ವಿಶ್ವದಲ್ಲಿಯ ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತವು ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಅದು ಆಯುರ್ವೇದ, ಖಗೋಳವಿಜ್ಞಾನ, ವಿಜ್ಞಾನ, ವೈದ್ಯಕೀಯ ಅಥವಾ ಶಿಕ್ಷಣ ಯಾವುದೇ ಇರಲಿ, ತನ್ನ ಸ್ಥಾನವನ್ನು ಯಾವಾಗಲೂ ಸ್ಥಿರವಾಗಿ ಕಾಯ್ದುಕೊಂಡು ಬಂದಿದೆ. ಮಾತ್ರವಲ್ಲದೆ ಎಲ್ಲಾ ಐತಿಹಾಸಿಕ ಪಾತ್ರಗಳ ಹಿಂದಿರುವ ಪ್ರಮುಖ ಆಧಾರಸ್ತಂಭವಾಗಿದೆ.
ಭಾರತದಲ್ಲಿ ವಿದ್ಯೆಗೆ ಯಾವಾಗಲೂ ಪ್ರಥಮ ಪ್ರಾಶಸ್ತ್ಯ ದೊರಕುತ್ತಾ ಬಂದಿದೆ ಅಲ್ಲದೆ ಇದರಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಪಾತ್ರವನ್ನು ರೂಪಿಸುವ ಚೌಕಟ್ಟು ಎಂದು ಪರಿಗಣಿಸಲಾಗುತ್ತದೆ. ವೇದಗಳ ಕಾಲಗಳಿಂದಲೂ ಗುರುಕುಲ, ಮತ್ತು ಆಶ್ರಮಗಳು ಕಲಿಕೆಯ ಪ್ರಾಥಮಿಕ ಮೂಲಗಳಾಗಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳು ಮತ್ತು ಪ್ರಾಯೋಗಿಕ ಜೀವನಗಳ ಬಗ್ಗೆ ಕಲಿಸಿಕೊಡಲಾಗುತ್ತಿತ್ತು.
ಪ್ರಾಚೀನ ಭಾರತದ ಈ ಮಹತ್ವಾಕಾಂಕ್ಷೆಯ ವಿಶ್ವವಿದ್ಯಾಲಯಗಳ ದಾರಿಯಲ್ಲಿ ನಡೆಯುತ್ತಾ ಮತ್ತೆಂದಿಗೂ ಅಸ್ತಿತ್ವಕ್ಕೆ ಮರಳದ ಶೈಕ್ಷಣಿಕ ಇತಿಹಾಸ ಮತ್ತು ಅವುಗಳ ಬಗ್ಗೆ ತಿಳಿದುಕೊಳ್ಳಲು ನೀವು ಎದುರು ನೋಡುತ್ತಿದ್ದರೆ,ನಿಮಗಿದೋ ಉಪಯುಕ್ತಕರ ಮಾಹಿತಿಗಳನ್ನು ನೀಡುತ್ತಿದ್ದೇವೆ.
1) ನಳಂದ ವಿಶ್ವವಿದ್ಯಾನಿಲಯ(ಬಿಹಾರ್
ಅಂತರ - ಪಾಟ್ನಾದಿಂದ 2 ಗಂಟೆಗಳ ಪ್ರಯಾಣ
ವಿಶ್ವದ ಅತ್ಯಂತ ಹಳೆಯ ವಿಶ್ವವಿದ್ಯಾಯಗಳಲ್ಲಿ ಒಂದೆನಿಸಿರುವ ಹಾಗೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿರುವ ನಳಂದ ವಿಶ್ವವಿದ್ಯಾಲಯವು ವಿಶ್ವದಾದ್ಯಂತದ ಸಾವಿರಾರು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕಲಿಕೆಯ ಕೇಂದ್ರವಾಗಿತ್ತು. ಇದು 5ನೇ ಶತಮಾನದಲ್ಲಿ ಶಕ್ರಾದಿತ್ಯರಿಂದ ಸ್ಥಾಪಿತವಾದ ಇದು ಗುಪ್ತಾ ಸಾಮ್ರಾಜ್ಯದ ಅಡಿಯಲ್ಲಿ 700 ವರ್ಷಗಳಿಗೂ ಹೆಚ್ಚು ಹಾಗೂ ನಂತರ ಹರ್ಷ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಸುಮಾರು 12 ನೇ ಶತಮಾನದ ಅಂತ್ಯದವರೆಗೂ ಅಭಿವೃದ್ಧಿ ಹೊಂದಿತು.
ಈ ವಿಶ್ವವಿದ್ಯಾಲಯವು ವಿಶ್ವದ ಅತಿ ದೊಡ್ಡ ಗ್ರಂಥಾಲಯವನ್ನು ಹೊಂದಿದ್ದು, ದೊಡ್ಡ ಕೋಣೆಗಳು, ಮತ್ತು ಉಪನ್ಯಾಸ ಸಭಾಂಗಣಗಳನ್ನು ಹೊಂದಿತ್ತು. ಅಲ್ಲದೆ ಒಂದು ಆದರ್ಶ ವಿಶ್ವ ವಿದ್ಯಾಲಯವು ಹೊಂದಿರ ಬೇಕಾದ ಎಲ್ಲಾ ಕಲಿಯ ಬಯಸುವ ವಿಷಯಗಳನ್ನೂ ಹೊಂದಿತ್ತು. ಇಲ್ಲಿಗೆ ಚೀನಾ, ಜಪಾನ್, ಟಿಬೇಟ್, ಇಂಡೋನೇಶಿಯಾ ಮತ್ತು ಇನ್ನಿತರ ಹಲವಾರು ದೇಶಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಲು ಬರುತ್ತಿದ್ದರು.
ನಳಂದದ ಗ್ರಂಥಾಲಯದಲ್ಲಿ ವಿಶಾಲವಾದ ಮತ್ತು ಲಕ್ಷಾಂತರ ವ್ಯಾಕರಣ, ಸಾಹಿತ್ಯ, ಜ್ಯೋತಿಷ್ಯ, ಖಗೋಳವಿಜ್ಞಾನ, ಔಷಧ ಮತ್ತು ವಿಜ್ಞಾನದಂತಹ ವಿಷಯಗಳ ಮೇಲಿನ ಲಿಪಿಗಳು ಮತ್ತು ಪಠ್ಯಗಳು ಇತ್ಯಾದಿಗಳನ್ನು ಹೊಂದಿತ್ತು ಅಲ್ಲದೆ ಧರ್ಮಗ್ನಜಾ ಎಂದು ಕರೆಯಲ್ಪಡುವ ಈ ಗ್ರಂಥಾಲಯವು ರತ್ನಸಾಗರ, ರತ್ನೋದಾಧಿ ಮತ್ತು ರತ್ನರಂಜಕ ಎಂಬ ಮೂರು ಬಹುಮಹಡಿ ಕಟ್ಟಡಗಳನ್ನು ಒಳಗೊಂಡಿತ್ತು.
ಭಕ್ತಿಯಾರ್ ಖಿಲ್ಜಿ ನೇತೃತ್ವದ ದಾಳಿಯಿಂದ ಅವನತಿಯಾಗುವವರೆಗೂ ನಳಂದ ವಿಶ್ವವಿದ್ಯಾಲಯವು ಏಳು ಶತಮಾನಗಳವರೆಗೆ ಬೆಳೆಯಿತು. ಇಂದು, ಇದು ಇತಿಹಾಸ ಪ್ರಿಯರಿಗೆ ಕೇವಲ ಒಂದು ಪ್ರವಾಸಿ ತಾಣವಾಗಿದ್ದು ಇತಿಹಾಸಕಾರರು ಅದರ ವಿಶಾಲತೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
2) ತಕ್ಷಶಿಲಾ ವಿಶ್ವವಿದ್ಯಾಲಯ ( ಪ್ರಸ್ತುತ ಪಾಕಿಸ್ತಾನದಲ್ಲಿದೆ)
ಅಂತರ- ಇಸ್ಲಮಾಬಾದಿನಿಂದ 2 ತಾಸುಗಳ ಪ್ರಯಾಣ
ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯಗಳ ವಿಷಯದ ಬಗ್ಗೆ ಚರ್ಚಿಸುವಾಗ ಅದರಲ್ಲಿ ತಕ್ಷಶಿಲಾ ವಿಶ್ವವಿದ್ಯಾಲಯವೂ ಸೇರ್ಪಡೆಗೊಳ್ಳುತ್ತದೆ. ಇದರ ಮಹತ್ತರವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವಗಳ ಕಾರಣದಿಂದಾಗಿ ಇಂದು ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿದೆ. ಸುಮಾರು 10000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ, ಈ ದೊಡ್ಡದಾದ ಮತ್ತು ಭಾರತದ ಅತ್ಯಂತ ದೊಡ್ಡ ಹಾಗೂ ಪ್ರಾಚೀನ ಕಲಿಕಾ ಕೇಂದ್ರವು ಅಧ್ಯಯನಕ್ಕೆ ನೆಲೆಯಾಗಿತ್ತು. ಇದು ಶಿಕ್ಷಣ ಮತ್ತು ಕಲಿಕೆಯ ಕೇಂದ್ರವಾಗಿದ್ದರಿಂದ, ಗ್ರೀಸ್, ಚೀನಾ, ಜಪಾನ್, ಅರೇಬಿಯಾ ಮತ್ತು ಇತರ ಹಲವು ದೇಶಗಳ ವಿದ್ಯಾರ್ಥಿಗಳು ತಕ್ಷಶಿಲಾಗೆ ವಿವಿಧ ಕಲಾ ಪ್ರಕಾರಗಳನ್ನು ಕಲಿಯಲು ಬರುತ್ತಿದ್ದರು.
ಇಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ವಿಜ್ಞಾನ, ಖಗೋಳವಿಜ್ಞಾನ, ಜ್ಯೋತಿಷ್ಯ, ಆಯುರ್ವೇದ, ತತ್ವಶಾಸ್ತ್ರ, ವ್ಯಾಕರಣ, ಬಿಲ್ಲುಗಾರಿಕೆ, ರಾಜಕೀಯ, ಕೃಷಿ, ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ತಕ್ಷಶೀಲದ ಹಲವಾರು ಉಲ್ಲೇಖಗಳು ಬೌದ್ಧ ಜಾತಕ ಕಥೆಗಳಲ್ಲಿ, ಚೀನಾದ ಪ್ರಯಾಣಿಕರ ಬರಹಗಳು ಮತ್ತು ಭಾರತದ ಪ್ರಾಚೀನ ಗ್ರಂಥಗಳಾದ ಪುರಾಣಗಳಲ್ಲಿ ಕಂಡುಬರುತ್ತವೆ.
800ವರ್ಷಗಳ ಕಾಲ ಸಮೃದ್ದಿ ಮತ್ತು ಯಶಸ್ಸಿನಿಂದ ನಡೆದು ಬಂದ ಈ ಒಂದು ಮಹತ್ವವಾದ ಕಲಿಕಾ ಕೇಂದ್ರದ ಅವನತಿಯು ಆಕ್ರಮಣಕಾರರ ದಾಳಿಯ ನಂತರ ಅವನತಿಗೊಳಗಾಯಿತು ಎಂದು ಹೇಳಲಾಗುತ್ತದೆ. ತಕ್ಷಶಿಲೆಯು ನಿರಂತರವಾಗಿ ತನ್ನಲ್ಲಿ ಉತ್ತಮ ವ್ಯಕ್ತಿಗಳನ್ನು ಜಗತ್ತಿಗೆ ಪರಿಚಯಿಸುತ್ತಾ ಬಂದಿದೆ.ಅಲ್ಲದೆ ಇದು ಚಾಣಾಕ್ಯ, ಚಂದ್ರಗುಪ್ತ ಮೌರ್ಯ ಮತ್ತು ವಿಷ್ಣು ಶರ್ಮ ರಂತಹ ಬುದ್ದಿವಂತ ಮತ್ತು ಚತುರ ಜಗತ್ ಪ್ರಸಿದ್ದ ವ್ಯಕ್ತಿಗಳಿಗೆ ಜನ್ಮನೀಡಿದೆ ಎಂದರೆ ತಪ್ಪಾಗಲಾರದು.
3) ಸೋಮಪುರ ವಿಶ್ವವಿದ್ಯಾಲಯ (ಪ್ರಸ್ತುತ ಇದು ಬಾಂಗ್ಲಾದೇಶದಲ್ಲಿದೆ)
ಅಂತರ- ಢಾಕಾದಿಂದ 7 ತಾಸುಗಳ ಪ್ರಯಾಣ
ಸ್ಮಾರಕ ರೂಪದಲ್ಲಿರುವ ಬೌದ್ದ ಮಠವಾಗಿರುವ ಸೋಮಪುರ ವಿಶ್ವವಿದ್ಯಾಲಯವು ಪಾಲಾ ರಾಜವಂಶಕ್ಕೂ ಹಿಂದಿನದಾಗಿದ್ದು, ಇದನ್ನು 8 ನೇ ಶತಮಾನದಲ್ಲಿ ಧರ್ಮಪಾಲನು ನಿರ್ಮಿಸಿದನು.ಇದೊಂದು ಚತುರ್ಭುಜ ರಚನೆಯಾಗಿದ್ದು, ಮಧ್ಯದಲ್ಲಿ ದೈತ್ಯ ಸ್ತೂಪವನ್ನು ಹೊಂದಿದೆ ಮತ್ತು ಸುಮಾರು 27 ಎಕರೆ ಪ್ರದೇಶದಲ್ಲಿ ಹರಡಿಕೊಂಡಿತ್ತು. ಈ ಶಾಂತಿಯುತ ಮಠವು ಬೌದ್ಧಧರ್ಮ, ಜೈನ ಮತ್ತು ಹಿಂದೂ ಧರ್ಮದಂತಹ ಧರ್ಮ ಸಂಪ್ರದಾಯಗಳ ಕಲಿಕೆಯ ಪ್ರಮುಖ ಕೇಂದ್ರವಾಗಿತ್ತು
177 ಕೋಣೆಗಳು, ಹಲವಾರು ದೇವಾಲಯಗಳು, ಸ್ತೂಪಗಳು ಮತ್ತು ಹಲವಾರು ಕಟ್ಟಡಗಳು ಸುಂದರವಾದ ಮಾದರಿಗಳು ಮತ್ತು ಧಾರ್ಮಿಕ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟ ಸೋಮಪುರವು , ಆ ಸಮಯದಲ್ಲಿಯ ಎಲ್ಲಾ ಮಹಾವಿಹಾರಗಳಲ್ಲಿ ಅತ್ಯಂತ ದೊಡ್ಡದಾಗಿತ್ತು.
ಸುಮಾರು 400 ವರ್ಷಗಳ ಐತಿಹಾಸಿಕ ಅಸ್ತಿತ್ವದ ನಂತರ ಇದು 12 ನೇ ಶತಮಾನದ ಅಂತ್ಯದ ವೇಳೆಗೆ ಕ್ಷೀಣಿಸಲು ಪ್ರಾರಂಭಿಸಿತು. ವಿದೇಶಿಯರ ಆಕ್ರಮಣದ ಸಮಯದಲ್ಲಿ ಸೋಮಪುರ ಬೆಂಕಿಯಿಂದ ನಾಶವಾಯಿತು ಎಂದು ನಳಂದದ ದಾಖಲೆಗಳು ಹೇಳುತ್ತವೆ.
ಇಂದು ಇದು ಕೇವಲ ಒಂದು ಪ್ರವಾಸಿ ತಾಣವಾಗಿದ್ದು ಇಲ್ಲಿ ಕೇವಲ ಅದರ ಅವಶೇಷಗಳನ್ನು ನೋಡಬಹುದು ಮತ್ತು ಅದರ ದಾರಿಗಳಲ್ಲಿ ನಡೆಯುತ್ತ ಈ ಸ್ಥಳದ ಇತಿಹಾಸವನ್ನು ಕೂಲಂಕುಶವಾಗಿ ಪರಿಶೀಲಿಸಬಹುದಾಗಿದೆ.
4) ವಿಕ್ರಮಶಿಲಾ ವಿಶ್ವವಿದ್ಯಾಲಯ (ಬಿಹಾರ್)
ಅಂತರ- ಬಿಹಾರ್ ನ ಭಾಗಲ್ಪುರದಿಂದ 1 ತಾಸಿನ ಪ್ರಯಾಣ
ನಳಂದ ವಿಶ್ವವಿದ್ಯಾಲಯದ ಕಲಿಸುವ ಗುಣಮಟ್ಟದಲ್ಲಿ ಕುಸಿತ ಕಂಡುಬಂದ ಪರಿಣಾಮವಾಗಿ ವಿಕ್ರಮಶಿಲಾ ಅಸ್ತಿತ್ವಕ್ಕೆ ಬಂತು. ಇದನ್ನೂ ಕೂಡಾ ಪಾಲಾ ಸಾಮ್ರಾಜ್ಯದ ಆಡಳಿತಗಾರ ಧರ್ಮಪಾಲಾನಿಂದ ನಿರ್ಮಿಸಲ್ಪಟ್ಟಿತು. ಈ ಸುಂದರವಾದ ಮಠವು ಸುಮಾರು 100 ಕ್ಕೂ ಹೆಚ್ಚು ಶಿಕ್ಷಕರು ಮತ್ತು 1000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು ನಳಂದಾಗೆ ಕಠಿಣ ಸವಾಲನ್ನು ನೀಡಿದ್ದರು. ಪಾಲಾ ಸಾಮ್ರಾಜ್ಯದ ಅವಧಿಯಲ್ಲಿ ನಳಂದಾ, ಸೋಮಪುರ ಮತ್ತು ಓಡಂತಪುರಿ ಹೊರತಾಗಿ ವಿಕ್ರಮಶಿಲಾವೂ ಕೂಡಾ ಅತ್ಯಂತ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿತ್ತು.
ಪ್ರಸ್ತುತ ಇದು ಬಿಹಾರಿನ ಭಾಗಲ್ಪುರ ಜಿಲ್ಲೆಯಲ್ಲಿರುವ ಇದು ಅನೇಕ ದೇಶಗಳಿಗೆ ಕಲಿಕಾ ಕೇಂದ್ರವಾಗಿ ಮಾರ್ಪಟ್ಟಿತ್ತು ಮತ್ತು ವಿಶ್ವದಾದ್ಯಂತದ ವಿದ್ಯಾರ್ಥಿಗಳು ಇಲ್ಲಿ ಸ್ನಾತಕೋತ್ತರ ಪ್ರವೀಣರಾಗಿ ಹೊರಹೊಮ್ಮಿದ್ದರು. ತತ್ವಶಾಸ್ತ್ರ, ವ್ಯಾಕರಣ, ಮೆಟಾಫಿಸಿಕ್ಸ್ ಮತ್ತು ತರ್ಕದ ಹೊರತಾಗಿ, ತಂತ್ರವು ಇಲ್ಲಿ ಅತ್ಯಂತ ಮಹತ್ವದ ವಿಷಯವಾಗಿತ್ತು.
ವಿಕ್ರಮಶಿಲಾವೂ ಕೂಡಾ ಭಕ್ತ್ಯಾರ್ ಖಿಲ್ಜಿಯ ಆಕ್ರಮಣಕ್ಕೆ ಗುರಿಯಾಗಿತ್ತು. ಹಲವಾರು ಆಕ್ರಮಣಗಳ ಕಾರಣದಿಂದಾಗಿ ಇದು 12 ನೇ ಶತಮಾನದ ಅಂತ್ಯದ ವೇಳೆಗೆ ಸಂಪೂರ್ಣವಾಗಿ ನಾಶವಾಯಿತು. ಇಂದು ಈ ಸ್ಥಳವು ಭೂತಕಾಲದ ವಿನಾಶದ ಭಯಾನಕ ಸಂಗ್ರಹವನ್ನು ನಮಗೆ ನೋಡುವಂತೆ ಮಾಡುತ್ತದೆ. ನೀವು ಇಲ್ಲಿಯ ಹಿಂದಿನ ಇತಿಹಾಸವನ್ನು ನೋಡಲು ಇಚ್ಚಿಸಿದಲ್ಲಿ, ಇಲ್ಲಿಗೆ ಪ್ರಯಾಣವನ್ನು ಬೆಳೆಸಿ.
5)ಪುಷ್ಪಗಿರಿ ವಿಶ್ವವಿದ್ಯಾಲಯ(ಒಡಿಶಾ)
ಅಂತರ- ಒಡಿಶಾದ ಜಜ್ಪುರ್ ನಿಂದ 1.5 ತಾಸುಗಳ ಪ್ರಯಾಣ
ಪ್ರಾಚೀನ ಭಾರತದ ಇನ್ನೊಂದು ಕಲಿಕೆಯ ಕೇಂದ್ರವೆಂದರೆ ಅದು 3ನೇ ಶತಮಾನದಲ್ಲಿ ನಿರ್ಮಿತವಾದ ಪುಷ್ಪಗಿರಿ ವಿಶ್ವವಿದ್ಯಾಲಯ ಈ ವಿದ್ಯಾಲಯವು 12ನೇ ಶತಮಾನಗಳವರೆಗೆ ಅಭಿವೃದ್ದಿಯನ್ನು ಹೊಂದಿತ್ತು. ಒಡಿಶಾದ ಲಾಗುಂಡಿ ಬೆಟ್ಟದ ಮೇಲೆ ನಿರ್ಮಿತವಾಗಿರುವ ಪುಷ್ಪಗಿರಿ ವಿಶ್ವವಿದ್ಯಾಲಯವು ಕೂಡಾ ಆಯುರ್ವೇದ ಮತ್ತು ಔಷಧದ ಬಗ್ಗೆ ಸಂಶೋಧನೆಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತಿದ್ದ ಅನೇಕ ಶಿಕ್ಷಕರು ಮತ್ತು ಅವರ ಶಿಷ್ಯರುಗಳಿಗೆ ನೆಲೆಯಾಗಿತ್ತು.
ಇತ್ತೀಚಿನ ಸಂಶೋದನೆಗಳ ಪ್ರಕಾರ ಅಶೋಕ ಚಕ್ರವರ್ತಿಯು ಈ ಕಲಿಕಾ ಕೇಂದ್ರವನ್ನು ನಿರ್ಮಿಸಿದನೆನ್ನಲಾಗಿದೆ. ಚೀನಾದ ಪ್ರವಾಸಿ ಕ್ಸುವಾನ್ಜಾಂಗ್ರ ಬರಹಗಳಲ್ಲಿ ಪುಷ್ಪಗಿರಿಯ ಬಗೆಗಿನ ಹಲವಾರು ಉಲ್ಲೇಖಗಳು ಕಂಡುಬರುತ್ತವೆ. ಇಂದು, ಈ ಪುಷ್ಪಗಿರಿಯ ಕಲಿಕಾ ಕೇಂದ್ರದ ಅವಶೇಷಗಳನ್ನು ಇತರ ಪ್ರಮುಖ ಕಲಿಕಾ ಕೇಂದ್ರಗಳು ಮತ್ತು ಬೌದ್ಧ ಮಠಗಳೊಂದಿಗೆ ಮಾತ್ರ ಕಾಣಬಹುದು.
ಇವುಗಳು ಪ್ರಾಚೀನ ಭಾರತದ ಅತ್ಯಂತ ಪ್ರಮುಖ ವಿಶ್ವವಿದ್ಯಾಲಯಗಳಾಗಿದ್ದು, ಇವು ಇನ್ನೆಂದಿಗೂ ಅಸ್ತಿತ್ವಕ್ಕೆ ಬರದೇ ಇರುವಂತಹವುಗಳಾಗಿವೆ. ದುರದೃಷ್ಟವಶಾತ್, ಅವುಗಳ ಅವಶೇಷಗಳನ್ನು ಮಾತ್ರ ಇಂದು ಕಾಣಬಹುದು. ಆದಾಗ್ಯೂ, ಈ ಅವಶೇಷಗಳು ತಮ್ಮ ಮುಗಿದು ಹೋಗಿರುವ ಮತ್ತು ಯಶಸ್ವಿ ಪ್ರಯಾಣದ ಮಧ್ಯೆ ತಮ್ಮದೇ ಆದ ಹತಾಶೆ ಮತ್ತು ಸ್ಥಗಿತಗೊಂಡಿರುವ ಕಥೆಗಳನ್ನು ಸಾರುತ್ತವೆ.
ಬುದ್ದಿವಂತಿಕೆಯ ಜಗತ್ತಿನ ಇತಿಹಾಸದ ಆಳಕ್ಕೆ ಒಮ್ಮೆ ಇಣುಕಿ ನೋಡುವ ಸಾಹಸವನ್ನು ಮಾಡೋಣ.