ಏನೀದು ಪ್ರವಾಸಿ ಲೇಖನದಲ್ಲಿ ಈ ರೀತಿಯ ಶಿರ್ಷಿಕೆ...ಎಂದು ತುಸು ಗೊಂದಲವಾಗಿರ ಬೇಲಕಲ್ಲವೆ ನಿಮಗೆ? ಆದರೆ ಇದು ಯೋಗ್ಯವಾದ ಶಿರ್ಷಿಕೆಯೆ ಎಂಬುದು ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ ನೋಡಿದಾಗ ಅನಿಸದೆ ಇರಲಾರದು. ಹೌದು ಪ್ರಸ್ತುತ ಲೇಖನವು ಭಾರತದಲ್ಲಿರುವ "ಸೆವೆನ್ ಸಿಸ್ಟರ್ ಸ್ಟೇಟ್ಸ್" ಪ್ರದೇಶಗಳ ಕುರಿತು ತಿಳಿಸುತ್ತದೆ.
ಭಾರತದ ಈಶಾನ್ಯ ತುದಿಯಲ್ಲಿರುವ ಹಲವು ತಾಣಗಳು ಹಚ್ಚ ಹಸಿರಿನಿಂದ ಕೂಡಿದ್ದು ಇಂದಿಗೂ ಪ್ರಕೃತಿಯೊಂದಿಗೆ ಸಾಕಷ್ಟು ಬೆರೆತು ಹೋಗಿರುವುದನ್ನು ಕಾನಬಹುದು. ಈ ಒಂದು ಭಾಗದಲ್ಲಿ ಬರೋಬ್ಬರಿ ಏಳು ರಾಜ್ಯಗಳು ಗುಂಪುಗೂಡಿವೆ. ಈ ಏಳು ರಾಜ್ಯಗಳ ಸಂಸ್ಕೃತಿ ಸಂಪ್ರದಾಯ, ಆಚಾರ-ವಿಚಾರ, ಆಹಾರ ಶೈಲಿಗಳಲ್ಲಿ, ಅಷ್ಟೆ ಏಕೆ ಭೌಗೋಳಿಕವಾಗಿಯೂ ಕೆಲವು ಸಾಮ್ಯತೆಗಳಿರುವುದರಿಂದ ಆ ಏಳು ರಾಜ್ಯಗಳನ್ನು ಪ್ರೀತಿಯಿಂದ ಏಳು ಸಹೋದರಿಯರು ಎಂದು ಸಂಭೋದಿಸಲಾಗುತ್ತದೆ.
ವಿಶೇಷ ಲೇಖನ : ಈಶಾನ್ಯ ಭಾರತದ ಅದ್ಭುತ ಕಾಡುಗಳು
ಈ ಏಳು ಸಹೋದರಿಯರನ್ನು ಅರ್ಥಾತ್ ಈಶಾನ್ಯ ಭಾರತದ ಆ ರಾಜ್ಯಗಳನ್ನು ಜೀವನದಲ್ಲೊಮ್ಮೆಯಾದರೂ ಭೇಟಿ ಮಾಡಲೇಬೇಕು. ಏಕೆಂದರೆ ಇವು ಭಾರತದ ಇತರೆ ರಾಜ್ಯಗಳಂತಿರದೆ ವಿಶೀಷ್ಟವಾಗಿ ಗುರುತಿಸಲ್ಪಡುತ್ತವೆ. ಅಸ್ಸಾಂ ಈ ಒಂದು ರಾಜ್ಯ ಮಾತ್ರ ಮಿಕ್ಕ ಆ ಆರು ರಾಜ್ಯಗಳೊಂದಿಗೆ ರಸ್ತೆಯ ಮೂಲಕ ಬೆಸೆಯುವ ಏಕೈಕ ಪ್ರವೇಶ ದ್ವಾರ ರಾಜ್ಯವಾಗಿದೆ. ಅಲ್ಲದೆ ಇಲ್ಲಿ ಇನ್ನೂ ಅನೇಕ ಕಾಡು ಬುಡಕಟ್ಟು ಜನಾಂಗಗಳು ವಾಸಿಸುತ್ತವೆ. ಪ್ರದೇಶಗಳ ಐತಿಹಾಸಿಕ ಶ್ರೀಮಂತಿಕೆ, ಸಾಂಪ್ರದಾಯಿಕ ಆಚಾರ ವಿಚಾರಗಳು ಇನ್ನೂ ಲವಲವಿಕೆಯಿಂದ ಕೂಡಿವೆ.
ಪ್ರಸ್ತುತ ಲೇಖನದ ಮೂಲಕ ಆ ಏಳು ರಾಜ್ಯಗಳು ಯಾವುವು ಹಾಗೂ ಅಲ್ಲಿನ ಆಕರ್ಷಣೆಗಳು, ಬುಡಕಟ್ಟು ಜನಾಂಗಗಳು, ಆಹಾರ ಪದ್ಧತಿಗಳು, ಉತ್ಸವಗಳು ಮುಂತಾದವುಗಳ ಕುರಿತು ತಿಳಿಯಿರಿ. ಅವಕಾಶ ದೊರೆತರೆ ಈ ಅದ್ಭುತ ಪ್ರಾಕೃತಿಕ ಸಂಪತ್ತನ್ನು ಹೊಂದಿರುವ ಈ ತಾಣಗಳಿಗೆ ಭೇಟಿ ಮಾಡಿ. ಈ ಲೇಖನದಲ್ಲಿ ಏಳೂ ರಾಜ್ಯಗಳ ಕುರಿತು ಸಂಕ್ಷೀಪ್ತವಾಗಿ ಮಾತ್ರವೆ ತಿಳಿಸಲಾಗಿದೆ.
ಏಳು ಸಹೋದರಿಯರೊಡನೆ ಪ್ರವಾಸ:
ಮೊದಲಿಗೆ ಈ ಪ್ರದೇಶಕ್ಕೆ ಪ್ರವೇಶ ದ್ವಾರವಾದ ಅಸ್ಸಾಂ ರಾಜ್ಯದಿಂದ ಪ್ರಾರಂಭಿಸೋಣ. ಅಸ್ಸಾಂ ಎಂದೊಡನೆ ನೆನಪಾಗುವುದು ಟೀ. ಆದರೆ ನಿಜವಾಗಿ ಭಾರತದ ಈಶಾನ್ಯ ಭಾಗದಲ್ಲಿರುವ ಈ ಪುಟ್ಟರಾಜ್ಯದಲ್ಲಿ ಟೀ ಎಸ್ಟೇಟುಗಳಿಗಿಂತ ಹೆಚ್ಚಾಗಿ ನಿರ್ಜನವಾದ ಹಾಗೂ ರಕ್ಷಿತ ಅರಣ್ಯಪ್ರದೇಶವಿದೆ.
ಚಿತ್ರಕೃಪೆ: Akarsh Simha
ಏಳು ಸಹೋದರಿಯರೊಡನೆ ಪ್ರವಾಸ:
ಆಧುನೀಕತೆಯ ಸೋಂಕಿಲ್ಲದೆ ಬದುಕುತ್ತಿರುವ ವಿಭಿನ್ನ ಬುಡಕಟ್ಟು ಜನಾಂಗಗಳಿವೆ. ಉತ್ತಮ ಮಳೆ ಹಾಗೂ ತಂಪಾದ ಹವಾಗುಣದಿಂದಾಗಿ ನಿತ್ಯಹರಿದ್ವರ್ಣದ ಕಾನನವಿದೆ. ಈ ಕಾರಣದಿಂದಾಗಿ ಸರ್ಕಾರದ ದೇಣಿಗೆಯ ಅಗತ್ಯವಿಲ್ಲದೇ ಪ್ರಕೃತಿಯೊಡನೆ ಬೆರೆತಿರುವ ವನ್ಯಜೀವಜಾಲವಿದೆ.
ಚಿತ್ರಕೃಪೆ: Giridhar Appaji Nag Y
ಏಳು ಸಹೋದರಿಯರೊಡನೆ ಪ್ರವಾಸ:
ಭಾರತದಲ್ಲಿರುವ ಪ್ರಮುಖ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಒಂದಾದ ಕಾಝಿರಂಗ ಅಭಯಾರಣ್ಯ ಅಸ್ಸಾಂನಲ್ಲಿದೆ. ಇದರ ಹೊರತಾಗಿ ಇನ್ನೂ ಹಲವಾರು ಪಕ್ಷಿಧಾಮಗಳೂ ರಾಷ್ಟ್ರೀಯ ಉದ್ಯಾನಗಳೂ ಅಸ್ಸಾಂ ನಲ್ಲಿ ಹಲವಾರಿವೆ. ಈ ಸ್ಥಳಗಳಲ್ಲಿ ನೂರಾರು ಅಪರೂಪದ ವನ್ಯಜೀವಿಗಳು ಆಶ್ರಯ ಪಡೆದಿದ್ದು ಚಾರಣಪ್ರಿಯ ಪ್ರವಾಸಿಗರ ಪಾಲಿಗೆ ಸ್ವರ್ಗಸಮಾನವಾಗಿದೆ.
ಚಿತ್ರಕೃಪೆ: Pankaj Kaushal
ಏಳು ಸಹೋದರಿಯರೊಡನೆ ಪ್ರವಾಸ:
ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇನ್ನೊಂದು ಅಭಯಾರಣ್ಯವಾದ ಮಾನಸ್ ನ್ಯಾಶನಲ್ ಪಾರ್ಕ್ ಸಹಾ ಅಸ್ಸಾಂನಲ್ಲಿದೆ. ಭಾರತದ ಪ್ರಥಮ ಹುಲಿಧಾಮ ಎಂಬ ಹೆಗ್ಗಳಿಕೆ ಪಡೆದಿರುವ ಈ ಅಭಯಾರಣ್ಯದಲ್ಲಿ ಹಲವು ಅಪರೂಪದ ಪಕ್ಷಿ ಪ್ರಾಣಿ ಸಂಕುಲಗಳಿವೆ. ಅಪ್ರತಿಮ ಪ್ರಕೃತಿ ಸೌಂದರ್ಯ ಹೊಂದಿರುವ ಈ ತಾಣಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರೂ ತಮ್ಮ ಭೇಟಿಯ ಅವಧಿಯನ್ನು ಹೆಚ್ಚಿಸುವ ಬಗ್ಗೆ ಖಂಡಿತಾ ಯೋಚಿಸುತ್ತಾರೆ ಎಂದರೆ ಉತ್ಪ್ರೇಕ್ಷೆಯಲ್ಲ.
ಚಿತ್ರಕೃಪೆ: Macaca77
ಏಳು ಸಹೋದರಿಯರೊಡನೆ ಪ್ರವಾಸ:
ವನ್ಯಜೀವಿಗಳ (ಮತ್ತು ಟೀ ಎಸ್ಟೇಟುಗಳ) ಹೊರತಾಗಿ ಅಸ್ಸಾಂ ನಲ್ಲಿ ಹಲವು ದೇವಾಲಯಗಳೂ ಸ್ಮಾರಕಗಳೂ ಇವೆ. ದೇಶದ ವಿವಿಧ ಭಾಗಗಳಿಂದ ಉತ್ತಮ ಜೀವನನ್ನರಸಿ ಬಂದ ಜನರಿಂದ ಹಲವು ಸಂಸ್ಕೃತಿಗಳು ಇಲ್ಲಿ ಜೀವತಳೆದಿವೆ. ಧಾರ್ಮಿಕ ಸ್ಥಳಗಳಲ್ಲಿ ಪ್ರಮುಖವಾಗಿ ಕಮಾಖ್ಯ ದೇವಾಲಯ, ಉಮಾನಂದ ದೇವಾಲಯ, ನವಗ್ರಹ ದೇವಾಲಯ ಹಾಗೂ ಸತ್ರಾಸ್ ದೇವಾಲಯಗಳು ಭಕ್ತರನ್ನು ಸೆಳೆಯುತ್ತವೆ.
ಚಿತ್ರಕೃಪೆ: Deeporaj
ಏಳು ಸಹೋದರಿಯರೊಡನೆ ಪ್ರವಾಸ:
ಒಂದು ವೇಳೆ ಚಾರಣ ನಿಮ್ಮ ಹವ್ಯಾಸವಾಗಿದ್ದರೆ ಅಸ್ಸಾಂ ನಿಮಗೆ ಹೇಳಿ ಮಾಡಿಸಿದಂತಹ ರಾಜ್ಯವಾಗಿದೆ. ಅಸ್ಸಾಂ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಲವು ಸಾಹಸ ಕ್ರೀಡೆಗಳನ್ನು ಆಯೋಜಿಸಿದೆ. ವೇಗವಾಗಿ ಹರಿಯುತ್ತಿರುವ ನದಿಯ ಸೆಳವಿನಲ್ಲಿ ದೋಣಿ ಸಾಗುವ (ರಿವರ್ ಕ್ರೂಸ್), ತೆಪ್ಪ (ರಿವರ್ ರಾಫ್ಟಿಂಗ್), ಗಾಳ ಹಾಕುವುದು (ಆಂಗ್ಲಿಂಗ್), ಪರ್ವತಾರೋಹಣ, ಪರ್ವತ ಪ್ರದೇಶದಲ್ಲಿ ಸೈಕಲ್ ಸವಾರಿ, ಆಗಸದಲ್ಲಿ ಹಾರಾಡಲು ಅವಕಾಶ ನೀಡುವ ಪ್ಯಾರಾ ಸೈಲಿಂಗ್ ಮತ್ತು ಹ್ಯಾಂಗ್ ಗ್ಲೈಡಿಂಗ್ ಮೊದಲಾದ ಸಾಹಸಕ್ರೀಡೆಗಳಿಗೆ ವಿಫುಲವಾದ ಅವಕಾಶವಿದೆ.
ಚಿತ್ರಕೃಪೆ: Jyotishpriyanki
ಏಳು ಸಹೋದರಿಯರೊಡನೆ ಪ್ರವಾಸ:
ಅರುಣಾಚಲ ಪ್ರದೇಶ : ನಳನಳಿಸುವ ಆರ್ಕಿಡ್, ಹಿಮಾವೃತಗೊಂಡು ಹೊಳೆಯುತ್ತಿರುವ ಪರ್ವತ ಶ್ರೇಣಿಗಳು, ನಿಷ್ಕಳಂಕ ಕಣಿವೆಗಳು, ಕಾಡಿನಲ್ಲಿ ಹಸಿರೆಲೆಗಳ ಮರ್ಮರ ಧ್ವನಿ, ಅಗಲ ಕಿರಿದಾದ ಭೂಭಾಗದಲ್ಲಿ ಅಂಕುಡೊಂಕಾಗಿ ಹರಿಯುತ್ತಿರುವ ನೀರಿನ ಕಾಲುವೆ, ಬೌದ್ಧ ಸನ್ಯಾಸಿಗಳ ಮಂತ್ರಪಠಣ ಮತ್ತು ಜನರ ಆತಿಥ್ಯ - ನೀವು ಇವೆಲ್ಲವನ್ನೂ ಅನುಭವಿಸಬೇಕೆಂದಾದಲ್ಲಿ ಒಮ್ಮೆ ಅರುಣಾಚಲ ಪ್ರದೇಶ ರಾಜ್ಯಕ್ಕೆ ಭೇಟಿ ನೀಡಲೇಬೇಕು.
ಚಿತ್ರಕೃಪೆ: Arif Siddiqui
ಏಳು ಸಹೋದರಿಯರೊಡನೆ ಪ್ರವಾಸ:
ಅರುಣಾಚಲ ಪ್ರದೇಶದ ಭೂಪ್ರದೇಶದ ಲಕ್ಷಣಗಳೇ ಇಲ್ಲಿನ ಪ್ರವಾಸೋದ್ಯಮದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಇಲ್ಲಿನ ಪ್ರವಾಸಿಗರಿಗೆ ವಿವಿಧ ತರವಾದ ಪ್ರಾಕೃತಿಕ ಸೊಬಗನ್ನು ಪರಿಚಯಿಸುತ್ತದೆ. ಭಾರತದ ಪೂರ್ವ ಭಾಗದಲ್ಲಿರುವ ಅರುಣಾಚಲ ಪ್ರದೇಶವು ಸೂರ್ಯ ಉದಯಿಸುವ ನಾಡು ಎಂದೂ ಕರೆಯಲ್ಪಡುತ್ತದೆ.
ಚಿತ್ರಕೃಪೆ: Rohit Naniwadekar
ಏಳು ಸಹೋದರಿಯರೊಡನೆ ಪ್ರವಾಸ:
ಅರುಣಾಚಲ ಪ್ರದೇಶದಲ್ಲಿ ಕಂಡುಬರುವ ಇತರೆ ಆಕರ್ಷಣೆಗಳೆಂದರೆ ತವಾಂಗ್ (ಬೌದ್ಧ ಮಠಕ್ಕೆ ಹೆಸರುವಾಸಿ), ಅಲೊಂಗ್, ಶಿರೊ, ಬೊಮ್ ಡಿಲ್ಲಾ, ಪಸಿ ಘಾಟ್ ಇತ್ಯಾದಿಗಳು. ಇದಲ್ಲದೆ, ನಂ ದಫಾ ರಾಷ್ಟ್ರೀಯ ಉದ್ಯಾನವನ, ಈಗಲ್ ನೆಸ್ಟ್ ವನ್ಯಜೀವಿ ಸಂರಕ್ಷಣ ಕೇಂದ್ರ, ದಯಿಂಗ್ ಎರಿಂಗ್ ವನ್ಯಜೀವಿ ಸಂರಕ್ಷಣ ಕೇಂದ್ರ ಮುಂತಾದುವುಗಳು ಅರುಣಾಚಲ ಪ್ರದೇಶದ ಇತರ ಪ್ರೇಕ್ಷಣೀಯ ಸ್ಥಳಗಳಾಗಿವೆ. ತವಾಂಗ್ ನಲ್ಲಿರುವ ಬೌದ್ಧ ಮಠದ ವಿಹಂಗಮ ದೃಶ್ಯ.
ಚಿತ್ರಕೃಪೆ: Vikramjit Kakati
ಏಳು ಸಹೋದರಿಯರೊಡನೆ ಪ್ರವಾಸ:
ಅರುಣಾಚಲ ಪ್ರದೇಶವನ್ನು ಭಾರತದ "ಆರ್ಕಿಡ್ ಗಳ ಸ್ವರ್ಗ" ಎಂದು ಕರೆಯಲಾಗುತ್ತದೆ. ಕಾರಣ ಇಲ್ಲಿ 500 ಕ್ಕೂ ಹೆಚ್ಚು ಬಗೆಯ ಆರ್ಕಿಡ್ ಗಳಿದ್ದು, ಇದು ಭಾರತದಲ್ಲಿ ಕಂಡು ಬರುವ ಒಟ್ಟು ತಳಿಗಳ ಅರ್ಧ ಭಾಗದಷ್ಟಾಗಿವೆ ಎಂದು ಹೇಳಬಹುದು. ಇದರಲ್ಲೂ ವಿಶೇಷವಾಗಿ ವಿನಾಶದಂಚಿನಲ್ಲಿರುವ ಹಾಗೂ ಅಪರೂಪದೆನ್ನಬಹುದಾದ ತಳಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅರುಣಾಚಲ ಪ್ರದೇಶದಲ್ಲಿ ಆರ್ಕಿಡ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸ್ಟೇಷನ್ ಎಂಬ ಸರಕಾರಿ ಸ್ವಾಮ್ಯದ ಸಂಸ್ಥೆಯೂ ಇದೆ.
ಚಿತ್ರಕೃಪೆ: Lars.Kurth
ಏಳು ಸಹೋದರಿಯರೊಡನೆ ಪ್ರವಾಸ:
ಅರುಣಾಚಲ್ ಪ್ರದೇಶದ ಜನರು ಸರಳ ಹಾಗೂ ಆತಿಥ್ಯ ಪ್ರಿಯರು. ರಾಜ್ಯದಲ್ಲಿ ಸುಮಾರು 26 ಕ್ಕೂ ಅಧಿಕ ಬುಡಕಟ್ಟು ಪಂಗಡಗಳಿದ್ದು, ಇಲ್ಲಿನ ಜನರು ಅವರ ಸಂಸ್ಕೃತಿ ಹಾಗೂ ಕಲೆಗೆ ತುಂಬಾ ಹತ್ತಿರವಾಗಿದ್ದಾರೆ. ಅಪತಾನಿ, ಅಕಾ, ಬೋರಿ, ಗಳೋ, ಅಡಿ, ತಗಿನ್, ನ್ಯಿಷಿ ಇತ್ಯಾದಿಗಳು ಇಲ್ಲಿನ ಪ್ರಮುಖ ಪಂಗಡಗಳಾಗಿವೆ.
ಚಿತ್ರಕೃಪೆ: Prashant Ram
ಏಳು ಸಹೋದರಿಯರೊಡನೆ ಪ್ರವಾಸ:
ಅರುಣಾಚಲ ಪ್ರದೇಶದ ಪ್ರವಾಸೋದ್ಯಮ ಇಲ್ಲಿನ ವೈವಿಧ್ಯಮಯ ಸಂಸ್ಕೃತಿ, ಜನರು, ಪ್ರಾಕೃತಿಕ ಸೌಂದರ್ಯ ಹಾಗೂ ಭಾಷೆಗಳ ಪರಿಚಯವನ್ನು ಯಾತ್ರಿಗಳಿಗೆ ಮಾಡಿಕೊಡುತ್ತದೆ. ಇಲ್ಲಿನ ರಾಜಧಾನಿಯಾದ ಇಟಾನಗರ ನಲ್ಲಿ ಇಟಾನಗರ ವನ್ಯಜೀವಿ ಅಭಯಧಾಮ ಹಾಗೂ ಇಟಾ ಕೋಟೆ ಪ್ರಸಿದ್ಧವಾಗಿದೆ.
ಚಿತ್ರಕೃಪೆ: goldentakin
ಏಳು ಸಹೋದರಿಯರೊಡನೆ ಪ್ರವಾಸ:
ನಾಗಾಲ್ಯಾಂಡ್ : ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಹಾಗು ಮ್ಯಾನ್ ಮಾರ್ ಗಳಿಂದ ಸುತ್ತುವರೆದಿರುವ, ಭಾರತದ ಈಶಾನ್ಯ ರಾಜ್ಯಗಳಲ್ಲೊಂದಾದ, ಪರ್ವತಗಳ ನಾಡೇ ಈ ನಾಗಾಲ್ಯಾಂಡ್. ಇದು ಮೂಲತಃ ಕೃಷಿಕರ ಭೂಮಿ. ಇಲ್ಲಿನ ಜನರ ಪ್ರಾಮಾಣಿಕತೆಗೆ ಒಲಿದ ಪ್ರಕೃತಿಯು ಅಧಮ್ಯ ಸಸ್ಯ ಹಾಗು ಪ್ರಾಣಿ ಸಂಪತ್ತನ್ನು ನೀಡಿ ಹರಸಿದೆ ಎಂದರೆ ತಪ್ಪಾಗಲಾರದು. ಚರಿತ್ರೆಯ ಪುಟಗಳಲ್ಲಿ ಸ್ಥಾನ ಪಡೆದಿರುವ ಈ ನಾಡು ಸಾಂಸೃತಿಕ ಸಿರಿವಂತಿಕೆಯನ್ನು ಉಳಿಸಿಕೊಂಡು ಬಂದಿದೆ.
ಚಿತ್ರಕೃಪೆ: Vikramjit Kakati
ಏಳು ಸಹೋದರಿಯರೊಡನೆ ಪ್ರವಾಸ:
ಗಗನಚುಂಬಿ ಪರ್ವತಗಳು, ವಿವಿಧ ಸಸ್ಯ - ಪ್ರಾಣಿ ಸಂಪತ್ತು, ವಿಭಿನ್ನ ಸಂಸ್ಕೃತಿ, ಅಮೋಘ ಚರಿತ್ರೆ ಹಾಗು ಮುಗ್ದ ಜನರನ್ನು ಹೊಂದಿರುವ ಪುಟಾಣಿ ಗಡಿರಾಜ್ಯ ನಾಗಾಲ್ಯಾಂಡ್, "ಈಶಾನ್ಯದ ಸ್ವಿಡ್ಜರ್ ಲ್ಯಾಂಡ್" ಎಂಬ ನಾಮಾಂಕಿತ ಪಡೆದ ರಾಜ್ಯ. ಪ್ರವಾಸಿಗರಿಗೆ ನಾಗಾಪ್ರಕೃತಿ ನೀಡುವ ರಸದೌತಣದಿಂದಾಗಿ ಇದು ನೈಸರ್ಗಿಕ ಪ್ರವಾಸಿತಾಣವಾಗಿ ರೂಪುಗೊಂಡಿದೆ.
ಚಿತ್ರಕೃಪೆ: Tewu
ಏಳು ಸಹೋದರಿಯರೊಡನೆ ಪ್ರವಾಸ:
ನಾಗಾದ ನೆಲದಲ್ಲಿ ನೀವು ಸಂಚರಿಸುತ್ತಾ ಹೋದಂತೆ ಚಿತ್ರಸದೃಶ ದೃಶ್ಯಗಳು ನಿಮ್ಮನ್ನು ಸ್ವಾಗತಿಸುವವು. ಇಲ್ಲಿನ ಸೃಷ್ಟಿಯ ರಮ್ಯನೋಟ, ಹಸಿರು ವನರಾಶಿ, ಬಾನಿಗೆ ರಂಗನೆರಚಿದಂತೆ ಭಾಸವಾಗುವ ಸೂರ್ಯಾಸ್ತ ಮತ್ತು ಸೂರ್ಯೋದಯದ ದೃಶ್ಯಗಳು ಪ್ರವಾಸಿಗರ ಮನದಲ್ಲಿ ಅಚ್ಚಳಿಯದ ಸವಿನೆನಪಾಗಿ ನೆಲೆಸುವಂತಹವು. ನೀವೂ ಸಹ ಇಂತಹ ಅವಿಸ್ಮರಣೀಯ ಅನುಭವವನ್ನು ನಿಮ್ಮದಾಗಿಸಿಕೊಳ್ಳ ಬಯಸಿದ್ದರೆ, ಪ್ರಕೃತಿಯ ಆರಾಧಕರಾಗಿದ್ದರೆ ನಿಮ್ಮ ರಜಾದಿನಗಳನ್ನು ಕಳೆಯಲು ನಾಗಾಲ್ಯಾಂಡ್ ಗಿಂತ ಉತ್ತಮ ತಾಣ ಇನ್ನೊಂದಿರಲಾರದು.
ಚಿತ್ರಕೃಪೆ: AmyNorth
ಏಳು ಸಹೋದರಿಯರೊಡನೆ ಪ್ರವಾಸ:
ಹನ್ನೊಂದು ಆಡಳಿತಾತ್ಮಕ ಜಿಲ್ಲೆಗಳನ್ನು ಹೊಂದಿರುವ ಈ ರಾಜ್ಯದಲ್ಲಿ ಸುಮಾರು 16 ಗಿರಿಜನ ಪಂಗಡಗಳು ನೆಲೆಸಿವೆ ಅವರಲ್ಲಿ ಪ್ರಮುಖ್ರಾದವರು ನಾಗಾಗಳು ಇವರೇ ಇಲ್ಲಿನ ಸ್ಥಳೀಯ ನಿವಾಸಿಗಳು. ಆಡು ಭಾಷೆಯಲ್ಲಿ "ನಾಗಾ" ಆಗಿರುವ "ನಾಕಾ" ಶಬ್ದವು ಬರ್ಮೆಸೆ ಬಾಷೆಯದ್ದಾಗಿದೆ. ನಾಕಾ ಎಂದರೆ "ಚಿಕ್ಕ ಮೂಗಿನ ಜನರು" ಎಂದರ್ಥ. ಚಿಕ್ಕ ಮೂಗಿನ ಜನರು ಇರುವ ಲ್ಯಾಂಡ್ (ಭೂಮಿ), ನಾಗಾಲ್ಯಾಂಡ್ ಎಂದು ಹೆಸರು ಪಡೆದಿದೆ.
ಚಿತ್ರಕೃಪೆ: Homen Biswas
ಏಳು ಸಹೋದರಿಯರೊಡನೆ ಪ್ರವಾಸ:
ಕೊಹಿಮಾ ನಾಗಾಲ್ಯಾಂಡ್ ದ ರಾಜ್ಯಧಾನಿಯಾಗಿದ್ದು, ದಿಮಾಪುರ್ ಇಲ್ಲಿನ ಅತಿ ದೊಡ್ಡ ನಗರವಾಗಿದೆ. 3,840 ಮೀಟರ ಎತ್ತರದ ಮೌಂಟ್ ಸಾರಾಮತಿಯು ಇಲ್ಲಿನ ಅತಿ ಎತ್ತರದ ಶಿಖರ. ಈ ಪರ್ವತ ಶೇಣಿಯು ನಾಗಾಲ್ಯಾಂಡ್ ಹಾಗು ಬರ್ಮಾ ನಡುವಿನ ಗಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಚಿತ್ರಕೃಪೆ: AmyNorth
ಏಳು ಸಹೋದರಿಯರೊಡನೆ ಪ್ರವಾಸ:
ಇನ್ನು ಪ್ರಕೃತಿಯ ಕೈಗೂಸಾಗಿರುವ ನಾಗಾಲ್ಯಾಂಡಿನ ವಾಯುಗುಣದ ಬಗ್ಗೆ ಹೇಳುವದೇನಿದೆ ? ವರ್ಷದ ಹನ್ನೆರಡೂ ತಿಂಗಳು ಪ್ರಶಾಂತ ಹವಾಮಾನವನ್ನು ಹೊಂದಿರುವ ಈ ರಾಜ್ಯಕ್ಕೆ ಯಾವಾಗ ಬೇಕಾದರೂ ಪ್ರವಾಸಾರ್ಥಿಗಳು ಬೇಟಿನೀಡಬಹುದು. ಆದರೆ ಬೇಟಿನೀಡಿದವರೆಲ್ಲರೂ ಪ್ರಫುಲ್ಲ ಮನಸ್ಕರಾಗಿ ಸವಿನೆನಪುಗಳ ಬುತ್ತಿಯೊಂದಿಗೆ ಹಿಂದಿರುಗುವದು ಖಚಿತ. ರಾಜಧಾನಿ ನಗರ ಕೊಹಿಮಾ ನಗರದ ಮಾರುಕಟ್ಟೆ.
ಚಿತ್ರಕೃಪೆ: PP Yoonus
ಏಳು ಸಹೋದರಿಯರೊಡನೆ ಪ್ರವಾಸ:
ನಾಗಾಲ್ಯಾಂಡನಲ್ಲಿ ಬೇರೆ ಬೇರೆ ಪಂಗಡದವರು ಬೇರೆ ಬೇರೆ ರೀತಿಯ ಆಹಾರವನ್ನು ಸೇವಿಸುತ್ತಾರಾದರೂ ಮೀನು ಮತ್ತು ಮಾಂಸ ಎಲ್ಲ ಪಂಗಡಗಳಲ್ಲೂ ಪ್ರಮುಖ ಪದಾರ್ಥ. ಅದರಲ್ಲೂ ವಿಶೇಷವಾಗಿ ಒಣಗಿಸಿದ ಮೀನು ಮಾಂಸ ಪದಾರ್ಥಗಳು ಹೆಚ್ಚು ಬಳಕೆಯಲ್ಲಿದೆ. ಉಳಿದಂತೆ ಬೆಂದ ತರಕಾರಿಗಳ ಖಾದ್ಯ, ಅನ್ನ, ಮಾಂಸದ ಖಾದ್ಯಗಳನ್ನೂ ನಾಗಾಗಳು ಸೇವಿಸುವರು. ಅವರ ಅಡಿಗೆಗಳಲ್ಲಿ ಹೆಚ್ಚಿನವು ಉಗಿಯಲ್ಲಿ ಬೇಯಿಸಿದವಾಗಿರುತ್ತವೆ.
ಚಿತ್ರಕೃಪೆ: Wyrnilla
ಏಳು ಸಹೋದರಿಯರೊಡನೆ ಪ್ರವಾಸ:
ಮಣಿಪುರ : ಏಳು ಸಹೋದರಿಯರ ಪೈಕಿ ಮಣಿಪುರ ರಾಜ್ಯವೂ ಒಂದು. ತಡೆಯಿಲ್ಲದ ಆಸಕ್ತಿಭರಿತ ಪಯಣಿಗರಿಗೆ ಮಣಿಪುರ್ ಒಂದು ಅಚ್ಚರಿಗಳನ್ನು ಹೊತ್ತು ನಿಂತ ನೈಸರ್ಗಿಕ ಖಜಾನೆಯೆ ಹೌದು. ಭಾರತದ ಈಶಾನ್ಯ ಭಾಗದಲ್ಲಿ ನೆಲೆಸಿರುವ ಈ ರಾಜ್ಯವು ಹಸಿರುಮಯ ಪ್ರಕೃತಿಯ ಮಧ್ಯೆ ಆದರ್ಶಪ್ರಾಯ ವಿಹಾರಿ ತಾಣವಾದ ಲೊಕ್ತಕ್ ಕೆರೆ, ಹಿತಕರವಾದ ವಾತಾವರಣ, ಮೈಮನ ಪುಳಕಿತಗೊಳಿಸುವ ಶಿರೂಯಿ ಲಿಲಿ ಹೂಗಿಡಗಳು, ರೋಮಾಂಚನಗೊಳಿಸುವ ಸಾಂಗೈ ಜಿಂಕೆಗಳು ಹೀಗೆ ಅನೇಕ ವಿಸ್ಮಯಗಳನ್ನು ಪ್ರವಾಸಿಗರ ಮುಂದೆ ತೆರೆದಿಡುತ್ತಾ ಹೋಗುತ್ತದೆ. ಮಣಿಪುರ ಹಾಗೂ ನಾಗಾಲ್ಯಾಂಡಿನ ಗಡಿಯ ಬಳಿಯಿರುವ ಸುಂದರ ಜುಕೊ ಕಣಿವೆ.
ಚಿತ್ರಕೃಪೆ: Mongyamba
ಏಳು ಸಹೋದರಿಯರೊಡನೆ ಪ್ರವಾಸ:
ಮಣಿಪುರ್ ರಾಜ್ಯವು ತನ್ನ ಉತ್ತರ, ದಕ್ಷಿಣ, ಪೂರ್ವ ಹಾಗು ಪಶ್ಚಿಮಗಳಲ್ಲಿ ಕ್ರಮವಾಗಿ ನಾಗಾಲ್ಯಾಂಡ್, ಮಿಜೋರಾಮ್, ಬರ್ಮಾ ಹಾಗು ಅಸ್ಸಾಂಗಳಿಂದ ಸುತ್ತುವರೆದಿದೆ. ಮಣಿಪುರದ ರಾಜಧಾನಿ ಇಂಫಾಲ್ ತನ್ನಲ್ಲಿರುವ ವನ್ಯಜೀವಿ ಹಾಗು ಪ್ರಕೃತಿ ಸೊಬಗಿಗೆ ಹೆಸರುವಾಸಿಯಾದಂತಹ ಪ್ರಮುಖ ತಾಣ. ರೋಚಕದ ಸಂಗತಿಯೆಂದರೆ ಪೊಲೊ ಆಟವು ಹುಟ್ಟಿದ್ದು ಇಲ್ಲೆ! ಇಲ್ಲಿ ಪುರಾತನ ಇತಿಹಾಸವಿರುವ ಅನೇಕ ಸ್ಮಾರಕಗಳು ಮತ್ತು ದೇವಾಲಯಗಳನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Nick Irvine-Fortescue
ಏಳು ಸಹೋದರಿಯರೊಡನೆ ಪ್ರವಾಸ:
ಇಲ್ಲಿ ಭೇಟಿ ನೀಡಬಹುದಾದ ಕೆಲವು ಪ್ರಮುಖ ಆಕರ್ಷಣೆಗಳೆಂದರೆ, ಶ್ರೀ ಗೋವಿಂದಾಜಿ ದೇವಾಲಯ, ಕಾಂಗ್ಲಾ ಅರಮನೆ, ಯುದ್ಧಭೂಮಿಗಳು, ಮಹಿಳೆಯರಿಂದಲೆ ನಡೆಸಲ್ಪಡುವ ಇಮಾ ಕೈಥೇಲ್ ಮಾರುಕಟ್ಟೆ, ಇಂಫಾಲ್ ಕಣಿವೆ ಮತ್ತುಕೆಲವು ಆಕರ್ಷಕ ಉದ್ಯಾನಗಳು. ಮಣಿಪುರದ ರಾಜಧಾನಿ ಇಂಫಾಲ್ ನಗರದಲ್ಲಿರುವ ಇಮಾ ಕೈಥೇಲ್ ಮಾರುಕಟ್ಟೆ. ಇದರ ವಿಶೇಷವೆಂದರೆ ಇಲ್ಲಿ ಕೇವಲ ಮಹಿಳಾ ವ್ಯಾಪಾರಿಗಳು ಮಾತ್ರ ವ್ಯಾಪಾರ ನಡೆಸುತ್ತಾರೆ. ಅಕ್ಷರಶಃ ಅನುವಾದಿಸಿದಾಗ ಅಮ್ಮ ಮಾರುಕಟ್ಟೆ ಎಂದಾಗುತ್ತದೆ.
ಚಿತ್ರಕೃಪೆ: PP Yoonus
ಏಳು ಸಹೋದರಿಯರೊಡನೆ ಪ್ರವಾಸ:
ಚಾಂಡೇಲ್ ಪಟ್ಟಣವು ಪಕ್ಕದ ಮಯನ್ಮಾರ್ ದೇಶಕ್ಕೆ ಹೆಬ್ಬಾಗಿಲಿನಂತಿದ್ದರೂ ಮಣಿಪುರ ಪ್ರವಾಸೋದ್ಯಮದ ಒಂದು ಅವಿಭಾಜ್ಯ ಅಂಗವಾಗಿದೆ. ಜೀವ ವೈವಿಧ್ಯತೆ ಹಾಗು ಪ್ರಕೃತಿ ಸಂಪತ್ತಿಗೆ ಚಾಂಡೇಲ್ ಹಾಗು ತಮೆಂಗ್ಲಾಂಗ್ ಎರಡು ಅದ್ಭುತ ತಾಣಗಳಾಗಿವೆ. ಚಾಂಡೇಲ್ ನ ಮೊರೆಹ್ ನಗರವು ಮಣಿಪುರದ ವಾಣಿಜ್ಯ ತಾಣವೆಂದರೆ ತಪ್ಪಾಗಲಾರದು. ತಮೆಂಗ್ಲಾಂಗ್ ನಲ್ಲಿ ಆಚರಿಸಲಾಗುವ ಕಿತ್ತಳೆ ಹಣ್ಣಿನ ಉತ್ಸವವಂತೂ ಸುತ್ತಮುತ್ತಲಿನ ಪ್ರದೇಶಗಳ ಅನೇಕ ಜನರನ್ನು ಚುಂಬಕದಂತೆ ಸೆಳೆಯುತ್ತದೆ. ತಮೆಂಗ್ಲಾಂಗ್ ನ ಸುಂದರ ಪರಿಸರ.
ಚಿತ್ರಕೃಪೆ: Dangmei
ಏಳು ಸಹೋದರಿಯರೊಡನೆ ಪ್ರವಾಸ:
ಮಣಿಪುರದ ಮತ್ತೊಂದು ಜಿಲ್ಲೆಯಾದ ಸೇನಾಪತಿಯು ತನ್ನೊಡಲಲ್ಲಿ ವಿಸ್ಮಯಭರಿತ ಆಕರ್ಷಣೆಗಳನ್ನು ಹೊತ್ತ ಅನೇಕ ಹಳ್ಳಿಗಳನ್ನು ಹುದುಗಿಸಿಟ್ಟುಕೊಂಡಿದೆ. ಐತಿಹಾಸಿಕವಾಗಿ ಮರಮ್ ಖುಲ್ಲೇನ್, ಮಾಖೇಲ್ ಮತ್ತು ಯಾಂಗ್ಖುಲ್ಲೇನ್ ಪ್ರಮುಖವಾಗಿದ್ದರೆ, ಮಾವೊ ಮಣಿಪುರ ರಾಜ್ಯದ ಹೆಬ್ಬಾಗಿಲಾಗಿಯೂ ಮತ್ತು ಪುರುಲ್ ಟೌಟೌ(ಮಣಿಪುರ ರಾಜ್ಯದ ಒಂದು ಜನಪ್ರಿಯ ಆಟ) ಕ್ರೀಡೆಯ ತವರಾಗಿಯೂ ಪ್ರಸಿದ್ಧವಾಗಿವೆ.
ಚಿತ್ರಕೃಪೆ: Houruoha
ಏಳು ಸಹೋದರಿಯರೊಡನೆ ಪ್ರವಾಸ:
ಮಣಿಪುರದ ಬಿಷ್ಣುಪುರಿನಲ್ಲಿರುವ ಲೋಕ್ತಕ್ ಕೆರೆಯು ಇಡಿ ಪ್ರಪಂಚದಲ್ಲೆ ಕಾಣಬಹುದಾದ ಏಕೈಕ 'ಫ್ಲೋಟಿಂಗ್ ಲೇಕ್' ಅಥವಾ ತೇಲಾಡುವ ಕೆರೆಯಾಗಿದ್ದು ಪ್ರವಾಸಿ ವಲಯದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಮಣ್ಣು ಹಾಗು ಇತರೆ ಸಸ್ಯರಾಶಿಗಳನ್ನು ಹೊತ್ತ ದಿಬ್ಬಗಳು ತೇಲಾಡುತ್ತಿರುವ ಕೆರೆಯನ್ನು 'ಫ್ಲೋಟಿಂಗ್ ಲೇಕ್' ಎಂದು ಕರೆಯಲಾಗುತ್ತದೆ. ಈ ಕೆರೆಯಲ್ಲಿ ಕಣ್ಡುಬರುವ ಸೆಂದ್ರಾ ದ್ವೀಪವು ಪಿಕ್ನಿಕ್ ಗೆ ಹೇಳಿ ಮಾಡಿಸಿದ ಸ್ಥಳ. ಈ ಕೆರೆಯ ಅನತಿ ದೂರದಲ್ಲೆ ಕೈಬುಲ್ ಲಮ್ಜಾವ್ ರಾಷ್ಟ್ರೀಯ ಉದ್ಯಾನವನ್ನು ಕಾಣಬಹುದಾಗಿದೆ. ಈ ಉದ್ಯಾನವು ಅಳಿವಿನಂಚಿನಲ್ಲಿರುವ ಸಾಂಗೈ ಜಿಂಕೆಗಳ ನೆಲೆಯಾಗಿ ಹೆಸರುವಾಸಿಯಾಗಿದೆ.
ಚಿತ್ರಕೃಪೆ: AmyNorth
ಏಳು ಸಹೋದರಿಯರೊಡನೆ ಪ್ರವಾಸ:
ಮಿಜೋರಾಂ : ಪ್ರಕೃತಿಯ ಮಡಿಲಲ್ಲಿ ದಿನಗಳನ್ನು ಕಳೆಯ ಬಯಸುವವರಿಗಾಗಿ ಮಿಜೋರಾಂ ಪ್ರವಾಸೋದ್ಯಮ ಸಾಕಷ್ಟು ಒದಗಿಸುತ್ತದೆ. ಇಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳು ಬಿದಿರಿನ ವನಗಳು, ಭೋರ್ಗರೆಯುವ ಜಲಪಾತಗಳು, ಸುಂದರವಾದ ಭತ್ತದ ಗದ್ದೆಗಳು ಪ್ರಕೃತಿಯ ಕೆಲವು ರಮಣೀಯ ದೃಶ್ಯಗಳಾಗಿವೆ. ಚಿಂಪ್ಟೂಯಿಪುಯಿ ಅಥವಾ ಕಲಾದನ್, ರಾಜ್ಯದ ಅತೀ ದೊಡ್ಡ ನದಿಯಾಗಿದೆ.
ಚಿತ್ರಕೃಪೆ: Joe Fanai
ಏಳು ಸಹೋದರಿಯರೊಡನೆ ಪ್ರವಾಸ:
ಬೆಟ್ಟಗುಡ್ಡಗಳು, ತುಂಬಿ ಹರಿಯುವ ನದಿಗಳು, ಹಸಿರು ಕಣಿವೆಗಳು ಈಶಾನ್ಯ ಭಾರತದ ಸಾಮಾನ್ಯ ಲಕ್ಷಣಗಳಾಗಿವೆ. ಈಶಾನ್ಯ ಭಾರತದ ಏಳು ರಾಜ್ಯಗಳಲ್ಲಿ ಒಂದಾಗಿರುವ ಮಿಜೋರಾಂ ಬೆಟ್ಟಗುಡ್ಡಗಳಿಂದ ಕೂಡಿದ ರಾಜ್ಯವಾಗಿದೆ. ಮಿಜೋ ಎಂದರೆ ಬೆಟ್ಟಗಳ ಮನುಷ್ಯ ಎಂದರ್ಥ ಹಾಗೂ ರಾಂ ಎಂದರೆ ಭೂಮಿ ಎಂದರ್ಥ. ಈ ಹಿಂದೆ ಇದೊಂದು ಕೇಂದ್ರಾಡಳಿತ ಪ್ರದೇಶವಾಗಿತ್ತು ಆದರೆ 1986 ರಲ್ಲಿ ಒಂದು ರಾಜ್ಯವಾಗಿ ಪರಿವರ್ತನೆಯಾಯಿತು. ಇದನ್ನು ಕೊಲೋಡೈನ್ ಕಾಸಲ್ ಎಂದು ಕರೆಯಲಾಗುತ್ತದೆ.
ಚಿತ್ರಕೃಪೆ: Jacek Karczmarczyk
ಏಳು ಸಹೋದರಿಯರೊಡನೆ ಪ್ರವಾಸ:
ಮಿಜೋಗಳ ಅಥವಾ ಮಿಜ಼ೋರಾಂ ಜನರ ಬಣ್ಣ ಬಣ್ಣದ ಮತ್ತು ಸಾಂಪ್ರದಾಯಿಕ ಉಡುಗೆಗಳು ಬಹಳ ಸುಂದರವಾಗಿದ್ದು ಪ್ರವಾಸಿಗಳ ಗಮನ ಸೆಳೆಯುತ್ತವೆ. ಇಲ್ಲಿ ವಾಸಿಸುತ್ತಿರುವ ಮಿಜೋ ಜನರು ಸುಮಾರು 300 ವರ್ಷಗಳ ಹಿಂದೆ ಬಂದು ಇಲ್ಲಿ ನೆಲೆಸಿದರು ಎಂದು ಅಂದಾಜಿಸಲಾಗಿದೆ. ಅವರು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಕಟ್ಟಾ ಅನುಯಾಯಿಗಳಾಗಿದ್ದಾರೆ. ಮಿಜೋರಾಂ ನ ಜನರು ಬಹಳ ಸರಳ ಮತ್ತು ಸುಂದರವಾದ ಜೀವನವನ್ನು ನಡೆಸುತ್ತಾರೆ.
ಚಿತ್ರಕೃಪೆ: Ezralalsim10
ಏಳು ಸಹೋದರಿಯರೊಡನೆ ಪ್ರವಾಸ:
ವರ್ಷಾದ್ಯಂತ ಇಲ್ಲಿನ ಜನರು ಅನೇಕ ಹಬ್ಬಗಳನ್ನು ಆಚರಿಸುತ್ತಾರೆ. ಲುಷೆಯಿ, ಮಾರಾ, ಲಾಯಿ ಇತ್ಯಾದಿ ಇಲ್ಲಿನ ಹಬ್ಬಗಳಾಗಿವೆ. ಬುಡಕಟ್ಟು ಜನರ ಹಬ್ಬಗಳು ಇಲ್ಲಿನ ಪ್ರವಾಸೋದ್ಯಮದ ಪ್ರಮುಖ ಅಂಗವಾಗಿದೆ. ವಸಂತ ಋತುವಿನ ಚಪ್ಚೂರ್ ಕುಟ್ ಎಂಬ ಹಬ್ಬ ಬಹಳ ಪ್ರಸಿದ್ಧವಾಗಿದೆ. ಪ್ರಸಿದ್ಧ ಬಿದಿರಿನ ನೃತ್ಯ ಅಥವಾ ಚೆರಾವ್ ಇಲ್ಲಿನ ಜನರು ಬಹಳ ಸಡಗರದಿಂದ ಆಚರಿಸುವ ಹಬ್ಬವಾಗಿದೆ. ಇನ್ನೊಂದು ಸಾಂಪ್ರದಾಯಿಕ ನೃತ್ಯವಾದ ಖುವಾಲ್ ವಸಂತ ಋತುವನ್ನು ಸ್ವಾಗತಿಸಲು ಮಾಡುವ ನೃತ್ಯವಾಗಿದೆ.
ಚಿತ್ರಕೃಪೆ: Bogman
ಏಳು ಸಹೋದರಿಯರೊಡನೆ ಪ್ರವಾಸ:
ರೈಕ್ ಬೆಟ್ಟದಲ್ಲಿ ನಡೆಯುವ ಅಂಥೂರಿಯಂ ಹಬ್ಬ ಇಲ್ಲಿನ ಜನರ ಪ್ರಮುಖ ಉತ್ಸವ ಜೊತೆಗೆ ಪ್ರವಾಸಿಗರ ಆಕರ್ಷಣೆಯೆ ಕೇಂದ್ರ ಬಿಂದುವೂ ಹೌದು. ಇದು ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ ನಡೆಯುತ್ತದೆ. ಹಾಗೂ ಅಂಥೂರಿಯಂ ನ ವಿಶೇಷತೆಯನ್ನು ಸಾರುತ್ತದೆ. ಮೂಲತಃ ಅಂಥೂರಿಯಂ ಒಂದು ಬಗೆಯ ವಿಶಿಷ್ಟ ಹೂವಾಗಿದ್ದು ಇಲ್ಲಿನ ಬಹುತೇಕ ಮಹಿಳೆಯರು ಈ ಹೂವಿನ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ ಇಲ್ಲಿ ಬೆಳೆಯಲಾಗುವ ಈ ಹೂವನ್ನು ಹೊರದೇಶಗಳಿಗೂ ರಫ್ತು ಮಾಡಲಾಗುತ್ತದೆ.
ಚಿತ್ರಕೃಪೆ: י.ש.
ಏಳು ಸಹೋದರಿಯರೊಡನೆ ಪ್ರವಾಸ:
ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ಪಾಲಾ ಸರೋವರ, ಅತೀ ದೊಡ್ಡ ಸರೋವರ ಮತ್ತು ತಮ್ ದಿಲ್ ಅಥವಾ ಲೇಕ್ ಆಫ್ ಮಸ್ಟರ್ಡ್ ಪ್ಲಾಂಟ್ ಇಲ್ಲಿನ ಎರಡು ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ರಾಜ್ಯದ ರಾಜಧಾನಿಯೂ ಆಗಿರುವ ಐಝ್ವಾಲ್ ಪ್ರಮುಖ ಪ್ರವಾಸಿ ತಾಣವು ಹೌದು.
ಚಿತ್ರಕೃಪೆ: Bogman
ಏಳು ಸಹೋದರಿಯರೊಡನೆ ಪ್ರವಾಸ:
ವಾಂಟಾವ್ಂಗ್ ಖಾಥ್ಲಾ ಜಲಪಾತ, ಡಾಂಪಾ ಅಭಯಾರಣ್ಯ ಖಾಂಗ್ಲುಂಗ್ ಅಭಯಾರಣ್ಯ ದಂತಹ ಹಲವು ಅಭಯಾರಣ್ಯಗಳೂ ಇಲ್ಲಿವೆ. ಚಾರಣಿಗರ ಪಾಲಿಗೆ ಮಿಜೋರಾಂ ಅಂತೂ ಸ್ವರ್ಗವಿದ್ದಂತೆ. ಇಲ್ಲಿನ ಫಾಂಗುಫಿ ಬೆಟ್ಟಗಳು ಚಾರಣಿಗರಿಗೆ ಹೆಚ್ಚು ಇಷ್ಟವಾಗುವ ಬೆಟ್ಟವಾಗಿದೆ. ಪಾರಾ ಗ್ಲೈಡಿಂಗ್ ಇಲ್ಲಿನ ಪ್ರಸಿದ್ಧ ಸಾಹಸಿ ಕ್ರೀಡೆಯಾಗಿದೆ. ಇಲ್ಲಿ ಪಾರಾ ಗ್ಲೈಡಿಂಗ್ ಶಾಲೆಯೊಂದಿದ್ದು ಇದು ತರಬೇತಿ ಮತ್ತು ಪ್ರವಾಸಿ ಇಲಾಖೆಯ ಸಹಯೋಗದೊಂದಿಗೆ ಪಾರಾ ಗ್ಲೈಡಿಂಗ್ ಉತ್ಸವವನ್ನು ಆಯೋಜಿಸುತ್ತದೆ.
ಚಿತ್ರಕೃಪೆ: Lpachuau
ಏಳು ಸಹೋದರಿಯರೊಡನೆ ಪ್ರವಾಸ:
ತ್ರಿಪುರಾ : ಭಾರತ ದೇಶದ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅತ್ಯಂತ ಉತ್ಕೃಷ್ಟ ರಾಜ್ಯಗಳಲ್ಲಿ ಒಂದು - ತ್ರಿಪುರಾ. ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರು ಕಣಿವೆ ಮತ್ತು ಬೆಟ್ಟಗುಡ್ಡಗಳಿಂದಾಗಿ ತ್ರಿಪುರಾ ರಾಜ್ಯ ದೇಶದ ಪ್ರಮುಖ ಪ್ರವಾಸೋದ್ಯಮ ಸ್ಥಳಗಳಲ್ಲೊಂದು. ದೇಶದ ಮೂರನೇ ಅತಿ ಚಿಕ್ಕರಾಜ್ಯವಾಗಿರುವ ತ್ರಿಪುರಾ, ಈಶಾನ್ಯ ಭಾರತ ಮತ್ತು ಬಾಂಗ್ಲಾ ದೇಶದ ನಡುವಿನ ಪುಟ್ಟ ರಾಜ್ಯ.
ಚಿತ್ರಕೃಪೆ: Soman
ಏಳು ಸಹೋದರಿಯರೊಡನೆ ಪ್ರವಾಸ:
ತ್ರಿಪುರಾ ಹತ್ತೊಂಬತ್ತು ವಿವಿಧ ಸಮುದಾಯಗಳು ವಾಸವಾಗಿರುವ ಸುಂದರ ಮಿಶ್ರಣದಂತಿರುವ ರಾಜ್ಯ, ಬೆಂಗಾಲಿ ಬುಡಕಟ್ಟೇತರ ಸಮುದಾಯವನ್ನೂ ಹೊಂದಿರುವ ರಾಜ್ಯ. ತ್ರಿಪುರಾ ಪ್ರವಾಸೋದ್ಯಮ ಕುತೂಹಲಕಾರಿ ಚರಿತ್ರೆ ಹೊಂದಿದ್ದು, ವಿಫುಲ ವೈವಿಧ್ಯತೆಯನ್ನು ಹೊಂದಿದೆ.
ಚಿತ್ರಕೃಪೆ: Borok
ಏಳು ಸಹೋದರಿಯರೊಡನೆ ಪ್ರವಾಸ:
ತ್ರಿಪುರಾ ಈಶಾನ್ಯ ಭಾರತದ ಏಳು ಉನ್ನತ ರಾಜ್ಯಗಳಲ್ಲೊಂದು, ಅಲ್ಲದೇ 'ಏಳು ಸಹೋದರಿ'ಯರು ಎಂದೂ ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಪರ್ವತ ಶ್ರೇಣಿಗಳು, ಬೆಟ್ಟಗುಡ್ಡಗಳು, ಬಯಲುಪ್ರದೇಶಗಳ ಜೊತೆ ಕಿರಿದಾದ ಕಣಿವೆಗಳನ್ನು ಹೊಂದಿದೆ. ರಾಜ್ಯದ ಪೂರ್ವದ ಭಾಗದಲ್ಲಿ ಜಾಮಪುಯಿ ಪರ್ವತ ಶ್ರೇಣಿ, ಪಶ್ಚಿಮಕ್ಕೆ ಉನಕೋಟಿ - ಶಕಂತಲಾಂಗ್, ಲೋಂಗಾತ್ರೋಯಿ, ಅಥರಾಮುರ - ಕಾಲಜಾರಿ ಮತ್ತು ಬರ್ಮಾಪುರ - ಡಿಯೋಟಾಮುರವಿದೆ.
ಚಿತ್ರಕೃಪೆ: Shahadat Rahman Shemul
ಏಳು ಸಹೋದರಿಯರೊಡನೆ ಪ್ರವಾಸ:
ಹಬ್ಬಹರಿದಿನಗಳನ್ನು ವೈಭವಾಗಿ ಆಚರಿಸುವುದರ ಜೊತೆಗೆ, ತ್ರಿಪುರಾ ಪ್ರವಾಸೋದ್ಯಮ ಕಲಾತ್ಮಕ ನೃತ್ಯ, ಸಂಗೀತಕ್ಕೂ ಮಾನ್ಯತೆ ನೀಡುತ್ತದೆ. ವಿವಿಧ ಬುಡಕಟ್ಟು ಜನಾಂಗದವರು ತಮ್ಮದೇ ಆದ ನೃತ್ಯ ಮತ್ತು ಸಂಗೀತ ಪದ್ದತಿಯನ್ನು ಹೊಂದಿದ್ದಾರೆ. ಗೌರಿ ಪೂಜೆಯ ಸಮಯದಲ್ಲಿನ ಗೋರಿಯಾ ನೃತ್ಯವನ್ನು ತ್ರಿಪುರಿ ಮತ್ತು ಜಮಾತೀಯಾ ಜನರು ಆಡುತ್ತಾರೆ. ಇದೇ ರೀತಿ ಹೊಜ್ಜಗಿರಿ ನೃತ್ಯವನ್ನು ನೋಡುವುದೇ ಒಂದು ಆನಂದ, ರಿಯಾಂಗ್ ಸಮುದಾಯದ ಸಣ್ಣ ಹುಡುಗಿಯರು ಮಣ್ಣಿನ ಕಣದಲ್ಲಿ ಆಯ ತಪ್ಪದೇ ಡ್ಯಾನ್ಸ್ ಮಾಡುತ್ತಾರೆ.
ಚಿತ್ರಕೃಪೆ: Akkkanksha
ಏಳು ಸಹೋದರಿಯರೊಡನೆ ಪ್ರವಾಸ:
ತ್ರಿಪುರಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕಣ್ಣಿಗೆ ಹಬ್ಬವಾಗಲಿದೆ. ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ತುಂಬಾ ಪ್ರವಾಸಿ ಸ್ಥಳಗಳಿವೆ. ಐತಿಹಾಸಿಕ ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿರುವ ದೇವಾಲಯಗಳು ಇಲ್ಲಿವೆ. ಉದಾಹರಣೆಗೆ ಕಾಲಿ ಬಾರಿ ದೇವಾಲಯ, ಜಗನ್ನಾಥ ದೇವಾಲಯ, ಉಮಾಮಹೇಶ್ವರಿ ದೇವಾಲಯ ಇತ್ಯಾದಿ.
ಚಿತ್ರಕೃಪೆ: Scorpian ad
ಏಳು ಸಹೋದರಿಯರೊಡನೆ ಪ್ರವಾಸ:
ತ್ರಿಪುರಾದಲ್ಲಿ ಪೂರ್ಣಾಂಕದ, ಕುತೂಹಲ ಹುಟ್ಟಿಸುವ ಸ್ಥಳಗಳಿವೆ. ಅವು ಯಾವುದೆಂದರೆ ಉಜ್ಜಯಂತ ಅರಮನೆ, ತ್ರಿಪುರಾ ರಾಜ್ಯ ಮ್ಯೂಸಿಯಂ, ಸುಕಂತ ಅಕಾಡೆಮಿ, ಲಾಂಗ್ ಥರಾಯಿ ಮಂದಿರ, ಮನಿಪುರಿ ರಾಸ್ ಲೀಲಾ ಮೇಳ, ಉನಕೋಟಿ, ಲಕ್ಷ್ಮಿ ನಾರಾಯಣ ದೇವಾಲಯ, ಪುರಾನೋ ರಾಜ್ಬರಿ ಮತ್ತು ನಜ್ರುಲ್ ಗ್ರಂಥಾಗರ್ ಮತ್ತು ಸದಾ ಮೋಡದಿಂದ ತುಂಬಿರುವ ಚಿರತೆ ಪಾರ್ಕ್ ಮತ್ತು ರಾಜ್ಬರಿ ಪಾರ್ಕ್. ತ್ರಿಪುರಾ ರಾಜ್ಯ ವಸ್ತು ಸಂಗ್ರಹಾಲಯ.
ಚಿತ್ರಕೃಪೆ: AmyNorth
ಏಳು ಸಹೋದರಿಯರೊಡನೆ ಪ್ರವಾಸ:
ಮೇಘಾಲಯ : 1972 ರಲ್ಲಿ ರಚಿಸಲ್ಪಟ್ಟ ಮೇಘಾಲಯ ರಾಜ್ಯವು ಖಾಸಿ, ಜಯನ್ತಿಯಾ ಮತ್ತು ಗಾರೊ ಬುಡಕಟ್ಟು ಜನಾಂಗದವರ ಪ್ರಮುಖ ನೆಲೆಯಾಗಿದೆ. ಇಳಿಜಾರಿನ ಸ್ತರಗಳಲ್ಲಿ ನೆಲೆಗೊಂಡಿರುವ ಇಲ್ಲಿನ ಬೆಟ್ಟ ಗುಡ್ಡಗಳು ಹಣ್ಣು ಹಂಪಲಗಳು ಹಾಗು ಅಡಿಕೆಗಳನ್ನು ಬೆಳೆಯಲು ಪ್ರಶಸ್ತವಾಗಿದೆ. ಮೆಘಾಲಯದ ರಾಜಧಾನಿ ಶಿಲ್ಲಾಂಗ್ ಆಗಿದ್ದು, ಇದು ಭಾರತದ ಜನಸಂಖ್ಯೆಯ ದೃಷ್ಟಿಯಿಂದ 23 ನೇಯ ದೊಡ್ಡ ರಾಜ್ಯವಾಗಿದೆ.
ಚಿತ್ರಕೃಪೆ: AmyNorth
ಏಳು ಸಹೋದರಿಯರೊಡನೆ ಪ್ರವಾಸ:
ಉತ್ತರದಲ್ಲಿ ಅಸ್ಸಾಂ ಹಾಗು ದಕ್ಷಿಣದಲ್ಲಿ ಬಾಂಗ್ಲಾ ದೇಶದಿಂದ ಮೇಘಾಲಯವು ಸುತ್ತುವರೆದಿದೆ. ರಾಜ್ಯದ ಒಂದರ ಮೂರನೆಯ ಭಾಗದಷ್ಟು ಪ್ರದೇಶವು ಕಾಡುಗಳಿಂದ ಆವರಿಸಿದ್ದು ಹೆಚ್ಚಿನ ಮಳೆಯನ್ನು ಈ ರಾಜ್ಯವು ಪಡೆಯುತ್ತದೆ. ಮೆಘಾಲಯದ ಕಾಡುಗಳು ತನ್ನಲ್ಲಿರುವ ವೈವಿಧ್ಯಮಯ ಪ್ರಾಣಿ ಪಕ್ಷಿಗಳಿಂದಾಗಿ ಹೆಸರುವಾಸಿಯಾಗಿದೆ. ಈ ಕಾಡುಗಳಲ್ಲಿರುವ ಅಗಾಧವಾದ ಸಸ್ಯ ಹಾಗು ಪ್ರಾಣಿ ಸಂಪತ್ತು ಒಂದು ವಿಶಿಷ್ಟವಾದ ಅನುಭವವನ್ನು ಪ್ರವಾಸಿಗರ ಮನದಲ್ಲಿ ಮೂಡಿಸುತ್ತದೆ.
ಚಿತ್ರಕೃಪೆ: AmyNorth
ಏಳು ಸಹೋದರಿಯರೊಡನೆ ಪ್ರವಾಸ:
ಮೇಘಾಲಯವು ಭಾರತದ ಏಳು ಸಹೋದರಿ ರಾಜ್ಯಗಳಲ್ಲೊಂದಾಗಿದೆ. ಇಲ್ಲಿ ಸಾಕಷ್ಟು ನದಿ ಕೆರೆಗಳನ್ನು ಕಾಣಬಹುದು. ಗಾರೊ ಬೆಟ್ಟಗಳ ಶ್ರೇಣಿಯಲ್ಲಿ ಹರಿಯುವ ಪ್ರಮುಖ ನದಿಗಳೆಂದರೆ ದರಿಂಗ್, ಸಂದಾ, ಬಂದ್ರಾ, ಭೋಗಾಯ್, ದರೇಂಗ್, ಸಿಮ್ಸಂಗ್, ನಿತೈ ಮತ್ತು ಭುಪೈ. ಮೇಘಾಲಯದಲ್ಲಿರುವ ಮಾವ್ ಫ್ಲಾಂಗ್ ಜಲಾಶಯ. ವಿದ್ಯುತ್ ಉತ್ಪಾದನೆಯ ಜೊತೆಗೆ ರಾಜಧಾನಿ ನಗರವಾದ ಶಿಲ್ಲಾಂಗ್ ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಉಪಯೋಗಿಸಲ್ಪಡುತ್ತದೆ.
ಚಿತ್ರಕೃಪೆ: AmyNorth
ಏಳು ಸಹೋದರಿಯರೊಡನೆ ಪ್ರವಾಸ:
ಇನ್ನುಳಿದಂತೆ ಕೇಮ್ದ್ರೀಯ ಹಾಗು ಪೂರ್ವ ಪ್ರಸ್ತಭೂಮಿಗಳಲ್ಲಿ ಹರಿದಿರುವ ನದಿಗಳೆಂದರೆ ಉಮ್ಖ್ರಿ, ದಿಗಾರು, ಉಮಿಯಮ್ ಅಥವಾ ಬಾರಾಪಾನಿ, ಮಿಂಗಾತ್ ಮತ್ತು ಮೀಟುಡು. ದಕ್ಷಿಣದ ಖಾಸಿ ಪರ್ವತ ಪ್ರದೇಶದಲ್ಲಿ ಈ ನದಿಗಳು ಹಲವಾರು ಸುಂದರ ಕೆರೆಗಳು ಹಾಗು ಜಲಪಾತಗಳನ್ನು ನಿರ್ಮಿಸಿವೆ. ಬಾರಾ ಪಾನಿ ನದಿಯ ವಿಹಂಗಮ ನೋಟ.
ಚಿತ್ರಕೃಪೆ: Masrur Ashraf
ಏಳು ಸಹೋದರಿಯರೊಡನೆ ಪ್ರವಾಸ:
ಮೇಘಾಲಯದ ಜನರು ಸರಳ ಹಾಗು ಸಜ್ಜನ ಸ್ವಭಾವದವರು. ಆದರಾತಿಥ್ಯಕ್ಕೆ ಹೆಸರಾದವರು. ಇಲ್ಲಿ ಮುಖ್ಯವಾಗಿ ಖಾಸಿಸ್, ಗರೊ ಮತ್ತು ಜಯನ್ತಿಯಾ ಪಂಗಡದವರು ಕಂಡುಬರುತ್ತಾರೆ. ಇಲ್ಲಿನ ಜನರ ವಿಶಿಷ್ಟತೆಯೆಂದರೆ ಇವರು ಮಾತೃಸಂತತಿಯ ಪದ್ಧತಿ(ಮಹಿಳೆಗೆ ಪ್ರಾಧಾನ್ಯತೆ ನೀಡುವುದು)ಯನ್ನು ಅನುಸರಿಸುತ್ತಿರುವುದು.
ಚಿತ್ರಕೃಪೆ: Bogman
ಏಳು ಸಹೋದರಿಯರೊಡನೆ ಪ್ರವಾಸ:
ಮೇಘಾಲಯದ ಬುಡಕಟ್ಟು ಜನಾಂಗದವರು ಹಲವಾರು ವೈವಿಧ್ಯಮಯ ಉತ್ಸವಗಳನ್ನು ಅತಿ ಸಡಗರದಿಂದ ಆಚರಿಸುತ್ತಾರೆ. ಖಾಸಿ ಜನಾಂಗದ ಪ್ರತಿಯೊಂದು ಉತ್ಸವದಲ್ಲಿ ನೃತ್ಯ ಅಥವಾ ಕುಣಿತವು ಒಂದು ಅವಿಭಾಜ್ಯ ಅಂಗವಾಗಿರುತ್ತದೆ. ನೃತ್ಯವು ಪ್ರತ್ಯೇಕವಾಗಿ ಹಳ್ಳಿಗಳಿಂದ ಅಥವಾ ಹಳ್ಳಿಗಳ ಸಮೂಹದಿಂದ ಆಚರಿಸಲ್ಪಡುತ್ತವೆ.
ಚಿತ್ರಕೃಪೆ: Tymphew
ಏಳು ಸಹೋದರಿಯರೊಡನೆ ಪ್ರವಾಸ:
ಈ ರಾಜ್ಯದ ಹವಾಮಾನವು ಮಧ್ಯಮವಾಗಿದ್ದರೂ ಆರ್ದ್ರತೆಯಿಂದ ಕೂಡಿರುತ್ತದೆ. ಇಲ್ಲಿನ ಗರಿಷ್ಠ ತಾಪಮಾನವು 28 ಡಿಗ್ರಿಯನ್ನು ದಾಟುವುದೆ ಅಪರೂಪ. ಖಾಸ್ ವಲಯದಲ್ಲಿನ ಚಿರಾಪುಂಜಿ ಜಗತ್ತಿನಲ್ಲೆ ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಅಲ್ಲದೆ ಇಲ್ಲಿರುವ ನೊಹ್ಕಾಲಿಖಾಯ್ ಜಲಪಾತ ಮೈ ಜುಮ್ಮೆನ್ನುವಷ್ಟು ಎತ್ತರದಿಂದ ರಮಣೀಯವಾಗಿ ಧುಮುಕುತ್ತದೆ. ಮಾರ್ಚ್ ಹಾಗು ಜುಲೈ ನಡುವಿನ ಅವಧಿಯಲ್ಲಿ ಈ ರಾಜ್ಯಕ್ಕೆ ಭೇಟಿ ನೀಡುವುದು ಸೂಕ್ತ.
ಚಿತ್ರಕೃಪೆ: AmyNorth