ಆನೆಗುಂದಿ ಅಥವಾ ಆನೆಗೊಂದಿ ಕರ್ನಾಟಕ ರಾಜ್ಯಕ್ಕೆ ಸೇರಿದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ಹೊಸಪೇಟೆಯಿಂದ ಸುಮಾರು 16 ಕಿ.ಮೀ.ಗಳಷ್ಟು ದೂರದಲ್ಲಿರುವ ತುಂಗಭದ್ರಾ ನದಿಯ ದಂಡೆಯ ಮೇಲೆ ನೆಲೆಸಿರುವ ಚಿಕ್ಕದೊಂದು ಗ್ರಾಮ. ಇದು ರಾಮಾಯಣ ಕಾಲದಲ್ಲಿ ಕಪಿರಾಜನಾಗಿದ್ದ ವಾಲಿಯ ರಾಜಧಾನಿಯಾಗಿತ್ತು ಎಂದು ಪ್ರತೀತಿಯಿದೆ.
ಇದೇ ಕಿಷ್ಕಿಂಧೆ ನಗರ ಎಂದು ಪ್ರಸಿದ್ಧವಾಗಿತ್ತು. ಪುರಾನದ ಪ್ರಕಾರ, ಸೀತೆಯನ್ನು ಅರಸಿ ಹೊರಟಿದ್ದ ಶ್ರೀರಾಮನು, ವಾಲಿಯನ್ನು ಕೊಂದು ಕಿಷ್ಕಿಂಧೆಯನ್ನು ಸುಗ್ರೀವನಿಗೆ ಕೊಟ್ಟನೆಂದೂ ನಂತರ ಸುಗ್ರೀವನು ಹನುಮನ ನಾಯಕತ್ವದಲ್ಲಿ ಕಪಿಗಳ ಸೇನೆ ರಚಿಸಿ ರಾಮನಿಗೆ ಯುದ್ಧದಲ್ಲಿ ಸಹಾಯ ಮಾಡಿ ರಾವಣನನ್ನು ಸಂಹರಿಸಿ ಸೀತೆಯನ್ನು ಬಂಧನದಿಂದ ಬಿಡಿಸಿಕೊಂಡು ಬಂದನೆಂದೂ ರಾಮಾಯಣದಲ್ಲಿ ಹೇಳಲಾಗಿದೆ.
ಚಿತ್ರಕೃಪೆ: Indiancorrector
ಆನೆಗುಂದಿ ವಿಶಾಲವಾದ ಬೆಟ್ಟ ಬಂಡೆಗಳಿರುವ ಪ್ರದೇಶವಾಗಿದ್ದು ಒಂದು ನೈಸರ್ಗಿಕ ದುರ್ಗದಂತಿದೆ. ಇದು ಬಹು ಪ್ರಾಚೀನ ಕಾಲದಿಂದಲೂ ರಾಜಧಾನಿಯಾಗಿ ಪ್ರಸಿದ್ಧಿಯನ್ನೂ ಹೊಂದಿದೆ. ಎರಡನೆಯ ದೇವರಾಯನ ಕಾಲದಲ್ಲಿ ಈ ವಿದ್ಯಾನಗರ ಆನೆಗೊಂದಿಯನ್ನೊಳಗೊಂಡು ಜಗತ್ತಿನಲ್ಲಿಯೇ ಅತ್ಯಂತ ವಿಸ್ತಾರವುಳ್ಳ (20 ಕಿ.ಮೀ.) ಶ್ರೀಮಂತ ರಾಜಧಾನಿಯೆಂದೂ ಪ್ರಸಿದ್ಧವಾಗಿತ್ತು.
ಪಂಪಸರೋವರ, ಚಿತ್ರಕೃಪೆ: Indiancorrector
ತುಳು ವಂಶದ ಕೃಷ್ಣದೇವರಾಯನ ಕಾಲದಲ್ಲಿಯಂತೂ ಇದರ ವೈಭವ ನಭೂತೋ ನಭವಿಷ್ಯತಿಯಾಗಿತ್ತು. ತುಂಗಭದ್ರಾ ನದಿಯ ದಂಡೆಯ ಮೇಲೆ ಸೆನಗೊಂದ್ಯಂ (ಆನೆಗೊಂದಿ) ಎಂಬ ಪಟ್ಟಣವಿತ್ತು. ಅದು ಪೂರ್ವಕಾಲದಲ್ಲಿ ರಾಜಧಾನಿಯಾಗಿತ್ತು.
ಚಿತ್ರಕೃಪೆ: Indiancorrector
ಈಗಲೂ ಅದರ ಕೋಟೆಕೊತ್ತಳೆಗಳನ್ನು ಕಾಣಬಹುದು ಎಂದು ಪೇಸ್ ಎಂಬ ಪೋರ್ಚುಗೀಸ್ ಪ್ರಯಾಣಿಕ 1530ರಲ್ಲಿ ಬರೆದಿದ್ದಾನೆ. ವಿಜಯನಗರದ ಪತನಾನಂತರ ಆನೆಗೊಂದಿಯಲ್ಲಿ ಚಿಕ್ಕಜಮನೆತನವೊಂದು ಆಳುತ್ತಿತ್ತು.
ಕೊಂಪೆ ಕೊಂಪೆಯಲ್ಲೂ ಸೇರಿದೆ ಹಂಪಿಯ ವೈಭವ!
ಇದು ಕೊಪ್ಪಳ ಜಿಲ್ಲೆಯಲ್ಲಿದ್ದರೂ ಸಹ ಹಂಪಿಗೆ ಬಲು ಹತ್ತಿರದಲ್ಲಿದೆ. ಹಂಪಿಗೆ ಪ್ರವಾಸ ಮಾಡಿದಾಗ ಅದರ ಜೊತೆ ಆನೆಗುಂದಿಗೆ ಭೇಟಿ ನೀಡುವುದು ಬಲು ಸೂಕ್ತ. ಅದರಂತೆ ಆನೆಗುಂದಿ ಟ್ರಸ್ಟ್ ಒಂದನ್ನು ರಚಿಸಲಾಗಿದ್ದು ಅದರ ಮೂಲಕ ಈ ತಾಣವನ್ನು ಅಭಿವೃದ್ಧಿಪಡಿಸುವ ಯೋಜನೆಗಳಿವೆ.