ಈಗಿನ ಕಾಲದಲ್ಲಿ ಎಷ್ಟೇ ಬಡ ಹಳ್ಳಿಯಾದರೂ ಎಷ್ಟೇ ಹಿಂದುಳಿದ ಹಳ್ಳಿಯಾದರೂ ಕಾಲಿಗೆ ಚಪ್ಪಲಿ ಹಾಕದೆ ನಡೆಯುವವರು ಯಾರಿದ್ದಾರೆ ಹೇಳಿ. ಆದರೆ ಅಂತಹದ್ದೊಂದು ವಿಚಿತ್ರ ಹಳ್ಳಿ ಕೂಡಾ ನಮ್ಮ ದೇಶದಲ್ಲಿದೆ. ಇಲ್ಲಿನ ಜನರು ಬಡತನದಿಂದಾಗಿ ಕಾಲಿಗೆ ಚಪ್ಪಲಿ ಧರಿಸದೇ ಇದ್ದಿರುವುದು ಅಲ್ಲ, ಇಲ್ಲಿ ಕೆಲಸಕ್ಕೆ ಹೋಗುವವರೂ ಕೂಡಾ ಕಾಲಿಗೆ ಚಪ್ಪಲಿ ಧರಿಸೋಲ್ಲ, ಬದಲಾಗಿ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ನಡೆಯುತ್ತಾರೆ. ಕೇಳಲು ವಿಚಿತ್ರ ಅನಿಸುವುದು ಸಹಜ. ಹಾಗಾದ್ರೆ ಬನ್ನಿ ಈ ಹಳ್ಳಿಯ ಕಥೆ ಏನು ಅನ್ನೋದನ್ನು ಕೇಳೋಣ.
ಅಂಡಮಾನ್
PC: Rasnaboy
ತಮಿಳುನಾಡಿನ ರಾಜಧಾನಿ ಚೆನ್ನೈಯಿಂದ 450 ಕಿಮೀ . ದೂರದಲ್ಲಿದೆ ಅಂಡಮಾನ್. ಸುಮಾರು 130 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದಾರೆ, ಅವರಲ್ಲಿ ಹಲವರು ಸುತ್ತಮುತ್ತಲಿನ ಭತ್ತದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು. ಈ ಊರಿನ ಪ್ರವೇಶ ದ್ವಾರದಲ್ಲಿರುವ ಬೇವಿನ ಮರದ ಬಳಿ ಬರುವಾಗ ಜನರು ತಮ್ಮ ಚಪ್ಪಲಿಯನ್ನು ಕೈಯಲ್ಲಿ ಹಿಡಿದು ನಡೆಯುತ್ತಾರೆ.
ಚಪ್ಪಲಿ ಕೈಯಲ್ಲಿ
PC:Rasnaboy
ಒಂದು ಭೂಗತ ಜಲಾಶಯದ ಹೊಳೆಯುವ ನೀರಿನಿಂದ ಪಕ್ಕದಲ್ಲಿ ಮತ್ತು ಹಚ್ಚ ಹಸಿರಿನ ಹೊದಿಕೆ ಮತ್ತು ಬಂಡೆಗಳಿಂದ ಸುತ್ತುವರಿದ ರಸ್ತೆಗಳು ಆವರಿಸಿರುವ ಒಂದು ಪುಟ್ಟ ಹಳ್ಳಿ. ಇಲ್ಲಿನ ಗ್ರಾಮಸ್ಥರು ತಮ್ಮ ಚಪ್ಪಲಿ ಅಥವಾ ಬೂಟುಗಳನ್ನು ತೆಗೆದುಕೊಂಡು ಹಳ್ಳಿಗೆ ಪ್ರವೇಶಿಸಿದಾಗ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ವಿಚಿತ್ರ ತಾಣ ಇದಾಗಿದೆ.
ಯಾರೂ ಚಪ್ಪಲಿ ಧರಿಸಲ್ಲ
PC: Yasagan
ಅಂಡಮಾನ್ ಗ್ರಾಮದಲ್ಲಿ ಯಾರೊಬ್ಬರೂ ಚಪ್ಪಲಿಯನ್ನು ಧರಿಸುವುದಿಲ್ಲ. ಬಹಳ ವಯಸ್ಸಾದವರು ಮಾತ್ರ ಶೂಗಳನ್ನು ಧರಿಸುತ್ತಾರೆ. ಇಲ್ಲಿ ಶಾಲೆಗೆ ಹೋಗುವ ಮಕ್ಕಳು, ಕಾಲೇಜಿಗೆ ಹೋಗುವ ಹದಿಹರೆಯದವರು, ಕೆಲಸಕ್ಕೆ ಹೋಗುವ ದಂಪತಿಗಳು ಹೀಗೆ ಪ್ರತಿಯೊಬ್ಬರೂ ತಮ್ಮ ಒಂದು ಕೈಐಯಲ್ಲಿ ಚಪ್ಪಲಿಯನ್ನು ಹಿಡಿದು ನಡೆಯುತ್ತಿದ್ದಾರೆ. ನಾವು ಕೈಯಲ್ಲಿ ಬ್ಯಾಗ್, ಚೀಲ ಹೇಗೆ ಹಿಡಿದುಕೊಳ್ಳುತ್ತೇವೋ ಹಾಗೆಯೇ ಅವರು ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ದಾರಿಯುದ್ದಕ್ಕೂ ನಡೆಯುತ್ತಾರೆ.
ಗ್ರಾಮ ದೇವತೆ ಮುತ್ಯಾಲಮ್ಮ
PC:Robert Montgomery Martin
ಮುತ್ಯಾಲಮ್ಮ ಎಂಬ ಪ್ರಬಲ ದೇವತೆ ನಮ್ಮ ಗ್ರಾಮವನ್ನು ರಕ್ಷಿಸುತ್ತಿದ್ದಾಳೆ ಆದ್ದರಿಂದ ನಾವು ಅವಳಿಗೆ ಗೌರವವನ್ನು ನೀಡುವ ಸಲುವಾಗಿ ಇಲ್ಲಿ ಯಾರೂ ಚಪ್ಪಲಿಗಳನ್ನು ಧರಿಸುವುದಿಲ್ಲ ಒಂದು ವೇಳೆ ಇಲ್ಲಿನ ಜನರಿಗೆ ಚಪ್ಪಲಿ ಧರಿಸಬೇಕೆಂದೆನಿಸಿದರೆ ಧರಿಸ ಬಹುದು ಆದರೆ ಅದು ಗ್ರಾಮದ ದೇವತೆಗೆ ಅವಮಾನ ಮಾಡಿದಂತಾಗುತ್ತದೆ ಎನ್ನುವುದು ಈ ಊರಿನ ಜನರ ನಂಬಿಕೆ.
ಈ ಅಭ್ಯಾಸವನ್ನು ಯಾರೂ ಕೂಡಾ ಬಲವಂತವಾಗಿ ಯಾರ ಮೇಲೆಯೂ ಹೇರುತ್ತಿಲ್ಲ. ಬದಲಾಗಿ ಇಲ್ಲಿನ ಪ್ರತಿಯೊಬ್ಬರೂ ತಮ್ಮ ಇಚ್ಛೆಯಿಂದ ಪ್ರೀತಿ , ಗೌರವದಿಂದ ಈ ಸಂಪ್ರದಾಯವನ್ನು ಅನುಸರಿಸುತ್ತಾ ಇದ್ದಾರೆ.
ಊರಿನೊಳಗೆ ಮಾತ್ರ ಚಪ್ಪಲಿ ಧರಿಸಲ್ಲ
PC:youtube
ಇದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯಾಗಿದೆ. ಬೇರೆ ಊರಿನಲ್ಲಿ ಕೆಲಸ ಮಾಡುತ್ತಿರುವ ಈ ಊರಿನ ಜನರು, ಯಾವಾಗಾದರೂ ತಮ್ಮ ಊರಿಗೆ ಭೇಟಿ ನೀಡಿದಾಗ ಈ ಸಂಪ್ರದಾಯವನ್ನು ತಪ್ಪದೇ ಪಾಲಿಸುತ್ತಾರೆ. ಊರಿನಿಂದ ಹೊರಗೆ ಹೋಗುತ್ತಿದ್ದಂತೆ ಚಪ್ಪಲಿಯನ್ನು ಧರಿಸುತ್ತಾರೆ. ಒಂದು ವೇಳೆ ಹೊರ ಊರಿನವರು ಯಾರಾದರೂ ಚಪ್ಪಲಿ ಹಾಕಿಕೊಂಡು ಪ್ರವೇಶಿಸಿದರೆ ಅವರಿಗೆ ಈ ಸಂಪ್ರದಾಯದ ಬಗ್ಗೆ ತಿಳಿ ಹೇಳುತ್ತಾರೆ.
ಜ್ವರ ಕಾಡುತ್ತಂತೆ
PC: Ryan
ನೀವು ನಿಯಮವನ್ನು ಪಾಲಿಸದಿದ್ದರೆ ನಿಗೂಢವಾದ ಜ್ವರ ಕಾಡುವುದೆಂದು ದಂತಕಥೆಗಳು ಹೇಳುತ್ತವೆ. ಆದರೆ ಅದಕ್ಕೆ ಹೆದರಿ ಈ ಸಂಪ್ರದಾಯವನ್ನು ಅನುಸರಿಸುತ್ತಿಲ್ಲ. ಬದಲಾಗಿ ಇಲ್ಲಿನ ಜನರಿಗೆ ತಮ್ಮ ಊರು ಒಂದು ಪವಿತ್ರ ಸ್ಥಳವಿದ್ದಂತೆ, ಅದನ್ನು ದೇಗುಲದಂತೆ ಕಾಣುತ್ತಾರೆ. ಅದಕ್ಕಾಗಿ ಈ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೆ.
ಈ ಸಂಪ್ರದಾಯದ ಹಿಂದಿನ ಕಥೆ
PC: Rasnaboy
ಎಪ್ಪತ್ತು ವರ್ಷಗಳ ಹಿಂದೆ ಈ ಗ್ರಾಮದ ಹೊರವಲಯದಲ್ಲಿರುವ ಬೇವಿನ ಮರದಲ್ಲಿ ಮುತ್ಯಾಲಮ್ಮ ದೇವಿಯ ಮಣ್ಣಿನ ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಪೂಜಾರಿ ದೇವತೆಗಳನ್ನು ಆಭರಣದೊಂದಿಗೆ ಅಲಂಕರಿಸುತ್ತಿದ್ದಂತೆಯೇ ಜನರು ಪ್ರಾರ್ಥನೆಯಲ್ಲಿ ಮುಳುಗಿದ್ದರು, ಬೂಟು ಧರಿಸಿದ್ದ ಯುವಕನೊಬ್ಬ ದೇವಿಯ ಮೂರ್ತಿಯ ಎದುರಿನಿಂದ ಬೂಟು ಧರಿಸಿದ ನಡೆದನು, ದೇವಿಯ ಕಾರ್ಯವನ್ನು ತಿರಸ್ಕಾರದಿಂದ ನೋಡಿದನೆಂದು ಹೇಳಲಾಗುತ್ತದೆ. ಅಂದೇ ಸಂಜೆ, ಆತ ನಿಗೂಢವಾದ ಜ್ವರದಿಂದ ಬಳಲಾರಂಭಿಸಿದನು. ಮತ್ತು ಆತ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಹಿಡಿದವು. ಅಂದಿನಿಂದಲೂ, ಗ್ರಾಮದಲ್ಲಿರುವ ಜನರು ಯಾವುದೇ ರೀತಿಯ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎನ್ನಲಾಗುತ್ತದೆ.
ಎಂಟು ವರ್ಷಕ್ಕೊಮ್ಮೆ ಜಾತ್ರೆ
ಪ್ರತೀ ಐದರಿಂದ ಎಂಟು ವರ್ಷಗಳಿಗೊಮ್ಮೆ, ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ, ಗ್ರಾಮವು ಉತ್ಸವವನ್ನು ನಡೆಸುತ್ತದೆ. ಈ ಸಮಯದಲ್ಲಿ ಮುತ್ಯಾಲಮ್ಮದ ಜೇಡಿಮಣ್ಣಿನ ಮೂರ್ತಿಯು ಬೇವಿನ ಮರದ ಕೆಳಗೆ ಸ್ಥಾಪಿಸಲ್ಪಡುತ್ತದೆ. , ಮೂರು ದಿನಗಳ ಕಾಲ, ದೇವತೆ ಆ ಗ್ರಾಮವನ್ನು ಆಶೀರ್ವದಿಸುವಂತೆ ಪೂಜೆ ಮಾಡಲಾಗುತ್ತದೆ. ವಿಗ್ರಹವನ್ನು ಮುರಿಯುವ ಮೊದಲು ಗ್ರಾಮದಲ್ಲಿ ವಿಶೇಷ ಪ್ರಾರ್ಥನೆ, ಪೂಜೆ, ಪುನಸ್ಕಾರ, ಭೋಜನ, ನೃತ್ಯ ಮತ್ತು ನಾಟಕಗಳೆಲ್ಲಾ ನಡೆಯುತ್ತದೆ.
2011 ರಲ್ಲಿ ನಡೆದಿತ್ತು
ಈ ಉತ್ಸವ ನಡೆಸಲು ಹೆಚ್ಚಿನ ಖರ್ಚುಗಳಾಗುವ ಕಾರಣ, ಇದನ್ನು ಪ್ರತೀ ವರ್ಷ ನಡೆಸಲಾಗುವುದಿಲ್ಲ. ಕಳೆದ ಹಬ್ಬವು 2011 ರಲ್ಲಿ ನಡೆದಿತ್ತು. ಮುಂದಿನ ಉತ್ಸವವು ಸ್ಥಳೀಯ ಜನರ ದೇಣಿಗೆಗಳ ಮೇಲೆ ಅವಲಂಬಿತವಾಗಿದೆ ಎನ್ನಲಾಗುತ್ತದೆ. ನೀವು ಕೂಡಾ ಈ ಊರಿಗೆ ಭೇಟಿ ನೀಡಿದಾಗ ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಹೋಗೋದನ್ನು ಮರೆಯದಿರಿ.