Search
  • Follow NativePlanet
Share
» »ಮಹದಾನಂದ ನೀಡುವ ಮಹಾದಾಯಿ!

ಮಹದಾನಂದ ನೀಡುವ ಮಹಾದಾಯಿ!

ಕರ್ನಾಟಕದಲ್ಲಿ ಹುಟ್ಟಿ ಗೋವಾಗೆ ಪ್ರವೇಶಿಸಿ ಅಲ್ಲಿ ಜೀವ ನದಿಯಾಗಿ ಹರಿದು ಕೊನೆಗೆ ಅರಬ್ಬಿ ಸಮುದ್ರ ಸೇರುವ ಮಹಾದಾಯಿ ಅಥವಾ ಮಾಂಡೋವಿ ನದಿಯು ತನ್ನ ಪಥದ ಸುತ್ತಮುತ್ತ ಅಗಾಧ ಪ್ರಕೃತಿ ಸೌಂದರ್ಯ ಹೊಂದಿದೆ

By Vijay

ಸಾಕಷ್ಟು ಜನರಿಗೆ ಇಂದು ಮಹಾದಾಯಿ ಎಂದು ಹೇಳಿದರೆ ಸಾಕು, ಅಯ್ಯೋ ಅದೊಂದು ವಿವಾದವೆಂದೆ ವಿಷಾದಿಸುತ್ತಾರೆ. ವಿವಾದವೇನೊ ಇದೆ ಸರಿ. ಅದು ಕಾಲದ ತೀರ್ಮಾನಕ್ಕೆ ಬಿಡೋಣ. ಆದರೆ ಮಹಾದಾಯಿಯ ಸೌಂದರ್ಯ ಹೇಗಿದೆ ಗೊತ್ತೆ? ಇದು ಹರಿಯುವ ಪಥದ ಸುತ್ತಮುತ್ತಲಿನ ಪ್ರಾಕೃತಿಕ ಸೊಬಗು ಎಷ್ಟು ಅದ್ಭುತವಾಗಿದೆ ಗೊತ್ತೆ?

ನೀವೇನಾದರೂ ಮಹಾದಾಯಿ ನದಿಯ ನದಿ ಪಾತ್ರದ ಭುವಿಯಲ್ಲಿ ವಿಹರಿಸಿದರೆ ಸಾಕು, ನಿಮ್ಮ ಮನವರಳಿ ಬಾಯಲ್ಲಿ ಮಂದಹಾಸ ಮೂಡುವುದರಲ್ಲಿ ಸಂಶಯವಿಲ್ಲ. ಅಂದಹಾಗೆ ಮಹಾದಾಯಿ ನದಿಯನ್ನು ಗೋವಾದಲ್ಲಿ ಮಾಂಡೋವಿ ನದಿ ಎಂದೆ ಕರೆಯುತ್ತಾರೆ. ಗೋವಾದ ಅತಿ ಪ್ರಮುಖ ನದಿಗಳಲ್ಲೊಂದು ಈ ಮಹಾದಾಯಿ ಅಥವಾ ಮಾಂಡೋವಿ ನದಿ.

ಮಹದಾನಂದ ನೀಡುವ ಮಹಾದಾಯಿ!

ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ ಒಡಲಿನಲ್ಲಿ ಸ್ಥಿತವಿರುವ ಭೀಮ್ಗಡ್ ಎಂಬಲ್ಲಿ ಮೂವತ್ತು ವಿವಿಧ ನೀರಿನ ತೊರೆಗಳಿಂದ ರೂಪಗೊಳ್ಳುವ ಮಹಾದಾಯಿ ನದಿಯು ಪಶ್ಚಿಮವಾಹಿನಿಯಾಗಿ ಹರಿಯುತ್ತ ಗೋವಾಗೆ ಪ್ರವೇಶಿಸಿ ನಂತರ ಅಲ್ಲಿಂದ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಮಹದಾನಂದ ನೀಡುವ ಮಹಾದಾಯಿ!

ಗೋವಾದ ಮಾಂಡೋವಿ ಸೇತುವೆ, ಚಿತ್ರಕೃಪೆ: Amol.Gaitonde

ಇದು ತನ್ನ ಒಟ್ಟು ಉದ್ದದಲ್ಲಿ 29 ಕಿ.ಮೀ ಉದ್ದವನ್ನು ಕರ್ನಾಟಕದಲ್ಲಿಯೂ 52 ಕಿ.ಮೀ ಗಳಷ್ಟು ಉದ್ದವನ್ನು ಗೋವಾದಲ್ಲಿಯೂ ಹೊಂದಿದೆ. ಗೋವಾದಲ್ಲಿ ಮಾಂಡೋವಿಯಾಗಿ ಪ್ರವೇಶಿಸುವ ಈ ನದಿಯು ಕೃಷಿ ಹಾಗೂ ಕುಡಿಯುವ ಅವಶ್ಯಕತೆಗಾಗಿ ಬಳಸಲ್ಪಡುತ್ತದೆ. ಇದರ ಮಹತ್ವ ಎಷ್ಟಿದೆ ಎಂದರೆ ಗೋವಾದ ಜೀವ ನದಿಯಾಗಿಯೂ ಮಾಂಡೋವಿಯನ್ನು ಗುರುತಿಸಲಾಗುತ್ತದೆ.

ಮಹದಾನಂದ ನೀಡುವ ಮಹಾದಾಯಿ!

ಮಾಂಡೋವಿಯಲ್ಲಿ ದೋಣಿ ವಿಹಾರ, ಚಿತ್ರಕೃಪೆ: Kalervok

ಇನ್ನೂ ಈ ನದಿಯು ಇತರೆ ಸಾರಿಗೆ ಸೌಕರ್ಯಗಳಿಗೆ ಸಂಚಾರಿ ಮಾಧ್ಯಮವಾಗಿಯೂ ಹಾಗೂ ಪ್ರವಾಸಿ ಆಕರ್ಷಣೆಯಾಗಿಯೂ ಬಳಸಲ್ಪಡುತ್ತದೆ. ಗೋವಾದಲ್ಲಿ ಮಾಂಡೋವಿ ನದಿಯಲ್ಲಿ ದೋಣಿ ವಿಹಾರಗಳ ಸೌಲಭ್ಯಗಳಿರುವುದನ್ನು ಕಾಣಬಹುದು.

ಮಹದಾನಂದ ನೀಡುವ ಮಹಾದಾಯಿ!

ದೂಧ್ ಸಾಗರ, ಚಿತ್ರಕೃಪೆ: Sharat Chandra

ಮಹಾದಾಯಿ ನದಿಯು ಕರ್ನಾಟಕದಲ್ಲಿ ಬೆಳಗಾವಿಯ ಖಾನಾಪುರ ಎಂಬಲ್ಲಿರುವ ಜಾಂಬೋಟಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳ ಮೂಲಕ ಹರಿಯುತ್ತ ಉತ್ತರ ಗೋವಾದಲ್ಲಿ ಪ್ರವೇಶ ಪಡಿಯುತ್ತದೆ. ಮಾಂಡೋವಿ ನದಿಯಿಂದಲೆ ರೂಪಗೊಂಡಿರುವ ದೂಧ್ ಸಾಗರ ಜಲಪಾತ ಉತ್ತರ ಕನ್ನಡದ ಕ್ಯಾಸಲ್ ರಾಕ್ ಎಂಬಲ್ಲಿ ಕಂಡುಬರುತ್ತದೆ.

ಮಹದಾನಂದ ನೀಡುವ ಮಹಾದಾಯಿ!

ಕ್ಯಾಸಲ್ ರಾಕ್, ಚಿತ್ರಕೃಪೆ: Kishrk91

ಕ್ಯಾಸಲ್ ರಾಕ್ ನಿಂದ ಗೋವಾಗೆ ತೆರಳುವ ರೈಲು ಮಾರ್ಗ ಇಲ್ಲಿದ್ದು ಇದರ ಮುಲಕ ಸಾಗುವಾಗ ದೂಧ್ ಸಾಗರ ಜಲಪಾತದ ಅತ್ಯದ್ಭುತ ನೋಟವನ್ನು ರೈಲಿನಿಂದಲೆ ಕಾಣಬಹುದು. ಬಾಲಿವುಡ್ ಯಶಸ್ವಿ ಚಿತ್ರವಾದ ಚೆನ್ನೈ ಎಕ್ಸ್ ಪ್ರೆಸ್ ನ ಹಲವಾರು ಭಾಗಗಳನ್ನು ಈ ರೈಲು ಮಾರ್ಗದಲ್ಲಿಯೆ ಚಿತ್ರೀಕರಿಸಲಾಗಿದೆ ಎಂಬುದು ಗೊತ್ತೆ?

ಪ್ರವಾಸಿಗರನ್ನು ಆಕರ್ಷಿಸುವ ಕರ್ನಾಟಕದ ಸುಂದರ ನದಿಗಳು!

ಇನ್ನುಳಿದಂತೆ ಬೆಳಗಾವಿ ಬಳಿಯ ಜಾಂಬೋಟಿ ಪ್ರದೇಶವು ಅತ್ಯದ್ಭುತ ಪ್ರಾಕೃತಿಕ ಸಂಪತ್ತಿನಿಂದ ಕಂಗೊಳಿಸುತ್ತದೆ. ಇಲ್ಲಿ ಪ್ರಶಾಂತವಾಗಿ ಹರಿಯುವ ಮಹಾದಾಯಿ ನದಿಯು ಮುಂದೆ ವಜ್ರಪೋಹಾ ಅಥವಾ ವರಪೋಹಾ ಎಂಬ ಜಲಪಾತ ಸೃಷ್ಟಿಸುತ್ತದೆ. ಬೆಳಗಾವಿ ನಗರದವಾಸಿಗಳಿಗೆ ವಾರಾಂತ್ಯದ ರಜೆಗಳನ್ನು ಅದ್ಭುತವಾಗಿ ಕಳೆಯುವಲ್ಲಿ ಈ ಪ್ರದೇಶಗಳು ಸಾಕಷ್ಟು ಮಹತ್ತರ ಪಾತ್ರವಹಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X