರಮುಖ ಮಾರ್ಗಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿದ್ದೇವೆ. ಇವುಗಳನ್ನು ನೋಟ್ ಮಾಡಿಟ್ಟುಕೊಂಡು ಮುಂದಿನ ಬಾರಿ ಜಾಲಿ ರೈಡ್ ಹೋಗುವಾಗ ಈ ಮಾರ್ಗಗಳನ್ನು ಭೇದಿಸಲು ಯತ್ನಿಸಿ, ಸಾಹಸ ಪ್ರಯಾಣದ ರೋಮಾಂಚನ ಅನುಭವಿಸಿ.
ಮಹಾರಾಷ್ಟ್ರ ರಾಜ್ಯ ಹೆದ್ದಾರಿ-4
ಕರಾವಳಿ ಭಾಗದ ಮುಂಬೈ-ಅಲಿಬಾಗ್-ಹರಿಹರೇಶ್ವರ-ಗುಹಾಗರ-ರತ್ನಾಗಿರಿ-ಮಾಲವಣ-ತಾರ್ಕಾರ್ಲಿ-ತೆರೆಕೋಲ ಮಾರ್ಗ
ಮಹಾರಾಷ್ಟ್ರದ ಕರಾವಳಿ ಭಾಗದ ಹೆದ್ದಾರಿಯು ನಯನಮನೋಹರವಾಗಿದ್ದು ಅಷ್ಟೆ ರೋಮಾಂಚಕವಾಗಿದೆ. ಇದರಲ್ಲಿ ಪ್ರಯಾಣಿಸುವುದೆಂದರೆ ಜೀವನದ ಅಮೂಲ್ಯ ಪ್ರವಾಸಗಳಲ್ಲೊಂದಾಗಿದೆ. ಒಂದು ಕಡೆ ಭೋರ್ಗರೆಯುವ ಸಮುದ್ರ, ಸುಂದರ ಬೀಚ್ಗಳು, ಪುರಾತನ ಮಂದಿರಗಳು, ಇತಿಹಾಸದ ಕತೆ ಹೇಳುವ ಕೋಟೆ ಕೊತ್ತಲಗಳು, ಎಂಥವರ ಎದೆಯಲ್ಲೂ ಕ್ಷಣಕಾಲ ನಡುಕ ಹುಟ್ಟಿಸುವ ಘಾಟ್ಗಳು ಹಾಗೂ ದಾರಿಯುದ್ದಕ್ಕೂ ಸಿಗುವ ವಿಭಿನ್ನ ಬಗೆಯ ಶಾಕಾಹಾರಿ ಹಾಗೂ ಮಾಂಸಾಹಾರಿ ಸ್ಥಳೀಯ ಖಾದ್ಯಗಳು ಈ ಪಯಣದ ವಿಶಿಷ್ಟತೆಗಳಾಗಿವೆ.
500 ಕಿಮೀ ಉದ್ದದ ಈ ಪಯಣ ನಿಮ್ಮಲ್ಲೂ ಒಬ್ಬ ಕ್ರಿಸ್ಟೋಫರ್ ಕೊಲಂಬಸ್ನನ್ನು ಜಾಗೃತನಾಗುವಂತೆ ಮಾಡಬಲ್ಲದು. ಹರಿಹರೇಶ್ವರದಿಂದ ಜೈಗಢ, ವಿಜಯದುರ್ಗ, ಅಚಾರಾ ಹಾಗೂ ಇನ್ನೂ ಹಲವಾರು ಸ್ಥಳಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸಬಲ್ಲವು.
ಭಾರತದ ಅತಿ ಸುಂದರ ರಸ್ತೆ
PC:Avik Haldar
ಕೊಚ್ಚಿ-ಚಲಕುಡಿ-ಅಥಿರಾಪಲ್ಲಿ ಫಾಲ್ಸ್-ಶೋಲಾಯರ-ಮಲಕ್ಕಪಾರಾ-ವಾಲ್ಪಾರೈ
ಪ್ರಚಂಡವಾಗಿ ಭೋರ್ಗರೆಯುತ್ತ ಭೂಮಿಗೆ ಅಪ್ಪಳಿಸುವ ಅಥಿರಾಪಲ್ಲಿ ಫಾಲ್ಸ್ ಜಗದ್ವಿಖ್ಯಾತಿ ಪಡೆದಿದೆ. ಇದರ ಜೊತೆಗೆ ಪ್ರಕೃತಿ ಸೌಂದರ್ಯದ ಮೋಹಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಕೊಚ್ಚಿಯಿಂದ ಪಶ್ಚಿಮದ ಕಡೆಗೆ ಸಾಗುವ ೧೫೦ ಕಿಮೀ ಉದ್ದದ ಪಯಣ ಚಲಕುಡಿ ನದಿಯ ಬಳಿಯಿಂದ ವಾಲ್ಪಾರೈವರೆಗೂ ಬಹುತೇಕ ಸಿಂಗಲ್ ರಸ್ತೆಯ ಮಾರ್ಗವಾಗಿದೆ. ಕಣ್ಣಿಗೆ ತಂಪು ನೀಡುವ ಹಚ್ಚ ಹಸಿರು, ಸುಂದರ ಗ್ರಾಮಗಳು, ಕಿವಿಗಡಚಿಕ್ಕುವ ಜಲಪಾತಗಳು, ಸುವಾಸನೆ ಭರಿತ ಚಹಾ ತೋಟಗಳು, ಸಾಗುವಾನಿ ಹಾಗೂ ಗೋಡಂಬಿ ತೋಟಗಳು, ಜಲಾಶಯಗಳು ಹಾಗೂ ಅವುಗಳಲ್ಲಿನ ವಿದ್ಯುತ್ ಉತ್ಪಾದನಾ ಕೇಂದ್ರಗಳು ಹೀಗೆ ಈ ಮಾರ್ಗದಲ್ಲಿ ಸಿಗುವ ಅದ್ಭುತಗಳು ಒಂದೆರಡಲ್ಲ. ಇನ್ನು ದಟ್ಟ ಬಿದಿರು ಹಾಗೂ ನಿಗೂಢ ಮಳೆ ಕಾಡುಗಳು ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತವೆ. ಆದರೆ ಭಾರಿ ಶಬ್ದ ಮಾಡುತ್ತ ಹಾರಾಟ ಮಾಡುವ ಬೃಹತ್ ಕೀಟಗಳು ಹಾಗೂ ಇನ್ನಿತರ ಅರಣ್ಯ ಪ್ರಾಣಿಗಳ ಬಗ್ಗೆ ಮಾತ್ರ ಜಾಗೃತಿಯಿಂದಿರ ಬೇಕಾಗುತ್ತದೆ.
ಭಾರತದ ಪೂರ್ವದ ಮೂಲೆ
ತೇಜು-ಹಯುಲಿಯಾಂಗ್-ವಲೊಂಗ್-ಕಿಬುಥು
ಚೀನಾ ಹಾಗೂ ಮೈನ್ಮಾರ ದೇಶಗಳ ಗಡಿಗಳ ಮಧ್ಯದಲ್ಲಿರುವ ಅರುಣಾಚಲ ಪ್ರದೇಶದ ವಲೊಂಗ್ ಜಿಲ್ಲೆಯ ಸಮುದ್ರ ಮಟ್ಟದಿಂದ 1240 ಮೀಟರ್ ಎತ್ತರದಲ್ಲಿರುವ ಪ್ರಶಾಂತವಾದ ಗ್ರಾಮ ಡೊಂಗ್ಗೆ ಹೋದರೆ ಭಾರತದಲ್ಲಿ ಬೆಳಗ್ಗೆ ಪ್ರಥಮವಾಗಿ ಸೂರ್ಯ ಉದಯಿಸುವುದನ್ನು ನೋಡಬಹುದು. ಇಲ್ಲಿಗೆ ಹೋಗಲು ಇನ್ನರ್ ಲೈನ್ ಪರ್ಮಿಟ್ ತೆಗೆಯುವುದು ಕಡ್ಡಾಯ ಎಂಬುದು ಗೊತ್ತಿರಲಿ.
ಮೋಡಗಳ ಮಧ್ಯೆ ಅಂಕು ಡೊಂಕಿನಿಂದ ಸಾಗುವ ಈ 200 ಕಿಮೀ ಉದ್ದದ ಮಾರ್ಗ ಲೋಹಿತ್ ಹಾಗೂ ಛಾಯು ನದಿಗಳಗುಂಟ ಸಾಗುತ್ತದೆ. ಮನೋಹರವಾದ ಹಸಿರು ಬೆಟ್ಟಗುಡ್ಡಗಳು, ಮೈನವಿರೇಳಿಸುವ ತೂಗಾಡುವ ಸೇತುವೆಗಳು, ಬಿಸಿ ನೀರಿನ ಬುಗ್ಗೆಗಳು ಹಾಗೂ ಸೈನಿಕರ ಚೆಕ್ ಪಾಯಿಂಟ್ಗಳ ಮಧ್ಯದ ಪಯಣ ಜೀವನದಲ್ಲಿ ಮರೆಯಲಾಗದ ಅನುಭೂತಿಯನ್ನು ನೀಡುತ್ತದೆ.
ಮಾರ್ಗಮಧ್ಯೆ ವಲೊಂಗ್ನಲ್ಲಿರುವ ಹುತಾತ್ಮ ಯೋಧರ ಸ್ಮಾರಕಕ್ಕೆ ಒಂದು ಸೆಲ್ಯೂಟ್ ಹೊಡೆಯಲು ಮರೆಯದಿರಿ. ಚೀನಾ ಹಾಗೂ ಭಾರತದ ಗಡಿಯನ್ನು ಪ್ರತ್ಯೇಕಿಸುವ ಈ ಜಾಗದಲ್ಲಿ ನಮ್ಮ ತ್ರಿವರ್ಣ ಹಾರುತ್ತಿರುವುದನ್ನು ಕಂಡು ಹೆಮ್ಮೆ ಪಡಬಹುದು.
ಭಾರತದ ಪೌರಾಣಿಕ ಹಾಗೂ ಐತಿಹಾಸಿಕ ಜಾಡುಗಳ ಹಾದಿ
PC:Animeshcmc
ಮದುರೈ-ರಾಮನಾಥಪುರಂ-ರಾಮೇಶ್ವರಂ-ಧನುಷ್ಕೋಡಿ
1964 ರಲ್ಲಿ ಸಂಭವಿಸಿದ ಜಲಪ್ರಳಯದ ಅವಧಿಯಿಂದಲೂ ಪ್ರಶಾಂತ ಪಟ್ಟಣವಾಗಿರುವ ಧನುಷ್ಕೋಡಿಯಿಂದ ಪಾಕ್ ಜಲಸಂಧಿ ಆರಂಭವಾಗುತ್ತದೆ. ರಾವಣನಿಂದ ಸೀತಾ ಮಾತೆಯನ್ನು ಬಿಡಿಸಿ ತರಲು ಹನುಮಂತ ಕಟ್ಟಿದ ರಾಮಸೇತು ಇದಾಗಿದೆ. 150 ಕಿಮೀ ಉದ್ದದ ಈ ಕರಾವಳಿ ಮಾರ್ಗವು ಹಿಂದೂ ಮಹಾಸಾಗರ ಹಾಗೂ ಬಂಗಾಳ ಕೊಲ್ಲಿಗಳ ಸುತ್ತ ಸುತ್ತುತ್ತದೆ. ಐತಿಹಾಸಿಕ ಪಾಂಬನ್ ಸೇತುವೆ ಹಾಗೂ ಇನ್ನೂ ಹಲವಾರು ಪೌರಾಣಿಕ ಹಾಗೂ ಇತಿಹಾಸದ ಕತೆ ಹೇಳುವ ಸ್ಥಳಗಳು ಈ ಮಾರ್ಗದುದ್ದಕ್ಕೂ ಸಿಗುತ್ತವೆ.
ದೂರದ ಮರಳುಗಾಡಿನ ಪಯಣ
PC:Abhishek.ujoshi
ಅಹ್ಮದಾಬಾದ್-ಬಾರ್ಮೇರ್-ಜೈಸಲ್ಮೇರ್-ರಾಮಗಢ-ತಾನೋಟ್
ಗುಜರಾತಿನಿಂದ ರಾಜಸ್ಥಾನದವರೆಗೆ ಹರಡಿರುವ 657 ಕಿಮೀ ಉದ್ದದ ಈ ಮಾರ್ಗ ಥಾರ್ ಮರುಭೂಮಿಯ ಮರಳಿನಲ್ಲೂ ಸಾಗುತ್ತದೆ. ತಾನೋಟ್ ಬಳಿಯ ಪಾಕಿಸ್ತಾನ ಬಾರ್ಡರ್ ಪೋಸ್ಟ್ - 609ಕ್ಕೆ ಸಾಗುವ ಮಾರ್ಗಮಧ್ಯದಲ್ಲಿ ಪುರಾತನ ದೇವಾಲಯಗಳು, ಜ್ಞಾನದಾಹ ತಣಿಸುವ ಮ್ಯೂಸಿಯಂಗಳು ಹಾಗೂ ಸ್ಥಳೀಯ ಒಂಟೆಗಳು ನಿಮಗೆ ಅಪೂರ್ವ ಅನುಭವ ನೀಡುತ್ತವೆ. ಮರಳುಗಾಡಿನ ಘೋರ ಮೌನ ಹಾಗೂ ನಿಮ್ಮ ವಾಹನದ ಸದ್ದು ಒಂದು ರೀತಿಯ ಜುಗಲ್ಬಂದಿ ಏರ್ಪಡಿಸಿದಂತೆ ನಿಮಗೆ ಭಾಸವಾಗುತ್ತದೆ.
ಮುಘಲ್ ರಸ್ತೆ - ಅಕ್ಬರನ ವಿಜಯಯಾತ್ರೆಯ ಮಾರ್ಗ
PC: Owais Khursheed
ಜಮ್ಮು-ಸುಂದರಬನಿ-ನೌಷೇರಾ-ರಾಜೌರಿ-ಅಜ್ಮತ್ ಬಾದ-ಬಫ್ಲಿಯಾಜ-ಚಂಡೀಮಾರ-ಪೀರ್ ಕಿ ಗಲಿ-ಶೋಪಿಯಾನ್-ಪಾಂಪೋರ್-ಶ್ರೀನಗರ
ಕಾಶ್ಮೀರ ಕೊಳ್ಳದ 330 ಕಿಮೀ ಉದ್ದದ ಮಾರ್ಗದಲ್ಲಿರುವ 84 ಕಿಮೀ ರಸ್ತೆಯಲ್ಲಿನ ರುದ್ರ ರಮಣೀಯ ಹಿಮಾಚ್ಛಾದಿತ ಗುಡ್ಡಗಳು, ಭೋರ್ಗರೆಯುವ ನದಿಗಳು, ಕಡಿದಾದ ತಿರುವುಗಳು, ಪೀರ್ ಕಿ ಗಲಿ ಪಾಸ್, ಮನ ತಣಿಸುವ ಸೇಬಿನ ತೋಟಗಳು, ಅಹರ್ಬಾಲ್ ಜಲಪಾತಗಳು ನಿಮ್ಮನ್ನು ಕ್ಷಣ ಕ್ಷಣಕ್ಕೂ ಸ್ವಾಗತಿಸುತ್ತವೆ.
ಇಷ್ಟು ಸಾಹಸ ನಿಮಗೆ ಮನ ತಣಿಸದಿದ್ದರೆ ಶ್ರೀನಗರದಿಂದ ಲಡಾಖವರೆಗಿನ 900 ಕಿಮೀ ಉದ್ದದ ಹಿಮಾಲಯನ್ ಹೈವೇ ಮೇಲೆ ಒಮ್ಮೆ ಪಯಣಿಸಿ ನೋಡಿ. ಜೀವನದ ಎಲ್ಲ ದುಃಖ, ನೋವುಗಳು ಹಿಮಾಲಯದ ಪ್ರಶಾಂತತೆಯಲ್ಲಿ ಕರಗಿ ಮನಸ್ಸು ನಿರಾಳವಾಗುತ್ತದೆ. ಜೀವನದಲ್ಲಿ ಸಾಹಸ ಪಯಣ ಅನುಭವಿಸಲು ಸಿದ್ಧರಾಗಿದ್ದರೆ ಈಗಲೇ ಹೊರಡಿ.. ಎಂಜಾಯ್ ಮಾಡಿ..