Search
  • Follow NativePlanet
Share
» »ಹೊಸಹೊಳಲುವಿನ ಲಕ್ಷ್ಮೀನಾರಾಯಣ ದೇವಾಲಯ!

ಹೊಸಹೊಳಲುವಿನ ಲಕ್ಷ್ಮೀನಾರಾಯಣ ದೇವಾಲಯ!

ಕರ್ನಾಟಕದ ಸಕ್ಕರೆ ನಾಡು ಮಂಡ್ಯದಲ್ಲಿರುವ ಚಿಕ್ಕ ಪಟ್ಟಣವಾದ ಹೊಸಹೊಳಲು ತನ್ನಲ್ಲಿರುವ ಹದಿಮೂರನೇಯ ಶತಮಾನದ ಲಕ್ಷ್ಮಿನಾರಾಯಣ ದೇವಾಲಯದಿಂದಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ

By Mahesh Pallaki

ಇಂದು ತಂತ್ರಜ್ಞಾನ ಅಷ್ಟು ಮುಂದುವರೆದಿದ್ದರೂ, ಒಂದು ಕಟ್ಟಡವನ್ನು ನಿರ್ಮಿಸಲು ವರ್ಷಾನುಟ್ಟಲೆ ಸಮಯ ಹಿಡಿಯುತ್ತದೆ. ಒಮ್ಮೆ ಯೋಚನೆ ಮಾಡಿ ನೋಡಿ, ಪ್ರಾಚೀನ ಕಾಲದಲ್ಲಿ ನಿರ್ಮಿಸಲಾಗಿರುವ ವಾಸ್ತುವಿನ್ಯಾಸವು ಅಷ್ಟೊಂದು ನಿಖರವಾಗಿ ಮತ್ತು ಸಮಾನಾಂತರ ಕೋನಗಳಲ್ಲಿ ಹೇಗೆ ಮೂಡಿ ಬರಲು ಸಾಧ್ಯ ಹಾಗು ಅದನ್ನು ಅಷ್ಟೇ ನಿಖರವಾಗಿ ನಿರ್ಮಿಸಲು ಎಷ್ಟು ಸಮಯ ಹಿಡಿದಿರಬಹುದು?.

ನಿಜವಾಗಲೂ ಅದನ್ನು ನಿರ್ಮಿಸಿದವರ ಕಲಾ ನೈಪುಣ್ಯತೆಗೆ ತಲೆಬಾಗಲೇ ಬೇಕು.ಅವರಿಂದಾಗಿಯೇ ನಮ್ಮ ವಾಸ್ತು ಪರಂಪರೆಯು ಇಷ್ಟು ಶ್ರೀಮಂತವಾಗಿದೆ. ಶತಮಾನಗಳಷ್ಟು ಹಳೆಯದಾದ, ಅಲ್ಲದೆ, ಇನ್ನೂ ನಶಿಸದಂತೆ,ಅಲುಗದಂತೆ ಗಟ್ಟಿಯಾಗಿ ನಿಂತಿರುವಂತಹ ಹಲವಾರು ವಾಸ್ತುರಚನೆಗಳನ್ನು ನಾವು ಭಾರತದ ಉದ್ದಗಲಕ್ಕೂ ನೋಡಬಹುದು.

ಹೊಸಹೊಳಲುವಿನ ಲಕ್ಷ್ಮೀನಾರಾಯಣ ದೇವಾಲಯ!

ಚಿತ್ರಕೃಪೆ: Prometheus55

ಇಂತಹ ಐತಿಹಾಸಿಕ ಕಲಾ ಶ್ರೀಮಂತಿಕೆಯಿಂದ ಕೂಡಿದ ಒಂದು ದೇವಸ್ಥಾನವನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಅದುವೇ ಕರ್ನಾಟಕದ ಮಂಡ್ಯ ಜಿಲ್ಲೆಯ 'ಹೊಸಹೊಳಲು' ಎಂಬ ಸಣ್ಣ ಪಟ್ಟಣದಲ್ಲಿರುವ "ಲಕ್ಷ್ಮೀ ನಾರಾಯಣ ದೇವಸ್ಥಾನ". ಒಂದು ಕಾಲದಲ್ಲಿ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದ ಈ ಪಟ್ಟಣದ ತುಂಬಾ ಹೊಯ್ಸಳ ಶೈಲಿಯ ವಾಸ್ತುಕಲೆಗಳೇ ಕಣ್ಣಿಗೆ ಬೀಳುತ್ತದೆ.

ಅದರಲ್ಲೂ ಲಕ್ಷ್ಮೀ ನಾರಾಯಣ ದೇವಸ್ಥಾನವು ತನ್ನ ಅದ್ಭುತ ವಾಸ್ತುಶೈಲಿಯಿಂದ ಆ ಜಾಗದಲ್ಲಿ ಹೆಸರು ಮಾಡಿದೆ. ಕರ್ನಾಟಕದ ಇತರ ದೇವಸ್ಥಾನಗಳಷ್ಟು ಹೊಸಹೊಳಲಿನ ಈ ಲಕ್ಷ್ಮೀನಾರಾಯಣ ದೇವಸ್ಥಾನವು ಪ್ರಸಿದ್ಧಿಯನ್ನು ಪಡೆದಿಲ್ಲವಾದರೂ, ಇದರ ಸೌಂದರ್ಯವು ಎಂಥಹವರನ್ನೂ ಕೂಡ ಮಂತ್ರ ಮುಗ್ಧರನ್ನಾಗಿಸುತ್ತದೆ.

ಹೊಸಹೊಳಲುವಿನ ಲಕ್ಷ್ಮೀನಾರಾಯಣ ದೇವಾಲಯ!

ಚಿತ್ರಕೃಪೆ: Bikashrd

ಸುಂದರ ಕೆತ್ತನೆಯ ಶಿಲ್ಪಗಳು, ದೇವಸ್ಥಾನದ ಅದ್ಭುತ ಒಳಾಂಗಣ ವಿನ್ಯಾಸ, ಮತ್ತು ಗೋಪುರ ಕಳಶಗಳ ಅತ್ಯಾಕರ್ಷಕ ವಿನ್ಯಾಸಕಳು ಇಲ್ಲಿನ ಮುಖ್ಯ ಆಕರ್ಷಣೆ. ಇದರ ವರ್ಣನೆಯೇ ಇಷ್ಟು ಕೌತುಕತೆಯಿಂದ ಕೂಡಿದೆಯೆಂದರೆ, ನಾವೊಮ್ಮೆ ದೇವಾಲಯದ ಛಾಯಚಿತ್ರಗಳನ್ನು ನೋಡಿದರೆ ಹೇಗನ್ನಿಸಬಹುದು ?
ದೇವಾಲಯದ ಚಿತ್ರಗಳನ್ನೊಮ್ಮೆ ನೋಡಿ ಆನಂದಿಸಿ ಹಾಗೂ ಈ ದೇವಾಲಯದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಿರಿ.

ಲಕ್ಷ್ಮೀ ನಾರಾಯಣ ಮಂದಿರವನ್ನು ಯಾರು ಕಟ್ಟಿದರು ?
ಲಕ್ಷ್ಮೀ ನಾರಾಯಣ ಮಂದಿರವನ್ನು ಕ್ರಿ.ಪೂ.1250ರಲ್ಲಿ ಹೊಯ್ಸಳರ ದೊರೆಯಾಗಿದ್ದ "ವೀರ ಸೋಮೆಶ್ವರ" ಎಂಬಾತನು ಕಟ್ಟಿಸಿದನು.

ಹೊಸಹೊಳಲುವಿನ ಲಕ್ಷ್ಮೀನಾರಾಯಣ ದೇವಾಲಯ!

ಚಿತ್ರಕೃಪೆ: Bikashrd

ಲಕ್ಷ್ಮೀ ನಾರಾಯಣ ಮಂದಿರದ ವಾಸ್ತುವಿನ್ಯಾಸ:

ಈ ದೇವಸ್ಥಾನವು ತ್ರಿಕೂಟ ವಿನ್ಯಾಸ ಮಾದರಿಯಲ್ಲಿದ್ದು. ಇದಕ್ಕೆ ಮೂರು ಗೋಪುರಗಳಿದ್ದು. ಈ ಮೂರು ಗೋಪುರಗಳು ಸೇರಿ ಒಂದು ಮಂದಿರವಾಗಿದೆ.

ದೇವಸ್ಥಾನದ ಮುಖ್ಯ ಗೋಪುರ:

ಲಕ್ಷ್ಮೀ ನಾರಾಯಣ ಮಂದಿರದ ಮೂರು ಗೋಪುರಗಳಲ್ಲಿ ಮಧ್ಯಭಾಗದ ಗೋಪುರವು ಎತ್ತರವಾಗಿದ್ದು. ಇನ್ನುಳಿದ ಎರಡು ಗೋಪುರಗಳು ಸಮತಟ್ಟಾದ ಮೇಲ್ಛಾವಣಿಗಳನ್ನು ಹೊಂದಿದೆ.

ದೇವಾಲಯದ ರಚನೆ

ಈ ದೇವಸ್ಥಾನವು ಜಗಲಿ(ಚೌಕಾಕಾರದ ಕಟ್ಟೆ)ಯಂತಹ ದಿಬ್ಬಗಳ ಮೇಲೆ ನಿರ್ಮಿತವಾಗಿದ್ದು. ಇದು ಹೊಯ್ಸಳ ಶೈಲಿಯ ವಾಸ್ತುಪ್ರಕಾರಗಳಲ್ಲಿ ಕಂಡುಬರುವ ಒಂದು ಮುಖ್ಯ ಲಕ್ಷಣವೂ ಹೌದು.

ಹೊಸಹೊಳಲುವಿನ ಲಕ್ಷ್ಮೀನಾರಾಯಣ ದೇವಾಲಯ!

ಚಿತ್ರಕೃಪೆ: Prometheus55

ದೇವಾಲಯದ ಮುಖ್ಯದೇವರು

ವಿಷ್ಣುವು ಈ ದೇವಾಲಯದ ಆರಾಧ್ಯ ದೈವ. ವಿಷ್ಣುವಿನ ಮತ್ತೊಂದು ಹೆಸರೇ ಲಕ್ಷ್ಮೀ ನಾರಾಯಣ. ಅಂದರೆ ಲಕ್ಷ್ಮಿಯ ಪತಿ ಎಂದರ್ಥ.

ಶಿಲ್ಪಕಲೆಗಳು

ಇದು ವೈಷ್ಣವ ಮಂದಿರವಾಗಿರುವುದರಿಂದ ಇಲ್ಲಿ ವಿಷ್ಣುವಿನ ಕೆತ್ತನೆಗಳನ್ನು ಹೆಚ್ಚು ಕಾಣಬಹುದು.ರಾಮಾಯಣ ಹಾಗೂ ಮಹಾಭಾರತದ ಕೆಲವು ಸನ್ನಿವೇಶಗಳನ್ನೂ ಸಹ ಇಲ್ಲಿನ ಗೋಡೆಗಳ ಮೇಲೆ ಕೆತ್ತಲಾಗಿದೆ.

ವಿಷ್ಣುವಿನ ಅವತಾರಗಳು:

ಇಲ್ಲಿನ ಗೋಪುರಗಳಲ್ಲಿ ವಿಷ್ಣುವಿನ ವಿವಿಧ ಅವತಾರಗಳನ್ನು ನೆನಪಿಸುವ ಕೆತ್ತನೆಗಳನ್ನು ಮಾಡಲಾಗಿದ್ದೆ. ಹೀಗಾಗಿ ವೇಣುಗೋಪಾಲ, ಲಕ್ಷ್ಮೀ ನಾರಾಯಣ, ಲಕ್ಷ್ಮೀನರಸಿಂಹನ ವಿಗ್ರಹಗಳನ್ನು ಗೋಪುರದ ಮಂಟಪಗಳಲ್ಲಿ ಕಾಣಬಹುದು.

ಲಕ್ಷ್ಮೀ ನಾರಾಯಣ ಮಂದಿರವಿರುವ ಸ್ಥಳ

ಇದು ಕರ್ನಾಟಕದ ಮಂಡ್ಯ ಜಿಲ್ಲೆಯ 'ಹೊಸಹೊಳಲು' ಎಂಬ ಸಣ್ಣ ಪಟ್ಟಣದಲ್ಲಿದೆ. ಇದು ಮೈಸೂರಿನಿಂದ 61 ಕಿ.ಮೀ. ಹಾಗು ಬೆಂಗಳೂರಿನಿಂದ 161ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X