ನಿಮಗೆ ವಾರಾಂತ್ಯ ರಜಾ ಸಮಯದಲ್ಲಿ ಎಲ್ಲಾದರೂ ವಿಶಿಷ್ಟವಾದ ಸ್ಥಳಗಳಿಗೊಂದು ಪ್ರವಾಸ ಮಾಡಲು ಇಷ್ಟವಿದ್ದಲ್ಲಿ ಈ ಲೇಖನವನ್ನೊಮ್ಮೆ ಓದಿ. ಇಲ್ಲಿ ದಾವಣಗೆರೆಯ ಮೂಲಕ ಹರಿಹರ ಪ್ರವಾಸದ ಕುರಿತು ತಿಳಿಸಲಾಗಿದೆ. ಹರಿಹರ ದಾವಣಗೆರೆ ಜಿಲ್ಲೆಯಲ್ಲಿರುವ ಒಂದು ಚಿಕ್ಕ ಐತಿಹಾಸಿಕ ಮಹತ್ವವುಳ್ಳ ಸುಂದರ ಪಟ್ಟಣ.
ಹರಿಹರವು ಹೆಸರೆ ಸೂಚಿಸುವ ಹಾಗೆ ಹರಿ ಅಂದರೆ ವಿಷ್ಣು ಹಾಗೂ ಹರ ಅಂದರೆ ಶಿವನು ಒಟ್ಟಾಗಿ ಸಂಯುಕ್ತ ರೂಪದಲ್ಲಿ ಹರಿಹರನಾಗಿ ನೆಲೆಸಿರುವ ಕ್ಷೇತ್ರ. ಈ ಒಂದು ದೃಷ್ಟಿಯಿಂದಲೆ ಈ ಕ್ಷೇತ್ರವು ಧಾರ್ಮಿಕವಾಗಿ ಸಾಕಷ್ಟು ಗಮನಸೆಳೆವ ತಾಣವಾಗಿಯೂ ಕಂಡುಬರುತ್ತದೆ.
ಪ್ರಸ್ತುತ ಲೇಖನದಲ್ಲಿ ಬೆಂಗಳೂರಿನಿಂದ ದಾವಣಗೆರೆಯ ಮೂಲಕ ಹರಿಹರ ಕ್ಷೇತ್ರ ಹಾಗೂ ಅದರ ಹತ್ತಿರದಲ್ಲೆ ಇರುವ ಎರಡು ಇತರೆ ವಿಶಿಷ್ಟ ದೇವಾಲಯಗಳ ಕುರಿತು ತಿಳಿಸುತ್ತದೆ. ಇಂತಹ ಪ್ರವಸಗಳು ಖಂಡಿತವಾಗಿಯೂ ಮನಸ್ಸನ್ನು ಪ್ರಸನ್ನಗೊಳಿಸುವುದರಲ್ಲಿ ಸಂಶಯವಿಲ್ಲ. ಅಲ್ಲದೆ ನಮ್ಮಲ್ಲೆ ಇರುವ ಅದೆಷ್ಟೊ ಸ್ಥಳಗಳ ಹಿನ್ನೆಲೆ, ಭವ್ಯ ಇತಿಹಾಸ ನಮಗೆ ತಿಳಿದುಬರುತ್ತದೆ.
ದಾವಣಗೆರೆ
ರಾಷ್ಟ್ರೀಯ ಹೆದ್ದಾರಿ ನಾಲ್ಕು ಅಂದರೆ ಪುಣೆ-ಬೆಂಗಳೂರು ರಸ್ತೆಯು ಉತ್ತರ ಕರ್ನಾಟಕದ ಭಾಗದ ಹುಬ್ಬಳ್ಳಿಯಿಂದಲೂ ಹಾಗೂ ಬೆಂಗಳೂರಿನಿಂದಲೂ ದಾವಣಗೆರೆ ಸುಲಲಿತವಾದ ಸಂಪರ್ಕವನ್ನು ಒದಗಿಸುತ್ತದೆ. ಬೆಂಗಳೂರಿನಿಂದ 265 ಕಿ.ಮೀ ದೂರದಲ್ಲಿರುವ ದಾವಣಗೆರೆಯನ್ನು ಸುಲಭವಾಗಿ ತಲುಪಬಹುದಾಗಿದ್ದು ಅನೇಕ ಹಳ್ಳಿಗಳ ಸುಂದರವಾದ ಪರಿಸರಗಳನ್ನು ಈ ಪ್ರಯಾಣದಲ್ಲಿ ಕಾಣಬಹುದು.
ಚಿತ್ರಕೃಪೆ: Brunda Nagaraj
ತುಂಗಭದ್ರಾ ನದಿ
ಒಂದೊಮ್ಮೆ ದಾವಣಗೆರೆ ತಲುಪಿದರೆ ಸಾಕು, ಅಲ್ಲಿಂದ ಹದಿನೆಂಟು ಕಿ.ಮೀ ದೂರವಿರುವ ಹರಿಹರವನ್ನು ಬಾತಿ ಗ್ರಾಮದ ಮೂಲಕ ಸುಲಭವಾಗಿ ತಲುಪಬಹುದು. ಹರಿಹರ ಕ್ಷೇತ್ರವು ತುಂಗಭದ್ರಾ ನದಿ ತಟದಲ್ಲಿ ನೆಲೆಸಿರುವ ಪುಟ್ಟ ಪಟ್ಟಣವಾಗಿದ್ದು ತನ್ನಲ್ಲಿರುವ ಐತಿಹಾಸಿಕ ಹರಿಹರೇಶ್ವರ ದೇವಾಲಯದಿಂದಾಗಿ ಸಾಕಷ್ಟು ಹೆಸರುವಾಸಿಯಾಗಿದೆ.
ಚಿತ್ರಕೃಪೆ: Brunda Nagaraj
ಅಗಾಧ ಕಲಾತ್ಮಕತೆ
ಹರಿಹರೇಶ್ವರ ದೇವಾಲಯವು ಒಂದು ಅದ್ಭುತ ಕೆತ್ತನೆಯುಳ್ಳ, ವಿಶೇಷವಾಗಿ ಹೊಯ್ಸಳ ವಾಸ್ತುಶೈಲಿಯಲ್ಲಿ ನಿರ್ಮಿತವಾದ ಅದ್ಭುತ ದೇವಾಲಯವಾಗಿದೆ. ದೇವಸ್ಥಾನದ ಕೆತ್ತನೆಗಳು ನಯನಮನೋಹರವಾಗಿದ್ದು ಸೂಕ್ಷ್ಮಾತಿ ಸೂಕ್ಷ್ಮ ಕೆಲಸಗಳು ಕರಾರುವಕ್ಕಾಗಿ ನಿಭಾಯಿಸಲ್ಪಟ್ಟಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಚಿತ್ರಕೃಪೆ: Dineshkannambadi
ಅದ್ಭುತ ರಚನೆ
ಕಲಾತ್ಮಕತೆಯ ದೃಷ್ಟಿಯಿಂದಲೆ ಸಾಕಷ್ಟು ಪ್ರವಾಸಿಗರನ್ನು ಚುಂಬಕದಂತೆ ಆಕರ್ಷಿಸುತ್ತದೆ ಈ ದೇವಾಲಯದ ಕೆತ್ತನೆಗಳು ಹಾಗೂ ಶಿಲ್ಪಕಲೆ. ಸಾವಿರಕ್ಕೂ ಅಧಿಕ ವರ್ಷಗಳಾದರೂ ಈ ದೇವಾಲಯವು ಹಾಗೆ ಸದೃಢವಾಗಿ ನೆಲೆಸಿರುವುದನ್ನು ನೋಡಿದಾಗ ಯಾರಿಗಾದರೂ ಸರಿ ಒಂದು ಕ್ಷಣ ನಮ್ಮ ಸಂಸ್ಕೃತಿ, ಕಲಾತ್ಮಕತೆ ಹಾಗೂ ನಿರ್ಮಾಣ ಕೌಶಲ್ಯಗಳ ಮೇಲೆ ಹೆಮ್ಮೆ ಪಡದೆ ಇರಲು ಸಾಧ್ಯವೆ ಇಲ್ಲ.
ಚಿತ್ರಕೃಪೆ: Dineshkannambadi
ಸೇನಾದಂಡನಾಯಕ
1223-1224 ರ ಸಂದರ್ಭದಲ್ಲಿ ಹೊಯ್ಸಳ ಸಾಮ್ರಾಜ್ಯದ ಎರಡನೇಯ ವೀರ ನರಸಿಂಹ ದೊರೆಯ ಆಸ್ಥಾನದ ಸೇನಾದಂಡನಾಯಕನಾಗಿದ್ದ ಪೋಳಲ್ವ/ಪೊಲಲ್ವ ಎಂಬಾತನಿಂದ ಈ ದೇವಾಲಯ ನಿರ್ಮಿಸಲ್ಪಟ್ಟಿದೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ.
ಚಿತ್ರಕೃಪೆ: Dineshkannambadi
ಸೋಮ
ಮುಂದೆ ಇದೆ ಸಾಮ್ರಾಜ್ಯದಲ್ಲಿ ದೊರೆಯಾಗಿದ್ದ ಮೂರನೇಯ ನರಸಿಂಹನ ಸೇನಾ ದಂಡನಾಯಕನಾಗಿದ್ದ ಸೋಮ ಎಂಬಾತನು ಈ ದೇವಾಲಯವನ್ನು ಮತ್ತಷ್ಟು ನವೀಕರಿಸಿದ್ದನೆಂದೂ ಸಹ ಇತಿಹಾಸದಿಂದ ತಿಳಿದುಬರುತ್ತದೆ. ವಿಶೇಷವಾಗಿ ಇಲ್ಲಿ ಹಳಗನ್ನಡದ ಹಲವಾರಿ ಲಿಖಿತ ದಾಖಲೆಗಳನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Dineshkannambadi
ಅನನ್ಯ ಅವತಾರ
ಇನ್ನೂ ಹರಿಹರೇಶ್ವರ ದೇವಾಲಯದ ವಿಷಯಕ್ಕೆ ಬಂದರೆ ಇದೊಂದು ವಿಶಿಷ್ಟವಾದ ದೇವಾಲಯವೆಂದೆ ಹೇಳಬಹುದಾಗಿದೆ. ಸಾಮಾನ್ಯವಾಗಿ ಎಲ್ಲೆಡೆ ವಿಷ್ಣು ಅಥವಾ ಶಿವನಿಗೆ ಮುಡಿಪಾದ ದೇವಾಲಯಗಳಿದ್ದರೂ ಅದರಲ್ಲಿ ಪ್ರತ್ಯೇಕವಾಗಿ ಶಿವನ ಹಾಗೂ ವಿಷ್ಣುವಿನ ಸನ್ನಿಧಿಗಳನ್ನು ಕಾಣಬಹುದು.
ಚಿತ್ರಕೃಪೆ: Brunda Nagaraj
ದಂತಕಥೆ
ಆದರೆ ಈ ಒಂದು ನಿರ್ದಿಷ್ಟ ದೇವಾಲಯದಲ್ಲಿ ವಿಷ್ಣು ಹಾಗೂ ಶಿವ ಒಂದೆ ರೂಪದಲ್ಲಿ ಅಂದರೆ ಹರಿ ಮತ್ತು ಹರನು ಏಕರೂಪದಲ್ಲಿ ಹರಿಹರೇಶ್ವರನಾಗಿ ನೆಲೆಸಿರುವುದನ್ನು ಕಾಣಬಹುದು. ಹೀಗೆ ಹರಿಹರನಾಗುವುದಕ್ಕೂ ಸಂಬಂಧಿಸಿದಂತೆ ದಂತಕಥೆಯೊಂದಿದೆ. ಅದ್ರ ಪ್ರಕಾರವಾಗಿ,
ಚಿತ್ರಕೃಪೆ: Dineshkannambadi
ಗುಹಾಸುರ
ಹಿಂದೆ ಪೂರ್ವದ ಉಚ್ಚಂಗಿದುರ್ಗದಿಂದ ಹಿಡಿದು ಪಶ್ಚಿಮದ ಮುದನೂರಿನ ತನಕ, ಹಾಗೂ ಉತ್ತರದ ಐರಾಣಿಯಿಂದ ಹಿಡಿದು ದಕ್ಷಿಣದ ಗೋವಿನಹಾಲು ವರೆಗಿನ ಸಂಪೂರ್ಣ ಪ್ರದೇಶವು ಗುಹಾಸುರನೆಂಬ ರಾಕ್ಷಸನ ಅಧೀನದಲ್ಲಿತ್ತು. ಜನರನ್ನು, ದೇವತೆಗಳನ್ನು ತನ್ನ ಅಪ್ರತಿಮ ಬಲದಿಂದ ಸಾಕಷ್ಟು ತೊಂದರೆ ನೀಡುತ್ತಿದ್ದನು.
ಚಿತ್ರಕೃಪೆ: Dineshkannambadi
ಎಚ್ಚೆತ್ತ
ಹೀಗಿರುವಾಗ ಆತನ ಮಂತ್ರಿಯೊಮ್ಮೆ ರಾಕ್ಷ್ಸನನ್ನು ಕುರಿತು ತಾನು ದೇವತೆಗಳನ್ನೇನೊ ಸೋಲಿಸಬಲ್ಲೆಯೆಂದೂ ಆದರೆ ಪರಮ ಶಕ್ತಿಶಾಲಿಗಳಾದ ಶಿವ ಅಥವಾ ವಿಷ್ಣುವನ್ನು ಸೋಲಿಸಿವುದು ಅಸಾಧ್ಯವೆಂದೂ ಹೀಗಾಗಿ ಅವರಿಬ್ಬರಲ್ಲಿ ಒಬ್ಬರಿಂದಾದರೂ ತನ ಮರಣ ಶತಸಿದ್ಧ ಎಂದು ಎಚ್ಚರಿಸಿದನು.
ಚಿತ್ರಕೃಪೆ: Dineshkannambadi
ಎಚ್ಚೆತ್ತ
ಹೀಗೆ ಎಚ್ಚೆತ್ತ ರಾಕ್ಷಸನು ಬ್ರಹ್ಮನ ಕುರಿತು ಅತ್ಯಂತ ಕಠಿಣವಾದ ತಪಸ್ಸು ಮಾಡಿ ಆತನನ್ನು ಪ್ರಸನ್ನಗೊಳಿಸಿದನು. ಹೀಗೆ ಬ್ರಹ್ಮನು ಪ್ರಸನ್ನಗೊಂಡು ಆತನಿಗೆ ನೀಡಿದ ವರದಾನದ ಪ್ರಕಾರ ವಿಷ್ಣುವಾಗಲಿ ಶಿವನಾಗಲಿ ಅವನನ್ನು ಸೋಲಿಸದ ಹಾಗಾಯಿತು. ಇದರಿಂದ ದೇವತೆಗಳು ಚಿಂತಾಕ್ರಾಂತರಾಗಿ ಇಬ್ಬರೂ ಮಹಾನ್ ದೇವರುಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ಚಿತ್ರಕೃಪೆ: Brunda Nagaraj
ಸಂಯುಕ್ತ ರೂಪ
ವಸ್ತುಸ್ಥಿತಿಯ ಅರಿವಿದ್ದ ಹರಿ ಹಾಗೂ ಹರನು ಲೋಕ ಕಲ್ಯಾಣಾರ್ಥವಾಗಿ ಒಂದೆ ಒಂದು ರುಪವನ್ನು ಪಡೆದು ಹರಿಹರನಾಗಿ ಭೂಮಿಗೆ ಬಂದಿಳಿದನು ಹಾಗೂ ಆ ಗುಹಾಸುರ ರಾಕ್ಷಸನನ್ನು ಸಂಹರಿಸಿ ಎಲ್ಲರಿಗೂ ತೊಂದರೆಗಳಿಂದ ಮುಕ್ತಿ ದೊರಕುವಂತೆ ಮಾಡಿದನು. ಕೊನೆಗೆ ಪ್ರದೇಶ ಋಷಿಮುನಿಗಳ ಆಶೆಯಂತೆ ಹರಿಹರನ ರೂಪದಲ್ಲೆ ಇಲ್ಲಿ ನೆಲೆಸಿದನು.
ಚಿತ್ರಕೃಪೆ: Ramashray
ಶಿವ
ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಇತರೆ ದೇವತೆಗಳ ಸನ್ನಿಧಿಗಳಿರುವುದನ್ನೂ ಸಹ ಕಾಣಬಹುದಾಗಿದೆ. ಶಿವನಿಗೆ ಮುಡಿಪಾದ ವಡಭಂಡೇಶ್ವರ ದೇವಸ್ಥಾನ
ಚಿತ್ರಕೃಪೆ: Brunda Nagaraj
ದುರ್ಗೆ
ಶಕ್ತಿ ದೇವಿಯಾದ ಮಹಿಷಾಸುರ ಮರ್ದಿನಿಯ ಸನ್ನಿಧಿಯೂ ಸಹ ಇಲ್ಲಿರುವುದನ್ನು ಕಾಣಬಹುದು.
ಚಿತ್ರಕೃಪೆ: Brunda Nagaraj
ಮಾರ್ಗದ ದುರ್ಗಮ್ಮ
ಇನ್ನೊಂದು ವಿಷಯವೆಂದರೆ, ದಾವಣಗೆರೆಯಿಂದ ಹರಿಹರಕ್ಕೆ ಹೋಗುವಾಗ, ಹರಿಹರ ತಲುಪುವ ಮುಂಚೆಯೆ ಒಂದು ಶಕ್ತಿ ದೇವಿಯ ದೇವಾಲಯವನ್ನು ಕಾಣಬಹುದಾಗಿ. ಈ ದೇವಾಲಯವು ಹರಿಹರಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಬಾತಿಗುಡ್ಡ ಎಂಬ ಹಳ್ಳಿಯಿಂದ ಸುಮಾರು ಎರಡುವರೆ ಕಿ.ಮೀ ದೂರದಲ್ಲಿ ನೆಲೆಸಿದೆ. ಇದನ್ನು ಮಾರ್ಗದ ಮಾರ್ಗದ ದುರ್ಗಮ್ಮ ದೇವಾಲಯ ಎಂದು ಕರೆಯುತ್ತಾರೆ. ಸಾಕಷ್ಟು ಗಮನಸೆಳೆವ ದೇವಿಯ ದೇವಾಲಯ ಇದಾಗಿದೆ.
ಚಿತ್ರಕೃಪೆ: Brunda Nagaraj
ಬಯಕೆ ಈಡೆರುತ್ತದೆಯೆ?
ಈ ದೇವಾಲಯ ಹೆಚ್ಚಿನ ಮಟ್ಟಕ್ಕೆ ಹೆಸರುವಾಸಿಯಾಗಿಲ್ಲವಾದರೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಾಕಷ್ಟು ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿಶೇಷವೆಂದರೆ ಈ ದೇವಾಲಯದ ಮುಂದಿರುವ ಧ್ವಜಸ್ತಂಭದ ಕಟ್ಟೆಯ ಮೇಲೆ ಎಂಟು ಗೋಲಾಕಾರದ ಕಲ್ಲುಗಳಿವೆ. ನೀವು ಬಯಸಿದ್ದು ಈಡೇರುವಂತಿದ್ದರೆ ನೀವು ಮೂರು ಸಲ ಇಲ್ಲಿರುವ ಕಲ್ಲುಗಳನ್ನು ಎತ್ತಲು ಪ್ರಯತ್ನಿಸಿದಾಗ ಸಫಲರಾಗುತ್ತೀರಿ.
ಚಿತ್ರಕೃಪೆ: Brunda Nagaraj
ಭೇಟಿ ಮಾಡಲೇಬೇಕಾದ ಸ್ಥಳ
ಇನ್ನೂ ದಾವಣಗೆರೆಯಿಂದ ಹದಿನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿರುವ ಕೊಗ್ಗನೂರು ಗ್ರಾಮವು ಆಂಜನೇಯ ಹಾಗೂ ಇತರೆ ದೇವತೆಗಳ ಸನ್ನಿಧಿಗೆ ಪ್ರಸಿದ್ಧವಾಗಿದೆ. ಬಹು ಜನರು ಈ ಕ್ಷೇತ್ರದ ಕುರಿತು ಅಷ್ಟೊಂದಾಗಿ ಕೇಳಿಲ್ಲ. ಆದರೆ ಒಮ್ಮೆ ಭೇಟಿ ಮಾಡಲೇಬೇಕಾದ ಸ್ಥಳ ಇದಾಗಿದೆ.
ಚಿತ್ರಕೃಪೆ: Brunda Nagaraj
ಏನಿದೆ?
ಇಲ್ಲಿ ಚಿಕ್ಕ ಗುಹೆಯೊಂದನ್ನು ಕಾಣಬಹುದಾಗಿದ್ದು ಇದು ಸಾಕಷ್ಟು ಕುತೂಹಲ ಕೆರಳಿಸುತ್ತದೆ.
ಚಿತ್ರಕೃಪೆ: Brunda Nagaraj
ಬದರಿನಾರಾಯಣ!
ಈ ಗುಹೆಯ ಒಳಗೆ ಶಿವ, ಗಣೇಶ ಹೀಗೆ ಕೆಲವು ದೇವ, ದೇವತೆಯರ ವಿಗ್ರಹಗಳು ಪ್ರತಿಷ್ಠಾಪಿಸಲಾಗಿರುವುದನ್ನು ಕಾಣಬಹುದಾಗಿದೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಬದರಿನಾರಾಯಣನ ಸನ್ನಿಧಾನವೂ ಸಹ ಇದೆ.
ಚಿತ್ರಕೃಪೆ: Brunda Nagaraj