ಕಾಂಚೀಪುರಂ ಅಥವಾ ಕಾಂಚಿ ತಮಿಳುನಾಡಿನ ಅತ್ಯಂತ ಪ್ರಸಿದ್ಧವಾದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಕಾಂಚೀಪುರಂ ಚೆನ್ನೈನ ಜನರಿಗೆ ಪ್ರವಾಸಕ್ಕೆ ಜನಪ್ರಿಯವಾದ ತಾಣವಾಗಿದೆ. ಹಾಗಾಗಿಯೇ ವಾರಾಂತ್ಯದ ಸಮಯದಲ್ಲಿ ಅನೇಕ ಪ್ರವಾಸಿಗರು ಕಾಂಚೀಪುರಂನಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ತಮ್ಮ ಸುಂದರವಾದ ಸಮಯವನ್ನು ಕಳೆಯುತ್ತಾರೆ. ಕಾಂಚೀಪುರಂ ಕೇವಲ ಭಾರತದ ಹಳೆಯ ನಗರಗಳಲ್ಲಿ ಒಂದಾಗಿರದೆ, ಶ್ರೀಮಂತವಾದ ಇತಿಹಾಸವನ್ನು ಕೂಡ ಹೊಂದಿದೆ. ಕಾಂಚೀಪುರಂನಲ್ಲಿರುವ ದೇವಾಲಯಗಳು ಅದರದೇ ಆದ ವೈಭವ ಹಾಗು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.
ಇಲ್ಲಿನ ದೇವಾಲಯಗಳು ದಕ್ಷಿಣ ಭಾರತೀಯ ವಾಸ್ತುಶಿಲ್ಪ ಶೈಲಿಗೆ ಒಂದು ಮಾನದಂಡವಾಗಿದೆ. ಒಂದು ಕಾಲದಲ್ಲಿ ಈ ನಗರವು ಪಲ್ಲವ ರಾಜವಂಶದ ರಾಜಧಾನಿಯಾಗಿತ್ತು. ಅವರ ಆಳ್ವಿಕೆಯ ಕಾಲದಲ್ಲಿ ಅನೇಕ ಪ್ರಸಿದ್ಧವಾದ ದೇವಾಲಯಗಳನ್ನು ನಿರ್ಮಿಸಲಾಯಿತು. ಇಲ್ಲಿ ಅನೇಕ ಪ್ರಖ್ಯಾತವಾದ ದೇವಾಲಯಗಳಿವೆ. ಲೇಖನದ ಮೂಲಕ ಆ ಕಾಂಚೀಪುರನ ಪ್ರವಾಸಿತಾಣಗಳ ಬಗ್ಗೆ ತಿಳಿಯೋಣ.
ಕಾಮಾಕ್ಷಿ ಅಮ್ಮನ್ ದೇವಾಲಯ
ಕಾಂಚೀಪುರಂ ಬಸ್ ನಿಲ್ದಾಣದಿಂದ ಕೇವಲ 1 ಕಿ.ಮೀ ದೂರದಲ್ಲಿ ಮತ್ತು ರೈಲ್ವೆ ನಿಲ್ದಾಣದಿಂದ 2 ಕಿ,ಮೀ ದೂರದಲ್ಲಿದೆ. ಕಾಮಾಕ್ಷಿಪುರಂನ ಹೆಗ್ಗುರುತು ಕಾಮಾಕ್ಷಿ ಅಮ್ಮನ್ ದೇವಾಲಯ. ಕಾಂಚೀಪುರಂನ ಕಾಮಾಕ್ಷಿ ಅಮ್ಮನ್ ದೇವಾಲಯವು ಆದಿ ಶಂಕರಾಚಾರ್ಯರ ಅವಧಿಯ ಮಂಚೆಯೇ ಅಸ್ತಿತ್ವದಲ್ಲಿತ್ತು ಎಂದು ನಂಬಲಾಗಿದೆ. ಭಾರತದಲ್ಲಿ ಮೂರು ಪ್ರಮುಖ ಶಕ್ತಿಗಳು ಇವೆ ಎಂದು ನಂಬಲಾಗಿದೆ. ಅವುಗಳು ಕಂಚಿ ಕಾಮಾಕ್ಷಿ, ಮಧುರೈ ಮೀನಾಕ್ಷಿ ಮತ್ತು ಕಾಶಿ ವಿಶಾಲಾಕ್ಷಿ. ಕಾಂಚೀಪುರದಲ್ಲಿ ಶಕ್ತಿಗೆ ಮೀಸಲಾಗಿರುವ ಏಕೈಕ ಸಾಂಪ್ರದಾಯಿಕ ದೇವಾಲಯವೇ ಕಾಮಾಕ್ಷಿ ದೇವಾಲಯ.
ಕೈಲಾಸಕೋನಾ ಜಲಪಾತ
ಇದೊಂದು ಸುಂದರವಾದ ಜಲಪಾತವಾಗಿದ್ದು, ಅನೇಕ ಪ್ರವಾಸಿಗರ ಅಚ್ಚು-ಮೆಚ್ಚಿನ ತಾಣ ಎಂದೇ ಹೇಳಬಹುದು. ಈ ಕೈಲಾಸಕೋನಾ ಜಲಪಾತವು ನೈಸರ್ಗಿಕವಾದ ಹಾಗು ದೀರ್ಘಕಾಲಿಕವಾದ ಜಲಪಾತವಾಗಿದೆ. ಇದು ಪುತ್ತೂರಿನಿಂದ 13 ಕಿ.ಮೀ, ತಿರುಪತಿಯಿಂದ 46 ಕಿ.ಮೀ, ಚೆನ್ನೈನಿಂದ 92 ಕಿ.ಮೀ, ಚಿತ್ತೂರಿನಿಂದ 76 ಕಿ.ಮೀ, ಕಾಣಿಪಾಕಂನಿಂದ 86 ಕಿ.ಮೀ, ಕಾಂಚೀಪುರಂನಿಂದ 85 ಕಿ.ಮೀ ದೂರದಲ್ಲಿದೆ.
ಜಲಪಾತದ ಎತ್ತರ ಸುಮಾರು 30 ಮೀಟರ್ ಆಗಿದ್ದು, ಬಂಡೆಯ ಕೆಳಗೆ ಒಂದು ಸಣ್ಣ ಕೊಳದ ಕೆಳಗೆ ಇಳಿಯುತ್ತದೆ. ಇಲ್ಲಿನ ನೀರು ಅನೇಕ ಖಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎಂದು ನಂಬಲಾಗಿದೆ. ಪ್ರವಾಸಿಗರಿಗೆ ಜಲಪಾತದ ಮೇಲ್ಭಾಗಕೆ ಏರಲು ಅನುಮತಿಯನ್ನು ನೀಡುವುದಿಲ್ಲ. ಜಲಪಾತದ ಸಮೀಪದಲ್ಲಿ ಶಿವ ಹಾಗು ಪಾರ್ವತಿಯ ಸಣ್ಣದಾದ ಒಂದು ದೇವಾಲಯವಿದೆ.
ಚಿದಂಬರಂ
ಚೆನ್ನೈನಿಂದ ಸುಮಾರು 217 ಕಿ.ಮೀ ದೂರದಲ್ಲಿ, ಕಾಂಚೀಪುರಂನಿಂದ 189 ಕಿ.ಮೀ ದೂರದಲ್ಲಿದೆ. ಚಿದಂಬರಂ ಕಡಲೂರು ಜಿಲ್ಲೆಯ ಒಂದು ಯಾತ್ರಾಸ್ಥಳವಾಗಿದೆ. ಇದು ತಮಿಳುನಾಡಿನ ನಟರಾಜನ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಚಿದಂಬರಂ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಚಿದಂಬರಂಗೆ ಭೇಟಿ ನೀಡಲು ಸೂಕ್ತವಾದ ಸಮಯವೆಂದರೆ ಜುಲೈ ಮತ್ತು ಅಕ್ಟೋಬರ್ ತಿಂಗಳವರೆಗೆ.
ಗಂಗೈಕೊಂಡಾ ಚೋಳಾಪುರಂ
ಐತಿಹಾಸಿಕ ಗಂಗೈ ಕೊಂಡಾ ಚಿದಂಬರಂನಿಂದ 42 ಕಿ.ಮೀ, ತಂಜಾವೂರಿನಿಂದ 76 ಕಿ.ಮೀ ದೂರದಲ್ಲಿದೆ. ಗಂಗೈಕೊಂಡ ಚೋಳಪುರಂ ಚೋಳರ ರಾಜಧಾನಿಯಾಗಿತ್ತು. 11 ನೇ ಶತಮಾನದ ಆರಂಭದಲ್ಲಿ ದಕ್ಷಿಣ ಭಾರತದಲ್ಲಿ ದೊಡ್ಡ ಪ್ರದೇಶವನ್ನು ವಶಪಡಿಸಿಕೊಂಡ ರಾಜರಾಜ ಚೋಳನ ಮಗ ರಾಜೇಂದ್ರ ಚೋಳನು ಇದನ್ನು ನಿರ್ಮಾಣ ಮಾಡಿದನು. ಸುಮಾರು 250 ವರ್ಷಗಳ ಕಾಲ ಚೋಳರ ರಾಜಧಾನಿಯಾಗಿ ಕ್ರಿ.ಶ 1025 ರಿಂದ ಇದು ಭಾರತದ ಇತಿಹಾಸದಲ್ಲಿ ಪ್ರಮುಖ ಸ್ಥಳವಾಗಿದೆ. ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆ ತಾಣ "ಗ್ರೇಟ್ ಲಿವಿಂಗ್ ಚೋಳ ಟೆಂಪಲ್ಸ್" ನಭಾಗವಾಗಿದೆ.
ತೆರಳುವ ಬಗೆ ಹೇಗೆ?
ಕಾಂಚೀಪುರಂ ತಮಿಳುನಾಡಿನ ಅತ್ಯಂತ ಪ್ರಾಚೀನವಾದ ನಗರ ಎಂದು ಹೆಸರುವಾಸಿಯಾಗಿದೆ. ಈ ಸುಂದರವಾದ ನಗರಕ್ಕೆ ಭೇಟಿ ನೀಡಲು ಅನೇಕ ಸಾರಿಗೆ ಸಂಪರ್ಕ ವ್ಯವಸ್ಥೆ ಇದೆ. ಚೆನ್ನೈನಿಂದ 75 ಕಿ.ಮೀ, ವೆಲ್ಲೂರಿನಿಂದ 68 ಕಿ.ಮೀ, ಮಹಾಬಲೀಪುರಂನಿಂದ 65 ಕಿ.ಮೀ, ತಿರುಪತಿಯಿಂದ 108 ಕಿ.ಮೀ ಮತ್ತು ಪಾಂಡಿಚೇರಿಯಿಂದ 127 ಕಿ.ಮೀ ದೂರದಲ್ಲಿದೆ.
ವಿಮಾನ ಮಾರ್ಗದ ಮೂಲಕ
ಕಾಂಚೀಪುರಂಗೆ ತೆರಳಲು ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಚೆನ್ನೈ ವಿಮಾನ ನಿಲ್ದಾಣ. ಇಲ್ಲಿಮದ ಕೇವಲ 75 ಕಿ,ಮೀ ದೂರದಲ್ಲಿದೆ.
ರೈಲ್ವೆ ಮಾರ್ಗದ ಮೂಲಕ
ಕಾಂಚೀಪುರಂಗೆ ತೆರಳಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ಅವು, ಅರಕ್ಕೋಣಂ ರೈಲ್ವೆ ನಿಲ್ದಾಣ(29 ಕಿ.ಮೀ) ಹಾಗು ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣ(75 ಕಿ.ಮೀ).
ರಸ್ತೆ ಮಾರ್ಗದ ಮೂಲಕ
ಸಮೀಪದ ಬಸ್ ನಿಲ್ದಾಣವೆಂದರೆ ಅದು ಕಾಂಚೀಪುರಂ ಸೆಂಟ್ರಲ್ ಬಸ್ ಸ್ಟೇಷನ್.
ಕಾಂಚೀಪುರಂಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯ
ಕಾಂಚೀಪುರಂನಲ್ಲಿ ಅನೇಕ ದೇವಾಲಯಗಳು, ಪ್ರವಾಸಿ ತಾಣಗಳಿವೆ. ಇಲ್ಲಿನ ಸುಂದರವಾದ ತಾಣಗಳಿಗೆ ಭೇಟಿ ನೀಡಬೇಕು ಎಂದು ಅಂದುಕೊಂಡಿರುವವರು ಹವಾಗುಣಕ್ಕೆ ಅನುಗುಣವಾಗಿ, ಜುಲೈ ತಿಂಗಳಿನಿಂದ ಆಗಸ್ಟ್ ತಿಂಗಳವರೆವಿಗೆ ಹಾಗು ನವೆಂಬರ್ ತಿಂಗಳಿನಿಂದ ಏಪ್ರಿಲ್ ತಿಂಗಳವರೆಗೆ ಭೇಟಿ ನೀಡುವುದು ಅತ್ಯುತ್ತಮ.