ನಿಮಗೆ ನೆನಪಿದೆಯೆ...ಚಿಕ್ಕವರಿದ್ದಾಗ ಬಸ್ಸಿನಲ್ಲಿ ಅಪ್ಪ ಅಮ್ಮನೊಂದಿಗೆ ಮತ್ತೊಂದೂರಿಗೆ ಪ್ರಯಾಣಿಸುವಾಗ ರಸ್ತೆ ಮಧ್ಯದಲ್ಲಿ ಕಂಡುಬರುವ ವಿಶಾಲ ಕಾಯದ ಸಾಮಾನ್ಯವಾಗಿ ತ್ರಿಕೋನಾಕಾರದಲ್ಲಿ ಕಂಡುಬರುತ್ತಿದ್ದ ರಚನೆಗಳು. ಅದರ ಎತ್ತರಗಳನ್ನು ನೋಡಿ ಮೂಕವಿಸ್ಮಿತರಾಗುತ್ತಿದ್ದ ಪ್ರಸಂಗಗಳು. ಹೌದು, ಅದುವೆ ಬೆಟ್ಟ ಗುಡ್ಡಗಳು.
ನಮ್ಮಲ್ಲಿ ಬಹುತೇಕರಿಗೆ ಚಿಕ್ಕವರಿದ್ದಾಗ ಬಸ್ಸುಗಳಲ್ಲಿ ಪಯಣಿಸುವಾಗ ಈ ರೀತಿ ಅನುಭವ ಆಗಿರಬಹುದು. ಊರು ಯಾವಾಗ ಬರುತ್ತದೆಂದರೆ ಸಾಕು, ಅಪ್ಪನಿಂದ ಈ ಗುಡ್ಡ ದಾಟಿದಾಕ್ಷಣ ಊರು ಬಂದೆ ಬಿಡುತ್ತದೆಂಬ ಉತ್ತರ. ನಂತರ ಆ ಗುಡ್ಡ ಯಾವಾಗ ದಾಟುತ್ತದೊ ಎಂಬ ಚಿಂತೆಯಲ್ಲಿ ಪುಟ್ಟ ಹುಡುಗರು.
ವಿಶೇಷ ಲೇಖನ : ಸಾಹಸಿಗ ಪ್ರವಾಸಿಗರು ಒಮ್ಮೆಯಾದರೂ ಮಾಡಲೇಬೇಕಾದ ಟ್ರೆಕ್ಕುಗಳು
ಹೀಗಾಗಿ ಚಿಕ್ಕಂದಿನಿಂದಲೂ ಬೆಟ್ಟ ಗುಡ್ಡಗಳು ಒಂದು ರೀತಿಯಲ್ಲಿ ಕುತೂಹಲಕರ ರಚನೆಗಳಾಗಿ ಕಂಡುಬರುತ್ತವೆ. ಇನ್ನೂ ಬೆಳೆ ಬೆಳೆಯುತ್ತ ಯವ್ವನದ ಸಮಯದಲ್ಲಂತೂ ಬೆಟ್ಟ ಗುಡ್ಡಗಳನ್ನು ಏರಬೇಕೆಂಬ ಆಸೆಗಳು ಚಿಗುರುವುದು ಸಾಮಾನ್ಯ. ಹೀಗಾಗಿ ಈ ಪರ್ವತಗಳೂ ಸಹ ಸಾಹಸಮಯ ಪ್ರವಾಸಿ ಚಟುವಟಿಕೆಗಳಾಗಿ ಯುವ ಜನಾಂಗದವರಲ್ಲಿ ಹೆಚ್ಚು ಹೆಸರುವಾಸಿ ಎಂತಲೇ ಹೇಳಬಹುದು.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇಲ್ಲಿಯೂ ಸಹ ಬಹಳಷ್ಟು ಬೆಟ್ಟ ಗುಡ್ಡಗಳಿದ್ದು ಅದರಲ್ಲಿ ಕೆಲವು ತಮ್ಮ ಅಪ್ರತಿಮ ಸೌಂದರ್ಯ, ಸಾಹಸಮಯ ಚಾರಣ ಮಾರ್ಗಗಳಿಂದಾಗಿ ಸಾಕಷ್ಟು ಜನಪ್ರೀಯವಾಗಿವೆ. ಕೆಲ ಪ್ರದೇಶಗಳ ಬೆಟ್ಟಗುಡ್ಡಗಳಂತೂ ಕಣ್ಣಿಗೆ ಕಾಣುತ್ತಲೆ ಕಣ್ಣಲ್ಲಿ ಕಳೆಗಟ್ಟಿಬಿಡುತ್ತವೆ. ದಿನನಿತ್ಯದ ಕೆಲಸದಿಂದ ಜರ್ಜರಿತವಾದ ಮನಸ್ಸು ವಿರಾಮ ಸಿಕ್ಕಾಗ ಇಂತಹ ಸ್ಥಳಗಳಲ್ಲಿ ಸುತ್ತಾಡಲು ತವಕಿಸುತ್ತದೆ.
ಪ್ರಸ್ತುತ, ಲೇಖನದಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಅದ್ಭುತ ಬೆಟ್ಟ ಗುಡ್ಡಗಳ ಕುರಿತು ತಿಳಿಸಲಾಗಿದೆ. ಇವುಗಳಲ್ಲಿ ಕೆಲವು ಏರಲು ಅನುಕೂಲಕರವಾಗಿದ್ದರೆ ಇನ್ನೂ ಕೆಲವು ಕೇವಲ ನೋಟದಿಂದಲೆ ಹೃದಯವನ್ನು ಕದಿಯಬಲ್ಲ ಸಾಮರ್ಥ್ಯವನ್ನು ಹೊಂದಿವೆ. ನೀವು ನೋಡಿ ಆನಂದಿಸಿ, ಸಮಯ ಸಿಕ್ಕರೆ ಖಂಡಿತ ಭೇಟಿ ನೀಡಿ.
ಮಾದಕ ಬೆಟ್ಟಗುಡ್ಡಗಳು:
ಜೇನುಕಲ್ಲು ಗುಡ್ಡ : ಇದೊಂದು ಪ್ರಕೃತಿ ವೈಭೋಗದಿಂದ ತುಂಬಿ ತುಳುಕುತ್ತಿರುವ ಸುಂದರ ಗುಡ್ಡವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರದಿಂದ ಸುಮಾರು 29 ಕಿ.ಮೀ ದೂರವಿರುವ ಈ ಗುಡ್ಡ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿದೆ. ಚಾರಣಪ್ರಿಯ, ನಿಸರ್ಗ ಪ್ರಿಯ ಪ್ರವಾಸಿಗರಿಗೆ ಭೇಟಿ ನೀಡಲು ಇದು ಆದರ್ಶಮಯ ಸ್ಥಳವಾಗಿದೆ.
ಚಿತ್ರಕೃಪೆ: L. Shyamal
ಮಾದಕ ಬೆಟ್ಟಗುಡ್ಡಗಳು:
ಮಳೆಗಾಲದಲ್ಲಿ ಇಲ್ಲಿನ ಅರಣ್ಯ ಪ್ರದೇಶಗಳಲ್ಲಿ ಜಿಗಣೆಗಳು ಸಾಕಷ್ಟಿರುವುದರಿಂದ ಜಾಗರೂಕತೆ ಅವಶ್ಯ. ಮತ್ತೊಂದು ಸಂಗತಿ ಎಂದರೆ ಆಕಾಶ ಸ್ಪಷ್ಟವಾಗಿದ್ದ ಸಮಯದಲ್ಲಿ ಇದರ ತುದಿಯಿಂದ ಮಂಗಳೂರಿನ ಅರಬ್ಬಿ ಸಮುದ್ರ ತೀರ ಪ್ರದೇಶವನ್ನು ಚೆನ್ನಾಗಿ ನೋಡಬಹುದು.
ಚಿತ್ರಕೃಪೆ: L. Shyamal
ಮಾದಕ ಬೆಟ್ಟಗುಡ್ಡಗಳು:
ಮುಳ್ಳಯ್ಯನಗಿರಿ: ಪಶ್ಚಿಮಘಟ್ಟಗಳು ಮೊದಲೆ ಮಾದಕ ಪ್ರಕೃತಿ ಸೌಂದರ್ಯ ರಾಶಿಯಿಂದ ಕೂಡಿರುವ ಬೆಟ್ಟ-ಗುಡ್ಡ-ಪರ್ವತಗಳ ಶ್ರೇಣಿ. ಈ ಶ್ರೇಣಿಯಲ್ಲಿ ಸಾಕಷ್ಟು ನಯನಮನೋಹರವಾದ ಪರ್ವತ ಶಿಖರಗಳಿವೆ. ಅವುಗಳಲ್ಲೊಂದಾಗಿದೆ ಚಂದ್ರದ್ರೋಣ ಪರ್ವತ ಶ್ರೇಣಿಯ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿ ಶಿಖರ. ಇದು ಕರ್ನಾಟಕದ ಅತಿ ಎತ್ತರದ ಪರ್ವತ ಶಿಖರ.
ಚಿತ್ರಕೃಪೆ: Riju K
ಮಾದಕ ಬೆಟ್ಟಗುಡ್ಡಗಳು:
ಮುಳ್ಳಯ್ಯನಗಿರಿ ಕೇವಲ ಕರ್ನಾಟಕವಲ್ಲದೆ ದಕ್ಷಿಣ ಭಾರತದಲ್ಲಿಯೆ ಚಾರಣ ಮಾಡಬಹುದಾದ ಸುಂದರ ಪರ್ವತಗಳ ಪೈಕಿ ಒಂದಾಗಿದೆ. ಇದರ ಶಿಖರ ಶೃಂಗದಲ್ಲಿ ದೇಗುಲವೊಂದಿದ್ದು ಮುಳ್ಳಪ್ಪ ಸ್ವಾಮಿ ಎಂಬ ತಪಸ್ವಿ ಸಿದ್ಧ ಪುರುಷನಿಗೆ ಮುಡಿಪಾಗಿದೆ. ಆದ ಕಾರಣ ಈ ಶಿಖರಕ್ಕೆ ಮುಳ್ಳಯ್ಯನಗಿರಿ ಎಂಬ ಹೆಸರು ಬಂದಿದೆ.
ಚಿತ್ರಕೃಪೆ: Lensman vishy
ಮಾದಕ ಬೆಟ್ಟಗುಡ್ಡಗಳು:
ತಡಿಯಾಂಡಮೋಲ್: ತಡಿಯಾಂಡಮೋಲ್, ಕರ್ನಾಟಕದ ಕೊಡಗಿನ ಅತ್ಯಂತ ಎತ್ತರದ ಶಿಖರವಾಗಿದೆ. ಇದು ಕರ್ನಾಟಕದ 2ನೇ ಅತ್ಯಂತ ಎತ್ತರದ ಶಿಖರವಾಗಿದೆ.ತಡಿಯಾಂಡಮೋಲ್ ಎಂಬುದು ಮಲೆಯಾಳಂ ಮೂಲದ ಪದವಾಗಿದ್ದು, ಇದರ ಅರ್ಥ ವಿಶಾಲವಾದದ್ದು ಮತ್ತು ಎತ್ತರವಾದದ್ದು ಎಂದು. ತಡಿಯಾಂಡಮೋಲ್ ಸುತ್ತಲೂ ಶೋಲಾ ಅರಣ್ಯಗುಚ್ಛಗಳಿದ್ದು, ಸೃಷ್ಟಿ ಸೌಂದರ್ಯವು ಅದ್ಭುತವಾಗಿದೆ. ಇನ್ನೂ ಈ ಗುಡ್ಡದ ಬುಡದಲ್ಲಿ ನಾಲಕ್ನಾಡ್ ಎಂಬ ಅರಮನೆಯಿದ್ದು ಪ್ರಮುಖವಾದ ಹೆಗ್ಗುರುತಾಗಿದೆ.
ಚಿತ್ರಕೃಪೆ: Vijay S
ಮಾದಕ ಬೆಟ್ಟಗುಡ್ಡಗಳು:
ಬಾಬಾ ಬುಡನ್ ಗಿರಿ: ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟಗಳಲ್ಲಿರುವ ಬಾಬಾ ಬುಡನ್ ಗಿರಿ ಬೆಟ್ಟವು ಚಾರಣ ಚಟುವಟಿಕೆಗಳಿಗೆ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ. ಪಶ್ಚಿಮ ಘಟ್ಟಗಳ ಸರಣಿಯಲ್ಲಿ ಮುಳ್ಳಯ್ಯನ ಗಿರಿ ಹಾಗೂ ಬಾಬಾ ಬುಡನ್ ಗಿರಿ ಗಳನ್ನು ಒಟ್ಟಾಗಿ ಚಂದ್ರದ್ರೋಣ ಪರ್ವತ ಶ್ರೇಣಿ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಎರಡೂ ಗಿರಿಗಳು ಅರ್ಧ ಚಂದ್ರಾಕೃತಿಯಲ್ಲಿರುವಂತೆ ಕಾಣುತ್ತವೆ.
ಚಿತ್ರಕೃಪೆ: Mithun P S
ಮಾದಕ ಬೆಟ್ಟಗುಡ್ಡಗಳು:
ಹಿಮವದ್ ಗೋಪಾಲಸ್ವಾಮಿ ಬೆಟ್ಟ : ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬರುವ ಗೋಪಾಲಸ್ವಾಮಿ ಬೆಟ್ಟವು ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ 1450 ಮೀ ಎತ್ತರವಿರುವ ಈ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿನ ಅತಿ ಎತ್ತರದ ಪ್ರದೇಶವಾಗಿದ್ದು ಬೆಟ್ಟದ ತುದಿಯಲ್ಲಿರುವ ಕೃಷ್ಣನಿಗೆ ಮುಡಿಪಾದ ವೇಣುಗೋಪಾಲಸ್ವಾಮಿಯ ದೇವಸ್ಥಾನದಿಂದ ಪ್ರಖ್ಯಾತವಾಗಿದೆ.
ಚಿತ್ರಕೃಪೆ: Ananth BS
ಮಾದಕ ಬೆಟ್ಟಗುಡ್ಡಗಳು:
ಕೃಷ್ಣನಿಗೆ ಮುಡಿಪಾದ ವೇಣುಗೋಪಾಲಸ್ವಾಮಿಯ ಈ ದೇವಸ್ಥಾನವು ಗೋಪುರ, ಧ್ವಜಸ್ಥಂಬ, ಮುಖ ಮಂಟಪದಲ್ಲಿ ಬಲಿಪೀಠವನ್ನು ಹೊಂದಿದೆ. ಮುಖಮಂಟಪದ ಗೋಡೆಗಳ ಮೇಲೆ ದಶಾವತಾರದ ಕೆತ್ತನೆಗಳನ್ನು ಕಾಣಬಹುದಾಗಿದೆ.
ಚಿತ್ರಕೃಪೆ: benuski
ಮಾದಕ ಬೆಟ್ಟಗುಡ್ಡಗಳು:
ಕೆಮ್ಮಣ್ಣುಗುಂಡಿ : ಕೆಮ್ಮಣ್ಣುಗುಂಡಿ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಅತ್ಯುತ್ತಮ ನಿಸರ್ಗಧಾಮ. ಕೆಮ್ಮಣ್ಣುಗುಂಡಿಯು ಸುಂದರ ಬೆಟ್ಟಗುಡ್ಡಗಳು, ದಟ್ಟ ಅರಣ್ಯ, ವಿಶಾಲವಾದ ಹಸಿರಿನ ಹುಲ್ಲುಹಾಸಲು, ರಮಣೀಯ ನಿಸರ್ಗ ನಿರ್ಮಿತ ಜಲಪಾತಗಳು ಪ್ರವಾಸಿಗರ ಮನ ಸೆಳೆಯುತ್ತವೆ.
ಚಿತ್ರಕೃಪೆ: Yathin S Krishnappa
ಮಾದಕ ಬೆಟ್ಟಗುಡ್ಡಗಳು:
ಬ್ರಹ್ಮಗಿರಿ : ಕರ್ನಾಟಕದ ಸುಂದರವಾದ ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ವಿಶೇಷವಾದ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ಇಂತಹ ಹಲವು ಆಕರ್ಷಣೆಗಳಲ್ಲಿ ಒಂದಾಗಿದೆ ಬ್ರಹ್ಮಗಿರಿ ಬೆಟ್ಟ. ಟ್ರೆಕ್ ಮಾಡಲು ಪ್ರಶಸ್ತವಾದ ಈ ಪರ್ವತ ಪ್ರದೇಶವು ಕರ್ನಾಟಕದ ಕೊಡಗು ಹಾಗೂ ಕೇರಳದ ವಯನಾಡ್ ಜಿಲ್ಲೆಗಳ ಗಡಿಗಳಲ್ಲಿ ಕಂಡುಬರುತ್ತದೆ.
ಚಿತ್ರಕೃಪೆ: muscicapa
ಮಾದಕ ಬೆಟ್ಟಗುಡ್ಡಗಳು:
ಎರಡೂ ರಾಜ್ಯಗಳ ಭಾಗದಿಂದ ಬ್ರಹ್ಮಗಿರಿಯನ್ನು ಟ್ರೆಕ್ಕಿಂಗ್ ಮುಖಾಂತರ ಮಾತ್ರವೆ ತಲುಪಬಹುದಾಗಿದ್ದು, ಕೇರಳ ಭಾಗದಿಂದ ಮಾನಂತವಾಡಿ ಅಥವಾ ಕುಟ್ಟಾದಿಂದ ತೆರಳಬಹುದು. ಮಾನಂತವಾಡಿಯಿಂದ ಬ್ರಹ್ಮಗಿರಿ 29 ಕಿ.ಮೀ ದೂರದಲ್ಲಿ ಪೂರ್ವ ದಿಕ್ಕಿಗಿದೆ. ಇನ್ನು ಕರ್ನಾಟಕ ಭಾಗದಿಂದ ತೆರಳಬೇಕಿದ್ದರೆ ಇರುಪ್ಪು ಜಲಪಾತ ತಾಣದಿಂದ ಹೊರಡಬೇಕಾಗುತ್ತದೆ. ಇಲ್ಲಿಂದ ಬ್ರಹ್ಮಗಿರಿ ಕೇವಲ 9 ಕಿ.ಮೀ ದೂರದಲ್ಲಿದೆ.
ಚಿತ್ರಕೃಪೆ: muscicapa
ಮಾದಕ ಬೆಟ್ಟಗುಡ್ಡಗಳು:
ಹೇಮಕೂಟ : ಅಂತಾರಾಷ್ಟ್ರೀಯ ಖ್ಯಾತಿಯ ವಿಶ್ವ ಪಾರಂಪರಿಕ ತಾಣವಾದ ಬಳ್ಳಾರಿ ಜಿಲ್ಲೆಯ ಹಂಪಿಯ ದಕ್ಷಿಣಕ್ಕೆ ಈ ಸುಂದರವಾದ ಹೇಮಕೂಟ ಬೆಟ್ಟಗಳು ಸ್ಥಿತವಿದೆ. ಸಾಕಷ್ಟು ಕಲ್ಲು ಬಂಡೆಗಳಿಂದ ಕುಡಿರುವ ಈ ಬೆಟ್ಟ ಪ್ರದೇಶದಲ್ಲಿ ವಿಜಯನಗರ ಕಾಲದಲ್ಲಿ ನಿರ್ಮಿಸಿದ್ದರೆನ್ನಲಾದ ಕೆಲವು ಪುರಾತನ ದೇಗುಲಗಳನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Peter Lepping