ಹಿಂದು ಕ್ಯಾಲೆಂಡರಿನ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ನಾಲ್ಕನೇಯ ದಿನವನ್ನು ಗಣೇಶ ಚತುರ್ಥಿಯ ದಿಅನವನ್ನಾಗಿ ಆಚರಿಸಲಾಗುತ್ತದೆ. ಇದು ಸಾಮಾನ್ಯವಾದ ಅಗಸ್ಟ್-ಸೆಪ್ಟಂಬರ್ ತಿಂಗಳಿನಲ್ಲಿ ಬರುತ್ತದೆ. ಈ ದಿನದಂದು ಗಣೇಶನು ಭೂಮಿಗೆ ಬಂದು ಜನರ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಕೇಳಿ ಭಕ್ತಿಯಿಂದ ಪೂಜಿಸುವವರಿಗೆ ವರದಾನ ನೀಡಿ ಹೋಗುತ್ತಾನೆ ಎಂಬ ಸಾಮಾನ್ಯ ನಂಬಿಕೆ ಎಲ್ಲರಲ್ಲಿದೆ.
ಮುಂಬೈನ ಐದು ಪ್ರಮುಖ ಗಣಪತಿಗಳು
ಇಂದು ಭಾರತದ ಬಹೌಟೆಕ ರಾಜ್ಯಗಳಲ್ಲಿ ಗಣೇಶ ಉತ್ಸವವನ್ನು ಬಲು ಅದ್ದೂರಿ ಹಾಗೂ ಸಡಗರಗಳಿಂದ ಮನೆಗಳಲ್ಲಿ, ಕಚೇರಿಗಳಲ್ಲಿ ಹಾಗೂ ಸಾರ್ವಜನಿಕವಾಗಿ ಆಚರಿಸಲಾಗುತ್ತದೆ. ಗಣೇಶ ಉತ್ಸವ ಪ್ರಚಲಿತದಲ್ಲಿ ಬಂದುದರ ಕುರಿತು ನಿಖರವಾದ ಮಾಹಿಗಳಿಲ್ಲವಾದರೂ ಮಹಾರಾಷ್ಟ್ರದಲ್ಲಿ ಆಳಿದ್ದ ಪೇಶ್ವೆಗಳು ಈ ಹಬ್ಬವನ್ನು ದೊಡ್ಡ ಮಟ್ಟದಲ್ಲಿ ಆಚರಿಸುತ್ತಿದ್ದರೆಂಬುದು ತಿಳಿದುಬರುತ್ತದೆ.
ಚಿತ್ರಕೃಪೆ: Chris
ಗಣೇಶನು ಪೇಶ್ವೆಗಳ ಕುಲದೇವನಾಗಿದ್ದ ಅವರು ಈ ಹಬ್ಬಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಿದ್ದರು. ಪೇಶ್ವೆಗಳ ಅವನತಿಯ ನಂತರ ಈ ಹಬ್ಬವು ತನ್ನ ಕಳೆಯನ್ನು ಕಳೆದುಕೊಂಡಿತ್ತಾದರೂ ಇದನ್ನು ಸಾರ್ವಜನಿಕವಲಯದಲ್ಲಿ ಮತ್ತಷ್ಟು ಅದ್ದೂರಿಯಾಗಿ ಆಚರಿಸುವ ಮುಲಕ ಒಗ್ಗಟ್ಟನ್ನು ಪ್ರದರ್ಶಿಸಿದ ಕೀರ್ತಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕರಿಗೆ ಸಲ್ಲಬೇಕು.
ಚಿತ್ರಕೃಪೆ: Chris
ಗಣೇಶ ಚತುರ್ಥಿ ಉತ್ಸವ ಪ್ರಾರಂಭದಿಂದ ಕೊನೆಗೊಳ್ಳುವವರೆಗೂ ಸಾಕಷ್ಟು ರೋಮಾಂಚನ ನೀಡುವ ಉತ್ಸವವಾಗಿದೆ. ಇದರ ಇನ್ನೊಂದು ಪ್ರಮುಖ ಆಚರಣೆ ಎಂದರೆ ಗಣೇಶ ಮೂರ್ತಿಯ ವಿಸರ್ಜನೆ. ಇದನ್ನೂ ಸಹ ಸಾಕಾಷ್ಟು ಅದ್ದೂರಿಯಿಂದ ಆಚರಿಸಲಾಗುತ್ತದೆ. ಸೃಷ್ಟಿಯಲ್ಲಿ ರೂಪ ಪಡೆದ ಯಾವುದೆ ವಸ್ತುವಿರಲಿ ಮತ್ತೆ ಸೃಷ್ಟಿಯಲ್ಲೆ ವಿಲೀನವಾಗಬೇಕೆಂಬುದರ ಸಂಕೇತ ಈ ವಿಸರ್ಜನೆಯಾಗಿದೆ.
ಮುಂಬೈ ಗಣೇಶೋತ್ಸವಕ್ಕೆ ಭಾರತ ಮಾತ್ರವಲ್ಲದೆ ಪ್ರಪಂಚದಲ್ಲೆ ಸಾಕಷ್ಟು ಖ್ಯಾತಿಗಳಿಸಿದೆ ಅಲ್ಲದೆ ಗಣೇಶೋತ್ಸವದ ನಂತರ ವಿಸರ್ಜನ ಚಟುವಟಿಕೆಯು ಮುಂಬೈನಲ್ಲಿ ಕಂದುಬರುವಂತೆ ದೇಶದ ಮತ್ತಿನ್ಯಾವ ಭಾಗದಲ್ಲೂ ಅಷ್ಟು ರೋಚಕವಾಗಿ, ವೈಭವಯುತವಾಗಿ ಕಂಡುಬರುವುದಿಲ್ಲ. ವಿಸರ್ಜನೆಯನ್ನು ನೋಡಲೆಂದೆ ಎಷ್ಟೊ ಪ್ರವಾಸಿಗರು ಈ ಸಂದರ್ಭದಲ್ಲಿ ಮುಂಬೈಗೆ ಭೇಟಿ ನೀಡುತ್ತಾರೆ. ಮುಂಬೈನಲ್ಲಿ ವಿಸರ್ಜನೆಯ ಅದ್ಭುತತೆಯನ್ನು ಮುಖ್ಯವಾಗಿ ಇಲ್ಲಿ ಹೇಳಲಾದ ವಿವಿಧ ಸ್ಥಳಗಳಲ್ಲಿ ಅನುಭವಿಸಬಹುದಾಗಿದೆ.
ಚಿತ್ರಕೃಪೆ: Darren Burnham
ಚೌಪಾಟಿ : ಮುಂಬೈನ ಗೀರ್ಗಾಂವ್ ಪ್ರದೇಶದಲ್ಲಿರುವ ಗೀರ್ಗಾಂವ್ ಚೌಪಾಟಿ ಒಂದು ಸುಂದರ ಪ್ರವಾಸಿ ಆಕರ್ಷಣೆಯ ಕಡಲ ತೀರವಾಗಿದೆ. ಗಣೇಶೋತ್ಸವದ ನಂತರ ಗಣೇಶನ ವಿಗ್ರಹ ವಿಸರ್ಜಿಸುವ ಪ್ರಮುಖ ತಾಣಗಳಲ್ಲಿ ಒಂದಾಗಿ ಜೀವ ಕಳೆ ಪಡೆಯುತ್ತದೆ ಈ ಕಡಲ ತೀರ. ಮುಂಬೈನ ದೊಡ್ಡ ದೊಡ್ಡ ಗಣೇಶರು ಈ ಕಡಲ ಕಿನಾರೆಯಲ್ಲಿಯೆ ವಿಸರ್ಜನೆಯನ್ನು ಇಷ್ಟ ಪಡುತ್ತಾರೆಂದರೆ ತಪ್ಪಾಗಲಾರದು. ಆ ಸಮ್ದರ್ಭದಲ್ಲಿ ನೀವು ಚೌಪಾಟಿಗೆ ಭೇಟಿ ನೀಡಿದರೆ ಡೊಳ್ಳು ಕುಣಿತಗಳ ಮಧ್ಯೆ ನಡೆಯುವ ರೋಮಾಂಚಕ ವಿಸರ್ಜನ ವಿಧಿಯು ನಿಮ್ಮಲ್ಲಿ ವಿದ್ಯುತ್ ಸಂಚಾರವನ್ನೆ ಉಂಟುಮಾಡಬಲ್ಲುದು.
ಚಿತ್ರಕೃಪೆ: Chris
ಪೋವೈ ಕೆರೆ : ಮುಂಬೈನ ಪೋವೈ ಭಾಗದಲ್ಲಿ ಸ್ಥಿತವಿರುವ ಪೋವೈ ಕೆರೆ ಒಂದು ಕೃತಕ ಕೆರೆಯಾಗಿದ್ದು ಗಣೇಶ ವಿಸರ್ಜನೆಗೆ ಸಾಕಷ್ಟು ಹೆಸರುವಾಸಿಯಾಗಿದೆ. ಉಳಿದ ಸಮಯದಲ್ಲಿ ಪ್ರವಾಸಿ ಆಕರ್ಷಣೆಯಾಗಿಯೂ ಗಮನಸೆಳೆವ ಈ ಕೆರೆ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಸಾಕಷ್ಟು ಜನರನ್ನು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಕಡಲ ತೀರದಲ್ಲಿ ನೆರೆದ ಜನಸಾಗರ, ಚಿತ್ರಕೃಪೆ: David Lowry
ಜುಹು ಕಡಲ ತೀರ : ಮುಂಬೈನ ಪ್ರಖ್ಯಾತ ಪ್ರವಾಸಿ ಆಕರ್ಷಣೆಗಳ ಪೈಕಿ ಜುಹು ಕಡಲ ತೀರವೂ ಸಹ ಒಂದು. ಗಣೇಶ ಉತ್ಸವದ ವಿಸರ್ಜನೆಯ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರಿಂದ ಇದು ತುಂಬಲ್ಪಟ್ಟಿರುತ್ತದೆ. ಎಲ್ಲೆಡೆ ಗಣೇಶನ ಜೈ ಜೈ ಕಾರ, ಢೋಲುಗಳ ಅದ್ಭುತ ಸಂಗೀತ, ಪಟಾಕಿ ಸಿಡಿತ, ಜನರ ಕುಣಿತ ಎಲ್ಲವನ್ನೂ ಇಲ್ಲಿ ಕಾಣಬಹುದು. ಜನದಟ್ಟನೆ ಸಾಕಷ್ಟಿರುವುದರಿಂದ ಜಾಗೃತರಾಗಿರುವುದು ಒಳ್ಳೆಯದು.
ಸಾಕಷ್ಟು ಆಕರ್ಷಿಸುವ ಪುರಾತನ ಗಣೇಶ ದೇವಾಲಯಗಳು!
ವರ್ಸೋವಾ ಕಡಲ ತೀರ : ಮುಂಬೈನ ಅಂಧೇರಿ ಪ್ರದೇಶದಲ್ಲಿ ಸ್ಥಿತವಿರುವ ವರ್ಸೋವಾ ಕಡಲ ತೀರವೂ ಸಹ ಗಣೇಶ ವಿಸರ್ಜನೆಯ ಅದ್ಭುತ ಅನುಭವವನ್ನು ನೋಡುಗರಿಗೆ ಕರುಣಿಸುತ್ತದೆ. ಸಾಮಾನ್ಯವಾಗಿ ಈ ಕಡಲ ತೀರಗಳಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗಿರುವ ದೊಡ್ಡ ದೊಡ್ಡ ಮೂರ್ತಿಗಳನ್ನು ವಿಸರ್ಜಿಸುತ್ತಾರೆ. ಇನ್ನುಳಿದಂತೆ ಮುಂಬೈನ ಸಾಕಷ್ಟು ಬಡಾವಣೆ ಹಾಗೂ ಇತರೆ ಪ್ರದೇಶಗಳಲ್ಲೂ ಚಿಕ್ಕ ಪುಟ್ಟ ಕೃತಕ ಕೆರೆ ಹಾಗೂ ಬಾವಿಗಳಿದ್ದು ಜನಸಾಮಾನ್ಯರು ಅಲ್ಲಿ ವಿಸರ್ಜನೆ ಮಾಡುತ್ತಾರೆ. ಆದರೆ ದೊಡ್ಡ ಮಟ್ಟದ ವಿಸರ್ಜನ ಅನುಭವ ಬೇಕಿದ್ದರೆ ಈ ಕಡಲ ತೀರಗಳಿಗೆ ಭೇಟಿ ನೀಡಿ ಆಸ್ವಾದಿಸಬಹುದು.