ರಾಜ್ಯ : ಕರ್ನಾಟಕ
ಜಿಲ್ಲೆ : ದಕ್ಷಿಣ ಕನ್ನಡ
ತಾಲೂಕು : ಬಂಟ್ವಾಳ
ವಿಶೇಷತೆ : ಭೂಕೈಲಾಸ ಎಂದೆ ಕರೆಯಲ್ಪಡುವ ಕಾರಿಂಜೇಶ್ವರ ದೇವಾಲಯ. ರುದ್ರರಮನೀಯ ಶಿವನ ರುದ್ರಭಯಂಕರ ತಾಣ.
ಪರಿಚಯ
ಗುಡ್ಡದ ಮೇಲೆ ನೆಲೆಸಿರುವ ಈ ದೇವಾಲಯವು ಸಾಕಷ್ಟು ಸುಂದರವಾಗಿದೆ. ಪ್ರಮುಖವಾಗಿ ಕೊಡ್ಯಾಮಲೆ ಬೆಟ್ಟಗಳ ಶ್ರೇಣಿಯಲ್ಲಿರುವುದರಿಂದ ಇದು ದಟ್ಟ ಹಸಿರಿನಿಂದೆಲ್ಲೆಡೆ ಆವೃತವಾಗಿದೆ. ಅಲ್ಲದೆ ಸುತ್ತಮುತ್ತಲಿನ ದೃಶ್ಯಾವಳಿಗಳು ಮನಸ್ಸಿಗೆ ಆನಂದವನ್ನು ನೀಡುವುದಲ್ಲದೆ, ಈ ಬೆಟ್ಟ ಹತ್ತುವಾಗಾಗುವ ರೋಮಾಂಚನವನ್ನು ಎಂದಿಗೂ ಮರೆಯಲಾಗುವುದಿಲ್ಲ.
ಇನ್ನೂ ಈ ಬೆಟ್ಟ ಹತ್ತಿ ಶಿವನ ದರ್ಶನ ಪಡೆಯಬೇಕು. ಅಲ್ಲದೆ ಆ ಶಿವನ ದೇವಾಲಯವೂ ಸಹ ನೋಡಲು ಭಿನ್ನವಾಗಿದ್ದು ಆಕರ್ಷಕವಾಗಿದೆ. ಶಿವ, ಎಂದಾಕ್ಷಣ ಮಡದಿಯೂ ಇರಲೇಬೇಕಲ್ಲವೆ? ಹೌದು ಪಾರ್ವತಿಯ ಸನ್ನಿಧಿಯೂ ಇದೆ. ಆದರೆ ಇಲ್ಲೊಂದು ಟ್ವಿಸ್ಟ್. ಪಾರ್ವತಿಗೆ ಪ್ರತ್ಯೇಕವಾದ ಮಂದಿರವಿದ್ದು ಶಿವನ ದೇವಾಲಯದ ಬಳಿ ಇಲ್ಲ. ಬದಲಾಗಿ ಬೆಟ್ಟ ಹತ್ತುವಾಗ ಅರ್ಧ ದಾರಿಯಲ್ಲಿ ಇದು ಕಂಡುಬರುತ್ತದೆ.
ಚಿತ್ರಕೃಪೆ: Manamohana Holla K
ತದನಂತರ, ಪಾರ್ವತಿಯ ದರ್ಶನ ಪಡೆದು, ಮನಸ್ಸಿನಾಳದಲ್ಲೆ ಅವಳನ್ನು ಕುರಿತು ಸರ್ವ ಶಕ್ತನಾದ ಶಿವನ ದರ್ಶನ ಮಾಡಲು ಅನುವು ಮಾಡಿಕೊಡಮ್ಮ ಎಂದು ಬೇಡುತ್ತ ಮತ್ತೆ ಮೇಲೇರಬಹುದು. ಈ ಸಂದರ್ಭದಲ್ಲಿ ಪ್ರಕೃತಿಯು ಬಿಡಿಸಿದ ಸುಂದರ ದೃಶ್ಯಕಾವ್ಯವನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತ ಸಾಗಬಹುದು.
ಮೊದಲಿಗೆ
ಅದಕ್ಕೂ ಮುಂಚೆ ಬೆಟ್ಟ ಏರುವ ಮೊದಲು ಗಧೆಯ ಆಕಾರದ ಒಂದು ಕೊಳವು ನಿಮಗೆ ಕಾಣಸಿಗುತ್ತದೆ. ಇದಕ್ಕೂ ಸಹ ಒಂದು ಹಿನ್ನೆಲೆಯಿದೆ. ಅದೆನೆಂದರೆ ಹಿಂದೆ ದ್ವಾಪರ ಯುಗದಲ್ಲಿ ಪಾಂಡವರು ವನವಾಸ ಅನುಭವಿಸುತ್ತಿದ್ದಾಗ ಈ ಸ್ಥಳದಲ್ಲಿ ಕೆಲ ಕಾಲ ತಂಗಿದ್ದರಂತೆ. ತಮಗೆ ಬೇಕಾದ ನೀರಿನ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಭೀಮನು ತನ್ನ ಗಧೆಯಿಂದಲೆ ಈ ಕೊಳ ನಿರ್ಮಿಸಿದ್ದಾನೆಂಬ ಪ್ರತೀಯಿದೆ.
ನೀವು ಮೊದಲೆ, ಬೆಟ್ಟ ಏರುವ ಸಂದರ್ಭದಲ್ಲಿ ಈ ತಾಜಾ ನೀರಿನ ಕ್ಳದಿಂದ ತಂಪಾದ ನೀರನ್ನು ಮುಖಕ್ಕೊಮ್ಮೆ ಚಿಮ್ಮಿಸಿಕೊಂಡು ಸಜ್ಜಾಗಿ. ಅದರಿಂದ ನಿಮಗೆ ಸಾಕಷ್ಟು ಚೈತನ್ಯ ದೊರೆಯುತ್ತದೆ ಹಾಗೂ ಮೆಟ್ಟಿಲುಗಳನ್ನು ಕೊರೆದಿರುವ ಬೆಟ್ಟದ ಮೇಲೆರಲು ಹುರುಪು ಬರಬಹುದು.
ಚಿತ್ರಕೃಪೆ: Manamohana Holla K
ಪೌರಾಣಿಕ ಹಿನ್ನೆಲೆ
ಈ ಕ್ಷೇತ್ರವನ್ನು ಕಾರಿಂಜಗಿರಿ, ಕೃತಯುಗದಲ್ಲಿ ರೌದ್ರಗಿರಿ, ತ್ರೇತಾ ಹಾಗೂ ದ್ವಾಪರ ಯುಗಗಳಲ್ಲಿ ಕ್ರಮವಾಗಿ ಗಜೇಂದ್ರಗಿರಿ ಹಾಗೂ ಭೀಮಶೈಲ ಎಂಬ ಹೆಸರುಗಳಿಂದ ಕರೆಯಲಾಗಿದೆ. ಶಿವನು ರುದ್ರ ರುಪದಲ್ಲಿ ನೆಲೆಸಿರುವ ಭೂಕೈಲಾಸ ಕ್ಷೇತ್ರ ಎಂತಲೂ ಇದನ್ನು ಕರೆಯುವುದುಂಟು.
ಇಂದಿಗೂ ಇಲ್ಲೊಂದು ಆಚಾರವು ಪ್ರಚಲಿತದಲ್ಲಿದೆ. ಅದೆನೆಂದರೆ ಮಧ್ಯಾಹ್ನದ ಹೊತ್ತಿದೆ ಮೂರು ಸೇರು ಅಕ್ಕಿಗಳಿಂದ ಮಾಡಲಾದ ಬಿಸಿ ಬಿಸಿ ಅನ್ನವನ್ನು ಮೊದಲು ದೇವರಿಗೆ ನೈವೇದ್ಯವನ್ನಾಗಿ ತೋರಿಸಿ ನಂತರ ಅದನ್ನು ದೇವಾಲಯದ ಮುಂದಿರುವ ಕಲ್ಲು ಚಪ್ಪಡಿಯೊಂದರ ಮೇಲೆ ಸುರಿಯಲಾಗುತ್ತದೆ. ಕೆಲವೆ ಕ್ಷಣಗಳಲ್ಲಿ ಸುತ್ತಮುತ್ತಲಿನ ಕಣ್ಣಿಗೂ ಕಾಣದಂತಹ ಪೊದೆಗಳಿಂದ ಸಂದಿಗಳಿಂದ ಕೋತಿಗಳ ಸೈನ್ಯ ಬಂದು ಬಿಡುತ್ತದೆ.
ಚಿತ್ರಕೃಪೆ: Manamohana Holla K
ಹೀಗೆ ಸುರಿದ ಅನ್ನದ ರಾಶಿಯನ್ನು ಆ ಗುಂಪಿನ ನಾಯಕನಾದ ಕೋತಿಯು ಮೊದಲು ಬಂದು ಸೇವಿಸುವವರೆಗೂ ಮಿಕ್ಕೆಲ್ಲ ಕೋತಿಗಳು ಸೇವಿಸುವಂತಿಲ್ಲ. ಹಾಗೇನಾದರೂ ಆದಲ್ಲಿ ಮೊದಲು ಸೇವಿಸಿದ ಕೋತಿಗೆ ನಾಯಕನಿಂದ ಗುದ್ದು ಖಾತರಿ! ಹಾಗಾಗಿ ಹಿರಿಯ ಕೋತಿಯನ್ನು ಕಾರಿಂಜ ದದ್ದ ಅಥವಾ ಕಾರಿಂಜ ನಾಯಕ ಎಂದು ಕರೆಯಲಾಗುತ್ತದೆ. ಇದನ್ನು ನೋಡಲೆಂದೆ ಪ್ರವಾಸಿಗರು ಕುತೂಹಲದಿಂದ ಈ ದೇವಾಲಯಕ್ಕೆ ಭೇಟಿ ನೀಡುವುದೂ ಇದೆ.
ಸೂರ್ಯದ ಆಕರ್ಷಕ ಸದಾಶಿವರುದ್ರ ದೇವಾಲಯ!
ತಲುಪುವ ಬಗೆ
ಕಾರಿಂಜ ಗಿರಿ ಅಥವಾ ಕಾರಿಂಜ ಬೆಟ್ಟವು ಮಂಗಳೂರು ನಗರದಿಂದ 35 ಕಿ.ಮೀ ಹಾಗೂ ಬಂಟ್ವಾಳದಿಂದ 14 ಕಿ.ಮೀ ಗಳಷ್ಟು ದೂರದಲ್ಲಿದೆ. ಬಂಟ್ವಾಳ-ಧರ್ಮಸ್ಥಳ ಹೆದ್ದಾರಿಯಲ್ಲಿ 10 ಕಿ.ಮೀ ಸಾಗಿದರೆ ವಗ್ಗ ಎಂಬ ಹಳ್ಳಿಯು ಸಿಗುತ್ತದೆ. ಇಲ್ಲಿಂದ ಸ್ಥಳೀಯರಿಂದ ಮಾರ್ಗದರ್ಶನ ಪಡೆದು ಕೇವಲ 4 ಕಿ.ಮೀ ಸಾಗಿದರೆ ಸಾಕು ಕಾರಿಂಜ ಬೆಟ್ಟ ನಿಮ್ಮೆದುರಿಗೆ ಕಂಡುಬರುತ್ತದೆ.