ಹಿಂದೂ ಸಂಸ್ಕೃತಿಯಲ್ಲಿ ಹೇಳಿರುವಂತೆ ಅಗಸ್ತ್ಯ ಋಷಿಯು ಒಬ್ಬ ಮಹಾನ್ ಮುನಿ ಹಾಗೂ ಸಪ್ತರ್ಷಿ (ಸಪ್ತ ಋಷಿ) ಗಳ ಪೈಕಿ ಒಬ್ಬನಾದವನು. ತಮಿಳು ಭಾಷೆಯ ಕರ್ತೃ, ಅಷ್ಟಸಿದ್ಧಿಗಳ ಒಡೆಯರಾಗಿದ್ದ ಸಿದ್ಧರ ಪರಮ ಗುರುವಾಗಿದ್ದ ಅಗಸ್ತ್ಯ ಮಹಾಮುನಿಗಳು ಸೃಷ್ಟಿಕರ್ತ ಬ್ರಹ್ಮನ ಮಗನಾದ ಪುಲಸ್ತ್ಯನ ಮಗ.
ಈ ಮಹಾಮುನಿಗೆಂದೆ ಮುಡಿಪಾದ ಒಂದು ಪವಿತ್ರ ಬೆಟ್ಟ ಸ್ಥಳವೆ ಅಗಸ್ತ್ಯ ಗುಡ್ಡ, ಅಗಸ್ತಿಯಾರ್ ಮಲೈ ಅಥವಾ ಅಗಸ್ತ್ಯಾರಕೂಡಂ. ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅದ್ಭುತ ಹಾಗೂ ಎತ್ತರದ ಬೆಟ್ಟಗಳ ಪೈಕಿ ಇದೂ ಸಹ ಒಂದು.
ವಿಶೇಷ ಲೇಖನ : ಗಟ್ಟಿ ಗುಂಡಿಗೆಯವರಿಗೂ ನಡುಕ ಹುಟ್ಟಿಸುವ ಟ್ರೆಕ್ಕುಗಳು
ಮೂಲತಃ ಈ ಬೆಟ್ಟವು ಹಿಂದೂಗಳಿಗೆ ಪವಿತ್ರ ಯಾತ್ರಾ ಸ್ಥಳವಾಗಿದೆ. ಬೆಟ್ಟದ ಮೇಲೆ ಅಗಸ್ತ್ಯ ಮುನಿಗಳ ಪ್ರತಿಮೆ ಹಾಗೂ ದೇವಸ್ಥಾನವನ್ನು ಕಾಣಬಹುದು. ಇಲ್ಲಿಗೆ ತಲುಪಲು ಇರುವ ಒಂದೆ ಮಾರ್ಗವೆಂದರೆ ಬೆಟ್ಟ ಹತ್ತುವುದು, ಚಾರಣ ಮಾಡುವುದು ಇಲ್ಲವೆ ಟ್ರೆಕ್ ಮಾಡುವುದು.
ಹಾಗಂದ ಮಾತ್ರಕ್ಕೆ ಇದೊಂದು ಸುಲಭವಾದ ಚಾರಣ ಅಂದುಕೊಳ್ಳಲೇಬೇಡಿ. ಇದೊಂದು ಕಠಿಣ, ಅಪಾಯಕರ ಚಾರಣ ಮಾರ್ಗವಾಗಿದ್ದು ಎರಡು ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಸಾಕಷ್ಟು ಜಾಗರೂಕತೆಯಿಂದ ಈ ಅದ್ಭುತ ಚಾರಣದ ಸುಂದರ ಅನುಭವ ಪಡೆಯಬಹುದು.
ಪ್ರಸ್ತುತ ಲೇಖನದಲ್ಲಿ ಈ ಚಾರಣವು ವರ್ಷದ ಯಾವ ಸಮಯದಲ್ಲಿ ಪ್ರವಾಸಿಗರಿಗೆ ಅಥವಾ ಚಾರಣಿಗರಿಗೆ ಮುಕ್ತವಾಗಿ ತೆರೆದಿರುತ್ತದೆ ಹಾಗೂ ಚಾರಣ ಮಾರ್ಗದ ಕೆಲವು ವಿಶೇಷತೆಗಳು, ಚಿತ್ರಗಳ ಕುರಿತು ವಿಷಯಗಳನ್ನು ತಿಳಿಸಲಾಗಿದೆ.
ಗಮನಿಸಿ : ಜನವರಿ ಮಧ್ಯದಿಂದ ಮಾರ್ಚ್ ವರೆಗೆ ಮಾತ್ರ ಈ ಚಾರಣ ಮಾರ್ಗ ತೆರೆದಿರುತ್ತದೆ.
ಅಗಸ್ತ್ಯಾರಕೂಡಂಗೊಂದು ಅದ್ಭುತ ಟ್ರೆಕ್:
ಈ ಚಾರಣ ಪ್ರವಾಸ ಮಾಡಬಯಸುವವರು ಮೊದಲಿಗೆ ಕೇರಳದ ರಾಜಧಾನಿ ನಗರ ತಿರುವನಂತಪುರಂಗೆ ತೆರಳಬೇಕು. ತಿರುವನಂತಪುರಂನಿಂದ ನಸುಕಿನ ಐದು ಘಂಟೆಯ ವೆಳೆಗೆಲ್ಲ ಬೋನಾಕಾಡ್ ಗೆ ತೆರಳಲು ಬಸ್ಸು ದೊರೆಯುತ್ತದೆ. ಅದು ತಪ್ಪಿತೆಂದರೆ ವಿಥುರಾದವರೆಗೂ ದೊರೆಯುವ ಬಸ್ಸು ಹಿಡಿದು ವಿಥುರಾ ತಲುಪಿ ಅಲ್ಲಿಂದ ಖಾಸಗಿ ವಾಹನಗಳ ಮೂಲಕ ಬೋನಾಕಾಡ್ ತಲುಪಬಹುದು. ಬೋನಾಕಾಡ್ ತಿರುವನಂತಪುರಂನಿಂದ 50 ಕಿ.ಮೀ ಹಾಗೂ ವಿಥುರಾದಿಂದ 20 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Ajay Kuyiloor
ಅಗಸ್ತ್ಯಾರಕೂಡಂಗೊಂದು ಅದ್ಭುತ ಟ್ರೆಕ್:
ಬೋನಾಕಾಡಿನಲ್ಲಿ ಕೇರಳ ಅರಣ್ಯ ಇಲಾಖೆಯ ಕಚೇರಿಯಿದ್ದು ಅಧಿಕೃತವಾಗಿ ಅಗಸ್ತ್ಯಾರಕೂಡ್ ಟ್ರೆಕ್ ಇಲ್ಲಿಂದಲೆ ಪ್ರಾರಂಭಗೊಳ್ಳುತ್ತದೆ. ಇದಕ್ಕು ಮುಂಚೆ ತಿರುವನಂಪುರಂನಲ್ಲಿರುವ ಅರಣ್ಯ ಇಲಾಖೆಯ ಕಚೇರಿಯಿಂದ ಈ ಟ್ರೆಕ್ಕಿಗೆಂದು ನೀಡಲಾಗುವ ಪಾಸುಗಳನ್ನು ಪಡೆದಿರಬೇಕು. ಪ್ರತಿ ವ್ಯಕ್ತಿಗೆ ನಿಗದಿತ ಶುಲ್ಕವಿದ್ದು ಅದನ್ನು ಭರಿಸಿ ಪಾಸ್ ಪಡೆದಿರಬೇಕು.
ಚಿತ್ರಕೃಪೆ: Seshadri.K.S
ಅಗಸ್ತ್ಯಾರಕೂಡಂಗೊಂದು ಅದ್ಭುತ ಟ್ರೆಕ್:
ಸಾಮಾನ್ಯವಾಗಿ ಪಾಸುಗಳನ್ನು ಡಿಸೆಂಬ, ಜನವರಿಗಳಂದು ನೀಡಲಾಗುತ್ತದೆ ಹಾಗೂ ದಿನಕ್ಕೆ ಕೇವಲ ನೂರು ಪಾಸುಗಳನ್ನು ಮಾತ್ರ ಹಂಚಲಾಗುತ್ತದೆ. ಹಾಗಾಗಿ ಮೊದಲ ಬಂದವರಿಗೆ ಮೊದಲ ಆದ್ಯತೆಯ ಮೇಲೆ ಪಾಸುಗಳು ದೊರೆಯುತ್ತವೆ. ಈ ಟ್ರೆಕ್ ಮಾರ್ಗದಲ್ಲಿ ಚಾರಣ ಮಾಡಲು ಜನವರಿ ಮಧ್ಯದಿಂದ ಹಿಡಿದು ಮಾರ್ಚ್ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿರುತ್ತದೆ.
ಚಿತ್ರಕೃಪೆ: Rakesh
ಅಗಸ್ತ್ಯಾರಕೂಡಂಗೊಂದು ಅದ್ಭುತ ಟ್ರೆಕ್:
ಇದಕ್ಕೆ ಮುಖ್ಯ ಕಾರಣವೆಂದರೆ ಅಗಸ್ತ್ಯಾರಕೂಡಂ ಒಂದು ಅದ್ಭುತ ಜೈವಿಕ ವಲಯವಾಗಿದೆ. ಈ ಒಟ್ಟಾರೆ ಪ್ರದೇಶದಲ್ಲಿ ನೂರಾರು ಪ್ರಭೇದಗಳ, ಔಷಧೀಯ ಗುಣವುಳ್ಳ ಆಯುರ್ವೇದದಲ್ಲಿ ನಮೂದಿಸಲಾಗಿರುವ ಶ್ರೀಮಂತ ಗಿಡ ಮೂಲಿಕೆಗಳಿರುವುದನ್ನು ಕಾಣಬಹುದು. ಅಲ್ಲದೆ ವೈವಿಧ್ಯಮಯ ಜೀವ ಸಂಕುಲದಿಂದ ಕೂಡಿರುವ ಈ ಪ್ರದೇಶ ರಕ್ಷಿತವಲಯವಾಗಿದೆ. ಹೀಗಾಗಿ ಈ ಸುಂದರ ಪ್ರಕೃತಿವೈಭವತೆಯಿಂದ ಕೂಡಿದ ಪ್ರದೇಶವನ್ನು ಸಂರಕ್ಷಿಸುವ ಉದ್ದೇಶದಿಂದ ಕೇವಲ ವರ್ಷಕ್ಕೆ ಒಂದು ಬಾರಿ ಮಾತ್ರವೆ ಇಲ್ಲಿ ಟ್ರೆಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಚಿತ್ರಕೃಪೆ: Vssekm
ಅಗಸ್ತ್ಯಾರಕೂಡಂಗೊಂದು ಅದ್ಭುತ ಟ್ರೆಕ್:
ಇನ್ನೊಂದು ವಿಷಯವೆಂದರೆ ಈ ಟ್ರೆಕ್ ಮಕ್ಕಳು ಹಾಗೂ ಮಹಿಳೆಯರು ಮಾಡುವಂತಿಲ್ಲ. ಏಕೆಂದರೆ ಇದೊಂದು ಕಠಿಣವದ ಚಾರಣವಾಗಿದ್ದು ಸಾಕಷ್ಟು ದೈಹಿಕ ಸಾಮರ್ಥ್ಯವಿರುವುದು ಅತ್ಯಾಗತ್ಯವಾಗಿದೆ. ಅಲ್ಲದೆ ಕಾಡಿನ ಮೂಲಕ ಸಾಗುವ ಈ ಪ್ರದೇಶದಲ್ಲಿ ಭಯಂಕರ ಕಾಡು ಪ್ರಾಣಿಗಳಿದ್ದು ಅವುಗಳಿಂದ ಒಮ್ಮೆಲೆ ಆಕ್ರಮಣಕ್ಕೊಳಗಾಗ ಬಹುದಾದ ಸಂಭವನೀಯತೆಗಳು ಇರುತ್ತದೆ.
ಚಿತ್ರಕೃಪೆ: Varkey Parakkal
ಅಗಸ್ತ್ಯಾರಕೂಡಂಗೊಂದು ಅದ್ಭುತ ಟ್ರೆಕ್:
ಆ ಕಾರಣದಿಂದ ನೀವೊಮ್ಮೆ ಬೋನಾಕಾಡ್ ತಲುಪಿದ ನಂತರ ಅಲ್ಲಿನ ಕಚೇರಿಯಲ್ಲಿ ನಿಮ್ಮ ವಿವರಗಳೆಲ್ಲವನ್ನು ನಮೂದಿಸಿ, ಅರ್ಜಿಗಳಿಗೆ ಸಹಿ ಹಾಕಿ, ಮಾರ್ಗದರ್ಶಿಗಳನ್ನು ಪಡೆದು, ಅಲ್ಲಿ ದೊರೆಯುವ ತಿಂಡಿ ತಿನಿಸುಗಳನ್ನು ಖರೀದಿಸಿ, ಚಾರಣ ಪ್ರಾರಂಭಿಸಬೇಕು. ಪ್ರದೇಶದಲ್ಲಿ ಮದ್ಯಪಾನ ನಿಷೇಧವಿರುವುದರಿಂದ ಚಾರಣಿಗರು ಅಥವಾ ಪ್ರವಾಸಿಗರು ಮದ್ಯವನ್ನು ಒಯ್ಯುವಂತಿಲ್ಲ.
ಚಿತ್ರಕೃಪೆ: Ajaykuyiloor
ಅಗಸ್ತ್ಯಾರಕೂಡಂಗೊಂದು ಅದ್ಭುತ ಟ್ರೆಕ್:
ಎಲ್ಲಾ ವಿಧಿ ವಿಧಾನಗಳು ಪೂರ್ಣಗೊಳಿಸಿದ ಬಳಿಕ ಇಲ್ಲಿಂದ ಚಾರಣವನ್ನು ಪ್ರಾರಂಭಿಸಬಹುದು. ಚಾರಣವು ದಟ್ಟವಾಗಿ ಬೆಳೆದ ಗಿಡ ಮರಗಳ ಮಧ್ಯೆಯಿಂದ ಸಾಗುತ್ತದೆ. ಪ್ರತಿ ದೃಶ್ಯವೂ ನಿಮ್ಮ ಮೂಕ ವಿಸ್ಮಿತರನ್ನಾಗಿ ಮಾಡುವಂತಿರುತ್ತದೆ. ಅಲ್ಲಲ್ಲಿ ದೂರದಲ್ಲಿ ಕಂಡುಬರುವ ಮನೋಹರವಾದ ಬೆಟ್ಟ ಗುಡ್ಡಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿರುತ್ತವೆ.
ಚಿತ್ರಕೃಪೆ: Hirumon
ಅಗಸ್ತ್ಯಾರಕೂಡಂಗೊಂದು ಅದ್ಭುತ ಟ್ರೆಕ್:
ದುರ್ಗಮವಾದ ಪಾದಚಾರಿ ಮಾರ್ಗ, ಕ್ರಿಮಿ ಕೀಟಗಳ ಹರಿದಾಡುವಿಕೆ ಒಂದು ರೀತಿಯ ವಿಶಿಷ್ಟ ಆಭಾಸವನ್ನುಂಟು ಮಾಡುತ್ತವೆ. ಈ ಸಮಯದಲ್ಲಿ ವಿಷ ಜಂತುಗಳು ಇಲ್ಲಿ ಸಾಮಾನ್ಯವಾಗಿ ಇರುವುದರಿಂದ ಹೆಚ್ಚಿನ ಜಾಗೃತೆ ಇರಬೇಕಾಗಿರುವುದು ಅವಶ್ಯ. ಪ್ರಥಮೋಪಾಯಗಳು, ಪ್ರಾಥಮಿಕ ಚಿಕಿತ್ಸಾ ಪರಿಕರಗಳು, ಔಷಧಗಳಿದ್ದರೆ ಇನ್ನೂ ಉತ್ತಮ.
ಚಿತ್ರಕೃಪೆ: PlaneMad
ಅಗಸ್ತ್ಯಾರಕೂಡಂಗೊಂದು ಅದ್ಭುತ ಟ್ರೆಕ್:
ಚಾರಣ ಮಾಡುವಾಗ ಅಲ್ಲಲ್ಲಿ ಶುದ್ಧ ನೀರಿನ ತೊರೆಗಳು ನಿಮ್ಮನ್ನು ಸ್ವಾಗತಿಸಿ ನಿಮ್ಮ ದಣಿವು, ಹೈರಾಣಗಳನ್ನು ಹೋಗಲಾಡಿಸಲು ಸಹಕಾರಿಯಾಗುತ್ತವೆ. ವಿವಿಧ ಪಕ್ಷಿಗಳ ವಿಭಿನ್ನ ಚಿಲಿಪಿಲಿಗಳ ಸದ್ದು, ಅಲ್ಲಲ್ಲಿ ಹರಿಯುವ ನೀರಿನ ಜುಳು ಜುಳು ಸದ್ದು, ಗಾಳಿಯೊಂದಿಗೆ ಸರಸವಾಡುತ್ತಿರುವಂತೆ ಅಲುಗಾಡುತ್ತಿರುವ ಗಿಡ ಮರಗಳ ಸದ್ದನ್ನು ಹೊರತುಪಡಿಸಿ ಇನ್ನ್ಯಾವ ಸದ್ದು ನಿಮಗೆ ಕೇಳಿಸುವುದಿಲ್ಲ.
ಚಿತ್ರಕೃಪೆ: Aniprasanth
ಅಗಸ್ತ್ಯಾರಕೂಡಂಗೊಂದು ಅದ್ಭುತ ಟ್ರೆಕ್:
ಪ್ರಸ್ತುತ ಆಯುರ್ವೇದ ಶಾಸ್ತ್ರದಲ್ಲಿ ಬಳಕೆ ಮಾಡುವ ಔಷಧಿಗಳನ್ನು ತಯಾರಿಸಲು ಬೇಕಾಗುವ ಗಿಡ ಮೂಲಿಕೆಗಳ ಸುಮಾರು 2000 ವಿವಿಧ ಸಸ್ಯಗಳು ಈ ಪ್ರದೇಶದಲೆಲ್ಲ ಹರಡಿಕೊಂಡಿವೆ. ಹೀಗಾಗಿ ಇದೊಂದು ರಕ್ಷಿತ ಜೈವಿಕವಲಯವಾಗಿದೆ. ನೀವು ಮೊದಲನೆಯ ದಿನ ತಂಗಬೇಕಾದ ಅತಿರುಮಲ ತಲುಪಲು ಮೂರು ನದಿಗಳಾದ ಕರ್ಮಣ, ವಾಳಪಿಂಡಿಯಾರ್ ಹಾಗೂ ಅತ್ತ್ಯಾರ್ ಗಳನ್ನು ದಾಟಿ ಸಾಗಬೇಕು. ಮೊದಲ ದಿನ ಅಷ್ಟೊಂದು ಎತ್ತರವಾಗಿಲ್ಲದ ಭೂಪ್ರದೇಶದ ಮೇಲಿನಿಂದ ಸಾಗುವ ಚಾರಣವು ನಂತರ ಅತಿ ಎತ್ತರದ ಬೆಟ್ಟವನ್ನು ಹತ್ತುತ್ತ ಭೇದಿಸುವುದರ ಮೂಲಕ ತುದಿಗೆ ಕೊಂಡೊಯ್ಯುತ್ತದೆ. ಹೀಗೆ ಅಗಸ್ತ್ಯ ಶಿಖರದ ತುದಿ ತಲುಪಿ ಅಗಸ್ತ್ಯರ ಗುಡಿ ನೋಡಿ ಸುತ್ತಲಿನ ಅತ್ಯಂತ ಭವ್ಯ ದೃಶ್ಯವನ್ನು ನೋಡಿದಾಗ ನಿಮಗಾದ ಬಳಲಿಕೆ, ದಣಿವು ಸಂತೃಪ್ತಕರ ಭಾವವಾಗಿ ಬದಲಾಗುತ್ತದೆ. ಇನ್ನೇಕೆ ತಡ ಇಂದೆ ಈ ಟ್ರೆಕ್ ಕುರಿತು ಯೋಜಿಸಲು ಇಲ್ಲಿ ಕ್ಲಿಕ್ ಮಾಡಿ.
ಚಿತ್ರಕೃಪೆ: Sdsenthilkumar